ಕುಂದಾಪುರ :ಮನೋರಂಜನೆಯೊಂದಿಗೆ ಮೌಲ್ಯಯುತ ಶಿಕ್ಷಣ ಯಕ್ಷಗಾನದ ಕೊಡುಗೆ – ಪ್ರದೀಪ ಕುಮಾರ ಕಲ್ಕೂರ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : “ಜಾತಿ ಮತ ಕುಲ ಧರ್ಮಗಳ ಭೇದವಿಲ್ಲದೆ ಜನಸಾಮಾನ್ಯರನ್ನು ಆಕರ್ಷಿಸಿದ ಕಲೆ ಯಕ್ಷಗಾನ. ಚೌಕಿಯ ಪೂಜೆಯ ಮೊದಲ ಪ್ರಸಾದ ದಕ್ಕುವುದು ಭಾಗವತನಿಗೆ. ಭಾಗವತನ ಸ್ಥಾನಕ್ಕೆ ಬೆಲೆ ಹೊರತೂ ಅವನ ಜಾತಿಗಲ್ಲ. ಮನೋರಂಜನೆಯೊಂದಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದ ಶ್ರೀಮಂತ ಕಲೆ ಯಕ್ಷಗಾನ. ಈ ಕಲೆಯ ಮೂಲಕ ಸಂಸ್ಕೃತಿಯ ಉಳಿವು ಸಾಧ್ಯವಾಗಿದೆ” ಎಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಫೆಬ್ರುವರಿ 12ರ ಸೋಮವಾರ ಸಂಜೆ ಪಟೇಲರ ಮನೆಯ ಆವರಣದಲ್ಲಿ ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಮತ್ತು ಮಂಗಳೂರಿನ ಕರ್ಣಾಟಕ ಯಕ್ಷಧಾಮ ಜಂಟಿಯಾಗಿ ಆಯೋಜಿಸಿದ ‘ಕಲೋತ್ಸವ 2024-ಕಲಾವಿದಾಭಿನಂದನ, ಬಯಲಾಟ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲ್ಕೂರ ಮಾತನಾಡಿದರು. ಈ ಸಂದರ್ಭ ಪೆರ್ಡೂರು ಮೇಳದ ಎಲ್ಲಾ ಹಿಮ್ಮೇಳ, ಮುಮ್ಮೇಳ ಮತ್ತು ನೇಪಥ್ಯ ಕಲಾವಿದರನ್ನು ಗೌರವಿಸಲಾಯಿತು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕ ಮಹೇಶ್ ಜೆ., ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ, ನಿವೃತ್ತ ಅಧ್ಯಾಪಕ ಹರಿಕೃಷ್ಣ ಹೊಳ್ಳ, ಯಕ್ಷ ದೇಗುಲದ ಸುದರ್ಶನ ಉರಾಳ ಉಪಸ್ಥಿತರಿದ್ದರು. ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಶ್ರೀರಾಮ್ ಮಧ್ಯಸ್ಥ ವಂದಿಸಿದರು. ಹಾರ್ಯಾಡಿ ರಘುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪೆರ್ಡೂರು ಮೇಳದ ಕಲಾವಿದರಿಂದ ಬ್ರಹ್ಮಕಪಾಲ ಮತ್ತು ಸುಭದ್ರಾ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.

Comments

Leave a Reply

Your email address will not be published. Required fields are marked *

More posts

Exit mobile version