ರೋಗ ನಿಯಂತ್ರಣಕ್ಕೆ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಲಿ – ಅರಣ್ಯ, ಆರೋಗ್ಯ, ಪಶು ಇಲಾಖೆ ಹಾಗೂ ಸ್ಥಳೀಯಾಡಳಿತಕ್ಕೆ ಸೂಚನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರಸ್ತುತ ಬೈಂದೂರು ಕ್ಷೇತ್ರದ ನಾಡ, ಹಟ್ಟಿಯಂಗಡಿ, ಆಲೂರು, ಹೆಮ್ಮಾಡಿ ಹಾಗೂ ಹಕ್ಲಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ 8 ಹಂದಿಗಳ ಕಳೇ ಬರ ಪತ್ತೆಯಾಗಿದ್ದು, ಅದರಲ್ಲಿ ಕಾಡು ಹಂದಿಗಳ ಜೊತೆಗೆ ನಾಡ ಹಂದಿಗಳೂ ಇರುವುದಾಗಿದೆ ಪತ್ತೆಯಾದ ಸಂಪೂರ್ಣ ಕೊಳೆತು ಹೋದವುಗಳನ್ನು ಹೊರತು ಪಡಿಸಿ ಉಳಿದ ಮೃತ ಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಹಾಗೂ ಸ್ಯಾಂಪಲ್ ಪಡೆದು ಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ಹಾಗೂ ಉಳಿದ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿ ದರು.ಇದಕ್ಕುತ್ತರಿಸಿದ ಶಾಸಕರು ಪ್ರಯೋಗಾಲಯದ ವರದಿ ಬರುವ ಮುನ್ನ ಈ ರೋಗವು ವ್ಯಾಪಕವಾಗಿ ಹರಡದಂತೆ ನಾಲ್ಕು ಇಲಾಖೆಗಳೂ ಪರಸ್ಪರ ಹೊಣೆಯರಿತು ತಂಡವಾಗಿ ಕಾರ್ಯ ಪ್ರವೃತ್ತರಾಗಲು ಸೂಚಿಸಿದರು.
ಜನರ ಆತಂಕ ನಿವಾರಣೆ ಮಾಡಿ
ಹಂದಿಗಳ ಸರಣಿ ಸಾವುಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಹಂದಿಗಳು ಕೊಳೆತು ವಾಸನೆಯಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ಓಡಾಡಲು ಆಗದೇ ಇರುವುದು ಹಾಗೂ ಹಂದಿಗಳ ಸಾವಿನ ಹಿಂದಿರುವ ರೋಗದಿಂದ ಇತರೆ ಸಾಕು ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ತೊಂದರೆ ಆಗುವ ಬಗ್ಗೆ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಹಾಗಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಇತರೆ ಇಲಾಖೆಗಳ ಸಲಹೆ ಪಡೆದು ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ವ್ಯಾಪಕ ಮುಂಜಾಗೃತ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದರು.
ಹಂದಿ ಸಾಕಾಣಿಕೆ ಕೇಂದ್ರಗಳ ಮೇಲೆ ನಿಗಾ ಇರಲಿ:
ಸಾಕು ಹಂದಿಗಳ ಸಾವಿನ ವರದಿ ಆಗುತ್ತಿರುವ ಹಿನ್ನಲೆಯಲ್ಲಿ ಹಂದಿ ಸಾಕಾಣಿಕ ಕೇಂದ್ರಗಳ ಮೇಲೆ ನಿಗಾವಹಿಸಲು ಹಾಗೂ ಸದ್ರಿ ಕೇಂದ್ರಗಳು ವೈಜ್ಞಾನಿಕವಾಗಿ ನಿರ್ವಹಣೆ ಆಗುತ್ತಿರುವುದನ್ನ ಖಾತ್ರಿ ಪಡಿಸುವುದು ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಕಡೆಗೆ ಸಂಬಂಧ ಪಟ್ಟ ಇಲಾಖೆಯ ಮೂಲಕ ಕ್ರಮವಾಗಬೇಕೆಂದರು.
ಪಶು ಇಲಾಖೆ ನೇತೃತ್ವದಲ್ಲಿ ಕಾರ್ಯಾಚರಣೆ ತಂಡ
ಹಂದಿಗಳ ಸರಣಿ ಸಾವಿನ ಹಿನ್ನಲೆಯಲ್ಲಿ ಜನರಲ್ಲಿ ಇರುವ ಆತಂಕ ಹಾಗೂ ಗೊಂದಲ ಗಳನ್ನು ನಿವಾರಣೆ ಮಾಡಲು ಮತ್ತು ಸಾವಿನ ಪ್ರಮಾಣ ಶೂನ್ಯಕ್ಕೆ ಇಳಿಸಿ, ಮತ್ತು ಪ್ರಕರಣಗಳು ಮರು ಕಳಿಸದಂತೆ ನಿಗಾ ವಹಿಸಲು ಹಾಗೂ ಸಾವಿನ ವರದಿ ಸಕಾಲದಲ್ಲಿ ಇಲಾಖೆಗಳ ಗಮನಕ್ಕೆ ಬರುವ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆಯ ನೇತೃತ್ವದಲ್ಲಿ ಆರೋಗ್ಯ, ಅರಣ್ಯ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳ ಜೊತೆ ಕಾರ್ಯಾಚರಣೆ ತಂಡ ರಚಿಸಿ ಸಮಾರೋಪಾದಿಯಲ್ಲಿ ಹಂದಿಗಳಿಗೆ ತಗುಲಿರುವ ರೋಗವನ್ನು ಹಿಮ್ಮೆಟ್ಟಿಸುವುದರೊಂದಿಗೆ ವ್ಯಾಪಕ ಜಾಗೃತಿಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಡೆಂಗ್ಯೂ ಹಾಗೂ ಮಲೇರಿಯಾ ರೋಗ ನಿಯಂತ್ರಣಕ್ಕೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ:
ಪ್ರಸ್ತುತ ಮಳೆ ಕೊರತೆ ಹಾಗೂ ಬಿಟ್ಟು ಬಿಟ್ಟು ಬರುವ ಮಳೆಯಿಂದಾಗಿ ಡೆಂಗ್ಯೂ ಹಾಗೂ ಮಲೇರಿಯಾ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಪತ್ತೆ ಆಗಿರುವ ಪ್ರಕರಣಗಳ ಬಗ್ಗೆ ನಿಗಾವಹಿಸುವುದು ಹಾಗೂ ರೋಗದ ಪ್ರಮಾಣ ಹೆಚ್ಚಾಗದಂತೆ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರ ಮುಖೇನ ವ್ಯಾಪಕ ಪ್ರಚಾರದ ಜೊತೆಗೆ ಅಗತ್ಯ ಮುಂಜಾಗೃತಾ ಕ್ರಮ ಗಳನ್ನು ಕೈಗೊಳ್ಳಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಅರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನಾಗ ಶಯನ ಕುಂದಾಪುರ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ, ಬೈಂದೂರು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ವೈ ಕೆ, ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ, ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್, ಭಾಧಿತ ಗ್ರಾಮ ವ್ಯಾಪ್ತಿಗಳ ಪಶು ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
