ಕುಂದಾಪುರ: ಪಿವಿಟಿಜಿ ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿ ಅನುದಾನ ರದ್ದು ಕೊರಗ ಸಮುದಾಯದಿಂದ ಆಕ್ರೋಶ : ಮನವಿ

0
755

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಪರಿಶಿಷ್ಟ ಪಂಗಡದ ನೈಜ ದುರ್ಬಲ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದ (ಪಿ.ವಿ.ಟಿ.ವಿ) ವೈದ್ಯಕೀಯ ವೆಚ್ಚ ಮರುಪಾವತಿ ಅನುದಾನ ರದ್ದುಪಡಿಸಿದ ಆದೇಶ ಹಿಂದಕ್ಕೆ ಪಡೆಯುವಂತೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ ಆಗ್ರಹಿಸಿ ಕುಂದಾಫುರ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಸಂಘಟನೆಯ ಸಂಚಾಲಕ ಶ್ರೀಧರ ನಾಡ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಅತ್ಯಂತ ಹಿಂದುಳಿದ P.V.T.G. ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿ ಅನುದಾನ ರದ್ದುಮಾಡಿ ಸರಕಾರ ಆದೇಶ ಹೊರಡಿಸಿದೆ. ಇದು ಕೊರಗ ಸಮುದಾಯದ ವಿನಾಶಕ್ಕೆ ದಾರಿ ಮಾಡಿಕೊಡಲಿದೆ ಎಂದು ಆಕ್ರೋಶ ಹೊರಹಾಕಿದರು.

ಕೊರಗರು ಮಧ್ಯಪಾನ ಮತ್ತು ಇತರೆ ದುಶ್ಚಟಗಳ ಕಾರಣದಿಂದ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಸರಕಾರದ ಆದೇಶದಲ್ಲಿ ಉಲ್ಲೇಖಿಸಿರುವುದು ಅವೈಜ್ಞಾನಿಕವಾಗಿದೆ. ಸರಕಾರ ಇದುವರೆಗೆ ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಕುರಿತು ಯಾವುದೇ ರೀತಿಯಲ್ಲಿ ಸಮಗ್ರ ಅಧ್ಯಯನ ಮಾಡಿಲ್ಲ. ಮದ್ಯಪಾನ ಮತ್ತು ಇತರೆ ದುಶ್ಚಟಗಳಿಗೆ ಒಳಗಾಗಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಕಳೆದ ಹತ್ತು ವರ್ಷದಲ್ಲಿ ಕುಡಿತ ದುಶ್ಚಟದ ಬಗ್ಗೆ ಕೊರಗರಲ್ಲಿ ಸ್ವಯಂ ಜಾಗೃತಿ ಬಂದಿದೆ ಎಂದು ಸಮುದಾಯವನ್ನು ಸಮರ್ಥಿಸಿಕೊಂಡರು. ಗಣೇಶ್ ಆಲೂರು, ಮಾಲತಿ ಆಲೂರು, ಗೋಪಾಲ ತಗ್ಗೆರ್ಸೆ, ಬಾಬು ನಾಡಾ, ನಾಗರಾಜ ನಂದ್ರೊಳ್ಳಿ ಇದ್ದರು.

LEAVE A REPLY

Please enter your comment!
Please enter your name here