ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುವಾರ ನಡೆದ ಬೆಂಗಳೂರಿನ ಯಕ್ಷದೇಗುಲ ತಂಡದ ಸಂಯೋಜನೆಯಲ್ಲಿ ಮಧುಕುಮಾರ್ ಬೋಳೂರು ವಿರಚಿತ ಸುದರ್ಶನ ಗರ್ವಭಂಗ ಯಕ್ಷಗಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಯಕ್ಷಗಾನದಲ್ಲಿ ಹಿಮ್ಮೇಳದ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆ ವಾದನದಲ್ಲಿ ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ಶಿವಾನಂದ ಕೋಟರವರು ಅದ್ಭುತವಾಗಿ ಕಾರ್ಯನಿರ್ವಹಿಸಿದರು.
ಮುಮ್ಮೇಳದಲ್ಲಿ ಸುದರ್ಶನನಾಗಿ ಯುವ ಪ್ರತಿಭಾನ್ವಿತ ಕಲಾವಿದ ಉದಯ ಹೆಗಡೆ ಕಡಬಾಳ, ಶತ್ರು ಪ್ರಸೂದನನಾಗಿ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆ, ವಿಷ್ಣು ಮತ್ತು ಲಕ್ಷ್ಮೀ ಆಗಿ ಯುವ ಕಲಾವಿದರಾದ ಆದಿತ್ಯ ಭಟ್ ಮತ್ತು ಸ್ಫೂರ್ತಿ ಭಟ್, ದೇವೆಂದ್ರನಾಗಿ ಪ್ರಖ್ಯಾತ ಕಲಾವಿದ ತಮ್ಮಣ್ಣ ಗಾಂವ್ಕರ್ರವರು ನಿರ್ವಹಿಸಿದರು. ರಂಗದ ಹಿಂದೆ ರಾಜು ಪೂಜಾರಿ ಹಂದಟ್ಟು, ನಾಗರಾಜ ಪೂಜಾರಿ ಹಂದಟ್ಟು ಸಹಕಾರ ನೀಡಿದರು. ಎಲ್ಲ ಕಾರ್ಯಕ್ರಮದ ಸಂಯೋಜನೆಯನ್ನು ಕೋಟ ಸುದರ್ಶನ ಉರಾಳರು ನಿರ್ವಹಿಸಿದರು. ಒಟ್ಟಿನಲ್ಲಿ ಸುದರ್ಶನ ಗರ್ವಭಂಗ ಯಕ್ಷಗಾನ ಪ್ರದರ್ಶನ ಎಲ್ಲರಿಂದ ಮೆಚ್ಚುಗೆ ಪಡೆಯಿತು.

Leave a Reply Cancel reply