ಕನ್ಯಾನ : ಕೊಠಾರಿ ಸಮಾಜ ಶಿಕ್ಷಣ, ಉದ್ಯೋಗಕ್ಕೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು – ಜಯಪ್ರಕಾಶ್ ಹೆಗ್ಡೆ

ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ ಕುಂದಾಪುರ ಇದರ ಕೊಠಾರಿ ಸಮುದಾಯ ಭವನ( ಶ್ರೀ ಚೌಡೇಶ್ವರಿ ಕನ್ವೇನ್ಶನ್ ಹಾಲ್) ಹಾಗೂ ಶ್ರೀ ಸೀತಾರಾಮ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, ಮಾ. 24: ಕೊಠಾರಿ ಸಮುದಾಯವು ತಿಜೋರಿ ಬೀಗವನ್ನು ಇಟ್ಟುಕೊಂಡಿರುವ ಸಮಾಜವಾಗಿದ್ದು, ನಂಬಿಕೆಗೆ ಅರ್ಹರಾದ ಒಂದು ಸಮುದಾಯ ಇದಾಗಿದೆ. ಕೊಠಾರಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸೂಕ್ತ ಮೀಸಲಾತಿಯ ಪ್ರಯೋಜನವಿದ್ದು, ಆ ನಿಟ್ಟಿನಲ್ಲಿ ಬೇಡಿಕೆ ಇಟ್ಟು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಕೊಠಾರಿ ಸಮುದಾಯದ ಅಭಿವೃದ್ದಿಗೆ ಸರ್ಕಾರ ಒತ್ತು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ ಕುಂದಾಪುರ ಇದರ ವತಿಯಿಂದ ಕನ್ಯಾನ ಗ್ರಾಮದ ಕರ್ಕಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ (ಶ್ರೀ ಚೌಡೇಶ್ವರಿ ಕನ್ವೇನ್ಶನ್ ಹಾಲ್) ವನ್ನು ಉದ್ಘಾಟಿಸಿ ಮಾತನಾಡಿದರು.

ಕೊಠಾರಿ ಸಮುದಾಯವು ಪ್ರವರ್ಗ 2 ರಲ್ಲಿದ್ದು, ಶೇ. 15 ರಷ್ಟು ಮೀಸಲಾತಿಯಿದೆ. ಆದರೆ ಪ್ರಬಲ ಸಮುದಾಯದವರೇ ಇದರ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಕಡಿಮೆ ಜನರಿರುವ ಜಾತಿಗಳು, ಪ್ರಬಲ ಸಮುದಾಯದವರ ಎದುರು ಸ್ಪರ್ಧೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಈ ವರೆಗೆ ಪ್ರಯೋಜನ ಪಡೆಯದ ಜಾತಿಗಳಿಗೆ ಶಿಕ್ಷಣ, ಉದ್ಯೋಗದ ಮೀಸಲಾತಿಯಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದರು.
ಸಹಕಾರಿ ಸಂಘದ ಕಟ್ಟಡವನ್ನು ಉದ್ಘಾಟಿಸಿ, ಸಮ್ಮಾನ ಸ್ವೀಕರಿಸಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಈ ದಿನ ಕೊಠಾರಿ ಸಮಾಜದ ಇತಿಹಾಸದಲ್ಲಿ ಮಹತ್ವದ ದಿನವಾಗಿದ್ದು, ಈ ಸಮುದಾಯ ಭವನ ಸಮಾಜದ ಆಸ್ತಿಯಾಗಲಿದೆ. ಇದಕ್ಕಾಗಿ ನಾಗಪ್ಪ ಕೊಠಾರಿಯವರ ಶ್ರಮ ಅಪಾರ ಎಂದವರು ಪ್ರಶಂಸಿದರು.

ಮಾಜಿ ಶಾಸಕ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಸಭಾಭವನವನ್ನು, ಕಮಲಶಿಲೆ ದೇಗುಲದ ಅನುವಂಶೀಯ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಪಾಕಶಾಲೆಯನ್ನು ಉದ್ಘಾಟಿಸಿ, ಶುಭಹಾರೈಸಿದರು.

ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಗಣಕ ಯಂತ್ರವನ್ನು ಎಸ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಪೂಜಾರಿ, ವರನ ಗೃಹವನ್ನು ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ, ವಧುವಿನ ಗೃಹವನ್ನು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಗೋವಿಂದ ಬಾಬು ಪೂಜಾರಿ, ಬ್ಯಾಂಕ್ ಸೇಫ್ ಲಾಕರನ್ನು ಸೌಕೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜಯ್ಯ ಶೆಟ್ಟಿ ಸಬ್ಲಾಡಿ, ಕಚೇರಿಯನ್ನು ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದಾನಿ ಕೃಷ್ಣಮೂರ್ತಿ ಮಂಜ, ಹಟ್ಟಿಯಂಗಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜೀವ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಹಟ್ಟಿಯಂಗಡಿ ದೇಗುಲದ ಧರ್ಮದರ್ಶಿ ಬಾಲಚಂದ್ರ ಭಟ್, ಕೂಡ್ಲು ಬಾಡಬೆಟ್ಟು ದೇಗುಲದ ಮೊಕ್ತೇಸರ ಜಯರಾಮ, ಕೊಠಾರಿ ವೇಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ನಾಗರಾಜ ಕೊಠಾರಿ ಆಜ್ರಿ, ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಪಾರ್ವತಿ, ಕರ್ಕುಂಜೆ ವ್ಯ. ಸೇ. ಸ. ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಉದ್ಯಮಿಗಳಾದ ರಾಜು ಕೊಠಾರಿ ಆಜ್ರಿ, ಶಂಕರ ಕೊಠಾರಿ ಉಳ್ತೂರು, ವಾಸುದೇವ ಯಡಿಯಾಳ, ಹಟ್ಟಿಯಂಗಡಿ ಗ್ರಾ.ಪಂ. ಉಪಾಧ್ಯಕ್ಷ ಪ್ರತಾಪ್ ಕುಮಾರ್ ಶೆಟ್ಟಿ, ದ.ಕ. ಕೊಟ್ಟಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಕೊಠಾರಿ ಮನೆ ಪಾಂಗಾಳದ ಉದಯ ಕುಮಾರ್ ಶೆಟ್ಟಿ, ಚಂದ್ರಕಾಂತ ಶೆಟ್ಟಿ ಪಾಂಗಾಳ, ಕೊಟ್ಟಾರಿ ದ.ಕ. ಯುವ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಅಪ್ಪು ಕೊಠಾರಿ, ಬಾಬು ಕೊಠಾರಿ, ಯುವ ಸಂಘಟನೆ ನಾಗೇಶ ಕೊಠಾರಿ ಮೊಳಹಳ್ಳಿ, ಮಹಿಳಾ ಸಂಘಟನೆ ಅಧ್ಯಕ್ಷೆ ಜಯಲಕ್ಷ್ಮಿ ಕೊಠಾರಿ ತಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರದ ಸೀತಾರಾಮ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗಪ್ಪ ಕೊಠಾರಿ ಕೆರಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಸಂತೋಷ ಕೊಠಾರಿ ಕಾರ್ಯಕ್ರಮ ನಿರ್ವಹಿಸಿದರು.

Comments

Leave a Reply

Your email address will not be published. Required fields are marked *

More posts

Exit mobile version