ಕುಂಭಾಸಿ: ಉಚಿತ ಕಿವಿಯ ಶ್ರವಣ ತಪಾಸಣೆ – ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪ್ರಸ್ತುತ ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ದೇವಳದಲ್ಲಿ ಬೇರೆ ಬೇರೆ ಶಿಬಿರಗಳು ನಡೆಯುತ್ತಿರುತ್ತದೆ. ಕಿವಿಗೆ ಸಂಬಂಧಪಟ್ಟಂತೆ ಶಿಬಿರಗಳು ಆಗುವುದು ಅಪರೂಪ. ಶ್ರವಣ ತಪಾಸಣೆಯ ಸೌಲಭ್ಯವನ್ನು ಅವಶ್ಯಕತೆ ಇರುವ ಫಲಾನುಭವಿಗಳು ಪಡೆದುಕೊಳ್ಳಬೇಕು, ಈಶ್ವರ ಮಲ್ಪೆಯವರು ಪ್ರಾಣದ ಹಂಗನ್ನು ತೊರೆದು ಇನ್ನೊಬ್ಬರ ಪ್ರಾಣ ಉಳಿಸಲು ಸನ್ನದ್ಧವಾಗಿರುವ ವ್ಯಕ್ತಿ. ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡಿರುವ ಈಶ್ವರ ಮಲ್ಪೆಯವರ ಸೇವಾಧರ್ಮ ಅನುಕರಣೀಯ ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹೇಳಿದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಟೀಮ್ ಈಶ್ವರ ಮಲ್ಪೆ ಇವರ ಸಹಯೋಗದೊಂದಿಗೆ ಮಂಗಳವಾರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದಲ್ಲದೇ ದಿನನಿತ್ಯವೂ ಒತ್ತಡದ ಬದುಕಿನಲ್ಲಿ ಸೇವೆ ನೀಡುವ ಮಾಧ್ಯಮ ಬಂಧುಗಳು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮುಖೇನ ಸಮಾಜಮುಖಿಯಾಗಿ ಸೇವೆ ನೀಡುತ್ತೀರುವುದು ಶ್ಲಾಘನೀಯ ವಿಚಾರ ಎಂದರು.

ಸಮಾಜ ಸೇವಕ ಈಶ್ವರ ಮಲ್ಪೆ ಮಾತನಾಡಿ, ನಮ್ಮ ತಂಡ ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತಾ ಬರುತ್ತಿದೆ. ಕಿವಿಯ ಉಚಿತ ತಪಾಸಣೆ ಹಾಗೂ ರಿಯಾಯತಿ ದರದಲ್ಲಿ ಶ್ರವಣ ಸಾಧನಗಳನ್ನು ನೀಡುವ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ. ಆನೆಗುಡ್ಡೆ ದೇವಸ್ಥಾನ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ನಾವು ಜೊತೆಯಾಗಿರುವುದು ಸಂತಸ ತಂದಿದೆ ಎಂದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ, ಕೋಶಾಧಿಕಾರಿ ಲೋಕೇಶ್ ಆಚಾರ್, ಉಡುಪಿಯ ವಿಘ್ನಹರ್ತ ಸಂಸ್ಥೆಯ ಡಾ.ಅಂಕಿತಾ ಕಿವಿಯ ಶ್ರವಣ ತಪಾಸಣೆ ನಡೆಸಿದರು. ಈಶ್ವರ ಮಲ್ಪೆ ಟೀಮ್ನ ಸಂಚಾಲಕ ಲವ ಬಂಗೇರ, ಕುಂಭಾಸಿ ಗ್ರಾಪಂ ಸದಸ್ಯೆ ರಾಧಾದಾಸ್, ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ್, ಪತ್ರಕರ್ತರ ಸಂಘ ಹಾಗೂ ಈಶ್ವರ ಮಲ್ಪೆ ಟೀಮ್ನ ಸದ್ಯಸರು ಉಪಸ್ಥಿತರಿದ್ದರು.

ಈ ಸಂದರ್ಭ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಹಾಗೂ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಮಾಜ ಸೇವಕ ಈಶ್ವರ ಮಲ್ಪೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ 33 ಮಂದಿಗೆ ಕಿವಿಯ ಶ್ರವಣದ ಪರೀಕ್ಷೆಗಳಾಗಿದ್ದು, 8 ಮಂದಿ ಫಲಾನುಭವಿಗಳು ಶ್ರವಣ ಸಾಧನದ ಪ್ರಯೋಜನ ಪಡೆದುಕೊಂಡರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್ ಬೀಜಾಡಿ ಸ್ವಾಗತಿಸಿದರು. ಈಶ್ವರ ಮಲ್ಪೆ ಟೀಮ್ನ ಸಂಚಾಲಕ ಲವ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರಾದ ಶ್ರೀಕಾಂತ್ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಪಾದೆ ವಂದಿಸಿದರು.

Comments

Leave a Reply

Your email address will not be published. Required fields are marked *

More posts

Exit mobile version