ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಮೂಡಹಡು ಇವರ ವತಿಯಿಂದ ಪಾಂಡೇಶ್ವರ ಶಾಲೆಯಲ್ಲಿ ವಿದ್ಯಾಭ್ಯಾಸಗೈಯುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಭಾನುವಾರ ಶಾಲೆಯ ಸಭಾಂಗಣದಲ್ಲಿ ಜರುಗಿತು.
ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಇರುವ 38 ಕಲ್ಪತರು ಸ್ವ ಸಹಾಯ ಸಂಘದ ಸದಸ್ಯರ 225 ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 90% ಅಂಕ ಪಡೆದ ಆಕಾಶ್ ಪೂಜಾರಿ ಪಾಂಡೇಶ್ವರ ಹಾಗೂ ನಿಕಿತಾ ಪೂಜಾರಿ ಯಡಬೆಟ್ಟು ವಿದ್ಯಾರ್ಥಿಗಳನ್ನು ಇವರುಗಳನ್ನು ಗೌರವಿಸಲಾಯಿತು ಹಾಗೂ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೆಲ್ಲಿ ಹಾಗೂ ಸೀತಾಫಲ ಸಸ್ಯಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಾಂಡೇಶ್ವರ ಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್, ಬಿಲ್ಲವ ಸಮುದಾಯದ ಮುಖಂಡರಾದ ಐರೋಡಿ ವಿಠ್ಠಲ್ ಪೂಜಾರಿ, ದಯಾನಂದ ಪೂಜಾರಿ, ಶೇಖರ್ ಪೂಜಾರಿ ಮೂಡುಕಟ್, ಯಡಬೆಟ್ಟು ಪಂಜು ಪೂಜಾರಿ, ಗೋಪಾಲ ಪೂಜಾರಿ ಮಠತೋಟ,ಕೊಡಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ವೆಂಕಟೇಶ್ ಪೂಜಾರಿ ಉಪಸ್ಥಿತರಿದ್ದರು.
ಬಿಲ್ಲವ ಯುವ ವೇದಿಕೆಯ ಮಾಜಿ ಅಧ್ಯಕ್ಷ ಸುರೇಶ ಪೂಜಾರಿ ಪಾಂಡೇಶ್ವರ ಹಾಗೂ ಸೀಮಾ ವಿಜಯ ಪೂಜಾರಿ ಕಾರ್ಯಕ್ರಮ ನಿರ್ವಹಣೆಗೈದು ವಂದಿಸಿದರು.

Leave a Reply Cancel reply