ಕೋಟೇಶ್ವರ :ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಪರಿಚಯ

0
64

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಕ್ವಾಡಿಯ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿ ಸಂಸತ್ ಪದಗ್ರಹಣವನ್ನು ಹಮ್ಮಿಕೊಳ್ಳಲಾಗಿತ್ತು. ಕಲಿಕೆ ಮತ್ತು ನಾಯಕತ್ವ ಗುಣದ ವಿಶೇಷತೆಯನ್ನು ಸಾರುವ ಈ ಕಾರ್ಯಕ್ರಮವನ್ನು ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ನಿವೃತ್ತ ಪ್ರಾಂಶುಪಾಲರಾದ ಮೊಳಹಳ್ಳಿ ಡಾ. ದಿನೇಶ್ ಹೆಗ್ಡೆ ಯವರು ಉದ್ಘಾಟಿಸಿ ಮಾತನಾಡುತ್ತ – ಪ್ರಜಾಪ್ರಭುತ್ವದ ಅಡಿಯಲ್ಲಿ ಹೆಜ್ಜೆ ಹಾಕುವ ನಾವು ಬದುಕಿನಲ್ಲಿ ಸಮಾನತೆ,ಗೌರವ, ಶಿಸ್ತನ್ನು ರೂಢಿಸಿಕೊಳ್ಳಬೇಕು. ನಾಯಕತ್ವ ಗುಣವು ಸಾಮಾಜಿಕ ಮೌಲ್ಯ ಮತ್ತು ನೈತಿಕ ಮೌಲ್ಯಗಳನ್ನು ಒಪ್ಪಿಕೊಂಡು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಸುದೃಢರಾಗಿ ಉತ್ತಮ ಯೋಚನೆಯೊಂದಿಗೆ ಸ್ವಾವಲಂಬಿಯಾಗಿ ಬದುಕಿನಲ್ಲಿ ತೆರೆದುಕೊಳ್ಳಬೇಕು. ಸಾಂಪ್ರದಾಯಿಕ ಮೌಲ್ಯ ಮತ್ತು ಆಧುನಿಕತೆಯ ನಡುವೆ ಇರುವ ವೈರುಧ್ಯಗಳನ್ನು ಜಾಗ್ರತೆಯಿಂದ ಸಮತೋಲನ ಮಾಡಿ ಸತತ ಪರಿಶ್ರಮದಿಂದ ಕಲಿಕೆಯಲ್ಲಿ ಯಶಸ್ಸನ್ನು ಸಾಧಿಸಬೇಕೆಂದರು.

ಸಭಾಧ್ಯಕ್ಷತೆ ವಹಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿಯವರು ಮಾತನಾಡಿ – ಕಲಿಕೆಯಲ್ಲಿ ಏಕಾಗ್ರತೆ ಬಹಳ ಮುಖ್ಯ. ಕಾಲೇಜಿನ ಸಂಸತ್ತಿನ ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಯಶಸ್ಸಿನ ಹಾದಿಯನ್ನು ತುಳಿಯಬೇಕೆಂದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕ್ ರವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿ, ನಾಯಕತ್ವವನ್ನು ಶಿಸ್ತು, ಜವಾಬ್ದಾರಿ ಮತ್ತು ನಿಷ್ಠೆಯಿಂದ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ ರೂಪಿಸಿಕೊಳ್ಳಬೇಕು. ಯಶಸ್ಸು ಅನ್ನೋದು ಅದೃಷ್ಟದಿಂದಲ್ಲ ಪರಿಶ್ರಮದಿಂದ ಲಭಿಸುತ್ತದೆ ಎಂದರು.

ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ರಾಘವೇಂದ್ರ ಶೆಟ್ಟಿಗಾರ್ ರವರು ಸಂಸತ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪೌರವ್ ಕಾರ್ಯಕ್ರಮ ನಿರ್ವಹಿಸಿದ್ದು, ಕು. ಪ್ರಜನ್ಯ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಸುಶಾಂತ್ ಅತಿಥಿಗಳನ್ನು ಪರಿಚಯಿಸಿದ್ದು, ಕು. ದೀಪ್ತಿ ವಂದಿಸಿದರು.

LEAVE A REPLY

Please enter your comment!
Please enter your name here