Category: Uncategorized

  • ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅರಾಟೆ ದಿ| ಮಂಜುನಾಥ  ಪ್ರಶಸ್ತಿ ಪ್ರದಾನ

    ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅರಾಟೆ ದಿ| ಮಂಜುನಾಥ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಬಡಗುತಿಟ್ಟಿನ ಯಕ್ಷಕಿಂಕರ ಬಿರುದಾಂಕಿತ ಖ್ಯಾತ ಸ್ತ್ರೀವೇಷಧಾರಿ ಅರಾಟೆ ದಿ|ಮಂಜುನಾಥ ಸ್ಮರಣಾರ್ಥ ಕೊಡಮಾಡುವ ಅರಾಟೆ ಮಂಜುನಾಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.30ರಂದು ಬೇಲ್ತೂರಿನಲ್ಲಿ ಜರಗಿತು.

    ಈ ಸಂದರ್ಭ ಬಡಗುತಿಟ್ಟಿನ ಖ್ಯಾತ ಕಲಾವಿದ ಬೇಲ್ತೂರು ರಮೇಶ್ ನಾಯ್ಕ್‍ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬೇಲ್ತೂರು ರಮೇಶ್ ಅವರು ಸುದೀರ್ಘ 54ವರ್ಷಗಳ ಕಾಲ ವೃತ್ತಿ ಕಲಾವಿದರಾಗಿ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದು ಇವರ ಪುಂಡುವೇಷ ಅತ್ಯಂತ ಅದ್ಬುತವಾದದ್ದು. ಇವರ ನಿರಂತರ ಯಕ್ಷ ಸೇವೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಸಿಗಬೇಕಿತ್ತು ಎಂದರು.

    ಪ್ರಶಸ್ತಿ ಸ್ವೀಕರಿಸಿದ ಬೇಲ್ತೂರು ರಮೇಶ್ ಮಾತನಾಡಿ, ನನ್ನ ಯಕ್ಷ ತಿರುಗಾಟದ ಯಶಸ್ವಿಗೆ ಅರಾಟೆ ಮಂಜುನಾಥನವರ ಸಹಕಾರ ಅತ್ಯಂತ ಮಹತ್ವದಿದೆ. ಆದ್ದರಿಂದ ಇಂದು ಅವರ ಹೆಸರಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಅತ್ಯಂತ ಖುಷಿಕೊಡುತ್ತಿದೆ ಎಂದರು.
    ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣ ಪ್ರಸಾದ್ ಅಡ್ಯಂತಾಯ ಶುಭ ಹಾರೈಸಿದರು.
    ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ, ಕಟ್‍ಬೇಲ್ತೂರು ಗ್ರಾ.ಪಂ. ಅಧ್ಯಕ್ಷ ನಾಗರಾಜ್ ಪುತ್ರನ್, ಮೊಗವೀರ ಯಕ್ಷಕಲಾವೇದಿಕೆಯ ಚಂದ್ರ ಕಂಡ್ಲೂರು, ದೇವದಾಸ್ ಬಾರ್ಕೂರು, ಅರಾಟೆಯವರ ಪತ್ನಿ ಜಲಾಜಾಕ್ಷಿ ಎಂ ಅರಾಟೆ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
    ಕಾರ್ಯಕ್ರಮದ ಸಂಯೋಜಕ, ಅರಾಟೆಯವರ ಪುತ್ರ ಗಣೇಶ್ ಪ್ರಸಾದ್ ಅರಾಟೆ ಸ್ವಾಗತಿಸಿ, ವಿದ್ವಾನ್ ಅಶೋಕ್ ಆಚಾರ್ಯ ಸಾೈಬ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಶಿಲಾನ್ಯಾಸ

    ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…
    ಗಂಗೊಳ್ಳಿ :
    ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪುಗೊಳ್ಳುತ್ತಿದ್ದು, ಅನೇಕ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದೆ. ಪಿಸಲಾಗುವುದು. 94ಸಿ, 94ಸಿಸಿ, 53 ಮತ್ತು 57ರ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ತಹಶೀಲ್ದಾರ್‍ರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿ 6 ಲಕ್ಷ ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

    ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗುಜ್ಜಾಡಿ ಗ್ರಾಮ ಪಂಚಾಯತ್ ಸಮೀಪ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಾಬು ಜಗಜೀವನರಾಮ್ ಸಭಾಭವನಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

    ಕ್ಷೇತ್ರದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ನೀಡುವ ಸುಮಾರು 500 ಕೋಟಿ ರೂ. ವೆಚ್ಚದ ಯೋಜನೆ ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ. ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ಪಡೆಯಲು ಅಲೆಯುವುದನ್ನು ತಪ್ಪಿಸಲು ಪಡಿತರ ಚೀಟಿ ಹೊಂದಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಸರಕಾರ ಆದೇಶ ಹೊರಡಿಸಲಿದೆ. ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಮಾಜಿ ಸದಸ್ಯ ನಾರಾಯಣ ಕೆ.ಗುಜ್ಜಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಣೇಕರ್, ಗುಜ್ಜಾಡಿ ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಸದಸ್ಯರಾದ ಹರೀಶ ಮೇಸ್ತ, ಶೇಖರ ದೇವಾಡಿಗ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಶ್ರೀಧರ, ತುಂಗಾ ಪೂಜಾರಿ, ಭಾರತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ ಪೂಜಾರಿ, ಪಿಡಿಒ ಶೋಭಾ, ಕಾರ್ಯದರ್ಶಿ ಶಕುಂತಲಾ, ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

  • ವಂಡ್ಸೆ ಮಾದರಿ ಶಾಲೆಗೆ 5 ಕೆವಿ ಸಾಮರ್ಥ್ಯದ ಸೋಲಾರ್ ಕೊಡುಗೆ

    ವಂಡ್ಸೆ ಮಾದರಿ ಶಾಲೆಗೆ 5 ಕೆವಿ ಸಾಮರ್ಥ್ಯದ ಸೋಲಾರ್ ಕೊಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ:ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಶಾಲಾ ಪೂರ್ವ ವಿದ್ಯಾರ್ಥಿ ವಂಡ್ಸೆ ಕಟ್ಟೆಮನೆ ಸುಧಾಕರ ಶೆಟ್ಟಿಯವರ ಕೊಡುಗೆಯಾಗಿ ಅಂದಾಜು ರೂ.8 ಲಕ್ಷ ಮೊತ್ತದಲ್ಲಿ 5 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಯಾಗಿದ್ದು ಆ.19ರಂದು ಶಾಲಾ ಬಳಕೆಗೆ ಹಸ್ತಾಂತರಿಸಲಾಯಿತು.

    ಶಾಲಾ ಬೇಡಿಕೆಗಳಲ್ಲಿ ಒಂದಾದ ಸೋಲಾರ್ ವ್ಯವಸ್ಥೆಯು ಅತೀ ಅಗತ್ಯವಾಗಿದ್ದು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಾಜೆಕ್ಟರ್ ಇದ್ದು ಸೋಲಾರ್ ಅಳವಡಿಕೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಬಳಕೆಯಾಗಿ ಉಳಿಕೆ ವಿದ್ಯುತ್‍ನ್ನು ಮೆಸ್ಕಾಂ ನೀಡುವ ಯೋಜನೆಯೂ ಕೂಡಾ ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ.

    ಶಾಲೆಗೆ ಉಪಯೂಕ್ತವಾದ ಸೌರ ವಿದ್ಯುತ್ ಘಟಕವನ್ನು ಒದಗಿಸಿದ ದಾನಿಗಳಾದ ವಂಡ್ಸೆ ಕಟ್ಟೆಮನೆ ಸುಧಾಕರ್ ಶೆಟ್ಟಿಯವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ಕೃತಜ್ಞತೆ ಸಲ್ಲಿಸಿದರು.

    ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆಯಲ್ಲಿ 2016ರಲ್ಲಿ 89 ವಿದ್ಯಾರ್ಥಿಗಳಿದ್ದು ಬಳಿಕ, ಆಂಗ್ಲಮಾಧ್ಯಮ ವಿಭಾಗ, ಪೂರ್ವ ಪ್ರಾಥಮಿಕ ತರಗತಿಗಳ ಆರಂಭದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ 1ರಿಂದ 7ನೇ ತರಗತಿ ತನಕ 319 ವಿದ್ಯಾರ್ಥಿಗಳಿದ್ದು, ಪೂರ್ವಪ್ರಾಥಮಿಕ ತರಗತಿ ಸೇರಿದಂತೆ 399 ವಿದ್ಯಾರ್ಥಿಗಳಿದ್ದಾರೆ. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್, ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್, ರೋಟರಿ ಸಂಸ್ಥೆ ಸೇರಿದಂತೆ ದಾನಿಗಳ ಮೂಲಕ ಹಲವು ಮೂಲ ಸೌಕರ್ಯಗಳನ್ನು ಹೊಂದಿಸಿಕೊಂಡು ಮುನ್ನೆಡೆಯುತ್ತಿದೆ.
    ಈಗಾಗಲೇ ಶಾಲೆ ದಾನಿಗಳು, ಹಳೆ ವಿದ್ಯಾರ್ಥಿಗಳ ಉದಾರ ಕೊಡುಗೆಯಿಂದ ವಿವಿಧ ಸೌಕರ್ಯಗಳು ಶಾಲೆಗೆ ದೊರಕಿದ್ದು, ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ಸಕ್ರಿಯವಾಗಿರುವ ಅಧ್ಯಾಪಕ ವೃಂದದ ಪರಿಶ್ರಮದಿಂದ ವಿದ್ಯಾರ್ಥಿಗಳ ಸಂಖ್ಯೆಯೂ ಕೂಡಾ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

  • ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಹಾಗೂ ಸಾಧಕರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಒಕ್ಕೂಟದ ಮಿನಿಹಾಲ್‌ನಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು.

    ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಶೋಭಾ ನಾಡಕರ್ಣಿ, ಸಿಂಗಾರಿ ಟೀಚರ್, ಸುಲೋಚನಾ ಭಟ್, ಮನೋರಮ ಶೇಟ್, ಮರಿಯಾ ಡಿಸೋಜಾ, ಚಂದ್ರಶೇಖರ ಹೆಗ್ಡೆ, ಮಂಜುನಾಥ ಕಾಮತ್, ಮಹೇಶ ಶೆಣೈ, ಆಶಾಲತಾ ಶೆಟ್ಟಿ, ಜ್ಯೋತಿ ಚಿಲ್ಡ್ರನ್‌ನ ಲೂಸಿ ಡಿಸೋಜ, ರೀನಾ ಡಿಕೋಸ್ತಾ, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ, ರೋಟರಿ ಮಿಡ್ ಟೌನ್‌ನ ಸುಧಾಕರ ಶೆಟ್ಟಿ ಆವರ್ಸೆ, ಪಾರ್ವತಿ ಜಿ.ಐತಾಳ್, ಶ್ರೀನಿಧಿ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ|ರಂಜಿತ್ ಕುಮಾರ್ ಶೆಟ್ಟಿ, ಮಲ್ಲಿಗೆ ಕೃಷಿಕರಾದ ಪ್ರೇಮಾ ಗಣೇಶ್ ಪೂಜಾರಿ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್.ಆರ್., ಡಾ|ಪದ್ಮನಾಭ ಆಚಾರ್ಯ, ಸಮಾಜ ಸೇವಕಿ ಆರತಿ ಆಜ್ರಿ ಅವರನ್ನು ಸನ್ಮಾನಿಸಲಾಯಿತು.

    ಸುಲೋಚನಾ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶಾಂತಿ ವಂದಿಸಿದರು.

  • ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ನಡೆಯಿತು.
    ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ವತಿಯಿಂದ ಸರಳವಾಗಿ ವಿವಾಹ ನಡೆಯಿತು. ಒಟ್ಟು ನಾಲ್ಕು ಜೋಡಿ ನವ ದಂಪತಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು.
    ಸರಕಾರದ ವತಿಯಿಂದ  ವರನಿಗೆ ಐದು ಸಾವಿರ ರೂ. ಮತ್ತು ವಧುವಿಗೆ 10 ಸಾವಿರ ರೂ., ಚಿನ್ನದ ತಾಳಿಯನ್ನು ನೀಡಲಾಯಿತು.  ಕೊಲ್ಲೂರು ದೇವಳದ ವತಿಯಿಂದ  ವಧುವಿಗೆ ಸೀರೆ, ವರನಿಗೆ ಪಂಚೆ ಮತ್ತು ಕೊಲ್ಲೂರು ದೇವಿಯ ಪೋಟೊವನ್ನು ನೀಡಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀ ರವಿಶಂಕರ್ ಗುರೂಜಿ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
    ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ,  ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವಾಗುವುದು ಯೋಗ. ಈ ಕ್ಷೇತ್ರದಲ್ಲಿ ವಿವಾಹವಾಗಲು ದೇವಿಯ ಅನುಗ್ರಹ ಬೇಕು. ವಿವಾಹಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ದೇವಾಲಯದ ಶಾಸ್ತ್ರೋಕ್ತವಾಗಿ ಸರಳ ವಿವಾಹವಾಗುವುದು ಉತ್ತಮ ಎಂದರು.
    ಕ್ಷೇತ್ರ ಪುರೋಹಿತರಾದ ಗಜಾನನ ಜೋಶಿಯವರ  ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯವರು ಉಪಸ್ಥಿತರಿದ್ದರು.