ಮರವಂತೆ :ಆರ್ಥಿಕ ಶ್ರೀಮಂತಿಕೆಗಿಂತ ಆರೋಗ್ಯ ಶ್ರೀಮಂತಿಕೆ ಮುಖ್ಯ – ಎಸ್ ಆರ್ ರಶ್ಮಿ

0
506

ನಾವುಂದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನೀವೆಷ್ಟೇ ಆರ್ಥಿಕ ಶ್ರೀಮಂತಿಕೆಯಿದ್ದರೂ ಆರೋಗ್ಯ ಶ್ರೀಮಂತಿಕೆಯಿಲ್ಲದಿದ್ದರೆ ನೆಮ್ಮದಿಯ ಜೀವನ ಸಾಗಿಸಲಾಗದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಹೇಳಿದರು.

ಅವರು ಭಾನುವಾರ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನಕ್ಕಿಂತ ಶ್ರೇಷ್ಟ ದಾನ ಇನ್ನೊಂದಿಲ್ಲ. ಆರೋಗ್ಯವಂತ ದೇಹ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ಕನಿಷ್ಟ ವರ್ಷಕ್ಕೊಂದು ಬಾರಿಯಾದರೂ ರಕ್ತದಾನ ಮಾಡುವ ಶಪಥ ಮಾಡಬೇಕು. ಅದು ಮಾತ್ರ ರಕ್ತದ ಕೊರತೆಯಿಂದ ಬಳಲುತ್ತಿರುವ ಅದೆಷ್ಟೋ ರೋಗಿಗಳ ಬದುಕಿಗೆ ನಾವು ಕೊಡುವ ಅಮೂಲ್ಯ ದೇಣಿಗೆಯಾಗಬಹುದು ಎಂದವರು ಹೇಳಿದರು.

ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ನಿಯಮಿತ ಆಹಾರ, ಆಗಿದ್ದಾಂಗೆ ಆರೋಗ್ಯ ತಪಾಸಣೆ ಹಾಗೂ ಉತ್ತಮ ಆರೋಗ್ಯ ವಿಮೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದರು.

ಪ್ರತಿಯೊಬ್ಬರ ಆರೋಗ್ಯ ರಕ್ಷಣೆ, ಹಾಗೂ ಸಾಮಾಜಿಕ ಕಾಳಜಿಯಿಂದ ಈ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ತಮ್ನ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತರಾಗಬೇಕು. ರೋಗ ಬರುವ ಮೊದಲೇ ವೈದ್ಯಕೀಯ ತಪಾಸಣೆ ಮಾಡಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಾಗ ಆರೋಗ್ಯ ರಕ್ಷಣೆ ಸಾಧ್ಯ‌ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರಿಂದ ಕೊಡಮಾಡುವ ಚೈತನ್ಯ ವಿಮಾ ಪರಿಹಾರ, ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಒಂದು ಲಕ್ಷ ವಿಮಾ ಪರಿಹಾರ ವಿತರಿಸಲಾಯಿತು.

ಬೈಂದೂರು ತಹಸೀಲ್ದಾರ್ ಪ್ರದೀಪ್ ಆರ್, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಿಇಒ ಪೂರ್ಣಿಮಾ, ರಾಜ್ಯ ಮೇಲ್ವಿಚಾರಕ ಹರಿನಾಥ್, ನಾವುಂದ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಶಂಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರ ಖಾರ್ವಿ, ಖ್ಯಾತ ನರರೋಗ ತಜ್ಞ ಪ್ರೊ.ಎ.ರಾಜ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ ಚಂದ್ರಶೀಲ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಹಾಗೂ ಎಲ್ಲಾ ನಿರ್ದೇಶಕರು. ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here