ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳೊಂದಿಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಅಂಡಮಾನ್, ನಿಕೋಬಾರ್ ಮತ್ತು ಗುಜರಾತ್ ರಾಜ್ಯಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಅಧ್ಯಯನ ತಂಡ ಭೇಟಿ

ಕುಂದಾಪುರ ಮಿರರ್ ಸುದ್ದಿ…

ಕೋಟ: ನಬಾರ್ಡ್‍ನ ಅಧಿಕಾರಿ ಮಂಗಳಾ ಇವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಬ್ರಹ್ಮಾವರ ವಲಯ ಮೇಲ್ವಿಚಾರಕರಾದ ರಾಜಾರಾಮ ಶೆಟ್ಟಿ ಇವರೊಂದಿಗೆ ಆಂಧ್ರ ಪ್ರದೇಶ, ಮಧ್ಯಪ್ರದೇಶ, ಅಂಡಮಾನ್, ನಿಕೋಬಾರ್ ಮತ್ತು ಗುಜರಾತ್ ರಾಜ್ಯಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಮಂಗಳವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾಹಿತಿ ನೀಡುವಾಗ ಸಂಘವು ನಡೆದು ಬಂದ ದಾರಿ, ಸಂಘದ ಸ್ವಂತ ಕಟ್ಟಡಗಳು, ಗೋದಾಮುಗಳು, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳು ಮತ್ತು ಸಂಘದಿಂದ ರೈತ ಸದಸ್ಯರಿಗಾಗಿ ದೊರಕುವ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಸೌಲಭ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸದಸ್ಯತ್ವ, ಸ್ವ ಸಹಾಯ ಸಂಘ ರಚನೆ, ಸದಸ್ಯತ್ವ ವರ್ಗೀಕರಣ, ಉಳಿತಾಯ ಕ್ರೋಢೀಕರಣ, ಸ್ವಸಹಾಯ ಸಂಘಗಳ ಸಾಲಗಳ ಮಿತಿ, ಸಾಲ ವಿತರಣೆ, ವಸೂಲಾತಿ ಮತ್ತು ಸಂಘದ ಮೇಲ್ವಿಚಾರಣೆ ಕುರಿತು ಚರ್ಚಿಸಲಾಯಿತು. ಸಾಲದ ಮಿತಿ, ಉದ್ದೇಶ ಮತ್ತು ಮಂಜೂರಾತಿ ಹಾಗೂ ಸದಸ್ಯರ ಕಲ್ಯಾಣ ನಿಧಿ, ಸಮೃದ್ಧಿ ಕ್ಷೇಮ ನಿಧಿಗಳ ಜೋಡಣೆ ಮತ್ತು ಅನುಷ್ಠಾನದ ಕುರಿತು ವಿವರವಾಗಿ ಚರ್ಚಿಸಲಾಯಿತು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿ ನೀಡಿದ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ವಂದನಾರ್ಪಣೆ ನೆರವೇರಿಸಿದರು.

Comments

Leave a Reply

Your email address will not be published. Required fields are marked *

More posts

Exit mobile version