ಕುಂದಾಪುರ :ಕನ್ನಡ ನನ್ನ ಇನ್ನೊಂದು ತಾಯಿ ಎಂದ ನೆದರ್‍ಲ್ಯಾಂಡ್‍ನ ಮಾರ್ಜೆ

0
382

ಕುಂದಾಪುರ ಮಿರರ್ ‌ಸುದ್ದಿ…

ಕುಂದಾಪುರ: ಕನ್ನಡ ನನ್ನ ಇನ್ನೊಂದು ತಾಯಿ ಎಂದು ನೆದರ್ ಲ್ಯಾಂಡಿನಿಂದ ಬಂದು ಕುಂದಾಪುರದಲ್ಲಿ 15 ವರ್ಷಗಳಿಂದ ಸೇಚೆ ಸಲ್ಲಿಸುತ್ತಿರುವ ಮಾರ್ಜೆ ವ್ಯಾನ್ ಡೆನ್ ಬ್ರಾಂಡ್ ಹೇಳಿದ್ದಾರೆ.

ಅವರು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ನಡೆಸಿದ ಕನ್ನಡ ರಾಜೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಕುಂದಾಪುರಕ್ಕೆ ಬಂದ ಮೊದಲಲ್ಲಿ ಹಿಂದಿ ಭಾಷೆ ಕಲಿಯಬೇಕೆಂದು ಬಯಸಿದ್ದೆ. ಆದರೆ ಇಲ್ಲಿ ಹಿಂದಿಗಿಂತ ಕನ್ನಡದ ಅಗತ್ಯತೆ ಹೆಚ್ಚಿದ್ದ ಕಾರಣ ಕನ್ನಡವನ್ನು ಕಲಿಯಲು ಮನಸ್ಸು ಮಾಡಿದೆ. ಅರ್ಥವಾಗದ ಮತ್ತು ಕಷ್ಟದ ಪದಗಳನ್ನು ಬರೆದಿಟ್ಟುಕೊಂಡು ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ವ್ಯಾಕರಣಬದ್ದವಾಗಿ ಮಾತನಾಡಲು ಆಗದಿದ್ದರೂ ಇನ್ನೊಬ್ಬರಿಗೆ ಅರ್ಥವಾಗುವಷ್ಟರ ಮಟ್ಟಿಗೆ ಮಾತನಾಡಲು ಕಲಿತಿದ್ದೇನೆ ಎಂಬ ಹೆಮ್ಮೆ ನನಗಿದೆ. ಇದೊಂದು ಸುಂದರವಾದ ಮತ್ತು ಸುಲಭವಾದ ಭಾಷೆ ಆದ ಕಾರಣ ಕಲಿಯಲು ನನಗೇನು ಕಷ್ಟ ಅನಿಸಲಿಲ್ಲ ಎಂದ ಮಾರ್ಜೆ, ಕಳೆದ 15 ವರ್ಷಗಳಿಂದ ಕುಂದಾಪುರದ ಮಾನಸಜ್ಯೋತಿ ವಿಶೇಷ ಚೇತನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ಮಾರ್ಜೆಯವರು ಕನ್ನಡ ಕಲಿತದ್ದು ಅವರಿಗಷ್ಟೇ ಹೆಮ್ಮೆಯಲ್ಲ ನಮಗೂ ಕೂಡ ಹೆಮ್ಮೆ ತರುವಂತದ್ದು. ಇದೊಂದು ಅರ್ಥಪೂರ್ಣವಾದ ಕನ್ನಡದ ಕಾರ್ಯಕ್ರಮ ಎಂದರು.

ಈ ಸಂದರ್ಭ ಗೀತಗಾಯನ ತಂಡದ ಸದಸ್ಯರಿಂದ ನಾಡಗೀತೆ ಹಾಗೂ ಕನ್ನಡ ನುಡಿಯ ಬಗೆಗಿನ ಗೌರವವನ್ನು ಹೆಚ್ಚಿಸುವ ಹಿರಿಯ ಸಾಹಿತಿಗಳು ಬರೆದ ಗೀತೆಗಳನ್ನು ಹಾಡಲಾಯಿತು. ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ರೋ. ರವಿರಾಜ್ ಶೆಟ್ಟಿ, ಶೋಭಾ ಮದ್ಯಸ್ಥ, ಹೆಮ್ಮಾಡಿ ಜನತಾ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಉಪಸ್ಥಿತರಿದ್ದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ತ್ರಿವಿಕ್ರಮ ಪೈ ವಂದಿಸಿದರು.

LEAVE A REPLY

Please enter your comment!
Please enter your name here