ಕೊಲ್ಲೂರು :ಆಂತರಿಕ ಸಮೀಕ್ಷೆ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ – ಸಿ.ಎಂ.ಬೊಮ್ಮಾಯಿ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಪಕ್ಷದ ವತಿಯಿಂದ ಮಾಡಿರುವ ಸರ್ವೇ ಆಧಾರದಲ್ಲಿ ಈಗಾಗಲೇ ಚರ್ಚೆ ಮಾಡಿ ತೆಗೆದುಕೊಂಡಿರುವ ತೀರ್ಮಾನದಂತೆ ಮೂಡಗೆರೆ ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬದಲಿಗೆ ಬೇರೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ವಷ್ಟಪಡಿಸಿದ್ದಾರೆ.

ಕೊಲ್ಲೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರು ಅವಧಿಗೆ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿಯೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಯಾವುದೇ ಚುನಾವಣೆ ಗೆಲ್ಲದವರು ಶಾಸಕರಾಗಿರುವ ಹಾಗೂ ಇತರ ಚುನಾವಣೆಗಳಲ್ಲಿ ಗೆದ್ದಿರುವ ಸಾಕಷ್ಟು ಉದಾಹರಣೆ ನಮ್ಮಲ್ಲಿ ಇದೆ. ಪಕ್ಷ ಹಾಗೂ ಸಂಘಟನೆ ಗಟ್ಟಿಯಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಹಾಲಿ ಶಾಸಕರ ಬದಲಾವಣೆಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಯೋಗ ಶಾಲೆಯನ್ನಾಗಿಸಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಇಲ್ಲಿನ ಯಾವುದೇ ರಿಸ್ಕ್ ತೆಗೆದುಕೊಂಡು ಮಾಡಿರುವ ಆತುರದ ನಿರ್ಧಾರವೂ ಅಲ್ಲ. ಈಗ ಘೋಷಣೆಯಾಗಿರುವ ಅಭ್ಯರ್ಥಿಗಳು ಸಂಘಟನೆಯಲ್ಲಿ ಪ್ರಬಲ ಹಾಗೂ ಗಟ್ಟಿಯಾದ ನೆಲೆಯನ್ನು ಹೊಂದಿದವರಾಗಿದ್ದಾರೆ. ಬದಲಾವಣೆ ಸಂಘಟನೆಯ ಒಂದು ಭಾಗವಾಗಿದೆ ಎಂದು ತಿಳಿಸಿದರು.

ಚುನಾವಣೆಯ ಕಾರ್ಯದಲ್ಲಿ ಇರುವ ಜಿಲ್ಲೆಯ ಐದು ಕ್ಷೇತ್ರದ ಶಾಸಕರು ಹಾಗೂ ಮುಖಂಡರನ್ನು ನಾನೇ ಬರುವುದು ಬೇಡ ಎಂದಿರುವುದರಿಂದ ಕೊಲ್ಲೂರಿಗೆ ಯಾರು ಬಂದಿಲ್ಲ, ಇದರಲ್ಲಿ ಅನ್ಯ ಉದ್ದೇಶಗಳಿಲ್ಲ. ಮೀನುಗಾರ ಮುಖಂಡರಾಗಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಚುನಾವಣೆಯ ವೇಳೆ ಪಕ್ಷ ರಾಜ್ಯ ಮಟ್ಟದಲ್ಲಿ ಬಳಸಿಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ಅವರಿಗೂ ಒಳ್ಳೆಯ ಅವಕಾಶಗಳು ದೊರಕುವ ವಿಶ್ವಾಸವಿದೆ ಎಂದರು.

ನಾನು ಮತ್ತು ರಿಷಬ್ ಶೆಟ್ಟಿ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು, ಅವರು ದೇವಸ್ಥಾನಕ್ಕೆ ಬರುವ ವಿಚಾರ ನನಗೆ ಗೊತ್ತೇ ಇರಲಿಲ್ಲ. ಇಲ್ಲಿಗೆ ಬಂದ ಬಳಿಕವಷ್ಟೇ ಅವರ ಭೇಟಿಯಾಗಿದೆ. ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳುವ ಕುರಿತು ಈವರೆಗೂ ಯಾವುದೆ ಯೋಜನೆ ರೂಪಿಸಿಲ್ಲ ಎಂದು ಹೇಳಿದ ಅವರು, ನಾಡಿನ ಜನರಿಗೆ ಒಳ್ಳೆಯದಾಗಲಿ ಹಾಗೂ ನಾಡು ಸುಭೀಕ್ಷೆಯಾಗಲಿ ಎಂದು ತಾಯಿ ಮೂಕಾಂಬಿಕೆಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

Comments

Leave a Reply

Your email address will not be published. Required fields are marked *

More posts

Exit mobile version