ಕುಂದಾಪುರ: ಬೈಂದೂರು ರೈಲ್ವೇ ಅಭಿವೃದ್ಧಿಗೆ ಅನುದಾನ ಕೋರಿಕೆ – ಸಂಸದ ರಾಘವೇಂದ್ರರಿಂದ ಸಚಿವ ಕಿಶನ್ ರೆಡ್ಡಿ ಭೇಟಿ

0
658

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಇಲಾಖೆಯಿಂದ ಆಗಬೇಕಾಗಿರುವ ಬೈಂದೂರು ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಈ ಸಂದರ್ಭ, ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರವು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೊಡಚಾದ್ರಿ, ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಗಳಂತಹ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿಂದ ಸುತ್ತುವರಿದಿದೆ ಎನ್ನುವುದನ್ನು ಮನವರಿಕೆ ಮಾಡಿದರು.

ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ “ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಏಜೆನ್ಸಿಗಳಿಗೆ ನೆರವು” ಅಡಿಯಲ್ಲಿ ಮೂಕಾಂಬಿಕಾ ರೈಲ್ವೇ ನಿಲ್ದಾಣ ಬೈಂದೂರು ಇದರ ಅಭಿವೃದ್ಧಿಗೆ ರೂ 14.00 ಕೋಟಿ ಅನುದಾನ ಮಂಜೂರು ಮಾಡಲು ಕೋರಿದರು. ಸಂಸದ ರಾಘವೇಂದ್ರ ಕೋರಿಕೆಗೆ ಸ್ಪಂದಿಸಿದ ಸಚಿವ ಕಿಶನ್ ರೆಡ್ಡಿ, ಶೀಘ್ರವೇ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here