ಕೋಟ :ಚುನಾವಣೆಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ – ವೆರೊನಿಕಾ ಕರ್ನೆಲಿಯೊ

ಕೋಟದಲ್ಲಿ ಬೃಹತ್ ಮಹಿಳಾ ಕಾಂಗ್ರೆಸ್ ಸಮಾವೇಶ

ಕುಂದಾಪುರ ಮಿರರ್ ಸುದ್ದಿ…
ಕೋಟ: ಇಂದು ದೇಶದ 50% ಮಹಿಳೆಯರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಮಹಿಳಾ ಕಾಂಗ್ರೆಸ್ ಮುಖಂಡೆ ವೆರಿನಿಕಾ ಕರ್ನೆಲಿಯೋ ಹೇಳಿದರು.

ಅವರು ಸಾಲಿಗ್ರಾಮ ಚೆಂಪಿ ಹಾಲು ಡೈರಿ ಸಮೀಪ ಮೈದಾನದಲ್ಲಿ ಮಾ.26ರಂದು ಜರಗಿದ
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಅಂತಹಾ ಪ್ತಶ್ನಿಸುವ ಅಧಿಕಾರ ನೀಡಿದ್ದು ದೇಶವನ್ನು ಮುನ್ನಡೆಸುವ ಕಾಂಗ್ರೆಸ್ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು.

ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಈ‌ ದೇಶಕ್ಕೆ ಹಲವು ಕೊಡುಗೆಗಳನ್ನ ನೀಡಿತ್ತು. ಆದರೆ ಬಿಜೆಪಿ ಸರಕಾರ ಕೇವಲ ಸುಳ್ಳು ಘೋಷಣೆಗಳ ಮೂಲಕ ದುರಾಡಳಿತ ನಡೆಸುತ್ತಿದೆ. ಕುಂದಾಪುರ ಕ್ಷೇತ್ರಕ್ಕೆ ನಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯಾಗುವ ಓರ್ವ ಉತ್ತಮ ಶಾಸಕ ಅಗತ್ಯವಿದ್ದು ಅದಕ್ಕಾಗಿ ದಿನೇಶ್ ಹೆಗ್ಡೆ ಮೊಳಹಳ್ಳಿಯವರಿಗೆ ಅವಕಾಶ ನೀಡಿ ಎಂದರು.‌

ವಿಧಾನಸಭಾ ಚುನಾವಣೆಯ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಈ‌ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಅವಕಾಶ ನೀಡಿ ಎಂದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀಯವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎ. ಗಪೂರ್ ಖಂಡನಾ ನಿರ್ಣಯ ಮಂಡಿಸಿದರು ಹಾಗೂ ರಾಹುಲ್ ಗಾಂಧಿಯವರ ಜತೆಗೆ ನಾವಿದ್ದೇವೆ ಎಂದು ಘೋಷಣೆ ಕೂಗಿದರು.

ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಪಿ.ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಬ್ಲಾಕ್‌ ಅಧ್ಯಕ್ಷ ಶಂಕರ್‌ ಕುಂದ‌ರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಹರಿಪ್ರಸಾದ್ ಶೆಟ್ಟಿ, ಮಲ್ಯಾಡಿ‌ ಶಿವರಾಮ‌ ಶೆಟ್ಟಿ, ದೇವಕಿ ಸಣ್ಣಯ್ಯ, ವೆರೋನಿಕ ಕರ್ನೇಲಿಯೊ, ವಿಕಾಸ‌ ಹೆಗ್ಡೆ, ತಿಮ್ಮ ಪೂಜಾರಿ ಕೋಟ, ರೋಶಿನಿ‌ ಒಲ್ವೇರ, ಅನಿತಾ ಡಿಸೋಜ ಕಾರ್ಕಳ,‌ ಮಮತಾ ಬಿ.ಪೂಜಾರಿ, ಕಲ್ಪನಾ ದಿನಕರ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಲಾಯಿತು.

Comments

Leave a Reply

Your email address will not be published. Required fields are marked *

More posts

Exit mobile version