ಕುಂದಾಪುರದ ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

0
355

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಎಕ್ಸಲೆಂಟ್ ಪಿ. ಯು ಕಾಲೇಜು, ಸುಣ್ಣಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ , ವಕೀಲರ ಸಂಘ (ರಿ) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಎಕ್ಸಲೆಂಟ್ ಪಿ ಯು ಕಾಲೇಜಿನಲ್ಲಿ ನವೆಂಬರ್ 7 ರಂದು “ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರೀಕರ ಸಬಲೀಕರಣ” ಎನ್ನುವ ವಿಷಯದ ಕುರಿತು ಕಾರ್ಯಕ್ರಮ ಜರುಗಿತು.

ಕಾನೂನು ಅರಿವು ಕಾರ್ಯಕ್ರಮವನ್ನು ಅಬ್ದುಲ್ ರಹೀಮ್ ಹುಸೇನ್ ಶೇಖ್ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರು ಕುಂದಾಪುರ ಇವರು ಉದ್ಘಾಟಿಸಿ ಮಾತನಾಡುತ್ತಾ “ನ್ಯಾಯ ದೇಗುಲ ಹೃದಯದಲ್ಲಿದೆ ನಾವು ಆತ್ಮ ಸಾಕ್ಷಿಗೆ ವಿರುದ್ಧವಾಗಿ ಹೋಗದಿದ್ದರೆ ನ್ಯಾಯಲಯಕ್ಕೆ ಹೋಗುವ ಅಗತ್ಯವಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಅರಿವು ಇರಬೇಕಾದುದು ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಾನೂನು ಅರಿವನ್ನು ಮೂಡಿಸಿಕೊಂಡು ಮನುಕುಲದ ಉದ್ಧಾರಕ್ಕೆ ಕಂಕಣ ಬದ್ಧರಾಗಬೇಕೆಂದರು”.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿಯವರು ವಿದ್ಯಾರ್ಥಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾನೂನು ಅರಿವು ಎಲ್ಲರಿಗೂ ಅಗತ್ಯವಿದೆ. ಆದ್ದರಿಂದ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆಯ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಲೈಸೆನ್ಸ್ ಇಲ್ಲದೆ ಗಾಡಿಯನ್ನು ಓಡಿಸುವುದು ಅಪರಾಧವಾಗಿದ್ದು ಇದರಿಂದ ಮುಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಎಚ್ಚರಿಕೆ ಇರಬೇಕು ಎಂದು ಹೇಳಿದರು.

ಕಾಳವರ ಪ್ರದೀಪ್ ಕುಮಾರ್ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಸಾಮಾನ್ಯ ಕಾನೂನು ಮೂಲಭೂತ ಮತ್ತು ಕರ್ತವ್ಯಗಳು” ಎನ್ನುವ ವಿಚಾರವಾಗಿ ಕಾನೂನು ಅರಿವು ಮೂಡಿಸುತ್ತಾ ವಿದ್ಯಾರ್ಥಿಗಳ ನಿಜವಾದ ಭವಿಷ್ಯ ಅಡಗಿರುವುದು ಮಾನವೀಯ ಮೌಲ್ಯಗಳಲ್ಲಿ ಎಂದರು. ಅವರು ಅದನ್ನು ಸರಿಯಾದ ರೀತಿಯಲ್ಲಿ ನಡೆದಾಗ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಜು ಎನ್ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ಬನ್ನಾಡಿ ಸೋಮನಾಥ ಹೆಗ್ಡೆ, ಜೆ ಶ್ರೀನಾಥ್ ರಾವ್, ಹಾಗೂ ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸುರೇಖಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜು ಉಪನ್ಯಾಸಕರಾದ ಶ್ರೀನಿವಾಸ ವೈದ್ಯರವರು ಸ್ವಾಗತಿಸಿ, ಆಂಗ್ಲಭಾಷೆಯ ಉಪನ್ಯಾಸಕರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here