ಬೈಂದೂರು :ಸಂಪಾದನೆಯ ಒಂದಂಶ ದಾನ ಮಾಡಿದರೆ ಸಾರ್ಥಕತೆ – ರೇಣುಕಾನಂದ  ಸ್ವಾಮೀಜಿ

0
346

ಬೈಂದೂರಿನ ಖಾರ್ವಿ ಕುಟುಂಬಕ್ಕೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ 15ನೇ ಮನೆ ಹಸ್ತಾಂತರ

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ ಎಂದು ನಿಟ್ಟೂರಿನ ಶ್ರೀನಾರಾಯಣ ಗುರು ಮಹಾ ಸಂಸ್ಥಾನದ ಶ್ರೀ  ರೇಣುಕಾನಂದ  ಸ್ವಾಮೀಜಿ ಹೇಳಿದರು. ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಇದರ ವತಿಯಿಂದ ಸೂರ್ಕುಂದದಲ್ಲಿ ನಿರ್ಮಾಣಗೊಂಡ 15ನೇ ಮನೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ಸಾಮರ್ಥ್ಯ ಇರುವಾಗ ಒಂದಿಷ್ಟು ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಸಂತೃಪ್ತಿ ಮೂಡುತ್ತದೆ. ಈಗಾಗಲೇ 380 ಕುಟುಂಬಗಳಿಂದ‌ ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಆ ಪೈಕಿ ಸುಮಾರು 150 ಕುಟುಂಬಗಳು ವಾಸಿಸುತ್ತಿರುವ ಮನೆಗಳು ತುಂಬಾ ಕ್ರಿಟಿಕಲ್ ಸ್ಥಿತಿಯಲ್ಲಿವೆ. ಆದರೆ ವರ್ಷಕ್ಕೆ ಮೂರರಿಂದ ನಾಲ್ಕು ಮನೆಗಳ ನಿರ್ಮಾಣದ ಮಿತಿಯಿಟ್ಟುಕೊಂಡಿದ್ದು 15ನೇ ಮನೆ ಇದಾಗಿದೆ. ಇನ್ನೂ ಮೂರು ಮನೆಗಳು ಪೂರ್ಣಗೊಂಡಿದ್ದು, ಭಾಗಶಃ ಕೆಲಸ ಬಾಕಿ ಇದೆ. ತಿಂಗಳೊಳಗಾಗಿ ಆ ಮನೆಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದರು.

ನಾರಾಯಣಗುರು ವಿಚಾರ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸುಬ್ರಾಯ ನಂದೋಡಿ, ವೆಂಕಟರಮಣ ಶೇರುಗಾರ್ ಬಿಜೂರು, ಮನೆಯವರಾದ ಪರಶುರಾಮ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಮನೆಯ ಯಜಮಾನಿಗೆ ಮನೆಯ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.

ರತ್ತುಬಾಯಿ ಜನತಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ಶ್ರೀ ವರಲಕ್ಷ್ಮೀ  ಸೊಸೈಟಿ ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here