ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಉತ್ತಮ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಲಲಿತಾ ಕಲೆಗಳ ಪಾತ್ರ ಮಹತ್ತರವಾದುದು. ಆಸ್ತಿ, ಐಶ್ವರ್ಯ, ಸಂಪತ್ತು ಎಷ್ಟೇ ಇದ್ದರೂ, ಮನಸ್ಸಿಗೆ ಬೇಕಾದ ಶಾಂತಿಯನ್ನು ಹಣದಿಂದ ಖರೀದಿಸಲು ಸಾ‘ವಿಲ್ಲ. ಅದು ಚಿತ್ರಕಲೆ, ಸಂಗೀತ, ನಾಟಕ, ನೃತ್ಯ, ಕ್ರೀಡೆಯಿಂತಹ ಕಲೆಗಳಿಂದ ಮಾತ್ರ ಸಾ‘ ಎಂದು ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಹೇಳಿದರು.
ಅವರು ಗುರುವಾರ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ರಜತ ಮಹೋತ್ಸವದ ಅಂಗವಾಗಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಶಾಲೆಯ ಮತಂಗವನದಲ್ಲಿ ಆರ್ಟಿಸ್ಟ್ ಫೋರಂ ಉಡುಪಿ ಸಹಯೋಗದೊಂದಿಗೆ ೩ ದಿನಗಳ ಕಾಲ ಆಯೋಜಿಸಿರುವ ‘ವರ್ಣಾಂಜಲಿ’ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣ ಕುಮಾರ ಮಾತನಾಡಿ, ಕವಿ ಕಂಡ ಕನಸನ್ನು ನನಸು ಮಾಡುವವರು ಚಿತ್ರಕಲಾವಿದರು ಎನ್ನುವ ಮಾತಿನಂತೆ, ಕಲಾವಿದರು ಎಲ್ಲರ ಭಾವನೆಗಳಿಗೆ ಹತ್ತಿರವಾದವರು. ಕಲೆ ವಿಶ್ವ ಭಾಷೆ. ಕಲಾವಿದರ ಬಿಡಿಸುವ ಚಿತ್ರಗಳಿಗೆ ನಾವು ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಹೃದಯದಿಂದ ಮೂಡಿರುವ ಕಲೆ ಆಗಿರುವುದರಿಂದ ಮೌಲ್ಯಯುತವಾದುದು. ಚಿತ್ರಕಲೆ ಖಾಲಿ ಹಾಳೆಯಿದ್ದಂತೆ. ಅದಕ್ಕೆ ಬಣ್ಣ – ಭಾವನೆಗಳನ್ನು ತುಂಬಿ ಸುಂದರವಾಗಿಸುವವರು ಕಲಾವಿದರು. ಇದು ಬದುಕಿಗೂ ಅನ್ವಯ ಆಗುವಂತದ್ದು ಎಂದವರು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಮೋಹನ್ ರಾವ್ ಬಿ. ಹಂಪಿ, ಸಾವಿತ್ರಿ ಯರಾಶಿ ಬಾಗಲಕೋಟೆ ಮಾತನಾಡಿದರು
.
ಹೆಸರಾಂತ ಚಿತ್ರ ಕಲಾವಿದರಾದ ಚಂದ್ರಕಾಂತ ಆಚಾರ್ಯ ಬೆಂಗಳೂರು, ಗಣೇಶ್ ಸೋಮಯಾಜಿ ಮಂಗಳೂರು, ಬಸವರಾಜ ಕುಟಿನಿ ಗುಲ್ಬರ್ಗ, ಜನಾರ್ದನ ಹಾವಂಜೆ, ಕಂದನ್ ಜಿ. ಬೆಂಗಳೂರು, ಕಿಶೋರ್ ಕುಮಾರ್ ತುಮಕೂರು, ಕೃಷ್ಣ ಶೆಟ್ಟಿ ಬೆಂಗಳೂರು, ಸಿಂಧು ಕಾಮತ್ ಉಡುಪಿ, ಶಂಕರ್ ಕೆ.ವಿ. ಹುಬ್ಬಳ್ಳಿ, ವಿಶ್ವಾಸ್ ಕಾಸರಗೋಡು, ವಿಲ್ಸನ್ ಕಯ್ಯರ್ ಕಾಸರಗೋಡು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್, ನಾಗರಾಜ್ ಎಸ್., ಮತ್ತಿತರರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ರಾಮ ದೇವಾಡಿಗ ಪ್ರಸ್ತಾವಿಸಿ, ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಸುಮಲತಾ ಜೋಗಿ ಸ್ವಾಗತಿಸಿ, ಸುನೀತಾ ವಂದಿಸಿದರು. ಶಶಿಕಲಾ ನಿರೂಪಿಸಿದರು.

Leave a Reply Cancel reply