Category: ಸುದ್ದಿ

  • ಬೈಂದೂರು :ಮೂಲ ಸೌಕರ್ಯದ ಅಭಿವೃದ್ಧಿ ನಮ್ಮ ಕಲ್ಪನೆ – ಜನಾರ್ದನ ಮರವಂತೆ

    ಬೈಂದೂರು :ಮೂಲ ಸೌಕರ್ಯದ ಅಭಿವೃದ್ಧಿ ನಮ್ಮ ಕಲ್ಪನೆ – ಜನಾರ್ದನ ಮರವಂತೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದೇ ಅಭಿವೃದ್ಧಿ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯದ ಅಂಶಗಳನ್ನು ಒಟ್ಟು ಸೇರಿಸಿ ಮಾಡಲಾಗುವ ಅಪೇಕ್ಷಿತ ಮಾರ್ಪಾಡುಗಳು ನೈಜ ಅಭಿವೃದ್ಧಿ ಎಂದೆನಿಸಿಕೊಳ್ಳುತ್ತದೆ ಎಂದು ರಾಜ್ಯ ಪಂಚಾಯತ್ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮರವಂತೆ ಹೇಳಿದರು.

    ಅವರು ಉಪ್ಪುಂದ ದೇವಕಿ ಬಿ.ಆರ್. ಸಭಾಂಗಣದಲ್ಲಿ ಕುಂದಾಪ್ರ ಡಾಟ್ ಕಾಂ ವತಿಯಿಂದ ಆಯೋಜಿಸಲಾದ ‘ವಿಷನ್ ಬೈಂದೂರು 2033’ ಕಾರ್ಯಕ್ರಮ ಉದ್ಘಾಟಿಸಿ, ಅಭಿವೃದ್ಧಿಯ ಪರಿಕಲ್ಪನೆ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.
    ಯುನೈಟೆಟ್‍ ನೇಷನ್ಸ್‍ ಡೆವಲಪ್‍ಮೆಂಟ್‍ ಪ್ರೋಗ್ರಾಂ ಜಾಗತಿಕವಾಗಿ ಮಾತ್ರವಲ್ಲದೇ ಪ್ರತಿ ದೇಶದ ಮಾನವ ಅಭಿವೃದ್ಧಿಯ ಸೂಚ್ಯಂಕವನ್ನು ಜನರ ಮುಂದಿಡುತ್ತದೆ. ಸದ್ಯ ಜಾಗತಿಕವಾಗಿ ಮಾನವ ಅಭಿವೃದ್ಧಿಯ ಅಂತಿಮ ಹಂತ ‘ಸುಖೀ ಜೀವನ’ ಎಂದು ಕಂಡುಕೊಳ್ಳಲಾಗಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ, ತಲಾ ಆದಾಯ ಹೆಚ್ಚಳ ಸೇರಿದಂತೆ ಹಲವು ಅಂಶಗಳೂ ಸೇರಿಕೊಂಡಿದೆ. ಪ್ರಸ್ತುತ ಹಲವು ದೇಶಗಳಲ್ಲಿ ಹ್ಯಾಪಿನೆಸ್ ಇಂಡೆಕ್ಸ್ ಅಳೆಯಲಾಗುತದೆ ಎಂದರು.
    ದೇಶದಲ್ಲಿ ಮಾನವ ಅಭಿವೃದ್ಧಿ ಸೂಕ್ಯಂಕವನ್ನು ಅಳತೆ ಮಾಡಿದ ಎರಡನೇ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸೂಕ್ಯಂಕ ಸಿದ್ದಪಡಿಸಿದ್ದ ಉಡುಪಿ ಜಿಲ್ಲೆಗೆ ಪ್ರಥಮ ಬಹುಮಾನ ಬಂದಿತ್ತು. ಉಡುಪಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾನವ ಅಭಿವೃದ್ಧಿಯ ಅಧ್ಯಯನ ನಡೆದಿದ್ದವು. ಇಂತಹ ಅಧ್ಯಯನವನ್ನು ಆಧರಿಸಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಬಹುಮುಖ್ಯ ಎಂದರು.
    ಅಭಿವೃದ್ಧಿಯ ಕನಸು ಹಾಗೂ ಸವಾಲುಗಳು ವಿಷಯವಾಗಿ ಕೇಂದ್ರ ರೈಲ್ವೆ ಬೋರ್ಡ್ ಮಾಜಿ ಸದಸ್ಯ ಕೆ. ವೆಂಕಟೇಶ ಕಿಣಿ ಅವರು ಮಾತನಾಡಿ, ಬೈಂದೂರು ಕ್ಷೇತ್ರವೆಂಬುದು ದೈವದತ್ತ ಕೊಡುಗೆ. ಧಾರ್ಮಿಕ, ಬೀಚ್ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಿದು. ಬೈಂದೂರಿನ ಭೌಗೋಳಿಕ ಹಿನ್ನೆಲೆ ಗಮನಿಸಿದರೆ, ಇಲ್ಲಿ ಪ್ರವಾಸೋದ್ಯದಿಂದ ಮಾತ್ರ ಊರಿನ ಅಭಿವೃದ್ಧಿ ಸಾಧ್ಯವಿದೆ. ಆದರೆ ಪರಿಸರವನ್ನು ಹಾಳು ಮಾಡಿ, ಜನರನ್ನು ಒಕ್ಕಲೆಬ್ಬಿಸಿ ಯಾವ ಕೆಲಸವನ್ನೂ ಮಾಡಬಾರದು. ಹಾಗೆಯೇ ಜನರೂ ಸಹ ಸಣ್ಣ ಪ್ರಮಾಣದಲ್ಲಾಗುವ ತೊಂದರೆಯನ್ನು ದೊಡ್ಡದಾಗಿ ಬಿಂಬಿಸಿ ಹಿಂಮುಖ ಚಲನೆಗೆ ಅವಕಾಶ ನೀಡಬಾರದು. ಯಾವುದೇ ಅಭಿವೃದ್ಧಿ ಮಾಡುವಾಗಲೂ ಪೂರ್ವಾಪರ ಹಾಗೂ ತಾಂತ್ರಿಕ ಸವಾಲುಗಳನ್ನು ಎದುರಿಸುವುದು, ಜನರಸ್ಥೆ ಅಧಿಕಾರಿಗಳು ಆಸ್ಥೆ ವಹಿಸಿ ಕೆಲಸ ಮಾಡುವಂತೆ ಮಾಡುವುದು ಬಹುಮುಖ್ಯ ಎಂದರು.
    ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾತನಾಡಿ, ಪ್ರತಿ ಆರಂಭವೂ ಇದೆಲ್ಲಾ ನಮ್ಮೂರಲ್ಲಿ ಸಾಧ್ಯವಿಲ್ಲ ಎಂಬ ಮಾತಿನಿಂದಲೇ ಶುರುವಾಗುತ್ತದೆ. ಆದರೆ ಇದೂ ಸಾಧ್ಯವೆಂಬ ಕನಸು ಹುಟ್ಟುಹಾಕುವುದೇ ದೊಡ್ಡ ವಿಚಾರ. ವಿಷನ್ ಬೈಂದೂರು ವೇದಿಕೆಯ ಮೂಲಕ ಅಭಿವೃದ್ಧಿ ಚರ್ಚೆ ಆರಂಭವಾಗಿದೆ. ಚರ್ಚೆ ನಡೆದಾಗಲೇ ಉತ್ತಮ ವಿಚಾರಗಳು ಹೊರ ಬರುತ್ತದೆ.

    ನಿಮ್ಮ ಕನಸುಗಳ ಬುಟ್ಟಿ, ಬಂಡಿ ತೋಟ ನಾನು:
    ನಾನು ನಿಮ್ಮ ಕನಸುಗಳ ಬುಟ್ಟಿಯೂ ಹೌದು, ಬಂಡಿಯೂ ಹೌದು, ತೋಟವೂ ಹೌದು. ನಿಮ್ಮ ಕನಸುಗಳನ್ನು ಯಾವಾಗಲೂ ಹಂಚಿಕೊಳ್ಳಿ, ಎಲ್ಲಿ ತಲುಪಿಸಬೇಕು ಅಲ್ಲಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ನಿಮ್ಮೆಲ್ಲಾ ಕನಸನ್ನು ಒಂದೆಡೆ ಕೂರಿಸಿ, ನಿಲ್ಲಿಸಿ ಬೆಳೆಸುವ ಕೆಲಸವೂ ನನ್ನದು ಎಂದರು.
    ಬೈಂದೂರು ಕ್ಷೇತ್ರದ ಜನ ನನ್ನಲ್ಲಿ ವಿಶ್ವಾಸವಿಟ್ಟು ಆರಿಸಿದ್ದಾರೆ. ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ, ಜನರ ಊರಿನ ಬಗ್ಗೆ ಏನು ಕನಸು ಕಂಡಿದ್ದಾರೋ ಅದನ್ನು ಸಾಕರಾಗೊಳಿಸುವ ಜವಾಬ್ದಾರಿಯೂ ನನ್ನದು. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಚರ್ಚೆಗಳು ವಿಷನ್ ಬೈಂದೂರು 2033 ಮೂಲಕ ಆರಂಭವಾಗಿದೆ. ಅದಕ್ಕೊಂದು ಉತ್ತರ ಕಂಡುಕೊಳ್ಳುವ ತನಕವೂ ಈ ಚರ್ಚೆಗಳು ಮುಂದುವರಿಯಲ್ಲಿ ಎಂದರು.
    ಕುಂದಾಪ್ರ ಡಾಟ್ ಕಾಂ ಪ್ರವರ್ತಕ ಸುನಿಲ್ ಹೆಚ್.ಜಿ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಉದಯ ಮರವಂತೆ ವಂದಿಸಿದರು. ಬೈಂದೂರು ರೋಟರಿ ನಿಯೋಜಿತ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಬಳಿಕ ಕುಂದಾಪ್ರ ಡಾಟ್ ಕಾಂ ನೇತೃತ್ವದಲ್ಲಿ ಬೈಂದೂರು ಶಾಸಕರು ಹಾಗೂ ಅಭಿವೃದ್ದಿಯ ಕನಸು ಹೊತ್ತ ನಾಗರಿಕರೊಂದಿಗೆ ಸಂವಾದ ಜರುಗಿತು.

  • ಉಡುಪಿ :ಮಾದಕ ವಸ್ತು ದುಷ್ಪರಿಣಾಮ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು :ನ್ಯಾ,ಶರ್ಮಿಳಾ

    ಉಡುಪಿ :ಮಾದಕ ವಸ್ತು ದುಷ್ಪರಿಣಾಮ ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು :ನ್ಯಾ,ಶರ್ಮಿಳಾ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಇಂದಿನ ಯುವಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಬಲಿಯಾಗದಂತೆ ತಡೆಯಲು ಪಠ್ಯಕ್ರಮದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಪಾಠಗಳನ್ನು ಅಳವಡಿಸಿ, ಸರಿಯಾದ ಮಾಹಿತಿ ನೀಡುವುದರಿಂದ ಈ ಸಮಸ್ಯೆ ಹೋಗಲಾಡಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಅಭಿಪ್ರಾಯಪಟ್ಟರು.

    ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಹಾಗೂ ಮಣಿಪಾಲ ಮಹಿಳಾ ಸಮಾಜ ಇವರ ಸಹಯೋಗದಲ್ಲಿ ನಡೆದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

    ಜಗತ್ತಿನಲ್ಲಿ ಸುಮಾರು 200 ಮಿಲಿಯನ್‌ನಷ್ಟು ಜನರು ಮಾದಕ ವ್ಯಸನದಿಂದ ಬಳಲುತ್ತಿದ್ದಾರೆ. ಆಲ್ಕೋಹಾಲ್, ಸಿಗರೇಟ್, ತಂಬಾಕು, ಡ್ರಗ್ಸ್, ಅಫೀಮು, ಕೊಕೈಲ್‌ನಂತಹ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ದುಷ್ಪರಿಣಾಮಗಳ ಅರಿವಿದ್ದರೂ ಕೂಡ ಯುವಜನತೆ ವ್ಯಸನಿಗಳಾಗಿ ಅದರಿಂದ ಹೊರಬರಲಾಗದೆ ಜೀವವನ್ನೇ ಕಳೆದುಕೊಳ್ಳುತ್ತಿದ್ದು, ಇದರಿಂದಾಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಪಠ್ಯಕ್ರಮದಲ್ಲಿ ಪಾಠಗಳನ್ನು ಅಳವಡಿಸಬೇಕು. ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುವುದರಿಂದ ದೇಶದ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಮ್ ಹಾಕೆ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವ್ಯಸನಗಳ ಬಗ್ಗೆ ಪ್ರತಿದಿನ ಪ್ರಕರಣಗಳು ದಾಖಲಾಗುತ್ತಿವೆ. ಸಾಮಾನ್ಯವಾಗಿ ಮನೆಯಿಂದ ಹೊರ ಉಳಿದವರು, ಸ್ನೇಹಿತರ ಜೊತೆಗೂಡದವರು ಅಥವಾ ಮಾನಸಿಕ ನೋವು ಅನುಭವಿಸುವ ವ್ಯಕ್ತಿಗಳು ಮಾದಕ ವ್ಯಸನಿಗಳಾಗುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ವಿದ್ಯಾವಂತರು, ಬುದ್ದಿವಂತರೇ ಇಂತಹ ಚಟಗಳಿಗೆ ಮಾರು ಹೋಗುತ್ತಿದ್ದು, ಇದರಿಂದ ಸಮಾಜಕ್ಕೆ, ಕುಟುಂಬಗಳಿಗೆ ಮತ್ತು ದೇಶದ ಭದ್ರತೆಗೂ ದಕ್ಕೆ ತರುವಂತಹ ಸಮಸ್ಯೆ ಆಗುತ್ತಿದೆ. ಮಾದಕ ವ್ಯಸನದಿಂದ ಹೊರಬರಲು ಕ್ರೀಡೆ, ಕಲೆ, ಈಜು ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

    ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಉಡುಪಿ-ಕರಾವಳಿಯ ಐ.ಎಮ್.ಎ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಇದೇ ಸಂದರ್ಭದಲ್ಲಿ ನಿಮ್ಹಾನ್ಸ್ ಬೆಂಗಳೂರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಪ್ರಾರಂಭಗೊಳಿಸಿರುವ ಟೆಲಿ ಮನಸ್ ಶುಲ್ಕ ರಹಿತ ಸಹಾಯವಾಣಿ (14416) ಯನ್ನು ಲೋಕಾರ್ಪಣೆ ಮಾಡಲಾಯಿತು.

    ಮಾದಕ ದ್ರವ್ಯ ವ್ಯಸನದಿಂದ ದೂರವಿರುವ ಕುರಿತಂತೆ ಎ.ವಿ.ಬಾಳಿಗಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಪ್ರಮಾಣ ವಚನ ಬೋಧಿಸಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಸುದೇಶ್ ಕುಮಾರ್, ಎ.ವಿ.ಬಾಳಿಗಾ ಆಸ್ಪತ್ರೆಯ ಡಾ.ಸುಲತಾ ಭಂಡಾರಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಉಡುಪಿ-ಕರಾವಳಿಯ ಐ.ಎಮ್.ಎ ಕಾರ್ಯದರ್ಶಿ ಹಾಗೂ ಕೀಲು, ಮೂಳೆ ತಜ್ಞ ಡಾ.ಕೇಶವ್ ನಾಯಕ್, ಜಿಲ್ಲಾ ವಿಕಲಚೇತನ ಅಧಿಕಾರಿ ರೋಶನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಸ್ವಾಗತಿಸಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಲತಾ ನಾಯಕ್ ವಂದಿಸಿದರು.

  • ಉಡುಪಿ :ಅನಧಿಕೃತ ಪ್ರಾಣಿ ವಧೆ ತಡೆ – ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಲೋಪ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.

    ಅವರು ಶನಿವಾರ ವರ್ಚುವಲ್ ಮೂಲಕ ಬಕ್ರೀದ್ ಆಚರಣೆ ಸಂದರ್ಭ ಅನಧಿಕೃತವಾಗಿ ಜಾನುವಾರಗಳ ವಧೆ ಹಾಗೂ ಸಾಗಾಣಿಕೆ ತಡೆಗಟ್ಟಲು ರಚಿಸಿರುವ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಅನಧಿಕೃತ ಪ್ರಾಣಿ ವಧೆ ತಡೆಯಲು ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ವಿವಿಧ ತಂಡಗಳನ್ನು ರಚಿಸಿ, ಕಣ್ಗಾವಲು ಇಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು. ಜಿಲ್ಲೆಯಾದ್ಯಂತ ನಿಯೋಜಿಸಲಾದ ಚೆಕ್‌ಪೋಸ್ಟ್ಗಳಲ್ಲಿ, ಅನಧಿಕೃತವಾಗಿ ಜಾನುವಾರುಗಳು ಸಾಗಾಣಿಕೆ ಆಗದಂತೆ ನಿಗಾ ವಹಿಸಬೇಕು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕು ಎಂದರು.

    ಅನಧಿಕೃತವಾಗಿ ಜಾನುವಾರುಗಳನ್ನು ವಶಪಡಿಸಿಕೊಂಡಲ್ಲಿ ಅವುಗಳ ರಕ್ಷಣೆಗಾಗಿ ಗುರುತಿಸಲಾದ ಗೋಶಾಲೆಗಳಲ್ಲಿ ಸಂರಕ್ಷಣೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ತರಹದ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್, ನಗರಸಭೆ ಪೌರಾಯುಕ್ತ ರಮೇಶ್ ನಾಯಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಶಂಕರ್ ಶೆಟ್ಟಿ, ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಮಹಿಮ. ಎಂ ಅವರಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ

    ಕುಂದಾಪುರ :ಮಹಿಮ. ಎಂ ಅವರಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರದ ಶ್ರೀ ವೆಂಕಟರಮಣ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಮಹಿಮ. ಎಂ ಇವಳು 2022- 23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕಗಳನ್ನು ಪಡೆದು ದಾವಣಗೆರೆಯ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ನೀಡುವ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ.

    ಜುಲೈ 30ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂಭ್ರಮದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮಹಿಮ.ಎಂ ಇವರು ಗೋಪಾಡಿಯ ಮಂಜುನಾಥ ಹಾಗೂ ಯಶೋದಾ ದಂಪತಿಯ ಪುತ್ರಿಯಾಗಿದ್ದಾರೆ

  • ಏಕವ್ಯಕ್ತಿ ರಂಗ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಮತ್ತು ಸಂವಾದ ಕಾರ್ಯಕ್ರಮ

    ಏಕವ್ಯಕ್ತಿ ರಂಗ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಮತ್ತು ಸಂವಾದ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯ ಕಾವ್ಯ ಎಚ್ ಹಂದೆ ನಟಿಸಿದ ಕಾವ್ಯಾಭಿನಯ, ಡಾ| ಶ್ರೀಪಾದ ಭಟ್ ಪರಿಕಲ್ಪನೆ ಮತ್ತು ನಿರ್ದೇಶನದ ಏಕವ್ಯಕ್ತಿ ರಂಗ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಮತ್ತು ಸಂವಾದ ಕಾರ್ಯಕ್ರಮ ಜೂ.23 ರಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ ಸಂಘಟನೆ, ವಿದ್ಯಾರ್ಥಿನಿಯರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ನಡೆಯಿತು.

    ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಎನ್. ವಾಸರೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಪ್ರಾಂಶುಪಾಲ ಎಂ. ಡಿ. ವಕ್ಕುಂದ ಅಧ್ಯಕ್ಷತೆವಹಿಸಿದ್ದರು.

    ಮುಖ್ಯ ಅತಿಥಿಯಾಗಿ, ವಿಟಿಯು ನಿದೇಶಕರಾದ ವಿಜೇತ್ ಸ್ವಾದಿ, ಪತ್ರಕರ್ತ ಯು.ಎಸ್, ಪಾಟೀಲ್, ರಂಗಕರ್ಮಿ ಉಪನ್ಯಾಸಕ ಸುಜಯೀಂದ್ರ ಹಂದೆ ಕೋಟ, ಗಣೇಶ್ ನೀನಾಸಂ, ಶಿವಮೊಗ್ಗದ ಸಮುದಾಯದ ಲಕ್ಷ್ಮೀನಾರಾಯಣ, ರಂಗ ನಟ ಪ್ರಭಾಕರನ್ ಉಪಸ್ಥಿತರಿದ್ದರು.

    ಅನುಷ್ ಶೆಟ್ಟಿ, ಮುನ್ನಾ ಮೈಸೂರು ಸಂಗೀತ ನಿರ್ದೇಶನ, ರಾಜು ಮಣಿಪಾಲ ಅವರ ಬೆಳಕಿನ ಸಂಯೋಜನೆ, ಗೋಪಿ ಸಾಗರ ಇವರ ರಂಗ ಸಜ್ಜಿಕೆ, ನಭಾ ವಕ್ಕುಂದ ಅವರ ಚಿತ್ರಕಲೆ, ಸ್ವರ್ಣ ಪ್ರಭು, ಅಭಿಲಾಷ ಎಸ್, ಮಾನಸಿ ಸುಧೀರ್ ಅವರ ಸಹ ನಿರ್ದೇಶನ, ಕಾವ್ಯ ಪ್ರಭು ಅವರ ರಂಗ ಸಹಾಯ, ಸುವಿಕಾ ಸಂಘಟನೆಯ ವಿನಿತ ಸುಜಯೀಂದ್ರ ಅವರ ನಿರ್ವಹಣೆಯಲ್ಲಿ ಕುಂದಾಪುರ ಭಂಡಾಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಕಾವ್ಯ ಎಚ್ ಹಂದೆ ನಟಿನೆಯ ‘ಹಕ್ಕಿ ಮತ್ತು ಅವಳು’ ಯಶಸ್ವಿಯಾಗಿ ಮೂಡಿ ಬಂತು.

    ನಂತರ ನಡೆದ ಸಂವಾದದಲ್ಲಿ ಸಾಹಿತಿ, ಡಾ| ವಿನಯ ಜಿ ನಾಯಕ್ ದಿಕ್ಸೂಚಿ ಮಾತುಗಳನ್ನಾಡಿದರು. ನಾಸಿರ್ ಅಹ್ಮದ್ ಸ್ವಾಗತಿಸಿ, ಬಿ. ಎನ್. ಅಕ್ಕಿ ವಂದಿಸಿದರು. ಉಷಾ ನಾಯಕ್ ನಿರ್ವಹಿಸಿದರು.

  • ಪಾಂಡೇಶ್ವರ – ಗಣೇಶೋತ್ಸವ ಸಮಿತಿ ಸಭೆ,ನೂತನ ಪದಾಧಿಕಾರಿಗಳ ಆಯ್ಕೆ

    ಪಾಂಡೇಶ್ವರ – ಗಣೇಶೋತ್ಸವ ಸಮಿತಿ ಸಭೆ,ನೂತನ ಪದಾಧಿಕಾರಿಗಳ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇದರ 11ನೇ ವರ್ಷದ ವಾರ್ಷಿಕ ಸಭೆ ಭಾನುವಾರ ಮೂಡಹಡು ಶಾಲಾ ವಠಾರದಲ್ಲಿ ನಡೆಯಿತು.

    ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಈ ಬಾರಿ ಗಣೇಶೋತ್ಸವದ ಕುರಿತು ಚರ್ಚೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ವಿಜಯ ಆಚಾರ್ಯ ಪಾಂಡೇಶ್ವರ, ಕಾರ್ಯದರ್ಶಿಯಾಗಿ ಆದರ್ಶ ಆಚಾರ್ಯ ಪಾಂಡೇಶ್ವರ, ರಾಕೇಶ್, ಜೊತೆ ಕಾರ್ಯದರ್ಶಿಗಳಾಗಿ, ಗೌರವಾಧ್ಯಕ್ಷರಾಗಿ ವಿ.ನಾರಾಯಣ ಆಚಾರ್ ಹಾಗೂ ಕೆ.ವಿ ರಮೇಶ್ ರಾವ್, ರವಿ ಪೂಜಾರಿ,
    ಪ್ರಥಮ ಬಾರಿಗೆ ಮಹಿಳೆಯಾಗಿ ಅಮ್ರತಾ, ಮಮತಾ ಅವಕಾಶ ಕಲ್ಪಿಸಿ ಆಯ್ಕೆಮಾಡಲಾಯಿತು.

    ಶ್ರೀಷ ಆಚಾರ್ಯ ಸ್ವಾಗತಿಸಿದರು. ವಾರ್ಷಿಕ ವರದಿ ಸುದರ್ಶನ ಪೂಜಾರಿ ಮಂಡಿಸಿ ವಂದಿಸಿದರು.

  • ಕೋಟದ ಶಾಂಭವೀ ಶಾಲೆಯಲ್ಲಿ ಎಲ್.ಕೆ.ಜಿ ತರಗತಿ ಆರಂಭ

    ಕೋಟದ ಶಾಂಭವೀ ಶಾಲೆಯಲ್ಲಿ ಎಲ್.ಕೆ.ಜಿ ತರಗತಿ ಆರಂಭ

    ಮಕ್ಕಳ ಬುದ್ದಿ ಬೆಳವಣಿಗೆಗೆ ಪೂರ್ವತರಗತಿಗಳು ಸಹಕಾರಿ – ಡಾ.ಪ್ರಕಾಶ್.ಸಿ.ತೋಳಾರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಶತಮಾನ ಕಂಡ ಕಾರಂತರ ಮನೆತನದ ಶಾಲೆ ಮತ್ತೊಮ್ಮೆ ಮಕ್ಕಳಿಂದ ಸಂಭ್ರಮಿಸುವ ವಾತಾವರಣ ಸೃಷ್ಠಿಯಾಗಬೇಕು ಎಂದು ಕುಂದಾಪುರದ ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು.

    ಕೋಟದ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇಲ್ಲಿ ಎಲ್ ಕೆ.ಜಿ ತರಗತಿ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿ ಶಿಕ್ಷಣ ಪಡೆದವರು ವಿಶ್ವಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಅಂತಹ ಶಾಲೆ ಅಭಿವೃದ್ಧಿಗೊಳ್ಳಬೇಕು. ಕಾಲಕ್ಕೆ ಅನುಗುಣವಾಗಿ ಬದಲಾವಣೆ ಅತ್ಯಗತ್ಯವಾಗಿದೆ, ಶಿಕ್ಷಣದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಬುದ್ದಿ ಬೆಳವಣಿಗೆಗೆ ಎಲ್.ಕೆ.ಜಿ ಪೂರಕವಾಗಿದೆ. ಪೂರ್ವ ತರಗತಿಯ ಮೂಲಕ ಮಕ್ಕಳ ಶೈಕ್ಷಣಿಕ ಬದುಕಿಗೆ ಮುನ್ನುಡಿ ಬರೆಯಲಿ ಎಂದರಲ್ಲದೆ ಪೋಷಕರು ಮಕ್ಕಳಿಂದ ಮೊಬೈಲ್ ಸೇರಿದಂತೆ ಇನ್ನಿತ ವಿಷಯಗಳಲ್ಲಿ ಜಾಗೃತಿ ವಹಿಸುವ ಅಗತ್ಯತೆಯನ್ನು ಮನಗಾಣಿಸಿದರು.

    ತರಗತಿ ಕೊಠಡಿಯನ್ನು ಕೋಟ ಕಾಶಿಮಠದ ವೇ.ಮೂ.ದೇವದತ್ತ ಭಟ್ಟ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

    ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿ.ನರಸಿಂಹ ಐತಾಳ್,ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ,ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ್ ಉಪಸ್ಥಿತರಿದ್ದರು. ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ನಿರೂಪಿಸಿದರು. ಹಳೇ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಿ.ಸತೀಶ್ ಹೆಗ್ಡೆ ವಂದಿಸಿದರು.

  • ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

    ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜೂ. 26ರಂದು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಂಡಾರ್ ಕಾರ್ಸ್ ಕಾಲೇಜಿನ ಉಪನ್ಯಾಸಕರು ಹಾಗೂ ಮನಶಾಸ್ತ್ರ ಸಲಹೆಗಾರರಾದ ರಾಜೇಶ್ವರಿ .ಆರ್. ಶೆಟ್ಟಿ ಯವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಹಾಗೂ ಯುವ ಜನರು ನಮ್ಮ ದೇಶವನ್ನು ಮಾದಕ ದ್ರವ್ಯ ಸೇವನೆಯಿಂದ ಯಾವ ರೀತಿ ಮುಕ್ತಗೊಳಿಸಬಹುದು ಎನ್ನುವುದರ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿಯವರು ಅಧ್ಯಕ್ಷತೆ ಯನ್ನು ವಹಿಸಿದ್ದರು.

    ಸಂಖ್ಯಾಶಾಸ್ತ್ರ ಉಪನ್ಯಾಸಕಿ ವಿದ್ಯಾಶ್ರೀ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ವಂದಿಸಿದರು. ವ್ಯವಹಾರ ಅಧ್ಯಯನದ ಉಪನ್ಯಾಸಕಿ ನಿಧಿ ಕಾರ್ಯಕ್ರಮ ನಿರೂಪಿಸಿದರು.

  • ಆಲೂರು: ಸರಕಾರಿ ಬಸ್ಸು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

    ಆಲೂರು: ಸರಕಾರಿ ಬಸ್ಸು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ ಮಾರ್ಗವಾಗಿ ಮುಳ್ಳಿಕಟ್ಟೆ -ಕಟ್ಟಿನ ಮಕ್ಕಿ ಮೂಲಕ ಆಲೂರು ಅನಂತರ ಕೊಲ್ಲೂರು ಸಂಪರ್ಕಿಸಿ ಕೊಲ್ಲೂರಿನಿಂದ ಆಲೂರು ಮಾರ್ಗವಾಗಿ ಕುಂದಾಪುರ ಸಂಪರ್ಕಿಸುವ ಕೆಎಸ್ಸಾರ್ಟಿಸಿ ಬಸ್ಸಿಗಾಗಿ ಇಂದು ಆಲೂರು ಗ್ರಾಮ ಪಂಚಾಯತ್ ಎದುರುಗಡೆ ಸ್ಥಳೀಯರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ 2011 ರ ಜನಗಣತಿ ಪ್ರಕಾರ ಆಲೂರಿನಲ್ಲಿ 707 ಕುಟುಂಬಗಳಿದ್ದು 3584 ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ ಅಲ್ಲದೇ ಸಾಕ್ಷರತೆಯಲ್ಲಿ ಹಿಂದುಳಿದ ಗ್ರಾಮವಾಗಿದೆ. ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಕಾಲೇಜುಗಳಿಗೆ ಹೋಗಿ ಬರಲು 22 ಕಿಮೀ ದೂರದಲ್ಲಿರುವ ಕುಂದಾಪುರ ಅಥವಾ ಬೈಂದೂರಿಗೆ 35ಕಿಮೀ ಕ್ರಮಿಸಬೇಕಾಗಿದೆ ಆದ್ದರಿಂದ ಜಿಲ್ಲಾಡಳಿತವು ಕೊಲ್ಲೂರು-ಆಲೂರು-ಕುಂದಾಪುರಕ್ಕೆ ಸರಕಾರಿ ಬಸ್ಸುಗಳನ್ನು ಆರಂಭಿಸಿದರೆ ಗ್ರಾಮದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

    ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮಾತನಾಡಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಶಕ್ತಿ ಯೋಜನೆ ಆಲೂರಿನ ಮಹಿಳೆಯರಿಗೆ ಸರಕಾರಿ ಬಸ್ಸಿಲ್ಲದೇ ವಂಚನೆಯಾಗುತ್ತಿದ್ದು ಸೌಲಭ್ಯಗಳನ್ನು ಪಡೆಯಲು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.

    ಪ್ರತಿಭಟನೆಯ ಮನವಿಯನ್ನು ಕಟ್ಟಡ ಕಾರ್ಮಿಕರ ಆಲೂರು ಅಧ್ಯಕ್ಷ ರಾದ ರಘುರಾಮ ಆಚಾರ್ ಓದಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಉಪಾಧ್ಯಕ್ಷ ರವಿಶೆಟ್ಟಿ ಮನವಿ ಸ್ವೀಕರಿಸಿ ಸಾರಿಗೆ ಪ್ರಾಧಿಕಾರಕ್ಕೆ ನೀಡುವ ಭರವಸೆ ನೀಡಿದರು.

    ಪ್ರತಿಭಟನೆಯಲ್ಲಿ ನಾಗರತ್ನ ನಾಡ,ರವಿ ವಿಎಂ, ಚಂದ್ರಶೇಖರ ವಿ, ಸುಮಿತ್ರಾ ಆಲೂರು, ಆಶಾ ಆಲೂರು, ಗೌರಿ ಆಲೂರು, ಅಂಬಿಕಾ ಇದ್ದರು.

    ಕಟ್ಟಡ ಕಾರ್ಮಿಕರ ಆಲೂರು ಕಾರ್ಯದರ್ಶಿ ಗಣೇಶ್ ಆಚಾರ್ ವಂದಿಸಿದರು.

  • ಕೋಟ ಪಂಚವರ್ಣ ಸಂಸ್ಥೆಯ 169ನೇ ಪರಿಸರಸ್ನೇಹಿ ಅಭಿಯಾನ

    ಕೋಟ ಪಂಚವರ್ಣ ಸಂಸ್ಥೆಯ 169ನೇ ಪರಿಸರಸ್ನೇಹಿ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕಾರ್ಕಡ- ಪರಿಸರ ಕಾಳಜಿ ಸಂಘಟನೆಗಳು ಇನ್ನಷ್ಟು ಹುಟ್ಟಿಕೊಳ್ಳಲಿ- ಕೆ.ತಾರಾನಾಥ ಹೊಳ್ಳ

    ಕೋಟ: ಪರಿಸರ ಕಾಳಜಿಯ ಸಂಘಟನೆಗಳು ಗ್ರಾಮಗಳಲ್ಲಿ ಮತ್ತಷ್ಟು ಹುಟ್ಟಿಕೊಳ್ಳಬೇಕು ಆ ಮೂಲಕ ಪರಿಶುದ್ಧ ವಾತಾವರಣ ನಮ್ಮದಾಗಿಸುವಂತ್ತಾಗಲಿ ಎಂದು ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಭಿಪ್ರಾಯಪಟ್ಟರು.

    ಭಾನುವಾರ ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಠಾರದಲ್ಲಿ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ಗಿಳಿಯಾರು ಯುವಕ ಮಂಡಲ, ಸಮುದ್ಯತಾ ಗ್ರೂಪ್, ಯಕ್ಷಸೌರಭ ಕಲಾರಂಗ ಕೋಟ, ಹಂದಟ್ಟು ಮಹಿಳಾ ಬಳಗದ ಸಹಯೋಗದಲ್ಲಿ ಪರಿಸರ ಸ್ನೇಹಿ ಅಭಿಯಾನಕ್ಕೆ 169ನೇ ವಾರದ ಸಂಭ್ರಮದ ಹಿನ್ನಲೆಯಲ್ಲಿ ಗೆಳೆಯರ ಬಳಗ ಕಾರ್ಕಡ ಹಾಗೂ ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಜಯಂಟ್ಸ್ ಗೂಪ್ ಬ್ರಹ್ಮಾವರ , ಗೀತಾನಂದ ಫೌಂಡೇಶನ್ ಕೊಡಮಾಡಿದ ಗಿಡಗಳ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಮುಖಿ ಸಂಘಟನೆಗಳು ಸಾಕಷ್ಟು ಇದೆ ಆದರೆ ನಿರಂತರ ಕ್ರೀಯಾಶೀಲತೆ ಇರುವುದು ಕೆಲವಾರು ಅದರಲ್ಲಿ ಪಂಚವರ್ಣ ಸಂಸ್ಥೆ ಕಾರ್ಯವೈಕರಿ ನಿಜಕ್ಕೂ ಆಶಾದಾಯಕವಾಗಿದೆ. ಇಂಥಹ ಸಂಸ್ಥೆಗಳು ಪ್ರತಿ ಗ್ರಾಮದಲ್ಲಿ ಇದ್ದರೆ ಆ ಗ್ರಾಮಗಳು ಅಭಿವೃದ್ಧಿಯಲ್ಲಿ ಮುಂಚೂಣಿಗೆ ನಿಲ್ಲುವಯದರಲ್ಲಿ ಸಂಶಯವಿಲ್ಲ ಎಂದು ಪರಿಸರಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳು ಮತ್ತಷ್ಟು ಇಮ್ಮಡಿಗೊಳ್ಳಲಿ ಎಂದು ಶುಭಹಾರೈಸಿದರು.

    ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು ಅಧ್ಯಕ್ಷತೆಯನ್ನು ವಹಿಸಿದ್ದರು.

    ಈ ಸಂದರ್ಭದಲ್ಲಿ,ಮೊಗವೀರ ಯುವ ಸಂಘಟನೆ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್ ಸಂಜೀವ, ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಶೀನ ಕೆ,ಕೋಶಾಧಿಕಾರಿ ಶಶಿಧರ ಮಯ್ಯ,ಸ್ನೇಹ ಫ್ರೆಂಡ್ಸ್ ನ ಮಂಜುನಾಥ್, ಕಾರ್ಕಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಿಬ್ಬಂದಿಗಳಾದ ಮಾಲತಿ, ವನಜ ,ಸ್ಥಳೀಯರಾದ ಅರುಣ್ ಆಚಾರ್, ಚಂದ್ರ ಆಚಾರ್, ಸುರೇಶ್ ಪೂಜಾರಿ ಕಾರ್ಕಡ ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.
    ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಗಿರೀಜಾ ಪೂಜಾರಿ ಗಿಡ ವಿತರಿಸಿ ಪರಿಸರ ಜಾಗೃತಿ ನೀಡಿದರು.

    ಕಾರ್ಕಡ ರಸ್ತೆ,ಸುತ್ತಮುತ್ತಲಿನ ಹಲವು ಮನೆಗಳಿಗೆ ತೆರಳಿ ಗಿಡ ನೆಟ್ಟು ಸಂಭ್ರಮಿಸಲಾಯಿತು.