ಬೈಂದೂರು: ಆಗಸ್ಟ್ 25ರಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯಿಂದ “ಕೆಸರಲ್ಲೊಂದು ದಿನ -ಗಮ್ಮತ್ತ್”

0
269

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಬೈಂದೂರು ಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ – ಗಮ್ಮತ್ತ್” ಕಾರ್ಯಕ್ರಮವನ್ನು ಅಗಸ್ಟ್ 25ರ ಭಾನುವಾರ ಬೆಳಿಗ್ಗೆ 9ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮುಂದಾಳು, ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಹೇಳಿದರು.

ಅವರು ಬೈಂದೂರು ಪ್ರೆಸ್ ಕ್ಲಬ್‍ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಮೊದಲ ಭಾರಿಗೆ ಅದ್ದೂರಿ ಕಾರ್ಯಕ್ರಮ ಆಯೋಜಿಸಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.

ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು:
ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ವಾಲಿಬಾಲ್ ಸ್ಪರ್ಧೆ, ಕೆಸರ್ ಗದ್ದೆ ಓಟದ ಸ್ಪರ್ಧೆ, ಅಡಿಕೆ ಹಾಳಿಯಲ್ಲಿ ಎಳೆಯುವುದು ಸ್ಪರ್ಧೆಗಳು ಇರಲಿದ್ದು, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಥ್ರೋ ಬಾಲ್ ಸ್ಪರ್ಧೆ, ಕೆಸರ್ ಗದ್ದೆ ಓಟ, ಮಡ್ಲ್ ನೇಯುವ ಸ್ಪರ್ಧೆ, ಅಡಿಕೆ ಹಾಳಿಯಲ್ಲಿ ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಿಗೆ ಕೆಸರ್ ಗದ್ದೆ ಓಟ ಸ್ಪರ್ಧೆ, ಬೆನ್ ಚೆಂಡ್ ಆಟದ ಸ್ಪರ್ಧೆ, ಲಿಂಬೆ ಚಮಚ ಓಟ ಸ್ಪರ್ಧೆ, ಗೂಟಕ್ಕೆ ಸುತ್ತಿ ಓಡುವುದು ಸ್ಪರ್ಧೆ, ಕುಂದಾಪ್ರ ಕನ್ನಡ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಸ್ಪರ್ಧೆ ಆಯೋಜಿಸಲಾಗಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ ಎಂದರು.

ಹಲವು ಕಾರ್ಯಕ್ರಮಗಳು:
ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ಇರಲಿದ್ದು, ಇದಕ್ಕೂ ಮೊದಲು ಯಡ್ತರೆ ಬೈಪಾಸಿನಿಂದ ಮೆರವಣಿಗೆ, 5 ಜೊತೆ ಕಂಬಳ ಕೋಣಗಳ ಆಕರ್ಷಕ ಓಟ, ಸಾಂಕೇತಿಕ ಕಬ್ಬಡಿ ಆಟ, ನಟ ಪ್ರಮೋದ್ ಶೆಟ್ಟಿ ಸೇರಿದಂತೆ ಸಿನಿ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ, ಮನು ಹಂದಾಡಿ, ಚೇತನ್ ನೈಲಾಡಿ ಅವರ ಹಾಸ್ಯ, ಕುಂದಾಪ್ರ ಕನ್ನಡ ಶೈಲಿಯ ಊಟ, ವಿವಿಧ ಖಾದ್ಯಗಳು, ಸೆಲ್ಫಿ ಪಾಯಿಂಟ್, ಪಕ್ಕದ ಹೊಳೆಯಲ್ಲಿ ಬೋಟಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಥ್ವಿ ಕ್ರೀಡಾ ಮತ್ತು ಯುವಕ ಸಂಘ ರಿ. ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸಹಯೋಗ ನೀಡಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಚಾಲನೆ ನೀಡಿದ ಬಳಿಕ ನೇರವಾಗಿ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಮಕ್ಕಳ ಸ್ಪರ್ಧೆಗಳಿಗೆ ಬೆಳಿಗ್ಗೆ 9ರ ತನಕ ಸ್ಥಳದಲ್ಲಿಯೇ ನೊಂದಣಿ ಇರಲಿದೆ. ಬೆಳಿಗ್ಗೆಯಿಂದಲೇ ಎಲ್ಲಾ ಸ್ಪರ್ಧೆಗಳು ಆರಂಭವಾಗುವುದರಿಂದ ಸ್ಪರ್ಧಿಗಳು ಆರಂಭದಲ್ಲಿಯೇ ಹಾಜರಿರುವಂತೆ ಕೋರಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಪ್ರಮುಖರಾದ ಸುಬ್ರಹ್ಮಣ್ಯ ಜಿ. ಉಪ್ಪುಂದ, ದಿವಾಕರ ಶೆಟ್ಟಿ ಉಪ್ಪುಂದ, ಪ್ರಿಯದರ್ಶಿನಿ ಬೆಸ್ಕೂರು, ಪ್ರಸಾದ್ ಪ್ರಭು ಶಿರೂರು, ರಾಮ ಬಿಜೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಅರುಣ್ ಕುಮಾರ್ ಶಿರೂರು, ಕಿಶೋರ್ ಸಸಿಹಿತ್ಲು, ಸುನಿಲ್ ಹೆಚ್. ಜಿ. ಬೈಂದೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here