ಕುಂದಾಪುರ :ಮುಚ್ಚುವ ಹಂತದಲ್ಲಿ ಅನುದಾನಿತ ಶಾಲೆ! ಉಳಿಸಿಕೊಳ್ಳಲು ಎಸ್.ಡಿ.ಎಂ.ಸಿ ಮನವಿ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮುಚ್ಚುವ ಹಂತದಲ್ಲಿರುವ, ಸುಮಾರು 116 ವರ್ಷಗಳ ಇತಿಹಾಸ ಇರುವ ಬೈಂದೂರು ಶೈಕ್ಷಣಿಕ ವಲಯದ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಸರ್ವೋದಯ ಅನುದಾನಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸರ್ಕಾರ ಸ್ವಾಧಿನ ಪಡೆದು ಶಾಲೆ ಆರಂಭಿಸಬೇಕು ಎನ್ನುವ ಹೋರಾಟವನ್ನು ಎಸ್‌ ಡಿ ಎಂ ಸಿ ತಂಡ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ “ಗುಲ್ವಾಡಿ ಶಾಲೆ ಉಳಿಸಿ ಹೋರಾಟ ಸಮಿತಿ” ರಚಿಸಿ ಹೋರಾಟ ಆರಂಭಿಸಲಾಗಿದ್ದು, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಕಚೇರಿಗೆ ಭೇಟಿ ನೀಡಿ ಹೋರಾಟಕ್ಕೆ ಸಲಹೆ ಸೂಚನೆ ಮಾರ್ಗದರ್ಶನ ನೀಡುವಂತೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಇಸ್ಮಾಯಿಲ್, ಉತ್ಸವ ಸಮಿತಿ ಗೌರವಾಧ್ಯಕ್ಷ ವಿವೇಕಾನಂದ ಭಂಡಾರಿ, ಎಸ್.ಡಿ.ಎಂ.ಸಿ. ಸದಸ್ಯರಾದ ಹರೀಶ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಐ . ಕೆ. ಇಬ್ರಾಹಿಂ, ಅಬ್ದುಲ್ಲಾ ಗುಲ್ವಾಡಿ, ಶ್ರೀಧರ ಪೂಜಾರಿ, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು , ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್ , ವಿ ನಾಗರಾಜ್ , ಬೈಂದೂರು ತಾಲೂಕು ಕೋಶಾಧಿಕಾರಿ ಸಾಧಿಕ್ ಮಾವಿನಕಟ್ಟೆ, ಸಂಘಟನಾ ಕಾರ್ಯದರ್ಶಿ ವರದ ಆಚಾರ್ಯ, ಉಪಸ್ಥಿತರಿದ್ದರು, ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಮಾತನಾಡಿ, ವೇದಿಕೆಯಿಂದ ಶಿಕ್ಷಣ ಇಲಾಖೆ ಜೊತೆ ಮಾತನಾಡಿ ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಹೇಳಿದರು.

ಒಂದರಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 60ಕ್ಕಿಂತಲೂ ಹೆಚ್ಚು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು 2 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆ ಇಲ್ಲದೆ ಇರುವುದರಿಂದ ಇದೇ ಶಾಲೆಯನ್ನು ಸರಕಾರಿ ಶಾಲೆಯನ್ನಾಗಿ ಮಾಡಲು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಯನ್ನು ಈಗಾಗಲೇ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಇಲಾಖೆ ನಿಯಮದಂತೆ ಅನುದಾನಿತ ಶಾಲೆಯ ಶಿಕ್ಷಕರ ನಿವೃತ್ತಿ ನಂತರ ಆಡಳಿತ ಮಂಡಳಿ ಶಾಲೆ ನಡೆಸಿಕೊಂಡು ಹೋಗಬೇಕು ಆದರೆ ಇಲ್ಲಿ ಆಡಳಿತ ಮಂಡಳಿ ಅಸ್ತಿತ್ವ ಇಲ್ಲದೆ ಇರುವುದರಿಂದ ಇಲಾಖೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಾಲೆ ಮುಚ್ಚಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.

Comments

Leave a Reply

Your email address will not be published. Required fields are marked *

More posts

Exit mobile version