ಶಂಕರನಾರಾಯಣ :ಮದರ್ ತೆರೆಸಾ ಮೆಮೊರಿಯಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ‘ಅಭ್ಯುದಯ’ ಅಭಿನಂದನೆ

0
347

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಖಾಸಗಿ ವಿದ್ಯಾಸಂಸ್ಥೆಗಳ ನಿರಂತರ ಪ್ರಯತ್ನ ಶ್ಲಾಘನಾರ್ಹವಾದುದು. ಸರಕಾರಿ ಶಾಲೆಗಳು ಕೂಡಾ ಇದೇ ರೀತಿ ಪೈಪೋಟಿ ನೀಡಬೇಕು. ಶಿಕ್ಷಣದಲ್ಲಿ ನಿರಂತರವಾಗಿ ಸಾಧನೆಗಳ ಆಗುತ್ತಲೇ ಇರಬೇಕು. ಪ್ರೀತಮ್ ಜಿ ಪೂಜಾರಿ ಸಾಧನೆಯಿಂದ ಇವತ್ತು ಜಿಲ್ಲೆಗೆ, ತಾಲೂಕಿಗೆ ಕೀರ್ತಿ ತರುವಂತಾಗಿದೆ. ಈ ಸಾಧನೆಯ ಹಿಂದೆ ಶಿಕ್ಷಣ ಸಂಸ್ಥೆಯ ಪರಿಶ್ರಮ, ತಂದೆತಾಯಿಗಳ ಪ್ರೋತ್ಸಾಹ ಶ್ಲಾಘನಾರ್ಹ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ ಕುಮಾರ್ ಕೊಡ್ಗಿ ಹೇಳಿದರು.

ಮದರ್ ತೆರೆಸಾ ಮೆಮೊರಿಯಲ್ ಎಜ್ಯುಕೇಶನ್ ಟ್ರಸ್ಟ್ ಶಂಕರನಾರಾಯಣ ಇಲ್ಲಿ ‘ಅಭ್ಯುದಯ’ ಯಶಸ್ಸಿನ ಸಂಭ್ರಮ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಎಪ್ರಿಲ್ 29 ಬುಧವಾರ ಸಂಸ್ಥೆಯ ರೌಪ್ಯ ಸಭಾಂಗಣದಲ್ಲಿ ಅಭಿನಂದಿಸಿ ಮಾತನಾಡಿದರು.
ಶಿಕ್ಷಣದಲ್ಲಿನ ಈ ಸಾಧನೆ ಮುಂದಿನ ಕಲಿಕೆಗೆ ಪೂರಕವಾಗಬೇಕು. ಈ ಸಾಧನೆ ಮುಂದುವರಿಯಬೇಕು. ಬದುಕಿಗೆ ಅಗತ್ಯವಿರುವ ನೈತಿಕ ಮೌಲ್ಯಗಳನ್ನು ಅಳವಡಿಸಿ ಭಾರತ ದೇಶದ ಉತ್ತಮ ಪ್ರಜೆಯಾಗಿ ಮೂಡಿಬರುವ ಸಂಕಲ್ಪ ವಿದ್ಯಾರ್ಥಿಗಳು ಮಾಡಬೇಕು ಎಂದರು.

ಉಡುಪಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಲೋಕೇಶ್ ಸಿ ಮಾತನಾಡಿ, ಪ್ರೀತಮ್ ಸಾಧನೆ ಮಾದರಿಯಾಗಿದೆ. ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ್ ಕಾಮತ್ ಮಾತನಾಡಿ, ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ತಗೆಯಲು ಸಾಧ್ಯವೇ ಇಲ್ಲ ಎನ್ನುವ ಚರ್ಚೆ ಇತ್ತು. ಹಾಗಾಗಿ ಸಂಸ್ಕೃತವನ್ನು ವಿದ್ಯಾರ್ಥಿಗಳು ಆರಿಸಿಕೊಳ್ಳುತ್ತಿದ್ದರು. ಆದರೆ ಈಗ ಕನ್ನಡದಲ್ಲೂ 125ಕ್ಕೆ 125 ಅಂಕ ಪಡೆಯಬಹುದು ಎನ್ನುವುದನ್ನು ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ. 625ಕ್ಕೆ 625 ಅಂಕ ಪಡೆಯುವುದೆಂದರೆ ಸುಲಭದ ವಿಷಯವಲ್ಲ. ಕಠಿಣವಾದ ಪರಿಶ್ರಮ, ಶ್ರದ್ದೆ ಬೇಕಾಗುತ್ತದೆ, ಒತ್ತಡವಿರುತ್ತದೆ. ಇಂಥಹ ಸಾಧಕ ವಿದ್ಯಾರ್ಥಿಗಳನ್ನು ಶಾಲೆಗಳು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಸಂಸ್ಥೆಯ ಸಂಸ್ಥಾಪಕರು, ಆಡಳಿತಾಧಿಕಾರಿಗಳಾದ ರೆನಿಟಾ ಲೋಬೊ, ಶಮಿತಾ ರಾವ್ ಅಧ್ಯಕ್ಷತೆ ವಹಿಸಿದ್ದರು.
ಶಮಿತಾ ರಾವ್ ಮಾತನಾಡಿ, 1998ರಲ್ಲಿ ಕೇವಲ 12 ವಿದ್ಯಾರ್ಥಿಗಳಿಂದ ಮದರ್ ಥೆರೆಸಾ ಸಂಸ್ಥೆ ಆರಂಭಗೊಂಡಿತು. ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಥೆ ಬೆಳೆಯುತ್ತಾ ಬಂದಿದ್ದು 28 ವರ್ಷಗಳಿಂದ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ ಎಂದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಜಾಯ್ಸನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರೀತಮ್ ಜಿ ಪೂಜಾರಿ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಲಾಯಿತು.
ರಸಾಯನ ಶಾಸ್ತ್ರ ಶಿಕ್ಷಕ ಮಂಜುನಾಥ ಬಾಯರಿ ಸ್ವಾಗತಿಸಿದರು. ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ಕನ್ನಡ ಶಿಕ್ಷಕಿ ವೈಶಾಲಿ ಶೆಟ್ಟಿ ಹಾಗೂ ಅಲಿಟಾ ಡೇಸಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here