ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರದ ಗುರುಕುಲ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಷ್ಠಿತ ರೋಬೋ ಭಾರತ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆಗೈದು ಸಂಸ್ಥೆಗೆ ರಾಜ್ಯಮಟ್ಟದ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಐಐಐಟಿ (IIIT), ಬೆಂಗಳೂರುನಲ್ಲಿ ನಡೆದ ಈ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 71 ತಂಡಗಳು ಭಾಗವಹಿಸಿದ್ದವು. ಗುರುಕುಲ ಪಬ್ಲಿಕ್ ಸ್ಕೂಲ್ನ ಎರಡು ತಂಡಗಳು ಎಜುಕೇಶನ್ ಡೊಮೈನ್ ಹಾಗೂ ಎನ್ವಿರಾನ್ಮೆಂಟ್ ಡೊಮೈನ್ ವಿಭಾಗಗಳಲ್ಲಿ ಸ್ಪರ್ಧಿಸಿ ತಮ್ಮ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಅನಾವರಣಗೊಳಿಸಿದವು.
ವಿಶೇಷವಾಗಿ ಎನ್ವಿರಾನ್ಮೆಂಟ್ ಡೊಮೈನ್ ವಿಭಾಗದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ನ ‘ಇಕೋ ವಿಷನ್’ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನವನ್ನು ಸಮನ್ವಯಗೊಳಿಸುವ ನವೀನ ಚಿಂತನೆಯೊಂದಿಗೆ ತಂಡವು ತೀರ್ಪುಗಾರರ ಗಮನ ಸೆಳೆಯಿತು.
ಈ ಮಹತ್ವದ ಸಾಧನೆಗೆ ವಿದ್ಯಾರ್ಥಿಗಳಾದ ಸ್ಕಂದ ಮೆಂಡನ್, ದೈವಿಕ್ ಶೆಟ್ಟಿ, ಸಾಯಿಮ್ ಹಾಗೂ ಸೌರಭ ಶೆಟ್ಟಿ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಸೂಕ್ತವಾಗಿ ಮಾರ್ಗದರ್ಶನ ನೀಡಿ, ಅವರ ಆಲೋಚನೆಗಳಿಗೆ ತಾಂತ್ರಿಕ ರೂಪ ನೀಡಲು ಶಿಕ್ಷಕಿ ಅಶ್ವಿನಿ ಹಾಗೂ ಐಶ್ವರ್ಯ ಅವರು ಮಾರ್ಗದರ್ಶಕರಾಗಿ ಮಹತ್ವದ ಸಹಕಾರ ನೀಡಿದ್ದಾರೆ.
ಅದ್ಭುತ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಶಿಕ್ಷಕರನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್. ಶೆಟ್ಟಿ ಹಾಗೂ ಪ್ರಾಂಶುಪಾಲರಾದ ರೂಪಾ ಶೆಣೈ ಅವರು ಅಭಿನಂದಿಸಿ, ಮುಂದಿನ ಹಂತದಲ್ಲಿಯೂ ತಂಡವು ಅತ್ಯುತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
