ಮಡಗಾಂವ್ – ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಬೈಂದೂರಿನಲ್ಲಿ, ಮತ್ಸ್ಯಗಂಧಾ ಎಕ್ಸ್ಪ್ರೆಸ್ ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ ರೈಲುಗಳಿಗೆ ಸೇನಾಪುರದಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ಮಡಗಾಂವ್ ಮೆಮು ಎಕ್ಸ್ಪ್ರೆಸ್ ರೈಲಿಗೆ ಬಿಜೂರಿನಲ್ಲಿ ನಿಲುಗಡೆ ನೀಡಲು ಕೋರಿಕೆ
ನವದೆಹಲಿ : ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ನಿತ್ಯ ಆಗಮಿಸುವ ಲಕ್ಷಾಂತರ ಭಕ್ತರ ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ಅನುಕೂಲಕರಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರನ್ನು ಭೇಟಿ ಮಾಡಿ, ಮೂಕಾಂಬಿಕಾ ರಸ್ತೆ (ಬೈಂದೂರು) ರೈಲು ನಿಲ್ದಾಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಆದ್ಯತೆಯ ರೈಲು ನಿಲ್ದಾಣವಾಗಿ ಅಧಿಕೃತವಾಗಿ ಗುರುತಿಸುವಂತೆ ಮನವಿ ಸಲ್ಲಿಸಿದರು.
ಮೂಕಾಂಬಿಕಾ ರಸ್ತೆ (ಬೈಂದೂರು) ರೈಲು ನಿಲ್ದಾಣ ದೇವಾಲಯದಿಂದ ಕೇವಲ 27 ಕಿ.ಮೀ. ದೂರದಲ್ಲಿದ್ದು, ಬೈಂದೂರಿನಿಂದ ಕೊಲ್ಲೂರಿಗೆ NH-766C ಮೂಲಕ ನೇರ ರಸ್ತೆ ಸಂಪರ್ಕ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸುಲಭ ಸೇವೆಯೂ ಲಭ್ಯವಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ಮತ್ತಿತರ ರಾಜ್ಯಗಳಿಂದ ರೈಲಿನ ಮೂಲಕ ಆಗಮಿಸುವ ಭಕ್ತರಿಗೆ ಬೈಂದೂರು ಹೆಚ್ಚು ಅನುಕೂಲಕರ ಮತ್ತು ಹತ್ತಿರದ ನಿಲ್ದಾಣವಾಗಿದೆ. ಬೈಂದೂರನ್ನು ಆದ್ಯತೆಯ ರೈಲು ನಿಲ್ದಾಣವಾಗಿ ಗುರುತಿಸುವುದರಿಂದ ಭಕ್ತರಿಗೆ ಕಡಿಮೆ ದೂರದ ಹಾಗೂ ಹೆಚ್ಚು ಅನುಕೂಲಕರ ಪ್ರಯಾಣದ ಆಯ್ಕೆ ದೊರೆಯಲಿದೆ. ಇದೇ ವೇಳೆ, ಮರವಂತೆ ಕಡಲತೀರ ಹಾಗೂ ಒತ್ತಿನೆಣೆ ಸೂರ್ಯಾಸ್ತ ತಾಣ ಸೇರಿದಂತೆ ಆ ಭಾಗದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.
ಅಲೋಕ್ ತಿವಾರಿ, ಹೆಚ್ಚುವರಿ ಸದಸ್ಯರು (ಬ್ರಿಡ್ಜ್), ಎನ್.ಸಿ.ಕರ್ಮಾಲಿ, ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕರು (ಗತಿ ಶಕ್ತಿ) ಹಾಗೂ ನವೀನ್ ಕುಮಾರ್ ಪರ್ಸುರಾಮ್ಕಾ, ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕರು (ಕೋಚಿಂಗ್) ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖ ರೈಲುಗಳ ನಿಲುಗಡೆಗೆ ಕೋರಿಕೆ: ಇದರೊಂದಿಗೆ, ಸಂಸದ ಬಿ.ವೈ.ರಾಘವೇಂದ್ರ ಅವರು ಹಲವು ಪ್ರಮುಖ ರೈಲುಗಳ ನಿಲುಗಡೆ ಬೇಡಿಕೆಗಳನ್ನು ಸಚಿವರಲ್ಲಿ ಪುನಃ ಸಲ್ಲಿಸಿದರು. ಮತ್ಸ್ಯಗಂಧಾ ಎಕ್ಸ್ಪ್ರೆಸ್ (12619/12620) ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ (16596/16595) ರೈಲುಗಳಿಗೆ ಸೇನಾಪುರದಲ್ಲಿ, MEMU (10107/10108) ರೈಲಿಗೆ ಬೈಂದೂರು ತಾಲೂಕಿನ ಬಿಜೂರಿನಲ್ಲಿ ಹಾಗೂ ಮಡಗಾಂವ್–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮೂಕಾಂಬಿಕಾ ರಸ್ತೆ (ಬೈಂದೂರು) ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದರು. ಅಲ್ಲದೆ, ಎರ್ನಾಕುಲಂ–ಪುಣೆ ಎಕ್ಸ್ಪ್ರೆಸ್ (22149/22150), TVC–ಹಜರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22653/22654), ಕೊಚ್ಚುವೇಲಿ–ಋಷಿಕೇಶ್ ಎಕ್ಸ್ಪ್ರೆಸ್ (22659/22660), ಕೊಯಮತ್ತೂರು–ಹಿಸಾರ್ AC ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22476/22475), ಕೊಚ್ಚುವೇಲಿ–ಅಮೃತಸರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (12483/12484), LTT–ತಿರುವನಂತಪುರಂ ನಾರ್ತ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (22113/22114) ಹಾಗೂ ಮಂಗಳೂರು/ಮೂಡಬಿದ್ರೆ ಭಾಗದ ಪ್ರಯಾಣಿಕರಿಗೆ ಪ್ರಮುಖವಾದ ಮಂಗಳಾ ಲಕ್ಷದ್ವೀಪ್ ಎಕ್ಸ್ಪ್ರೆಸ್ (12617/12618) ರೈಲುಗಳಿಗೂ ಬೈಂದೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿದರು.
ಭಕ್ತರು, ಪ್ರಯಾಣಿಕರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಹಾಗೂ ಜನರ ಹಿತದೃಷ್ಟಿಯಿಂದ ಈ ಎಲ್ಲ ಬೇಡಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಸಂಸದ ಬಿ.ವೈ. ರಘವೇಂದ್ರ ಅವರು ರೈಲ್ವೆ ರಾಜ್ಯ ಸಚಿವರನ್ನು ಒತ್ತಾಯಿಸಿದರು. ಮನವಿಗಳನ್ನು ಸ್ವೀಕರಿಸಿದ ಸಚಿವ ವಿ.ಸೋಮಣ್ಣನವರು ಎಲ್ಲಾ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ.
