ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ -ಆನಂದ ಸಿ ಕುಂದರ್

0
913

ಕಾರ್ಕಡ ಗೆಳೆಯರ ಬಳಗ ವಾರ್ಷಿಕೋತ್ಸವ ಸನ್ಮಾನ, ದತ್ತಿನಿಧಿ ವಿತರಣೆ ಕಾರ್ಯಕ್ರಮ

ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮವನ್ನು ಯೋಜಿಸಿದಾಗ ಊರಿನ ಜನತೆ ಸಹಾಯಹಸ್ತ ನೀಡುತ್ತಾರೆ, ಅಲ್ಲದೇ ಇನ್ನಷ್ಟು ಕೆಲಸ ಮಾಡಲು ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಕೋಟ ಮಣೂರಿನ ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.

ಸಾಲಿಗ್ರಾಮ ಕಾರ್ಕಡದ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಪಾರ್ವತಿ ಎಸ್ ಹೊಳ್ಳ ರಂಗ ಮಂಟಪದಲ್ಲಿ ಶನಿವಾರ ಕಾರ್ಕಡ ಗೆಳೆಯರ ಬಳಗದ 34ನೇ ವರ್ಷದ ವಾರ್ಷಿಕೋತ್ಸವ, ಸನ್ಮಾನ, ದತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ, ಅಂಗವಿಕಲ ಸಹಾಯ ನಿಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಥೆಯನ್ನು ಕಟ್ಟುವುದಕ್ಕಿಂತ ಅದನ್ನು ಉಳಿಸಿಕೊಂಡು ಹೋಗುವುದು, ಮುಂದಿನ ಜನಾಂಗಕ್ಕೆ ಅದರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ : ಇದೇ ಸಂದರ್ಭ ಗೆಳೆಯರ ಬಳಗದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೋಟ ವಿವೇಕ ಪ್ರೌಢಶಾಲೆಯ ಅಧ್ಯಾಪಕ ಸಾಹಿತಿ ಕೋಟ ನರೇಂದ್ರ ಕುಮಾರ್, ಮುದ್ರಾಡಿಯ ಅಧ್ಯಾಪಕ ಪಿ.ವಿ.ಆನಂದ್, ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಕೆನರಾ ಬ್ಯಾಂಕ್‍ನ ಅಧಿಕಾರಿ ಸೀತಾರಾಮ ಸೋಮಯಾಜಿ ಕಾರ್ಕಡ, ಪಿ.ಎಚ್.ಡಿ ಪದವಿ ಪಡೆದ ಪಾರಂಪಳ್ಳಿಯ ಬಾಲಕೃಷ್ಣ ನಕ್ಷತ್ರಿ, ಡಾ.ಜಗದೀಶ ಹೊಳ್ಳ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಪಿ.ಶ್ರೀನಿವಾಸ ಉಪಾಧ್ಯಾಯ ಪಾರಂಪಳ್ಳಿ ಅವರನ್ನು ಸನ್ಮಾನಿಸಲಾಯಿತು. ದೇಶ ಸೇವೆ ಮಾಡಿದ ನಿವೃತ್ತ ಸೈನಿಕರಾದ ಗಣೇಶ ಅಡಿಗ ಪಾರಂಪಳ್ಳಿ ಮತ್ತು ನಾಗೇಶ ಪೂಜಾರಿ ಕಾರ್ಕಡ ಅವರನ್ನು ಗೌರವಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರೀನಿಧಿ ಆಚಾರ್ಯ, ಅದಿತಿ ಹೊಳ್ಳ, ದಿಲೀಪ್ ಕೆ, ಯಶಸ್ವಿನಿ ಮತ್ತು ರೋಶನ್ ಗಿಳಿಯಾರು ಅವರಿಗೆ ಕ.ಸಾ.ಪದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಕುಂದಾಪುರ ವಕೀಲೆ ಶ್ಯಾಮಲ ಭಂಡಾರಿ ದತ್ತಿನಿಧಿ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ ಅಂಗವಿಕಲ ಸಹಾಯನಿಧಿ ವಿತರಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಕಾರ್ಕಡ ರಾಜು ಪೂಜಾರಿ, ಕೋಟ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಶಾಲೆಯ ಮುಖ್ಯ ಶಿಕ್ಷಕ ಎನ್ ಪ್ರಭಾಕರ ಕಾಮತ್ ಇದ್ದರು.
ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here