ಆಲೂರು: ಸರಕಾರಿ ಬಸ್ಸು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

0
571

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ಮಾರ್ಗವಾಗಿ ಮುಳ್ಳಿಕಟ್ಟೆ -ಕಟ್ಟಿನ ಮಕ್ಕಿ ಮೂಲಕ ಆಲೂರು ಅನಂತರ ಕೊಲ್ಲೂರು ಸಂಪರ್ಕಿಸಿ ಕೊಲ್ಲೂರಿನಿಂದ ಆಲೂರು ಮಾರ್ಗವಾಗಿ ಕುಂದಾಪುರ ಸಂಪರ್ಕಿಸುವ ಕೆಎಸ್ಸಾರ್ಟಿಸಿ ಬಸ್ಸಿಗಾಗಿ ಇಂದು ಆಲೂರು ಗ್ರಾಮ ಪಂಚಾಯತ್ ಎದುರುಗಡೆ ಸ್ಥಳೀಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ 2011 ರ ಜನಗಣತಿ ಪ್ರಕಾರ ಆಲೂರಿನಲ್ಲಿ 707 ಕುಟುಂಬಗಳಿದ್ದು 3584 ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ ಅಲ್ಲದೇ ಸಾಕ್ಷರತೆಯಲ್ಲಿ ಹಿಂದುಳಿದ ಗ್ರಾಮವಾಗಿದೆ. ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಕಾಲೇಜುಗಳಿಗೆ ಹೋಗಿ ಬರಲು 22 ಕಿಮೀ ದೂರದಲ್ಲಿರುವ ಕುಂದಾಪುರ ಅಥವಾ ಬೈಂದೂರಿಗೆ 35ಕಿಮೀ ಕ್ರಮಿಸಬೇಕಾಗಿದೆ ಆದ್ದರಿಂದ ಜಿಲ್ಲಾಡಳಿತವು ಕೊಲ್ಲೂರು-ಆಲೂರು-ಕುಂದಾಪುರಕ್ಕೆ ಸರಕಾರಿ ಬಸ್ಸುಗಳನ್ನು ಆರಂಭಿಸಿದರೆ ಗ್ರಾಮದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮಾತನಾಡಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಆಲೂರಿನ ಮಹಿಳೆಯರಿಗೆ ಸರಕಾರಿ ಬಸ್ಸಿಲ್ಲದೇ ವಂಚನೆಯಾಗುತ್ತಿದ್ದು ಸೌಲಭ್ಯಗಳನ್ನು ಪಡೆಯಲು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯ ಮನವಿಯನ್ನು ಕಟ್ಟಡ ಕಾರ್ಮಿಕರ ಆಲೂರು ಅಧ್ಯಕ್ಷ ರಾದ ರಘುರಾಮ ಆಚಾರ್ ಓದಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಉಪಾಧ್ಯಕ್ಷ ರವಿಶೆಟ್ಟಿ ಮನವಿ ಸ್ವೀಕರಿಸಿ ಸಾರಿಗೆ ಪ್ರಾಧಿಕಾರಕ್ಕೆ ನೀಡುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ನಾಗರತ್ನ ನಾಡ,ರವಿ ವಿಎಂ, ಚಂದ್ರಶೇಖರ ವಿ, ಸುಮಿತ್ರಾ ಆಲೂರು, ಆಶಾ ಆಲೂರು, ಗೌರಿ ಆಲೂರು, ಅಂಬಿಕಾ ಇದ್ದರು.

ಕಟ್ಟಡ ಕಾರ್ಮಿಕರ ಆಲೂರು ಕಾರ್ಯದರ್ಶಿ ಗಣೇಶ್ ಆಚಾರ್ ವಂದಿಸಿದರು.

LEAVE A REPLY

Please enter your comment!
Please enter your name here