ಬೈಂದೂರು ಕ್ಷೇತ್ರವನ್ನು ಅಭಿವೃದ್ಧಿಯ ಶಿಖರಕ್ಕೇರಿಸಲಾಗುವುದು-ಸಂಸದ ರಾಘವೇಂದ್ರ

0
871

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಬೈಂದೂರ ವಿಧಾನಸಭಾ ಕ್ಷೇತ್ರಾದ್ಯಂತ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 11,435.35 ಕ್ವಿಂಟಲ್ ಪಡಿತರ ವಿತರಿಸಲಾಗಿದೆ. ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ನೂರಾರು ದಿನಗಳ ಕೆಲಸ ನೀಡುವುದರೊಂದಿಗೆ ಕೂಲಿಯ ಹಣವನ್ನು ಸಹ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಇಂಗು ಗುಂಡಿ, ಶೌಚಾಲಯ, ಬಚ್ಚಲು ಗುಂಡಿ, ಕೃಷಿ ಬಾವಿ, ದನದ ಕೊಟ್ಟಿಗೆ ಮನೆ ಹಾಗೂ ಸಾರ್ವಜನಿಕವಾಗಿ ಕೆರೆ ಹೂಳೆತ್ತುವುದು, ಶಾಲೆ ಆವರಣ ಗೋಡೆ, ಗಿಡ ನೆಡುವುದು ಹೀಗೆ ಹಲವಾರು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ನರೇಗಾ ಯೋಜನೆಯಲ್ಲಿ 2020-21ನೇ ಸಾಲಿನಲ್ಲಿ 1976 ಕಾಮಗಾರಿಗಳನ್ನು ರೂ 1174.73 ಲಕ್ಷದಲ್ಲಿ ಕಾಮಗಾರಿ ಮಾಡಲಾಗಿದ್ದು, ಪ್ರಸ್ತುತ 2021-22ನೇ ಸಾಲಿನಲ್ಲಿ 2862 ಕಾಮಗಾರಿಗಳನ್ನು ರೂ 2168.65 ಲಕ್ಷದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ದುಡಿಯುವ ಕೈಗಳಿಗೆ ನರೇಗಾದಲ್ಲಿ ಸಾಕಷ್ಟು ಕೆಲಸ ಸಿಕ್ಕಿದ್ದು ಜನರು ಗೂಳೆ ಹೋಗುವುದು ಕಡಿಮೆಯಾಗಿದೆ.

ಕಾರ್ಮಿಕಾ ಇಲಾಖೆ ವತಿಯಿಂದ ಬೈಂದೂರು ವಿಧಾನ ಸಭಾ ಕ್ಷೇತ್ರಾದ್ಯಂತ 7,000(ಏಳು ಸಾವಿರ) ಆಹಾರ ಸಾಮಗ್ರಿ ಕಿಟ್ ಗಳನ್ನು ನೀಡಲಾಗಿದೆ. ಕಾರ್ಮಿಕ ಇಲಾಖೆ ವತಿಯಿಂದ ಬೈಂದೂರು ಹಾಗೂ ಕುಂದಾಪುರ ತಾಲೂಕಿಗೆ 12,250 ಸುರಕ್ಷಾ ಹಾಗೂ ಪ್ರತಿ ರಕ್ಷಣಾ ಕಿಟ್ ಗಳನ್ನು ನೀಡಲಾಗಿದೆ. ಮುಂದುವರಿದು ಬೈಂದೂರ ಹಾಗೂ ಕುಂದಾಪುರಕ್ಕೆ ಇನ್ನೂ 6,000 ಸುರಕ್ಷಾ ಕಿಟ್ ಗಳು ಬರಲಿದೆ ಎಂದು ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಹೊಸೂರು, ಬೈಂದೂರು, ಕೊಲ್ಲೂರು, ಯಳಜಿತ್, ತಗ್ಗರ್ಸೆ, ಮುದೂರು, ಗೋಳಿಹೊಳೆ, ಜಡ್ಕಲ್, ಹಳ್ಳಿಹೊಳೆ, ಆಲೂರು, ಚಿತ್ತೂರು, ಇಡೂರು ಕುಂಞಡಿ, ಕೆರಾಡಿ,ಬೆಳ್ಳಾಲ ಹಾಗೂ ವಂಡ್ಸೆ ಸೇರಿ 15 ಗ್ರಾಮಗಳ ಸಜನರಿಗೆ ತೀವ್ರ ತೊಂದರೆಗೊಳಗಾಗಲಿದ್ದಾರೆ.

ನಾನು ಒಬ್ಬ ಸಂಸದನಾಗಿ ಕ್ಷೇತ್ರದ ಜನತೆಯ ಸಮಸ್ಯೆ ಅರಿತು ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡದೆ ಸಂಪೂರ್ಣವಾಗಿ ತಿರಸ್ಕರಿಸಬೇಕು. ಸ್ಥಳೀಯ ಪರಿಸ್ಥಿತಿ ಅಧ್ಯಯನ ಮಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಬೇಕು ಹಾಗೂ ವನ್ಯಜೀವ ವಲಯದ ಗಡಿಯಿಂದ 5 ರಿಂದ 10 ಕಿ.ಮೀ ಪರಿಸರ ಸೂಕ್ಷ್ಮ ವಲಯದ ಬಫರ್ ಜೋನ್ ಪರಿಮಿತಿಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಅರಣ್ಯ,ಪರಿಸರ ಹವಾಮಾನ ಬದಲಾವಣೆ ಸಚಿವರಾದ ಸನ್ಮಾನ್ಯ ಶ್ರೀ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸದ್ದೇನೆ ಎಂದಿದ್ದಾರೆ.

ಸತತವಾಗಿ ಕಳೆದ ಮೂರು ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರಾಗಿದ್ದು, ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ,ಮೀನುಗಾರಿಕೆ,ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಸಚಿವರಾಗಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಪಂಚಾಯತ್ ರಾಜ್ ಬಗ್ಗೆ ಅಪಾರ ಅನುಭವವುಳ್ಳ ಹಾಗೂ ಸದನದಲ್ಲಿ ದೀನ ದಲಿತರ,ಬಡವರ, ಹಿಂದುಳಿದ ವರ್ಗದವರ, ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ಸರ್ಮಥವಾಗಿ ಕಾರ್ಯನಿರ್ವಹಿಸಿದ ಹಿಂದುಳಿದ ವರ್ಗದ ನಾಯಕ, ದಕ್ಷ, ಪ್ರಾಮಾಣಿಕ, ಸರಳ ಸಜ್ಜನ, ಯಶಸ್ವಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರು ಇದೇ ಡಿಸೆಂಬರ್ 10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಈ ಬಾರಿಯೂ ಕೂಡ ನಿಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಎಂದು ಎಲ್ಲಾ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here