ಗಂಗೊಳ್ಳಿಯಲ್ಲಿ ವಿಜೃಂಭಣೆಯಿಂದ ನಡೆದ ಹೋಳಿ ಮೆರವಣಿಗೆ. ಸಹಸ್ರಾರು ಜನರಿಂದ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ

0
543

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಗಂಗೊಳ್ಳಿ ಗ್ರಾಮದಲ್ಲಿ ಕೊಂಕಣಿ ಖಾರ್ವಿ ಸಮುದಾಯದವರು ಪ್ರತಿ ವರ್ಷ ಆಚರಿಸುತ್ತಿರುವ ಹೋಳಿ ಹಬ್ಬವನ್ನು ಶನಿವಾರ ಸಂಜೆ ವಿಜೃಂಭಣೆಯಿಂದ ಆಚರಿಸಿದರು.

ಗಂಗೊಳ್ಳಿ, ಗುಜ್ಜಾಡಿ, ಕಂಚುಗೋಡು, ಹೊಸಪೇಟೆ, ತ್ರಾಸಿ ಮೊದಲಾದ ಕಡೆಗಳಿಂದ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಸಹಸ್ರಾರು ಜನರಿಂದ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ ಗಂಗೊಳ್ಳಿ ಪೇಟೆಯುದ್ದಕ್ಕೂ ಕಂಡು ಬಂದಿತು. ಯುವಕ ಯುವತಿಯರು ಹಿರಿಯರು ಮಕ್ಕಳು ಎಂಬ ಭೇದ ಭಾವಗಳಿಲ್ಲದೆ ಪರಸ್ಪರ ಬಣ್ಣ ಹಚ್ಚಿಕೊಂಡು ಡಿಜೆ ಮ್ಯೂಸಿಕ್‍ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಗುಂಪುಗಳನ್ನು ಮಾಡಿಕೊಂಡ ಯುವಕ ಯುವತಿಯರು ತಮ್ಮದೇ ವಿಶಿಷ್ಟ ಧಿರಿಸಿನ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದು ನೋಡುಗರ ಗಮನ ಸೆಳೆದರು.

ವಿವಿಧೆಡೆಗಳಿಂದ ಆಗಮಿಸಿದ ಹೋಳಿ ಪಂಗಡಗಳು ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಸೇರಿ ಬೃಹತ್ ಹೋಳಿ ಉತ್ಸವ ನಡೆಸಿದರು. ಸಂಪ್ರದಾಯದಂತೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪುಷ್ಕರಣಿಯಲ್ಲಿ ಸ್ನಾನ ಮಾಡುವ ಮೂಲಕ ಹೋಳಿ ಮೆರವಣಿಗೆ ಸಂಪನ್ನಗೊಂಡಿತು. ಒಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೊಂಕಣಿ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವರ್ಷಂಪ್ರತಿ ಅದ್ದೂರಿಯಾಗಿ ಆಚರಿಸುತ್ತಿದ್ದು ಧಾರ್ಮಿಕತೆ ಜೊತೆಗೆ ಮನೋರಂಜನೆಗೂ ಒತ್ತು ನೀಡಿದ್ದು ವಿಶೇಷವಾಗಿದೆ. ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಂತೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರ ತೇಜ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಹರೀಶ್ ಆರ್. ಮತ್ತು ಕುಂದಾಪುರ ಪೊಲೀಸ್ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಹಾಗೂ ಸಿಬ್ಬಂದಿಗಳು ಗಂಗೊಳ್ಳಿಯ ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಿದ್ದರು.

LEAVE A REPLY

Please enter your comment!
Please enter your name here