ಹದ್ದೂರದ್ದು ಬಡವರ ಪರ ಹೋರಾಟವಾಗಿತ್ತು- ಪ್ರತಾಪಚಂದ್ರ ಶೆಟ್ಟಿ

0
1204

ಹದ್ದೂರು ರಾಜೀವ ಶೆಟ್ಟಿ ಪುಣ್ಯ ಸ್ಮರಣೆ- ಹದ್ದೂರು ಉತ್ತಮ ಕೃಷಿ ಪ್ರಶಸ್ತಿ ಪ್ರದಾನ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಜನ ಸೇವೆ ಮೂಲಕ ಜನರ ಪ್ರೀತಿ ವಾತ್ಸಲ್ಯ ಹೊಂದಿದ ವ್ಯಕ್ತಿಯಾಗಿದ್ದ ಹದ್ದೂರು ರಾಜೀವ್ ಶೆಟ್ಟಿಯವರ, ಚಟುವಟಿಕೆ ಹಾಗೂ ಹೋರಾಟ, ಬಡವರ ಪರವಾಗಿತ್ತು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.


ಶಂಕರನಾರಾಯಣದ ಕೊಂಡಳ್ಳಿ ಶಾಲೆಯಲ್ಲಿ‌ ಗುರುವಾರ ನಡೆದ ದಿ. ಹದ್ದೂರು ರಾಜೀವ ಶೆಟ್ಟಿ ಅವರ ‌ಪುಣ್ಯ ಸ್ಮರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ‌ಹದ್ದೂರ ಉತ್ತಮ ಕೃಷಿ‌ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಜನರ ಸೇವೆ ಮಾಡುವವರು ಯಾವುದೇ ಪಕ್ಷದಲ್ಲಿ ಇದ್ದರೂ, ಸಮಾಜದಲ್ಲಿ ಅವರಿಗೆ ಗೌರವ ಇರುತ್ತದೆ. ಮನೆಯಲ್ಲಿ ಕೃಷಿ ಕೆಲಸ ಮಾಡಿ, ರಾಜಕೀಯದಲ್ಲಿ ತೋಡಗಿಸಿಕೊಂಡಿದ್ದ ಅವರು ಜನರ ಪ್ರೀತಿ ಗಳಿಸಿರುವುದು ಹೆಮ್ಮೆಯ ವಿಚಾರ. ರಾಜಕೀಯದಲ್ಲಿ ಪರ ಹಾಗೂ ವಿರೋದ ಇರುತ್ತದೆ. ಸರ್ವ ಸಮ್ಮತದ ವ್ಯಕ್ತಿಗಳು ರಾಜಕೀಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಹಿರಿಯರ ಕಾರ್ಯಗಳು ಯುವಕರಿಗೆ ಮಾರ್ಗದರ್ಶನವಾಗಬೇಕು. ಈ ಪುಣ್ಯ ಸ್ಮರಣೆಯ ಮೂಲಕ ಹದ್ದೂರು ಅವರು ಮಾಡಿರುವ ಒಳ್ಳೆಯ ಕಾರ್ಯಗಳು ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ಅವರು ಹೇಳಿದರು.

ರಾಜೀವ ಶೆಟ್ಟಿ ‌ಪುಣ್ಯ ಸ್ಮರಣೆಯ‌ ಅಂಗವಾಗಿ ನೀಡುವ ಮೊದಲ ವರ್ಷದ ‘ ಹದ್ದೂರ ಉತ್ತಮ ಕೃಷಿ‌ ಪ್ರಶಸ್ತಿ ‘ ಯನ್ನು ತಲ್ಲೂರು ಮಕ್ಕಿ ಗಣಪಯ್ಯ ಶೆಟ್ಟಿ ‌ಅವರಿಗೆ ಪ್ರದಾನ ಮಾಡಲಾಯಿತು.
ದಿ. ಹದ್ದೂರು ರಾಜೀವ ಶೆಟ್ಟಿ ‌ಪುಣ್ಯಸ್ಮರಣೆ ಪ್ರಯುಕ್ತ ಮನೆಯ ಆವರಣದ ಸಮಾಧಿ‌ ಸ್ಥಳದಲ್ಲಿ ‌ನಿರ್ಮಿಸಿದ ಪುತ್ಥಳಿಯನ್ನು ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ‌ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ‌ಆಶಕ್ತರಿಗೆ ನೆರವು, ನೇತ್ರದಾನ ಮಾಹಿತಿ ಹಾಗೂ ನೇತ್ರದಾನ ನಡೆಯಿತು.

ಮಂಗಳೂರಿನ ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಪ್ರಕಾಶಚಂದ್ರ ಶೆಟ್ಟಿ, ಸೌಕೂರು‌ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಶಂಕರನಾರಾಯಣ ಗ್ರಾಮ ಪಂಚಾಯತಿ ಅಧ್ಯಕ್ಷೆ‌ ಲತಾ, ವಿಶ್ವ ಹಿಂದೂ ಪರಿಷತ್ ಮುಖಂಡ ಕಟ್ಕೆರೆ ಪ್ರೇಮಾನಂದ ಶೆಟ್ಟಿ, ಉದ್ಯಮಿ‌ ಸುಧಾಕರ‌ ಶೆಟ್ಟಿ, ದಿ.ರಾಜೀವ್ ಶೆಟ್ಟಿ ಅವರ ಪತ್ನಿ ಮಮತಾ ಶೆಟ್ಟಿ ಇದ್ದರು.

ನ್ಯಾಯವಾದಿ ಉಮೇಶ‌ ಶೆಟ್ಟಿ ಶಾನ್ಕಟ್ ಸ್ವಾಗತಿಸಿದರು, ಕೃಷ್ಣ ಮೂರ್ತಿ ಪ್ರಾರ್ಥಿಸಿದರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ‌ ಕಲ್ಗದ್ದೆ ವಂದಿಸಿದರು, ಪ್ರಭಾಕರ ಶೆಟ್ಟಿ ‌ನಿರೂಪಿಸಿದರು.

LEAVE A REPLY

Please enter your comment!
Please enter your name here