ಕೋಟೇಶ್ವರ ಕೊಡಿಹಬ್ಬ : ಪೂರ್ವಭಾವಿ ಸಭೆ

0
1215

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ನ.19ರಂದು ಹುಣ್ಣಿಮೆಯ ದಿನ ಕೋಟೇಶ್ವರ ಕೊಡಿಹಬ್ಬದ ರಥೋತ್ಸವ ನಡೆಯಲಿದೆ. ಇದುವರೆಗೆ ಸರ್ಕಾರದಿಂದ ಯಾವುದೇ ನಿಷೇಧಾತ್ಮಕ ಸೂಚನೆಗಳು ಬಾರದ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಹಾಗೂ ಧಾರ್ಮಿಕವಾದ ಎಲ್ಲ ಉತ್ಸವಗಳೊಂದಿಗೆ ಹಬ್ಬ ನಡೆಯುತ್ತದೆ. ಆದರಲ್ಲಿಯೂ ಕೋವಿಡ್ ರಕ್ಷಣಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ ಐತಾಳರು ಹೇಳಿದರು.

ಅವರು ಉಡುಪಿ ಜಿಲ್ಲೆಯ ಅತಿದೊಡ್ಡ ವಾರ್ಷಿಕ ಜಾತ್ರೆ, ಕೋಟೇಶ್ವರದ ಐತಿಹಾಸಿಕ ಶ್ರೀ ಕೋಟಿಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಕೊಡಿಹಬ್ಬದ ತಯಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಉತ್ಸವಗಳ ಮಾಹಿತಿ, ಖರ್ಚು-ವೆಚ್ಚಗಳ ವಿವರ ಒದಗಿಸಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಪೋಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಎಸ್‍ಐ ಸುಧಾಕರ್ ಮಾತನಾಡಿ, ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಬ್ರಹ್ಮರಥ ಪರಿಭ್ರಮಣಾ ಪಥದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಉತ್ಸವ ಪ್ರದೇಶದಲ್ಲೂ ತಾತ್ಕಾಲಿಕ ಹೊರ ಠಾಣೆ ನಿರ್ಮಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದರು.

ಟ್ರಾಫಿಕ್ ವಿಭಾಗದ ಎಎಸ್‍ಐ ಚಂದ್ರಶೇಖರ್ ಮಾತನಾಡಿ, ಕೋಟೇಶ್ವರ ಪೇಟೆಯ ನಾಲ್ಕೂ ದಿಕ್ಕುಗಳಲ್ಲಿ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಉತ್ಸವದೊಳಗೆ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಮಾತನಾಡಿ, ಕೊರೊನಾ ಮುಂಜಾಗರೂಕತೆ ಕಡ್ಡಾಯ. ಇನ್ನುಳಿದಂತೆ ಜನ ಸೇರುವಲ್ಲಿ ಕ್ಲೋರಿನೇಷನ್, ಆಂಬ್ಯುಲೆನ್ಸ್ ವ್ಯವಸ್ಥೆ, ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಕಾರ್ಯಕರ್ತರು ಗಸ್ತಿನಲ್ಲಿರುವರು ಎಂದು ತಿಳಿಸಿದರು.

ಗೋಪಾಡಿ ಮೆಸ್ಕಾಂ ಸೆಕ್ಷನ್ ಆಫೀಸರ್ ಸುನಿಲ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಜೋತುಬಿದ್ದ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸಲಾಗುವುದು. ಅಂಗಡಿಯವರಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಅಪೇಕ್ಷೆಯ ಮೇರೆಗೆ ಕಲ್ಪಿಸಲಾಗುವುದು. ಉತ್ಸವ ಸಾಂಗವಾಗಿ ಸುರಕ್ಷಿತವಾಗಿ ನಡೆಯುವಂತೆ ಇಲಾಖೆಯ ಎಲ್ಲ ಪವರ್ ಮ್ಯಾನ್, ಸಿಬಂದಿಗಳು ಸಹಕರಿಸುವರು ಎಂದರು.

ಕೋಟೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೇಜಪ್ಪ ಕುಲಾಲ್ ಮಾತನಾಡಿ, ಹಬ್ಬದ ಬಗ್ಗೆ ಸರ್ಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ. ಆದ್ದರಿಂದ ಈ ಹಿಂದಿನಂತೆಯೇ ಎಲ್ಲ ವಿಧಿವಿಧಾನಗಳೊಂದಿಗೆ ಹಬ್ಬ ನಡೆಸಲು ತೀರ್ಮಾನಿಸಲಾಗಿದೆ. ಅಂಗಡಿಯವರಿಗೆ ಸಾಕಷ್ಟು ಮೊದಲೇ ಸೂಕ್ತ ಸ್ಥಳ ನಿಗದಿ ಮಾಡಿ, ಕಸ ವಿಲೇವಾರಿ ಬಗ್ಗೆ ಶರತ್ತು ಬದ್ಧ ಪರವಾನಿಗೆ ನೀಡಲಾಗುವುದು. ಪ್ರಮುಖ ಸ್ಥಳಗಳಲ್ಲಿ ಕ್ಲೋರಿನ್ ಮತ್ತು ನೀರು ಸಿಂಪಡಣೆ ಮೂಲಕ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಹಿರಿಯ ಮುಂದಾಳುಗಳಾದ ಹಿರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ದಿನೇಶ್ ಕಾಮತ್, ಬಿ ಎಂ. ಗುರುರಾಜ್ ರಾವ್, ಸಮಿತಿ ಸದಸ್ಯರಾದ ಮಂಜುನಾಥ ಆಚಾರ್ಯ, ಭಾರತಿ, ಶಾರದಾ, ಸಿಬಂದಿಗಳಾದ ಅನುರಾಧಾ, ವೆಂಕಟೇಶ್ ಶೇಟ್, ಮ್ಯಾನೇಜರ್ ಶ್ರೀಕಾಂತ್ ಉಪಾಧ್ಯಾಯ ವಿವಿಧ ಸಂಘಟನೆಗಳವರು, ಸಂಘ – ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ ಸ್ವಾಗತಿಸಿದರು. ಸಮಿತಿ ಸದಸ್ಯ ಸುರೇಶ್ ಶೇರಿಗಾರ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ವಂದಿಸಿದರು.

LEAVE A REPLY

Please enter your comment!
Please enter your name here