ಬೈಂದೂರು :ಚುನಾವಣೆ ಸಂದರ್ಭ ಹಿಂದುತ್ವ ನೆನಪಾಯಿತೇ? ಪಕ್ಷ ನಿಷ್ಠೆ ಇಲ್ಲದ ನಿಮಗೆ ಮೋದಿ ಫೋಟೋ ಯಾಕೆ? – ಈಶ್ವರಪ್ಪ ವಿರುದ್ಧ ದೀಪಕ್ ಕುಮಾರ್ ಶೆಟ್ಟಿ ಕಿಡಿ

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರನ್ನು ಪಕ್ಷದ ವರಿಷ್ಠರೇ ಆಯ್ಕೆ ಮಾಡಿದ್ದರೂ ಪಕ್ಷದ ನಿಲುವನ್ನು ಒಪ್ಪಿಕೊಳ್ಳದ ಈಶ್ವರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪನವರಿಗಿಲ್ಲ ಎಂದು ಬುಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಿಡಿ ಕಾರಿದ್ದಾರೆ. ಬೈಂದೂರಿನಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೆ ಬದಲಾವಣೆಯಾಘುತ್ತದೆ ಎನ್ನುವ ಭ್ರಮೆ ಬೇಡ ಎಂದು ಈಶ್ವರಪ್ಪಗೆ ಕಿವಿಮಾತು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುವ ನಿಮ್ಮ ಹಿಂದುತ್ವದ ಬಗ್ಗೆ ಎಲ್ಲರಿಗೂ ತಿಳಿದಿದೆ. ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷ ಹೇಗೆ ಕಟ್ಟಿದ್ದಾರೆ ಎಂಬುದೂ ತಿಳಿದಿದೆ. ನಿಮ್ಮನ್ನು ಶಾಸಕ, ಸಚಿವ, ಉಪಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಬಿ.ಎಸ್.ವೈ. ಹೊರತು ಬೇರ್ಯಾರು ಅಲ್ಲ ಎಂಬುದೂ ನೆನಪಿರಲಿ ಎಂದು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿಯವರು ವಿಶ್ವ ನಾಯಕ ಎನ್ನುವ ನೀವು ಅದೇ ಮೋದಿಯವರ ಹೆಸರಿನಲ್ಲಿ ಪದೇ ಪದೇ ಬಿಜೆಪಿ ಪಕ್ಷಕ್ಕೆ ಮುಜುಗರ ಮಾಡುತ್ತಿರುವುದ್ಯಾಕೆ, ಮೋದಿಯವರೇ ನಿಮ್ಮನ್ನು ತಿರಸ್ಕಾರ ಮಾಡಿರುವಾಗ ಮೋದಿಯವರ ಭಾವ ಚಿತ್ರ ಯಾಕೆ ಬಳಸುತ್ತಿದ್ದೀರಿ? ಅನಂತ್ ಕುಮಾರ್, ಹೆಗಡೆ, ಪ್ರತಾಪ್ ಸಿಂಹ ಮೊದಲಾದ ನಾಯಕರಿಗೆ ಟಿಕೆಟ್ ತಪ್ಪಿದಾಗ ಚಕಾರ ಎತ್ತಲಿಲ್ಲ. ನಿಮಗೆ ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮೇಲಾಯಿತೇ ? ಬಿಜೆಪಿ ಬೇಡ ಮತ ಕೇಳಲು ಮೋದಿ ಬೇಕು? ಹಾಗಿದ್ದರೆ ಮೋದಿ ಪ್ರಧಾನಿಯಾಗಬಾರದು ಎನ್ನುವುದು ನಿಮ್ಮ ಬಂಡಾಯವೇ? ಎಲ್ಲ ಸ್ಥಾನಮಾನ ನೀಡಿದ ಬಿಜೆಪಿಗೆ ಬ್ರಿಗೆಟ್ ಹೆಸರಿನಲ್ಲಿ ಅನ್ಯಾಯ ಮಾಡಿದ್ರೀ. ಈಗ ಬಂಡಾಯದ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೀರಿ. ನಿಮ್ಮ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೇಳಿದ್ದ ನೀವು ಶಿವಮೊಗ್ಗದಲ್ಲಿ ಏಕೆ ಸ್ಪರ್ಧಿಸುತ್ತಿದ್ದೀರಿ? ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗ ಮರಿ ರಾಜಹುಲಿ ಎಂದಿದ್ದ ನಿಮಗೆ ಆಗ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ? ಅಧಿಕಾರಕ್ಕಾಗಿ ಯಡಿಯೂರಪ್ಪರ ಮನೆ ಬಾಗಿಲಿಗೆ ಹೋಗುವಾಗ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ? ಅಧಿಕಾರಕ್ಕಾಗಿ ಜಾತಿಯನ್ನು ಮುಂದೆ ತರುವುದು, ಬ್ರೀಗೆಡ್ ಹೆಸರಿನಲ್ಲಿ ಬಿಜೆಪಿಗೆ ತ್ರೇಟ್ ನೀಡುವ ನಿಮ್ಮ ಸಂಸ್ಕೃತಿ ಯಾವುದು? ದೆಹಲಿಗೆ ಹೋದರೂ ವರಿಷ್ಠರು ನಿಮಗೆ ಮಾತನಾಡಲು ಸಿಗಲಿಲ್ಲ ಯಾಕೆ? ಈ ಹಿಂದೆ ಕರಾವಳಿಯ ಹಿಂದೂ ಸಂಘಟನೆ ಕಾರ್ಯಕರ್ತರು ಹೇಗಿದ್ದರು ಎಂದು ಒಮ್ಮೆಯಾದರೂ ವಿಚಾರಿಸಿದ್ದೀರಾ? ಇಷ್ಟಕ್ಕೂ ಬೈಂದೂರಿಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

Comments

Leave a Reply

Your email address will not be published. Required fields are marked *

More posts

Exit mobile version