ಕುಂದಾಪುರ ಮಿರರ್ ಸುದ್ದಿ…
ಉಡುಪಿ : ಮಲೆನಾಡು, ಅರೆ ಮಲೆನಾಡು ಹಾಗು ಬಯಲುಸೀಮೆ – ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ರಸ್ತೆಯ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಖುದ್ದು ಲೋಕೋಪಯೋಗಿ ಇಲಾಖಾ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳ ತಂಡದೊಂದಿಗೆ ಇಂದು ವೀಕ್ಷಣೆ ಮಾಡಿ, ಅಭಿವೃದ್ಧಿ ಕಾರ್ಯಗಳ ಸಾಧಕ-ಬಾಧಕಗಳನ್ನು ಚರ್ಚಿಸಿದರು.
ಮಲೆನಾಡು, ಅರೆ ಮಲೆನಾಡು ಹಾಗು ಬಯಲುಸೀಮೆ : ಕರಾವಳಿ ಭಾಗಕ್ಕೆ ಅತೀ ಸಮೀಪದ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ನಲ್ಲಿ ಹೆಚ್ಚು ಲಘು ವಾಹನಗಳು, ಮಿನಿ ಬಸ್ಗಳು ಸಂಚರಿಸುತ್ತವೆ. ಹೆಚ್ಚಾಗಿ ಘಟ್ಟದ ಮೇಲಿನ ಜನರು ಉತ್ತಮ ಆರೋಗ್ಯ ಸೇವೆ ಹಾಗೂ ಶಿಕ್ಷಣ ಪಡೆಯಲು ಹೆಚ್ಚು ಹೆಚ್ಚು ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಈ ಘಾಟ್ ರಸ್ತೆಯ ಕೆಲವೊಂದು ಸ್ಥಳಗಳಲ್ಲಿ ಅಗಲೀಕರಣ, ರಕ್ಷಣಾ ಗೋಡೆಗಳ ನಿರ್ಮಾಣ ಸೇರಿದಂತೆ ಮತ್ತಿತರ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಪರಿಶೀಲನೆ ನಡೆಸಿ, ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಅಭಿಯಂತರರುಗಳೊಂದಿಗೆ ಮಾಹಿತಿ ಪಡೆದರು.
ಆಗುಂಬೆ ಘಾಟ್ನಲ್ಲಿ ಶಿವಮೊಗ್ಗದ ಕಡೆಯಿಂದ ಬರುವ ಘಾಟ್ನ ಆರಂಭದಲ್ಲಿ ಹಾಗೂ 5, 6 ಮತ್ತು 7 ನೇ ತಿರುವು ಸೇರಿದಂತೆ ಮೂರು ನಾಲ್ಕು ಕಡೆಗಳಲ್ಲಿ ರಸ್ತೆ ಅಗಲದ ಕಾಮಗಾರಿ ಕೈಗೊಳ್ಳಬೇಕಿದೆ ಎಂದರು.
ಆಗುಂಬೆ ಸುರಂಗ ಮಾರ್ಗ ನಿರ್ಮಾಣ ಕುರಿತು ಈಗಾಗಲೇ ಎರಡು ಬಾರಿ ನೀಲನಕ್ಷೆ ತಯಾರಿಸಲು ಟೆಂಡರ್ ಕರೆಯಲಾಗಿದೆ. ಆದರೆ ಯಾವುದೇ ಸಂಸ್ಥೆಗಳು ಮುಂದೆ ಬಂದಿಲ್ಲ. ಟನಲ್ ನಿರ್ಮಾಣದ ಕಾಮಗಾರಿ ತುಂಬಾ ದುಬಾರಿಯಾಗುತ್ತದೆ ಎಂದ ಅವರು, ಕಳೆದ 70 ವರ್ಷಗಳಲ್ಲಿ ಈ ರೀತಿಯ ಅನೇಕ ಡಿ.ಪಿ.ಆರ್ ಮಾಡಲಾಗಿದೆ. ಆದರೆ ಅದು ಜಾರಿಯಾಗಬೇಕಲ್ಲ ಎಂದರು.
ಮಳೆಗಾಲದಲ್ಲಿ ಹೆಚ್ಚಿನ ಮಳೆಯಿಂದಾಗಿ ಘಾಟಿನ ರಸ್ತೆಗಳಲ್ಲಿ ಭೂಕುಸಿತವಾಗದಂತೆ ತಡೆಯಲು ವಾಹನಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಕೈಗೊಳ್ಳಬೇಕಾಗಿರುವ ವೈಜ್ಞಾನಿಕ ರಸ್ತೆ ಸುಧಾರಣೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದರು.
ಇತ್ತೀಚಿನ ದಿನಗಳಲ್ಲಿ ಬಾಳೆಬಾರೆ ಘಾಟ್ ರಸ್ತೆಯಲ್ಲಿ ಭೂಕುಸಿತವಾಗಿರುವ ಹಿನ್ನೆಲೆ, ಅಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಪರಿಣಾಮವಾಗಿ ಆಗುಂಬೆ ಘಾಟಿಯಲ್ಲಿ ಮಳೆ, ಕಿರಿದಾದ ರಸ್ತೆ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಆಗುಂಬೆ ಘಾಟ್ ರಸ್ತೆಯಲ್ಲಿ ಅತೀ ಅವಶ್ಯಕವಾದ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಆಗುಂಬೆ ಘಾಟ್ ನಲ್ಲಿ ಪ್ರತೀ ವರ್ಷವೂ ಸಹ ಹೆಚ್ಚಿನ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತವಾಗಿ ರಸ್ತೆ ಬಂದ್ ಆಗುತ್ತಿದೆ. ಇದಕ್ಕೆ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಭಿಯಂತರರುಗಳೊಂದಿಗೆ ಚರ್ಚಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾಮಗಾರಿಗೆ ತೊಡಕು ಉಂಟಾಗಿದೆ. ಕಾಮಗಾರಿಗೆ ಅಡಚಣೆಯಾಗುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದರೊಂದಿಗೆ ಕಾಮಗಾರಿ ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಈ ಬಗ್ಗೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಯಾವ ರೀತಿಯಲ್ಲಿ ರಸ್ತೆ ಮಾಡಬೇಕು ಎಂದು ತೀರ್ಮಾನಕೈಗೊಳ್ಳಲಾಗುವುದು ಎಂದರು.
ಈ ಬಾರಿಯ ಮುಂಗಾರು ಮಳೆ ನಿರೀಕ್ಷಿತ ವಾಡಿಕೆ ಮಳೆಯ ಪ್ರಮಾಣ ಕಡಿಮೆ ಇದೆ. ಪ್ರಸ್ತುತ ಈವರೆಗೂ ಬಂದಿರುವ ಮಳೆಯ ನೀರು ಮುಂದಿನ ವರ್ಷದ ಜೂನ್ ವರೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಇನ್ನು 10 ದಿನದ ಒಳಗೆ ಮಳೆ ಬಾರದಿದ್ದಲ್ಲಿ ಬೆಳೆಗಳು ಹಾನಿಯುಂಟಾಗುವ ಸಾಧ್ಯತೆ ಇದೆ ಎಂದರು.
ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಸಂಚರಿಸಲು ಅನುಕೂಲವಾಗುವಂತೆ 600 ಕ್ಕೂ ಹೆಚ್ಚು ಕಾಲುಸಂಕಗಳನ್ನು ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಹೆಬ್ರಿ ತಾಲೂಕು ಒಂದರಲ್ಲಿಯೇ 60 ಕ್ಕೂ ಹೆಚ್ಚು ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಬ್ರಿ ತಾಲೂಕು ಇನ್ನು 30 ಕಾಲುಸಂಕಗಳ ನಿರ್ಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಳೆ ಸೇರಿದಂತೆ ಮತ್ತಿತರ ಕಾರಣದಿಂದ ಲೋಕೋಪಯೋಗಿ ಇಲಾಖೆಯ ರಸ್ತೆಗಳು ನಿರಂತರವಾಗಿ ಗುಂಡಿ ಬೀಳುತ್ತವೆ. ಇವುಗಳನ್ನು ಆದ್ಯತೆ ಮೇಲೆ ದುರಸ್ಥಿ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಲಾಗುತ್ತಿದೆ ಎಂದ ಅವರು, ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಜನ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಭಿಯಂತರರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಡುಪಿ-ಹೆಬ್ರಿ ರಾಷ್ಟಿçÃಯ ಹೆದ್ದಾರಿ ರಸ್ತೆ 169 ಎ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗ-ಹೆಬ್ರಿ-ಮಣಿಪಾಲ-ಉಡುಪಿ-ಮಲ್ಪೆ ಮಾರ್ಗವಾಗಿ ವಿಪರೀತ ವಾಹನಗಳು ಸಂಚರಿಸುತ್ತಿದ್ದು, ಇದರಿಂದ ಹೆಬ್ರಿ ಸರ್ಕಲ್ನಲ್ಲಿ ದಿನನಿತ್ಯ ವಾಹನ ಚಾಲಕರಿಗೆ, ಆಂಬುಲೆನ್ಸ್ ವಾಹನಗಳಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ- ಮಕ್ಕಳಿಗೆ ಟ್ರಾಫಿಕ್ ನಿಂದ ಸಂಚಾರಕ್ಕೆ ಕಿರಿಕಿರಿಯಾಗುತ್ತಿದ್ದು, ಹೆಬ್ರಿ ಕೆಳಪೇಟೆಯಿಂದ ಪೊಲೀಸ್ ಕ್ವಾಟ್ರಸ್ ರಸ್ತೆಯ ವರೆಗೆ 4 ಪಥದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವಂತೆ ಸ್ಥಳೀಯರು ಸಚಿವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಾಷ್ಟೀಯ ಹೆದ್ದಾರಿ ಇಲಾಖೆಯ ಅಭಿಯಂತರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
