ಕುಂದಾಪುರ: ಹಾಡಹಗಲೇ ಮನೆ ದರೋಡೆ – ಲಕ್ಷಾಂತರ ರೂಪಾಯಿ ನಗ ನಗದು ದೋಚಿದ ಕಳ್ಳರು

0
588

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹಾಡಹಗಲೇ ವಸತಿನಿಬಿಡ ಪ್ರದೇಶದ ಮನೆಯೊಂದರ ಬಾಗಿಲು ಒಡೆದು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸಹಿತ ನಗ ನಗದು ದೋಚಿ ಪರಾರಿಯಾದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಗಳೂರು ಸಮೀಪದ ಬ್ರಹ್ಮಗುಡಿ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ 2ರಿಂದ 4 ಗಂಟೆ ನಡುವೆ ನಡೆದಿದೆ.

ಇಲ್ಲಿನ ಬ್ರಹ್ಮಗುಡಿ ನಿವಾಸಿ ಜಗದೀಶ್ ಚಂದ್ರ ನಾಯರ್ ಎಂಬುವರ ಮನೆಯಲ್ಲಿ ಹಗಲು ದರೋಡೆ ನಡೆದಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮೂಲತಃ ಕೇರಳದವರಾದ ಜಗದೀಶ್ ಚಂದ್ರ ನಾಯರ್ ಅವರು ಪತ್ನಿ ಹಾಗೂ ಮಗಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಪತಿ ಪತ್ನಿ ಇಬ್ಬರೂ ಕುಂದಾಪುರದಲ್ಲಿ ಪ್ರಿಂಟಿಂಗ್ ಪ್ರೆಸ್ ಕೆಲಸ ಮಾಡಿಕೊಂಡಿದ್ದಾರೆ. ಅವರ ಮಗಳು ಶಾಲೆಗೆ ಹೋಗುತ್ತಿದ್ದಾಳೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಜಗದೀಸ್ ಚಂದ್ರ ಹಾಗೂ ಪತ್ನಿ ಮನೆಯಲ್ಲಿ ಊಟ ಮಾಡಿ ಪ್ರೆಸ್ ಗೆ ಹೋಗಿದ್ದರು. ಸಂಜೆ 4 ಗಂಟೆಗೆ ಜಗದೀಶ್ ಅವರ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಅನುಮಾನ ಮೂಡಿ ಹಿಂದುಗಡೆ ಹೋಗಿ ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಒಡೆದು ದರೋಡೆ ನಡೆಸಿರುವುದು ಬೆಳಕಿಗೆ ಬಂದಿದೆ.

ಮನೆಯಲ್ಲಿ 60 ಸಾವಿರದಷ್ಟು ನಗದು ಹಣ ಇಡಲಾಗಿತ್ತು ಎಂದು ತಿಳಿದು ಬಂದಿದೆ. ಚಿನ್ನಾಭರಣಗಳೂ ಇದ್ದು, ಎಷ್ಟು ಕಳುವಾಗಿದೆ ಎಂದು ಶ್ವಾನದಳ ಬಂದ ಬಳಿಕವೇ ತಿಳಿಯಬೇಕಿದೆ. ಸುತ್ತಲೂ ಮನೆಗಳಿದ್ದರೂ ದರೋಡೆಕೋರರು ಹಗಲು ದರೋಡೆ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಕುಂದಾಪುರದಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಕಳ್ಳರನ್ನು ಸದೆಬಡಿಯುವರೇ ಕಾದು ನೋಡಬೇಕಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here