ಕುಂದಾಪುರ ಮಿರರ್ ಸುದ್ದಿ…

ಬಾರ್ಕೂರು: ಇಲ್ಲಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವಾತಾವರಣ, ನಿಯಮಗಳು, ಶಿಕ್ಷಣದ ವಿಧಾನ ಮತ್ತು ಸೌಲಭ್ಯಗಳ ಬಗ್ಗೆ ಪರಿಚಯ ಮಾಡಿಕೊಡುವ ‘ಅಂಕುರ’ ಹೊಸ ಆರಂಭ ಮತ್ತು ಅನಂತ ಸಾಧ್ಯತೆಗಳು ಎಂಬ ವಿನೂತನ ಪರಿಕಲ್ಪನೆಯ ಓರಿಯಂಟೇಶನ್ ಕಾರ್ಯಕ್ರಮವನ್ನು ಇತ್ತೀಚೆಗೆ (ಜೂನ್ 7) ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಉಪನ್ಯಾಸಕರು ನಡೆಸಿಕೊಟ್ಟ “ಸರಸ್ವತಿ ವಂದನೆ”ಯ ವಿಭಿನ್ನ ಶೈಲಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ” ಎಂದರು. ಇದೇ ವೇಳೆ ಅವರು ಪ್ರಸ್ತುತ ಶೈಕ್ಷಣಿಕ ವಲಯದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ಅವು ಎದುರಿಸುವ ವಿಧಾನದ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಟ್ರಸ್ಟ್ನ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತಿ ಮುಖ್ಯ. ನಿರಂತರ ಅಭ್ಯಾಸ, ಪ್ರಾಮಾಣಿಕ ಪ್ರಯತ್ನ ಮತ್ತು ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಉತ್ತಮ ಫಲಿತಾಂಶ ಸಾಧಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಶೀರ್ಷಿಕೆಯಾದ ‘ಅಂಕುರ’ದ ಕುರಿತು ಉಲ್ಲೇಖಿಸುತ್ತಾ, “ಬೀಜ ಮೊಳಕೆಯೊಡೆದು ಚಿಗುರುವಂತೆ, ವಿದ್ಯಾರ್ಥಿಗಳಲ್ಲಿ ಸುಜ್ಞಾನದ ಮೊಳಕೆ ಚಿಗುರೊಡೆದು ಉತ್ತಮ ಭವಿಷ್ಯ ರೂಪಿತವಾಗಲಿ” ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾಲೇಜಿನ ಶೈಕ್ಷಣಿಕ ಮಾಹಿತಿ, ಪರೀಕ್ಷಾ ವಿವರಗಳು ಮತ್ತು ಶಿಸ್ತಿನ ನಿಯಮಾವಳಿಗಳ ಜೊತೆಗೆ ವಿದ್ಯಾರ್ಥಿಗಳ ಜವಾಬ್ದಾರಿಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಕಾಲೇಜಿನ ಬೋಧಕ ಸಿಬ್ಬಂದಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಶುಭ ಹಾರೈಸಿದರು.
ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಬರ್ಟ್ ಕ್ಲೈವ್ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, “ಇಂದಿನ ವಿದ್ಯಾರ್ಥಿಗಳು ದಾರಿ ತಪ್ಪಲು ಇರುವ ಕಾರಣಗಳು ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಮತ್ತು ಪೋಷಕರ ನಡುವಿನ ಬಾಂಧವ್ಯ ಹೇಗಿರಬೇಕೆಂದು ಅವರು ಮನಮುಟ್ಟುವಂತೆ ವಿವರಿಸಿದರು.
ಕಾಲೇಜಿನ ಉಪನ್ಯಾಸಕಿ ಸೌಮ್ಯ ಸ್ವಾಗತಿಸಿದರು, ರಜನಿ ವಂದನಾರ್ಪಣೆ ಮಾಡಿದರು. ಉಪನ್ಯಾಸಕಿ ನೈನಾ ಜೆ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.