ಕೋಟೇಶ್ವರ :ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ‘ನಾದರಂಗ‘ ರಂಗ ಅಧ್ಯಯನ ಕೇಂದ್ರ ಉದ್ಘಾಟನೆ

0
10

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ” ನಾದ ರಂಗ” ಎನ್ನುವ ರಂಗ ಅಧ್ಯಯನ ಕೇಂದ್ರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಕರಾವಳಿಯ ಖ್ಯಾತ ರಂಗ ನಿರ್ದೇಶಕ, ಶಿಕ್ಷಣ ಸಂಯೋಜಕರಾದ ಸತ್ಯ ನಾ ಕೊಡೇರಿಯವರು ರಂಗ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ರಂಗ ಕಲೆಯು ನಟನ ಭಾವಾಭಿವ್ಯಕ್ತಿಗೆ ತೆರೆದುಕೊಳ್ಳುವ ವೇದಿಕೆಯಾಗಿದೆ. ನಾಟಕ ಎಂದರೆ ನಟನೆ ಮಾತ್ರವಲ್ಲದೆ ಸಾಮಾಜಿಕ ಬದುಕಿನ ಮೂರ್ತರೂಪವಾಗಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಪ್ರತಿಭಾ ಸಂಪನ್ನರಾಗಿ ಬೆಳೆಯುವುದಕ್ಕೆ ರಂಗ ಕಲಿಕೆಯು ವಿದ್ಯಾರ್ಥಿಗಳಿಗೆ ಮಹತ್ವದ ಮಾರ್ಗವನ್ನು ಕಲ್ಪಿಸಿ ಕೊಡುತ್ತದೆ. ಅಭಿನಯ ಚತುರತೆಯು ನಟನೊಬ್ಬನ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ ಎಂದರು. ವಿದ್ಯಾರ್ಥಿಗಳಿಗೆ ರಂಗ ಚಟುವಟಿಕೆ ನಡೆಸಿ ಮಕ್ಕಳನ್ನು ರಂಜಿಸಿದರು.

ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿಯವರು ರಂಗ ಆಸಕ್ತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ – ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ರಂಗ ಕಲಿಕೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ನಮ್ಮ ಆದ್ಯತೆಯಲ್ಲಿ ಒಂದಾಗಿದೆ. ರಂಗ ಕಲಿಕೆಯಲ್ಲಿ ತೊಡಗಿಸಿಕೊಂಡಂತಹ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಳ್ಳಲಿಎಂದು ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ ಬಾಂಡ್ಯಾ ಎಜುಕೇಶನ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ – ನಮ್ಮ ಕಲೆ,ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ರಂಗಭೂಮಿಯ ಕೊಡುಗೆ ಅಪಾರವಾದುದು. ಸದಾ ಚಟುವಟಿಕೆಯಿಂದ ಇರುವಂತೆ ಮಾಡಿ ತಮ್ಮಲಿನ ಪ್ರತಿಭೆಯನ್ನು ಸಮಾಜದ ಎದುರಿಗೆ ತೆರೆದಿಡುವುದರ ಮೂಲಕ ಉತ್ತಮ ಅವಕಾಶಗಳು ದೊರಕಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಇಂತಹ ಕಲಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಸಾಧನಗಳಾಗಿ ಮಾರ್ಪಡಲಿ ಎಂದು ಹಾರೈಸಿದರು.

ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ರಂಗ ವಿದ್ಯಾರ್ಥಿನಿ ವಿಸ್ಮಿತಾ ರೆಡ್ಡಿ ಅತಿಥಿಗಳನ್ನು ಪರಿಚಯಿಸಿದರು. ರಂಗ ವಿದ್ಯಾರ್ಥಿನಿ ತನ್ಮಯಿ ಕಾರ್ಯಕ್ರಮ ನಿರ್ವಹಿಸಿದರು. ರಂಗ ಶಿಕ್ಷಕ ಶ್ರೀ ಶ್ರೀಶರವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

LEAVE A REPLY

Please enter your comment!
Please enter your name here