Author: Team Kundapura Mirror

  • ಕನಿಷ್ಠ ಸಂಖ್ಯೆಯೊಂದಿಗೆ ಸರಳವಾಗಿ ಭಕ್ತಿಪೂರ್ವಕ ಗಣೇಶ ಚತುರ್ಥಿ ಆಚರಣೆಗೆ  ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆ

    ಕನಿಷ್ಠ ಸಂಖ್ಯೆಯೊಂದಿಗೆ ಸರಳವಾಗಿ ಭಕ್ತಿಪೂರ್ವಕ ಗಣೇಶ ಚತುರ್ಥಿ ಆಚರಣೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ,
    : ಈ ಬಾರಿಯ ಕೋವಿಡ್ ಹಿನ್ನಲೆಯಲ್ಲಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ, ಜಿಲ್ಲೆಯಲ್ಲಿ ಸರಳವಾಗಿ, ಸಾರ್ವಜನಿಕರು ಕನಿಷ್ಠ ಸಂಖ್ಯೆಯೊಂದಿಗೆ ಭಕ್ತಿ ಪೂರ್ವಕವಾಗಿ ಗಣೇಶೋತ್ಸವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.

    ಅವರು ಇಂದು ವರ್ಚುವಲ್ ಸಭೆಯ ಮೂಲಕ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ಮಾರ್ಗಸೂಚಿ ಅನುಷ್ಠಾನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕೋವಿಡ್ 3ನೇ ಅಲೆಯ ನಿಯಂತ್ರಣ ಉದ್ದೇಶದಿಂದ ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಗಣೇಶ ಚತುರ್ಥಿ ಆಚರಣೆ ನಡೆಸಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಗೊಂದಲ ಇರಬಾರದು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸ್ಥಳೀಯಾಡಳಿಗಳು ಎಲ್ಲಾ ನಿಬಂದನೆಗಳ ಕುರಿತು ಆಯೋಜಕರಿಗೆ ಮನವರಿಕೆ ಮಾಡಬೇಕು ಎಂದರು.

    ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಅಥವಾ ಸರ್ಕಾರಿ /ಖಾಸಗಿ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮತ್ತು ಮನೆಯೊಳಗೆ 2 ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. 20 ಜನರಿಗಿಂತ ಹೆಚ್ಚು ಜನ ಸೇರಬಾರದು. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗೆ ಅವಕಾಶವಿಲ್ಲ. ಯಾವುದೇ ಸಾಂಸ್ಕೃತಿಕ ,ಸಂಗೀತ ನೃತ್ಯ ಮುಖ್ಯವಾಗಿ ಡಿಜೆ ಕಾರ್ಯಕ್ರಮ ಆಯೋಜನೆ ಇಲ್ಲ. ಪರಿಸರ ಹಾನಿಯಾಗದಂತೆ ಹಬ್ಬದ ಆಚರಣೆ ನಡೆಯಬೇಕು ಎಂದರು.

    ಆಯೋಜಕರು ಕೋವಿಡ್ ನೆಗೆಟಿವ್ ವರದಿ ಹಾಗೂ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಮಾರ್ಗಸೂಚಿಗಳ ಉಲ್ಲಂಘನೆ ನಡೆಯದಂತೆ ತಡೆಯಲು ಆಯೋಜಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಾರ್ವಜನಿಕರು 6 ಅಡಿ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಗುರುತುಗಳನ್ನು ಹಾಕಬೇಕು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕಾö್ಯನರ್ ಪರೀಕ್ಷೆಯನ್ನೂ ಸಹ ಮಾಡುವುದರೊಂದಿಗೆ, ಮತ್ತಿತರ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವುದು ಸೂಕ್ತ ಎಂದರು.

    ಗಣೇಶೋತ್ಸವ ಮಂಡಳಿಗಳ ಮೂಲಕ ಕೋವಿಡ್ ನಿಯಂತ್ರಣ ಕುರಿತಂತೆ ಸ್ಥಳದಲ್ಲಿ ಲಸಿಕೆ ನೀಡುವುದು ಮತ್ತು ಟೆಸ್ಟಿಂಗ್ ನಡೆಸುವುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
    ಜಿಲ್ಲೆಯಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಹೆಚ್ಚಿನ ಮಳೆಯಿಂದಾಗಿ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಲ್ಲಿ, ಕೂಡಲೇ ಸ್ಪಂದಿಸುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ಮಾತನಾಡಿ, ಮಾರ್ಗಸೂಚಿಗಳ ಕುರಿತಂತೆ ಎಲ್ಲಾ ಪಿಡಿಓ ಗಳಿಗೆ, ಸರ್ಕಾರದ ಮಾರ್ಗಸೂಚಿಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೆಕರ್, ಜಿಲ್ಲೆಯ ಎಲ್ಲಾ ತಹಸೀಲ್ದಾರುಗಳು, ಮತ್ತಿತರರು ಉಪಸ್ಥಿತರಿದ್ದರು.

  • ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಲ್. ಜೋಷ್ ನಿಧನ

    ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಲ್. ಜೋಷ್ ನಿಧನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಜಡ್ಕಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಲ್. ಜೋಷ್ (೫೪ವ) ಸೆ.೭ರಂದು ನಿಧನರಾದರು.

    ಕಾಂಗ್ರೆಸ್ ಪಕ್ಷದ ಮುಂದಾಳು ಆಗಿದ್ದ ಅವರು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುದೂರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.

    ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

  • ತಾ. ಪಂ. ಮಾಜಿ  ಸದಸ್ಯ ಅಂಪಾರು ಅಶೋಕ್ ಕುಮಾರ್ ಶೆಟ್ಟಿ ನಿಧನ

    ತಾ. ಪಂ. ಮಾಜಿ ಸದಸ್ಯ ಅಂಪಾರು ಅಶೋಕ್ ಕುಮಾರ್ ಶೆಟ್ಟಿ ನಿಧನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :
    ಕುಂದಾಪುರದ ಖ್ಯಾತ ಪಿಡ್ಲ್ಯೂಡಿ ಕಂಟ್ರಾಕ್ರ್ಟರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಧುರೀಣ ಅಂಪಾರು ಅಶೋಕ್ ಕುಮಾರ್ ಶೆಟ್ಟಿ(51) ಅವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

  • ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ

    ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ

    ಕೋಟ: ಇತ್ತೀಚೆಗೆ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ ನೀಡಿ ದೇವಳ ಪುರಾಣ ವಾಸ್ತು ಶಿಲ್ಪಾ ಹಾಗೂ ವಿನ್ಯಾಸ ದೇವಳದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ದೇವಳದ ವತಿಯಿಂದ ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗಣೇಶ ಭಟ್, ಅರ್ಚಕರಾದ ಶಂಕರನಾರಾಯಾ ಅಡಿಗ, ಪ್ರಸನ್ನ ಭಟ್, ಶಿವಪ್ರಸಾದ್ ಭಟ್ ಇತರರು ಉಪಸ್ಥಿತರಿದ್ದರು.

  • ಗೋವುಗಳ ಶ್ರೇಯಾಭಿವೃದ್ಧಿಗೆ ಯೋಜನೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಗೋವುಗಳ ಶ್ರೇಯಾಭಿವೃದ್ಧಿಗೆ ಯೋಜನೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…
    ಕೋಟ:ಕೇಂದ್ರ ಹಾಗೂ ರಾಜ್ಯ ಸರಕಾರ ಗೋವುಗಳ ಶ್ರೇಯಾಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಬಹುಮುಖ್ಯವಾಗಿ ಗೋ ಶಾಲೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ಕಾರ್ಯೊನ್ಮುಖವಾಗಿದ್ದು ಅವುಗಳ ಆರೈಕೆಗೆ ಭಾಗವಾಗಿ ಲಸಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ


    ಕೋಟದ ಎ.ಪಿಎಮ್‍ಸಿ ಸಂಕೀರ್ಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಪಶುಪಾಲನಾ ಇಲಾಖೆ ಬ್ರಹ್ಮಾವರ ತಾಲೂಕು,ಕೋಟ ಗ್ರಾಮಪಂಚಾಯತ್ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘ ಕೋಟ ಮತ್ತು ಮಣೂರು ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಎನ್,ಎ.ಡಿ.ಸಿ.ಪಿ ಕಾರ್ಯಕ್ರಮದಡಿ 4ರಿಂದ 8ತಿಂಗಳ ಪ್ರಾಯದ ಹಸುಗಳಿಗೆ ಉಚಿತ ಕಂದುರೋಗ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾಭಾವಿಕವಾಗಿ ಜಾನುವಾರುಗಳಿಗೆ ಕಾಲಕ್ಕೆ ತಕ್ಕಂತೆ ಲಸಿಕೆಗಳನ್ನು ಹಾಕಿಸುವುದರ ಮೂಲಕ ರೋಗ ಮುಕ್ತ ಜಾನುವಾರುವಾಗಿಸಲು ಸಾಧ್ಯವಿದೆ. ಇದರಿಂದ ನಮ್ಮ ಇಲ್ಲಿನ ಹಸುಗಳ ವಿಶೇಷವಾದ ಬೇಡಿಕೆಗಳು ವ್ಯಕ್ತವಾಗುತ್ತದೆ.ಅದರಿಂದ ತಯಾರಾಗುವ ಉತ್ಪನ್ನಗಳು ವಿದೇಶದಲ್ಲಿ ಮನ್ನಣೆ ಸಿಗುತ್ತದೆ.ಇಲ್ಲವಾದಲ್ಲಿ ಬೇಡಿಕೆಗಳು ಕುಸಿದು ರಫ್ತು ಪ್ರಮಾಣದಲ್ಲಿ ಪರಿಣಾಮಗಳು ಬೀಳುತ್ತದೆ ಆ ನಿಟ್ಟಿನಲ್ಲಿ ನಮ್ಮ ಪ್ರಧಾನಿಗಳು ಕರೆ ಅನುಸಾರ ದೇಶದಲ್ಲಿ ಸೊಂಕು ಮುಕ್ತ ಜಾನುವಾರುವಾಗಿಸಲು ಶ್ರಮಿಸಬೇಕಾಗಿದೆ,
    ಗೋಶಾಲೆ ನಿರ್ಮಾಣ ,ಗೋಮಾಳದ ಬಗ್ಗೆ ಉಲ್ಲೇಖ
    ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡರೆ ಸಹಜವಾಗಿ ಗೋವುಗಳಿಗೆ ಬೇಡಿಕೆ ಜಾಸ್ತಿಯಾಗುತ್ತದೆ.ಆ ದಿಸೆಯಲ್ಲಿ ಪ್ರತಿ ಜಿಲ್ಲೆಯಲೂ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋ ಶಾಲೆಗಳನ್ನು ನಿರ್ಮಾಣ ಮಾಡಲು ಸಂಕಲ್ಪಿಸಿದೆ.ರಾಜ್ಯ ಎಲ್ಲಾ ಭಾಗಗಳಲ್ಲಿರುವ ಗೋಮಾಳಗಳ ಸಮೀಕ್ಷೆ ಮಾಡಿ ಸರ್ವೇ ಮಾಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.ಈ ಸಂಬಂಧ ಕಂದಾಯ ಇಲಾಖೆ,ಪಶುಸಂಗೋಪನಾ ಇಲಾಖೆ ಹಾಗೂ ನಮ್ಮ ಧಾರ್ಮಿಕದತ್ತಿ ಇಲಾಖೆ ಜೊತೆಗೂಡಿ ಗೋಶಾಲೆ ನಿರ್ಮಾಣ ಮಾಡಲು ಯೋಚನೆ ಯೋಜನೆಗಳನ್ನು ರೂಪಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಸರಕಾರ ಹೈನುಗಾರರ ಪರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ರೋಗಮುಕ್ತ ಹೈನುಗಾರಿಕೆಗೆ ಸಂಕಲ್ಪಿಸಿದೆ ಅದರಂತೆ ಸ್ಥಳೀಯ ಪಶುಆಸ್ಪತ್ರೆಗಳ,ಸಹಕಾರಿ ಸಂಘಗಳಮೂಲಕ ಅನುಷ್ಠಾನಕ್ಕೆ ಕರೆ ನೀಡಲಾಗಿದೆ.ಎಂದು ಅಭಿಪ್ರಾಯಪಟ್ಟರು.

    ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ವಹಿಸಿದರು.

    ಅತಿಥಿಗಳಾಗಿ ಕೋಟ ಗ್ರಾ.ಪಂ ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ವನೀತಾ ಶ್ರೀಧರ ಆಚಾರ್ಯ, ಚಂದ್ರಶೇಖರ್ ಆಚಾರ್ಯ,ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಮಣೂರು ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ,ಕೋಟತಟ್ಟು ಪಡುಕರೆ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೆ.ಶಿವಮೂರ್ತಿ ಉಪಾಧ್ಯ,ಪಶುಪಾಲನಾ ಇಲಾಖೆಯ ತಾಂತ್ರಿಕ ಸಂಯೋಜಕ ಡಾ.ಸಂದೀಪ್ ಕುಮಾರ್,ಡಾ.ಪ್ರದೀಪ್ ಕೊಂಡೋಜಿ ಸಾಯ್ಬ್ರಿಕಟ್ಟೆ, ಕಳತ್ತೂರು ಸಂತೆಕಟ್ಟೆ ಡಾ.ಮಂಜುನಾಥ ಅಡಿಗ,ಸಾಸ್ತಾನದ ಡಾ. ವಿಜಯ ಕುಮಾರ್,ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ರಾಜೇಶ್,ಉಪಾಧ್ಯಕ್ಷ ನರಸಿಂಹ ಪೂಜಾರಿ,ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ದ್ಯಾವಸ,ಜಿ ಕೃಷ್ಣ ದೇವಾಡಗ,ಶ್ರೀಕಾಂತ್ ಮಯ್ಯ, ಮಣೂರು ಸಂಘದ ಹರ್ಷ ಪೂಜಾರಿ, ಮತ್ತು ಪಶು ಆಸ್ಪತ್ರೆ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಬ್ರಹ್ಮಾವರದ ಮುಖ್ಯ ಪಶುಪಾಲನಾ ಇಲಾಖಾ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ಸತೀಶ್ ಕುಂದರ್ ವಂದಿಸಿದರು.

  • ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ನೀಡುವುದು ಬಿಜೆಪಿಯ ಹಿರಿಮೆ- ಸಚಿವ ಸುನಿಲ್ ಕುಮಾರ್

    ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ನೀಡುವುದು ಬಿಜೆಪಿಯ ಹಿರಿಮೆ- ಸಚಿವ ಸುನಿಲ್ ಕುಮಾರ್

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಪೋಸ್ಟರ್ ಹಚ್ಚುವ, ಬ್ಯಾನರ್ ಕಟ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೂರು ಬಾರಿ ಶಾಸಕನಾಗಿಯೂ ಹಾಗೂ ಇದೀಗ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷದಲ್ಲಿ ಮಾತ್ರವೇ ಸಾಧ್ಯ. ಮುಖ್ಯಮಂತ್ರಿಗಳು ಎರಡು ದೊಡ್ಡ ಇಲಾಖೆ ನೀಡಿದ್ದು ಈ‌ ಮೂಲಕ ರಾಜ್ಯ, ಜಿಲ್ಲೆಗೆ ಒಳಿತು ಮಾಡುವ ಜೊತೆಗೆ ಇಲಾಖೆಯಲ್ಲಿ ಜನಪರವಾದ ಹೊಸತನದ ಆಡಳಿತ ನೀಡುವ ಗುರಿ ಇದೆ ಒಂದು ಎಂದು ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.

    ಅವರು ಸೋಮವಾರದಂದು ಬೈಂದೂರು ಬಿಜೆಪಿ ಮಂಡಲ ಕಛೇರಿ ಭೇಟಿ ಮಾಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.


    ಬೈಂದೂರು ಹಾಗೂ ಕಾರ್ಕಳ ಭಾಗದ ಜನರ ಭಾವನೆ ಒಂದೇ ಆಗಿದೆ. ಜನಸಾಮನ್ಯರ ನಾಡಿಮಿಡಿತ ಅರಿತು ಕೆಲಸ ಮಾಡಲಾಗುತ್ತದೆ. ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಮೂರು ಅವಧಿಯಿಂದಲೂ ನಡೆಯುತ್ತಿದ್ದು ಬೈಂದೂರು ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಬಹುತೇಕ ಅಭಿವೃದ್ದಿ ಕಾರ್ಯ ನಡೆಯುತ್ತಿರುವುದು ಶಾಸಕರ ತುಡಿತ ತೋರಿಸುತ್ತದೆ. ಜಿಲ್ಲೆಯಲ್ಲಿ ಮೂವರು ಸಚಿವರಿದ್ದು ಕಾಲಮಿತಿಯೊಳಗೆ ಜಿಲ್ಲೆಯ ಶಾಶ್ವತ ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.

    ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯುವಲ್ಲಿ ಸ್ಥಳೀಯ ಸಂಸ್ಥೆಗಳ ನಿರಪೇಕ್ಷಣಾ ಪತ್ರ ಬೇಕಿತ್ತು.ಆದರೆ ಇನ್ನು ಮುಂದೆ ವಿದ್ಯುತ್ ಪಡೆಯಲು ಯಾವುದೇ ಸ್ಥಳೀಯ ಸಂಸ್ಥೆಯ ನಿರಪೇಕ್ಷಣಾ ಪತ್ರ ಬೇಡ. ಈ ಬಗ್ಗೆ ವಾರದೊಳಗೆ ಹೊಸ ಸುತ್ತೋಲೆ ಸದ್ಯದಲ್ಲೆ ಜಾರಿಯಾಗಲಿದೆ.ಇದರಿಂದ ಸುಮಾರು 2.5 ಲಕ್ಷ ಕುಟುಂಬಗಳಿಗೆ ವಿದ್ಯುತ್ ಪಡೆಯಲು ನೆರವಾಗುತ್ತದೆ. ಲೋ‌ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಕೊಲ್ಲೂರು ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಇಲಾಖೆ ಸಿದ್ಧವಿದ್ದು ಅರಣ್ಯ ಇಲಾಖೆ ಸಮಸ್ಯೆ ಹಿನ್ನೆಡೆ ನೀಡುತ್ತಿದ್ದು ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ಕರೆದು ಕ್ರಮಕೈಗೊಳ್ಳಲಾಗುತ್ತದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಕಾಂಗ್ರೆಸ್ ಸರಕಾರದ ಬಳುವಳಿಯಾಗಿದ್ದು ಲಕ್ಷಾಂತರ ಮನೆಗಳಿಗೆ ಸಮಸ್ಯೆಯಿದೆ. ರಾಜ್ಯದಲ್ಲಿ 1 ತಿಂಗಳಿನೊಳಗೆ ಈ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.

    ಸುನೀಲ್ ಕುಮಾರ ಪವರ್ ಮಂತ್ರಿ..
    ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಕ್ಷೇತ್ರವು ಕಳೆದ 70 ವರ್ಷದಿಂದ ಕಾಣದ ಅಭಿವೃದ್ದಿ ಕಾರ್ಯ ಈ ಅವಧಿಯಲ್ಲಿ ನಡೆದಿದೆ. ಫವರ್ ಮಂತ್ರಿಯಾಗಿರುವ ಸುನೀಲ್ ಕುಮಾರ್ ಕ್ರಿಯಾಶೀಲ‌ವ್ಯಕ್ತಿ. ಅವರು‌ ಎಲ್ಲರ ಮನೆ ಬೆಳಗುವ ಫವರ್ ಮಿನಿಸ್ಟರ್. ಸುನೀಲ ಕುಮಾರ್ ಸಚಿವರಾಗಿರುವುದು ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಸಹಕಾರಿಯಾಗಿದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಪಟ್ಟಣ ಪಂಚಾಯತ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಸಚಿವರನ್ನು ಬಿಜೆಪಿ ಪಕ್ಷದ ವತಿಯಿಂದ ಸಮ್ಮಾನಿಸಲಾಯಿತು. ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ ಜಡ್ಡು ವಂದಿಸಿದರು.

  • ಬೀಜಾಡಿ- ಮಹಿಳಾ ವಿಚಾರಗೋಷ್ಠಿ ಹಾಗೂ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

    ಬೀಜಾಡಿ- ಮಹಿಳಾ ವಿಚಾರಗೋಷ್ಠಿ ಹಾಗೂ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕು ಕುಂಭಾಶಿ ಒಕ್ಕೂಟ ನೇತ್ರತ್ವದಲ್ಲಿ ನಿಸರ್ಗ ಜ್ಞಾನ ವಿಕಾಸ ಕೇಂದ್ರ ಬೀಜಾಡಿ ಇಲ್ಲಿ ಮಹಿಳಾ ವಿಚಾರಗೋಷ್ಠಿ ಹಾಗೂ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಸನ್ನ ದೀಪಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಯಾವುದೇ ಕಾರ್ಯಕ್ರಮವನ್ನು ಸಾಂಗಿಕವಾಗಿ ಮಾಡಿದಾಗ ಪೂರ್ಣ ಪ್ರತಿಫಲ ದೊರೆಯುತ್ತದೆ ಅಲ್ಲದೆ ಕುಟುಂಬದ ಅಭಿವೃದ್ಧಿಯ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.


    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಧ.ಗ್ರಾ.ಯೋಜನೆ ಕುಂಭಾಶಿ ಒಕ್ಕೂಟದ ಸದಸ್ಯೆ ಗಂಗೆ ಶಾನಭಾಗ್ ಕುಟುಂಬದಲ್ಲಿ ಸಂಸ್ಕೃತಿ ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸಿ-ಬೆಳೆಸುವಲ್ಲಿ ಮಹಿಳೆಯರ ಪಾತ್ರ ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ನಮ್ಮ ಆಚಾರ-ವಿಚಾರಗಳನ್ನು ತಿಳಿಸಿ ಅವರಲ್ಲಿ ಉತ್ತಮ ಸಂಸ್ಕಾರಗಳು ಬೆಳೆಯುವಂತೆ ಮಾಡಬೇಕು. ಮಕ್ಕಳಿಗೆ ಕಷ್ಟ-ಸುಖಗಳ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಜಾಡಿ ಒಕ್ಕೂಟದ ಅಧ್ಯಕ್ಷೆ ಶಾರದಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ ಬಿ , ವಲಯದ ಮೇಲ್ವಿಚಾರಕರಾದ ನಾಗರಾಜ್ ,ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸುಶೀಲಾ ಕೆ.ಎಸ್ ಸ್ವಾಗತಿಸಿದರು. ಜಯಂತಿ ವಂದಿಸಿದರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಗುಣ ಎನ್. ಹವಲ್ದಾರ್ ನಿರೂಪಿಸಿದರು.

  • ಎರಡು ವಾರದಲ್ಲಿ ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ:  ಜಿಲ್ಲಾಧಿಕಾರಿ

    ಎರಡು ವಾರದಲ್ಲಿ ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಮಾಡುವ ಗುರಿ: ಜಿಲ್ಲಾಧಿಕಾರಿ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ,
    : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ಎರಡು ವಾರಗಳ ಒಳಗೆ ಶೇ.1 ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ, ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ, ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ರಚಿಸಲಾಗಿರುವ ವಿವಿಧ ಕಾರ್ಯಪಡೆ ತಂಡಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಸೂಚಿಸಿದರು.

    ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕೋವಿಡ್ ನಿಯಂತ್ರಣಾ ಕ್ರಮಗಳ ಅನುಷ್ಠಾನಕ್ಕೆ ರಚಿಸಿರುವ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕೋವಿಡ್‌ನಿಂದ ಅಪಾಯವಿಲ್ಲ, ಇದರ ಹರಡುವಿಕೆ ಕಡಿಮೆಯಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಕಂಡು ಬರುತ್ತಿದೆ, ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದಿರುವುದು ಹಾಗೂ ಮಾಸ್ಕ್ ಧರಿಸದೇ ಇರುವುದು ಎಲ್ಲೆಡೆ ಕಂಡುಬರುತ್ತಿದೆ, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಪಾಲನೆಯಾಗದ ಸ್ಥಳಗಳಲ್ಲಿ, ಸಂಬಂಧಪಟ್ಟವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಂಡವನ್ನು ವಿಧಿಸಿ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಗರಸಭೆ, ಪುರಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸ್ಕ್ ಜಾಗೃತಿ ಮೂಡಿಸಲು ಅಭಿಯಾನ ಆಯೋಜಿಸಿ, ದಂಡ ವಿಧಿಸಿ, ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಪ್ರಕರಣಗಳು ಬರುವವರೆಗೂ ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಉತ್ತಮವಾಗಿದ್ದು, ಈಗಾಗಲೇ ಒಟ್ಟು 79% ಲಸಿಕೆ ನೀಡಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ನೀಡಿ ಜಿಲ್ಲೆಯಲ್ಲಿ 100% ಗುರಿ ಸಾಧಿಸಬೇಕು, ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು, ಲಸಿಕಾ ಮಹಾಮೇಳ ಕಾರ್ಯಕ್ರಮದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಗಳಲ್ಲಿ ವಾರ್ಡ್ ಟಾಸ್ಕ್ ಫೋರ್ಸ್ ಮೂಲಕ ಸಾರ್ವಜನಿಕರಿಗೆ ಲಸಿಕೆ ವಿತರಿಸಿ, 100ಕ್ಕಿಂತ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಅವರು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಶಿಬಿರ ಆಯೋಜಿಸಿ ಲಸಿಕೆ ನೀಡಿ, ಮೀನುಗಾರರಿಗೆ ವಿಶೇಷ ಅಭಿಯಾನದ ಮೂಲಕ ಲಸಿಕೆ ನೀಡಬೇಕು ಎಂದರು.

    ಕೋವಿಡ್ ನಿಯಂತ್ರಣಾ ಉದ್ದೇಶದಿಂದ ವಿವಿಧ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿರುವ ಅಂಬುಲೆನ್ಸ್ ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳಿಗೆ ಶೀಘ್ರದಲ್ಲಿ ಅನುಮತಿಯನ್ನು ನೀಡಿ, ವಾಹನಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಪರಿಶೀಲಿಸಿ. ಕೇರಳದಿಂದ ಬರುವವರನ್ನು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು.

    ಕೊಲ್ಲೂರು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳದಿಂದ ಪ್ರವಾಸಿಗರು ಆಗಮಿಸಿಲಿದ್ದು, ಅಲ್ಲಿ ಪ್ರತ್ಯೇಕ ಕೋವಿಡ್ ತಪಾಸಣಾ ಕೇಂದ್ರ ಆರಂಭಿಸಿ ಪರಿಶೀಲನೆ ನಡೆಸಬೇಕು ಮತ್ತು ಅಗತ್ಯಬಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆಯಿರಿ. ಕೊಲ್ಲೂರು ಪ್ರವೇಶದ್ವಾರದಲ್ಲಿ ಮತ್ತು ದೇವಸ್ಥಾನದ ವೆಬ್‌ಸೈಟ್‌ನಲ್ಲಿ ಕನ್ನಡ, ಮಲೆಯಾಳಂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೇರಳದಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಮತ್ತು ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿರುವ ಬಗ್ಗೆ ಮಾಹಿತಿಯನ್ನು ಅಳವಡಿಸಿ ಎಂದರು.

    ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9000 ಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಯಿಸುವ ಪ್ರಮಾಣವನ್ನು ಹೆಚ್ಚು ಮಾಡಬೇಕು. ಈ ಕಾರ್ಯಕ್ಕೆ ಅಗತ್ಯವಿದ್ದಲ್ಲಿ ಪೊಲೀಸ್ ಸಹಕಾರ ಪಡೆಯುವಂತೆ ತಿಳಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಕಂಟೋನ್ಮೆಂಟ್ ಜೋನ್‌ಗಳನ್ನು ರಚಿಸುವಂತೆ ಹೇಳಿದರು.
    ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳ ಅನುಷ್ಠಾನ ಕುರಿತು ರಚಿಸಿರುವ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರು ಉಪಸ್ಥಿತರಿದ್ದರು.

  • ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಭಕ್ತರಿಗೆ ಆಧಾರ್ ಕಡ್ಡಾಯ

    ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಭಕ್ತರಿಗೆ ಆಧಾರ್ ಕಡ್ಡಾಯ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಆಧಾರ್ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೋವಿಡ್-19 ಹಿನ್ನೆಲೆ ಪ್ರಸ್ತುತ ವಿದ್ಯಾಮಾನಗಳನ್ನು ಪರಿಗಣಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಸೆಪ್ಟಂಬರ್ 4ರಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ದೇವಾಲಯ ಪ್ರವೇಶದ್ವಾರದಲ್ಲಿ ದೇವಾಲಯ ಪ್ರವೇಶಿಸುವ ಎಲ್ಲಾ ಭಕ್ತಾದಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಹೆಸರು,ಊರು ಹಾಗೂ ಸಂಪರ್ಕ ಸಂಖ್ಯೆಯನ್ನು ದಾಖಲಿಸಲಾಗುತ್ತದೆ.

    ಕೇರಳ ರಾಜ್ಯದಿಂದ ಆಗಮಿಸುವ ಭಕ್ತರು ದೇವಸ್ಥಾನ ಪ್ರವೇಶಿಸುವ 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್- 19 ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.

    ಅಲ್ಲದೆ ಮೂಕಾಂಬಿಕಾ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  • ಅಂಪಾರಿನಲ್ಲಿ ವಾರಾಹಿ ಬಲದಂಡೆ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ

    ಅಂಪಾರಿನಲ್ಲಿ ವಾರಾಹಿ ಬಲದಂಡೆ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಸಭೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ವಾರಾಹಿ ನೀರಾವರಿ ಯೋಜನೆ ಆರಂಭವಾಗಿ 41 ವರ್ಷ ಕಳೆದರೂ ಕೂಡಾ ಅದು ಚುರುಕು ಪಡದುಕೊಂಡಿದ್ದು 2000ನೇ ಇಸವಿಯ ನಂತರ. ಕೇವಲ ರೈತರಿಗೆ ನೀರಿನ ಉದ್ದೇಶದಿಂದ ಯೋಜನೆ ಆರಂಭಗೊಂಡರೂ ಕೂಡಾ ವಿದ್ಯುತ್ ಉತ್ಪಾದನೆಗಳಿಗೆ ಬಳಕೆಯಾಗಿದ್ದು ವಿಪರ್ಯಾಸ. 10 ದಿನಗಳ ಕಾಲದ ನೀರಿನ ಶೇಖರಣೆ ರೈತರ ಅನುಕೂಲಕ್ಕಾಗಿ ಇದ್ದ ಚಿಂತನೆಯಾಗಿತ್ತು. ರೈತ ಸಂಘದ ನಿರಂತರ ಹೋರಾಟದಿಂದ ಎಡದಂಡೆ ಕಾಲುವೆಯಲ್ಲಿ ನೀರು ಹರಿಯುವಿಕೆ ಆರಂಭವಾಗಿದೆ. ಇನ್ನೂ ಮೂಲ ಯೋಜನೆಯಲ್ಲಿರುವ ಬಲ ದಂಡೆ ಕಾಮಗಾರಿ. ಇದು ಆರಂಭದಲ್ಲಿಯೇ ಆಗಬೇಕಿತ್ತು. ಆದರೆ ಇವತ್ತು ಇದಕ್ಕಿಂತ ಮುಂದೆ ಇರುವ ಸೌಕೂರು ಏತನೀರಾವರಿ ಕಾಮಗಾರಿ ಆರಂಭಗೊಂಡಿದೆ. ಬಲದಂಡೆ ಯೋಜನೆ ಆರಂಭವಾಗಿಲ್ಲ. ಬಲದಂಡೆ ಕಾಮಗಾರಿ ಕೂಡಲೇ ಆರಂಭವಾಗಬೇಕಾಗಿದ್ದು ಮೂಲ ಯೋಜನೆಯಲ್ಲಿರುವ ಪ್ರತೀ ಫಲಾನುಭವಿಗಳಿಗೂ ನೀರು ಸಿಗಬೇಕು. ರೈತರಿಗೆ ಭವಿಷ್ಯದಲ್ಲಿ ವಾರಾಹಿ ನಾಲೆಯಿಂದ ಬರುವ ನೀರು ಮಾತ್ರ ಆಸರೆಯಾಗಲಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸೆ.3ರಂದು ಅಂಪಾರು ಶ್ರೀ ರಾಮ ಸಭಾಭವನ, ಕಂಚಾರು ಇಲ್ಲಿ ನಡೆದ ವಾರಾಹಿ ಬಲದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


    ಮುಂದಿನ ವರ್ಷಗಳಲ್ಲಿ ರೈತರ ನೀರಾವರಿ ಪಂಪ್ ಸೆಟ್‍ಗಳಿಗೂ ಬಿಲ್ ಪಾವತಿಸುವ ಸಂದರ್ಭ ಬರುತ್ತದೆ. ಆಗ ವಿದ್ಯುತ್ ಬಿಲ್ ಪಾವತಿಸಿ, ಕೃಷಿ ಮಾಡಿದರೆ ನಿರೀಕ್ಷಿತ ಲಾಭ ಅಸಾಧ್ಯ. ಅಂತಹ ಸಂದರ್ಭದಲ್ಲಿ ನಾಲೆಯ ಮೂಲಕ ಹರಿದು ಬರುವ ವಾರಾಹಿ ರೈತರನ್ನು ರಕ್ಷಿಸಲಿದೆ. ಹಾಗಾಗಿ ಮೂಲ ಯೋಜನೆಯಲ್ಲಿ ಯಾವ ಸರ್ವೇ ನಂಬರ್‍ಗಳ ಕೃಷಿಭೂಮಿಗೆ ನೀರು ಬರುತ್ತದೋ ಅದನ್ನು ರೈತರು ಪಡೆದುಕೊಳ್ಳುವಲ್ಲಿ ನಿರ್ಲಕ್ಷ್ಯ ತಾಳಬಾರದು ಎಂದರು.

    ಮುಂದಿನ ಜನಾಂಗ ನಮ್ಮನ್ನು ಜರಿಯಬಾರದು. ಚುನಾಯಿತ ಪ್ರತಿನಿಧಿಗಳಾದ ನಾವು ನಮ್ಮ ಜವಬ್ದಾರಿ, ಕರ್ತವ್ಯಗಳನ್ನು ಮರೆಯಬಾರದು. ಇಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಎಲ್ಲರೂ ಬಲದಂಡೆ ಯೋಜನೆ ಕಾಮಗಾರಿ ಆರಂಭಕ್ಕೆ ಪ್ರಯತ್ನಿಸಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.

    ವಾರಾಹಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಬಲದಂಡೆ ಯೋಜನೆ 1900 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ. ಇದರ ಮೂಲ ನಾಲಾ ಪಥದಲ್ಲಿ ರಕ್ಷಿತಾರಣ್ಯ, ಡೀಮ್ಡ್ ಫಾರೆಸ್ಟ್, ಬೆಟ್ಟಗುಡ್ಡಗಳು ಇರುವುದರಿಂದ ಮುಖ್ಯನಾಲೆಯ ವಿನ್ಯಾಸದಲ್ಲಿ ಒಂದಿಷ್ಟು ಬಲದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಮೂಲ ಅಚ್ಚುಕಟ್ಟು ಪ್ರದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪರಿಷ್ಕøತ ನಾಲಾ ಪಥದಲ್ಲಿ ನೀರಿನ ಸೇತುವೆಗಳ ವಿನ್ಯಾಸ ಅಳವಡಿಸಲಾಗಿದೆ. ಶಂಕರನಾರಯಣ-ಹಳ್ನಾಡು 9.5 ಕಿ.ಮೀ ಮುಖ್ಯ ಕಾಲುವೆಯಾಗಿದ್ದು ಅಂಪಾರು ಸರ್ಕಲ್ ನಿಂದ ಉಪ ಕಾಲುವೆಗಳ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎಂದರು.

    ರೈತ ಸಂಘದ ಕಾರ್ಯದರ್ಶಿ ಸಂತೋಷಕುಮಾರ ಶೆಟ್ಟಿ ಬಲಾಡಿ ಮಾತನಾಡಿ, ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ನೀರಾವರಿ ಯೋಜನೆಗೆ ಸಂಬಂಧಪಟ್ಟಂತೆ ಇದು 5ನೇ ಸಭೆಯಾಗಿದೆ. ರೈತರಿಗೆ ಯೋಜನೆಯ ಬಗ್ಗೆ ಅರಿವು ಮೂಡಿದೆ. ರೈತರ ಸಂದೇಹಗಳು, ಆತಂಕಗಳ ಪರಹಾರಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

    ದಿನಕರ ಶೆಟ್ಟಿ ಮುಂಬಾರು ಮಾತನಾಡಿ ವಾರಾಹಿ ಬಲದಂಡೆ ಯೋಜನೆಗೆ ಹಿಂದೊಮ್ಮೆ ಸರ್ವೇ ಮಾಡಿ ಗುರುತು ಕಲ್ಲುಗಳನ್ನು ಹಾಕಿದ್ದರು. ಈಗ ವಿನ್ಯಾಸ ಬದಲಾವಣೆ ಎನ್ನಲಾಗುತ್ತಿದೆ. ಈಗ ಯಾವ ಮಾರ್ಗದಲ್ಲಿ ಹಾದು ಹೋಗುತ್ತದೆ ಎನ್ನುವ ಗೊಂದಲ ರೈತರಲ್ಲಿದೆ. ಬಲದಂಡೆ ಯೋಜನೆ ಕೂಡಲೇ ಅನುಷ್ಠಾನವಾಗದೇ ಇದ್ದರೆ ಮುಂದೆ ಉಚಿತ ವಿದ್ಯುತ್ ಸಿಗದೆ ರೈತರು ನೀರಿನ ಅಭಾವಕ್ಕೆ ಗುರಿಯಾಗುವ ಸಾಧ್ಯತೆ. ಹಾಗಾಗಿ ಈ ಯೋಜನೆ ಕೂಡಲೇ ಕಾರ್ಯಗತಗೊಳ್ಳಬೇಕು ಎಂದರು.

    ಕಿರಣ್ ಹೆಗ್ಡೆ ಅಂಪಾರು ಮಾತನಾಡಿ ಯೋಜನೆಯ ಮುಖ್ಯ ಕಾಲುವೆ ಪಥ ಬದಲಾವಣೆಯಿಂದ ಮೂಲ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗಬಾರದು. ಮುಂದೆ ಅದು ಗೊಂದಲಕ್ಕೆ ಕಾರಣವಾಗಬಾರದು. ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.

    ಸಭೆಯಲ್ಲಿ ವಾರಾಹಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್ ಪ್ರಸನ್ನ, ಕಿರಣ್ ಮಾಹಿತಿ ಒದಗಿಸಿದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸದಾಶಿವ ಶೆಟ್ಟಿ ಶಂಕರನಾರಾಯಣ, ಶರತಚಂದ್ರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಅಶೋಕ ಕುಮಾರ್ ಶೆಟ್ಟಿ ಚೋರಾಡಿ, ರಮೇಶ ಗಾಣಿಗ ಕೊಲ್ಲೂರು, ರೋಹಿತ್ ಶೆಟ್ಟಿ, ವಿಜಯ ಪುತ್ರನ್, ಗಣಪಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.