ಗೇರುಬೀಜ ಸಂಸ್ಕರಣ ಉದ್ಯಮ : ಸಾಲ ಮರು ಪಾವತಿ ಅವಧಿ ವಿಸ್ತರಣೆ- ಬಡ್ಡಿದರ ಕಡಿತಕ್ಕೆ ಸಂಸದ ಮನವಿ

0
559

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರಾವಳಿ ಭಾಗದ ಗೇರುಬೀಜ ಉದ್ದಿಮೆಗಳು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಉದ್ಯಮಿಗಳ ಸಮಸ್ಯೆಗೆ ಸ್ಪಂದಿಸುವಂತೆ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿ ಮಾಡಿದ ಸಂಸದರು ಈ ಸಂಬಂಧ ಮನವಿ ಸಲ್ಲಿಸಿದರು. ಗೋಡಂಬಿ ಸಂಸ್ಕರಣಾ ಉದ್ಯಮ ಎದುರಿಸುತ್ತಿರುವ ಎರಡೆರಡು ಇಎಂಐ ಪಾವತಿಯ ಭಾರದ ಬಗ್ಗೆ ಅವರ ಗಮನ ಸೆಳೆದರು. ಈ ಸಂಬಂಧ ಮಧ್ಯಪ್ರವೇಶಿಸಿ, ಈ ಇಎಂಐ ಭಾರ ಕಡಿಮೆ ಮಾಡಲು ಅವರು ಮನವಿ ಮಾಡಿದ್ದಾರೆ.

ಕರಾವಳಿ ಕರ್ನಾಟಕವು ಗೋಡಂಬಿ ಸಂಸ್ಕರಣಾ ಉದ್ಯಮಗಳ ಕೇಂದ್ರವಾಗಿದೆ. ಗ್ರಾಮೀಣ ಭಾಗದ 1.50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಉದ್ಯಮ ಜೀವನೋಪಾಯ ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಆದರೆ ಕೋವಿಡ್ ಬಳಿಕ ಗೋಡಂಬಿ ಸಂಸ್ಕರಣಾ ಘಟಕಗಳು ಸಾಲ ಮರುಪಾವತಿಸಲು ಗಂಭೀರ ಸಮಸ್ಯೆ ಎದುರಿಸುತ್ತಿವೆ. ವಿಯೆಟ್ನಾಂನಿಂದ ಕಡಿಮೆ ಗುಣಮಟ್ಟದ ಕಚ್ಚಾ ಗೋಡಂಬಿ ಆಮದು ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ (ಡಬ್ಲ್ಯೂಟಿಎಲ್) ಸಾಲದ ಮರುಪಾವತಿಯನ್ನು ಕನಿಷ್ಠ 18 ತಿಂಗಳುಗಳ ಕಾಲ ಅಮಾನತು (ಮೊರಟೋರಿಯಂ)ಗೊಳಿಸಿ ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿಯ ಅವಧಿಯನ್ನು ವಿಸ್ತರಿಸುವುದು, ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) 1.0ರ ಇಎಂಐ ಪಾವತಿ ಮುಕ್ತಾಯ ಹಂತದವರೆಗೆ, ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ವಿಸ್ತರಣೆ ಸಾಲದ (ಕೋವಿಡ್ ಸಾಲ 2.0)ದ ಇ ಇಎಂಐ ಅಮಾನತುಗೊಳಿಸುವುದು, ಹಾಗು ಅದರ ಮರು ಪಾವತಿ ಅವಧಿಯನ್ನು ವಿಸ್ತರಿಸುವುದು, ನಿಧಿಯ ಬಡ್ಡಿ ಅವಧಿಯ ಸಾಲ (ಎಫ್ ಐ ಟಿ ಎಲ್)ವನ್ನು ಒದಗಿಸಲು ಅವರು ಕೋರಿದ್ದಾರೆ. ಅದೇ ರೀತಿ ಈಗಾಗಲೇ ಆರ್ಥಿಕ ದುಸ್ಥಿತಿಯಲ್ಲಿರುವುದರಿಂದ, ವರ್ಕಿಂಗ್ ಕ್ಯಾಪಿಟಲ್ ಟರ್ಮ್ನ ಸಾಲ ಹಾಗು ಕೋವಿಡ್ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವಂತೆ ಸಚಿವರನ್ನು ಅವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here