ಶಿವಮೊಗ್ಗ: ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ 95 ಸಾವಿರ ಶಾಲಾ ಬ್ಯಾಗ್ ವಿತರಣೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

0
371

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗಿನ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ 95,000 ಶಾಲಾ ಬ್ಯಾಗ್ ಗಳನ್ನು ನೀಡಲಾಗುತ್ತಿದ್ದು, ಶುಕ್ರವಾರ ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರು ಸಾಂಕೇತಿವಾಗಿ ಉದ್ಘಾಟಿಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ 8 ರಿಂದ 10 ನೇ ತರಗತಿಯ ಸರ್ಕಾರಿ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಶಾಲಾ ಬ್ಯಾಗ್ ವಿತರಣೆ ಮಾಡುವ ಗುರಿಯನ್ನು ಹೊಂದಿದ್ದು, ಅದರ ಜೊತೆಗೆ ಉಚಿತವಾಗಿ ಸ್ವೆಟರ್, ನೋಟ್ ಪುಸ್ತಕ ಹಾಗೂ ಇನ್ನಿತರೆ ಕಲಿಕಾ ಉಪಕರಣಗಳನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ವತಿಯಿಂದ ನೀಡಲಾಗುವುದು ಎಂದರು.

ಭದ್ರಾವತಿ 261 ಶಾಲೆಗಳ 11,357 ಹೊಸನಗರ 217 ಶಾಲೆಗಳ 6,772 ವಿದ್ಯಾರ್ಥಿಗಳಿಗೆ, ಸಾಗರ ತಾಲೂಕಿನ 297 ಶಾಲೆಗಳ 10,174 ವಿದ್ಯಾರ್ಥಿಗಳು, ಶಿಕಾರಿಪುರ ತಾಲೂಕಿನ 229 ಶಾಲೆಗಳ 14,914 ವಿದ್ಯಾರ್ಥಿಗಳು, ಶಿವಮೊಗ್ಗ ತಾಲೂಕಿನ 310 ಶಾಲೆಗಳ 17,909 ವಿದ್ಯಾರ್ಥಿಗಳು, ಸೊರಬ ತಾಲೂಕಿನ 306 ಶಾಲೆಗಳ 13,627 ವಿದ್ಯಾರ್ಥಿಗಳಿಗೆ, ತೀರ್ಥಹಳ್ಳಿ ತಾಲೂಕಿನ 201 ಶಾಲೆಗಳ 5,964 ವಿದ್ಯಾರ್ಥಿಗಳಿಗೆ ಹಾಗೂ ಬೈಂದೂರು ತಾಲೂಕಿನ 192 ಶಾಲೆಗಳ 13,339 ವಿದ್ಯಾರ್ಥಿಗಳು ಸೇರಿದಂತೆ 2013 ಶಾಲೆಗಳ 94,056 ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

LEAVE A REPLY

Please enter your comment!
Please enter your name here