Category: ಸುದ್ದಿ

  • ಕುಂದಾಪುರ :ಶಿಕ್ಷಣದ ಜೊತೆಗೆ ಸಂಸ್ಕೃತಿಗಳ ಅರಿವು ಮೂಡಿದಾಗ ಸಮಾಜ ಸದೃಢ – ಮನು ಹಂದಾಡಿ

    ಕುಂದಾಪುರ :ಶಿಕ್ಷಣದ ಜೊತೆಗೆ ಸಂಸ್ಕೃತಿಗಳ ಅರಿವು ಮೂಡಿದಾಗ ಸಮಾಜ ಸದೃಢ – ಮನು ಹಂದಾಡಿ

    ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶಾಲಾಶಿಕ್ಷಣದ ಜೊತೆಗೆ ಸಮಾಜದಲ್ಲಿರುವ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಅರಿವು ಮೂಡಿಸಿಕೊಂಡಾಗ ಮನುಷ್ಯ ಪತಿಪೂರ್ಣವಾಗುತ್ತಾನೆ. ಅಂತಹಾ ಕೆಲಸಗಳನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಂದಾಪ್ರ ಕನ್ನಡ ಖ್ಯಾತಿಯ ಮನು ಹಂದಾಡಿ ಹೇಳಿದರು. ಕುಂದಾಪುರದ ಸುಣ್ಣಾರಿಯಲ್ಲಿರುವ ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ನ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಪದವಿ ಪೂರ್ವ ಹಂತದ ವಯಸ್ಸು ಕನಸಿನ ಗೂಡು ಕಟ್ಟುವ ಸಮಯ. ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಉತ್ತಮ ಪರಿಸರ, ವ್ಯಕ್ತಿತ್ವಗಳ ಜೊತೆಗೆ ಸಮೃದ್ಧ ಬದುಕಿನ ಗೂಡು ಕಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಮಾತನಾಡಿ, ಭಾರತದೆಲ್ಲೆಡೆ ದೀಪಾವಳಿ ಆಚರಿಸಿದರೆ ಕೇರಳದಲ್ಲಿ ಓಣಂ ಅನ್ನು ಆಚರಿಸುತ್ತಾರೆ. ಗ್ರಾಮೀಣ ಭಾಗಗಳ ಆಚರಣೆಗಳನ್ನು ನಮ್ಮ ಮಕ್ಕಳಿಗೆ ಕಲಿಸುವ ತಿಳಿಸುವ ಸಣ್ಣ ಪ್ರಯತ್ನಗಳನ್ನು ನಮ್ಮ ಕಾಲೇಜಿನಲ್ಲಿ ನಾವು ನಿರಂತರವಾಗಿ ನಡೆಸುತ್ತಾ ಬರುತ್ತಿದ್ದೇವೆ. ಶಿಕ್ಷಣದ ಜೊತೆಗೆ ಸಂಸ್ಕೃತಿಗಳ ತಿಳುವಳಿಕೆ ಬಹು ಮುಖ್ಯ ಎಂದು ನಾವು ಭಾವಿಸುತ್ತೇವೆ. ಆ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ’ ಎಂದರು.

    ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯ ಕೋಶಾಧಿಕಾರಿ ಭರ‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೀಪಾವಳಿ ಸಂದರ್ಭ ವಿದ್ಯಾರ್ಥಿಗಳಿಗೆ ಹೊರಗೆ ಹೋಗಲು ಅವಕಾಶ ಇಲ್ಲದ ಕಾರಣ, ದೀಪಾವಳಿ ಹಬ್ಬದಿಂದ ವಂಚರಾಗಬಾರದು ಎನ್ನುವ ಕಾರಣಕ್ಕೆ ಗ್ರಾಮೀಣ ಭಾಗದ ಸಂಪ್ರದಾಯಗಳ ರೀತಿಯಲ್ಲಿ ದೀಪಾವಳಿಯನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ಕಾರ್ಯಕ್ರಮಕ್ಕೆ ಮುನ್ನ ಸಾಂಪ್ರದಾಯಿಕವಾಗಿ ಗೋಪೂಜೆ, ತುಳಸೀ ಪೂಜೆ, ಬಲೀಂದ್ರ ಪೂಂಜಾ ಕಾರ್ಯಕ್ರಮಗಳು ನಡೆದರು. ಬಳಿಕ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಕಾರ್ಯದರ್ಶಿ ಪ್ರತಾಪಂದ್ರ ಶೆಟ್ಟಿ ಉಪ್ಪಿ ತರಿದರು. ಸಂಸ್ಕೃತ ಉಪನ್ಯಾಸಕಿ ಸುದಕ್ಷಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

  • ಗಂಗೊಳ್ಳಿ : ಅಗ್ನಿ ದುರಂತ ಸ್ಥಳಕ್ಕೆ ಎಂ.ಎಲ್.ಸಿ ಮಂಜುನಾಥ ಭಂಡಾರಿ ಭೇಟಿ: ಪರಿಹಾರದ ಭರವಸೆ

    ಗಂಗೊಳ್ಳಿ : ಅಗ್ನಿ ದುರಂತ ಸ್ಥಳಕ್ಕೆ ಎಂ.ಎಲ್.ಸಿ ಮಂಜುನಾಥ ಭಂಡಾರಿ ಭೇಟಿ: ಪರಿಹಾರದ ಭರವಸೆ

    ಕುಂದಾಪುರ ಮಿರರ್ ಸುದ್ದಿ…


    ಗಂಗೊಳ್ಳಿ :ಈ ಅಗ್ನಿ ಆಕಸ್ಮಿಕ ದೊಡ್ಡ ದುರ್ಘಟನೆ. ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಈ ಅಗ್ನಿ ದುರಂತದಲ್ಲಿ ಬೋಟುಗಳ ಮಾಲಿಕರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ವಿಮಾ ಸಂಸ್ಥೆಗಳು ಮತ್ತು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿ, ವಿವೇಚನಾ ನಿಧಿಯ ಮೂಲಕ ಪರಿಹಾರ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕ ಸಚಿವರ ಜೊತೆ ಮಾತನಾಡಿ ಪರಿಹಾರ ಒದಗಿಸಲು ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

    ಅವರು ಮಂಗಳವಾರ ಗಂಗೊಳ್ಳಿ ಬಂದರು ಸಮೀಪದ ಮ್ಯಾಂಗನೀಸ್ ರಸ್ತೆ ದೋಣಿ ನಿಲುಗಡೆ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಮೀನುಗಾರರಿಗೆ ಧೈರ್ಯತುಂಬಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

    ಸಂಪೂರ್ಣ ನಷ್ಟ ಬೋಟ್ ಮಾಲಿಕರು ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ. ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಮುಖ್ಯಮಂತ್ರಿಗಳಿಗೆ ಒಟ್ಟು ನಷ್ಟದ ವಿವರ ಸಲ್ಲಿಸಲಿದ್ದಾರೆ. ನಾನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ವಿಷಯ ಮನದಟ್ಟು ಮಾಡುತ್ತೇನೆ. ಈಗಾಗಲೇ ಮೀನುಗಾರಿಕ ಸಚಿವರು ಭೇಟಿ ನೀಡಿದ್ದಾರೆ. ಅವರು ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ ಎಂದರು.
    ಮೀನುಗಾರರು ಕಷ್ಟದ ಜೀವನ ನಡೆಸುತ್ತಿದ್ದಾರೆ. ಇಂಥಹ ಅವಘಡ ಸಂಭವಿಸಿದಾಗ ಅವರ ಜೀವನ ಇನ್ನಷ್ಟು ಪ್ರಪಾತಕ್ಕೆ ಇಳಿಯುತ್ತದೆ. 9 ಬೋಟುಗಳು ಮಾಲಿಕರು ಮಾತ್ರ ಇಲ್ಲಿ ಸಂತೃಸ್ತರಲ್ಲ ಇದನ್ನೇ ನಂಬಿಕೊಂಡ ನೂರಾರು ಕಾರ್ಮಿಕರು ಕೂಡಾ ಅತಂತ್ರರಾಗಿದ್ದಾರೆ. ಬೋಟ್ ಗಳನ್ನು ಕಳೆದುಕೊಂಡ ಬೋಟ್ ಮಾಲಿಕರ ಪರವಾಗಿ ಸರಕಾರವಿದೆ. ಕಾಂಗ್ರೆಸ್ ಪಕ್ಷವಿದೆ. ಸೂಕ್ತ ಸ್ಪಂದನೆ ಖಂಡಿತ ಮಾಡುತ್ತೇವೆ ಎಂದರು.
    ಗಂಗೊಳ್ಳಿಯಲ್ಲಿ ಅಗ್ನಿಶಾಮಕ ವ್ಯವಸ್ಥೆ ಬೇಕು ಎನ್ನುವುದು ಈ ಭಾಗದ ಬೇಡಿಕೆ. ಈ ಬಗ್ಗೆ ಗೃಹಸಚಿವರೊಂದಿಗೆ ಮಾತನಾಡಿ ಸದ್ಯಕ್ಕೆ ತಾತ್ಕಾಲಿಕ ನೆಲೆಯಲ್ಲಿ ಅಗ್ನಿಶಾಮಕ ಘಟಕ ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇಲ್ಲಿ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದರು.
    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಎಂ.ಎ ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರದೀಪ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಬಾಬು ಹೆಗ್ಡೆ ಸಂಪಿಗೇಡಿ ಸಂಜೀವ ಶೆಟ್ಟಿ, ಉದಯಕುಮಾರ್ ಶೆಟ್ಟಿ ವಂಡ್ಸೆ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸದಾಶಿವ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ಉದಯ ಪೂಜಾರಿ, ಮಂಜುಳ ದೇವಾಡಿಗ, ದುರ್ಗಾರಾಜ ಪೂಜಾರಿ, ಸುರೇಂದ್ರ ಖಾರ್ವಿ, ಮುಜಷಿದ್, ಸಂತೋಷ್ ಹಾಗೂ ಸ್ಥಳೀಯ ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.

  • ಗಂಗೊಳ್ಳಿ ಬಂದರನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ, ಪರಿಶೀಲನೆ

    ಗಂಗೊಳ್ಳಿ ಬಂದರನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ, ಪರಿಶೀಲನೆ

    ಕುಂದಾಪುರ ಮಿರರ್ ಸುದ್ದಿ

    ಕುಂದಾಪುರ : ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ರಾಜ್ಯದ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಘಟನೆ ಸಂಬಂಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದರು.

    ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಇಲ್ಲಿಗೆ ಬರುವಾಗ ನನ್ನ ಯೋಚನೆ ಬೇರೆಯೇ ಆಗಿತ್ತು. ಆದರೆ ಇಲ್ಲಿ ನೋಡಿದಾಗ ಬಹಳ ಬೇಜಾರಾಗುತ್ತಿದೆ. ಮೀನುಗಾರರ ಕಷ್ಟ ಗೊತ್ತಿದೆ. ಅವರ ಸಂಕಷ್ಟ ಅರಿತಿದ್ದೇನೆ. ಹೀಗಾಗಿ ಘಟನೆ ಬಗ್ಗೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ನಮ್ಮ ಸರಕಾರದಿಂದ ಏನು ಸಾಧ್ಯವಾಗುತ್ತದೆ ಹಾಗೂ ನೊಂದ ಮೀನುಗಾರರಿಗೆ ಹೆಚ್ಚಿನ ಮೊತ್ತವನ್ನು ಕೊಡುವ ಉದ್ದೇಶದಿಂದ ಸದ್ಯಕ್ಕೆ ಯಾವುದೇ ಘೋಷಣೆ ಮಾಡುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಕುಳಿತು ಮಾತನಾಡಿ, ಇವರಿಗೆ ಸರಕಾರದಿಂದ ಏನು ಕೊಡಲು ಸಾಧ್ಯವೋ ಅದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಷ್ಟದ ಪರಿಸ್ಥಿತಿಯಲ್ಲಿ ಮೀನುಗಾರರ ಸಹಾಯ ಸಹಕಾರಕ್ಕೆ ಇಲಾಖೆ, ಸರಕಾರ ನಿಲ್ಲುತ್ತದೆ. ಅವರಿಗೆ ಸಮಾಧಾನ ಮಾಡಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದರು.

    ಘಟನೆ ಬಗ್ಗೆ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಸಾವಿರಾರು ಕೋಟಿ ಆಸ್ತಿ ಬಂದರು ಪ್ರದೇಶಗಳಲ್ಲಿ ಇರುವುದರಿಂದ ಬಂದರಿನಲ್ಲಿ ಇಲಾಖೆ ಅಥವಾ ವಿಮಾ ಕಂಪೆನಿ ಮೂಲಕ ಪಂಪ್ ಹೌಸ್ ನಿರ್ಮಾಣದ ಯೋಚನೆ ಮಾಡಿ ಕ್ರಮಕೈಗೊಳ್ಳಲಾಗುವುದು. ಬಂದರು ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ನೋಡಿಕೊಳ್ಳಬೇಕಿದೆ. ಪಂಚಾಯತ್‍ಗೆ ಇದರಲ್ಲಿ ಯಾವುದೇ ಆದಾಯ ಇಲ್ಲ. ಪಂಚಾಯತ್ ವಸೂಲಿ ಮಾಡುತ್ತಿದ್ದರೆ ಅವರೇ ಹೊಣೆಗಾರರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳುತ್ತೇವೆ.

    ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್., ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಮೀನುಗಾರ ಮುಖಂಡರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಕೋಟ :ಚಿತ್ರನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಕಾರ್ಯಕ್ರಮ

    ಕೋಟ :ಚಿತ್ರನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಕಾರ್ಯಕ್ರಮ

    ಪಂಚವರ್ಣದ ಸಾಮಾಜಿಕ ಕಾರ್ಯಕ್ಕೆ ಯಾವುದೇ ಪ್ರಶಸ್ತಿ, ಸನ್ಮಾನ ಅಗತ್ಯ ಇಲ್ಲ – ಎಸ್. ದೊಡ್ಡಣ್ಣ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕನ್ನಡ ಚಿತ್ರರಂಗದಕ್ಕೆ ಕುಂದಗನ್ನಡಿಗರು ಅನನ್ಯವಾದ ಸೇವೆ ನೀಡಿದ್ದಾರೆ. ಮಾತ್ರವಲ್ಲದೆ ಹಿಂದಿ, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟ ಕೊಡುಗೆ ಈ ನೆಲದಿಂದ ಸಂದಿದೆ ಎಂದು ಕನ್ನಡ ಚಿತ್ರನಟ ಎಸ್.ದೊಡ್ಡಣ ತಿಳಿಸಿದರು.
    ಅವರು ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನ. 10ರಂದು ಕೋಟದ ಗಾಂಧೀ ಮೈದಾನದಲ್ಲಿ ನಡೆದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

    ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಅದರ ಹುಟ್ಟು ಸಾರ್ಥಕವೆನಿಸಿಕೊಳ್ಳುತ್ತದೆ. ಅದೇ ರೀತಿ ಪಂಚವರ್ಣ ಸಂಘಟನೆ ತನ್ನ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿಯಾಗಿದೆ ಎಂದರಲ್ಲದೆ ಅವರಿಗೆ ಯಾವುದೇ ಪ್ರಶಸ್ತಿ ಸನ್ಮಾನಗಳು ಅಗತ್ಯವಿಲ್ಲ ಅವುಗಳನ್ನು ಮೀರಿ ಬೆಳೆದ ಸಂಸ್ಥೆಯಾಗಿದೆ ಎಂದರು

    ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ, ಕಲೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಆ ಕಲೆಯನ್ನು ಗುರುತಿಸಿ, ಗೌರವಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕು. ಅಂತಹ ಕಾರ್ಯವನ್ನು ಪಂಚವರ್ಣದಂತಹ ಸಂಘಟನೆಗಳು ಮಾಡುತ್ತಿದೆ ಎಂದರು.

    ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

    ಈ ಸಂದರ್ಭ ಈ ಸಂದರ್ಭ ಕನ್ನಡ ಚಿತ್ರನಟ ದೊಡ್ಡಣ್ಣ ಅವರಿಗೆ ಪಂಚವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಲೀನ್ ತ್ರಾಸಿ ಮರವಂತೆ ತಂಡ ವಿಶೇಷ ಪುರಸ್ಕಾರ ಹಾಗೂ ರಂಗನಟ ಡಾ|ರಾಧಾಕೃಷ್ಣ ಉರಾಳ ವಿಶೇಷ ಅಭಿನಂದನೆ, ಸಮಾಜಸೇವಕಿ ಆಶಾ ವಿ. ರಾಮನಗರ ಅವರಿಗೆ ವಿಶೇಷ ಮಹಿಳಾ ಪುರಸ್ಕಾರ ನೀಡಲಾಯಿತು.

    ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ನೀಡಲಾಯಿತು. ಈಜುಪಟು ದಿಗಂತ್.ಆರ್ ಕೋಟತಟ್ಟು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಜಯರಾಮ್ ಶೆಟ್ಟಿ ಮಣೂರು, ಶೈಕ್ಷಣಿಕ ಸಾಧಕಿ ಶ್ರೇಷ್ಠ ಮೊಹನ್ ಪೂಜಾರಿ ಹಾಗೂ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಉರಾಳ,ಅರಣ್ಯ ಇಲಾಖೆಯ ಶ್ರೀನಿವಾಸ್ ಜೋಗಿ ಅವರನ್ನು ಗೌರವಿಸಲಾಯಿತು.
    ಸಂಘದ ಅಧ್ಯಕ್ಷ ಅಜಿತ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮುರೋಳಿ, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಉದ್ಯಮಿ ಎಂ.ಸಿ.ಚಂದ್ರಶೇಖರ, ರಾಷ್ಟೀಯ ಮಾನವ ಹಕ್ಕು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷ ದೇವರಾಜ ಜೋಗಿ, ಶಿಕ್ಷಕ ನರೇಂದ್ರ ಕುಮಾರ್ ಕೋಟ, ಶಿವಿನ್ ಗ್ರೂಪ್ ನರೇಶ್ ಭಟ್,ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಮುಖ್ಯಸ್ಥ ಕೆ.ವಿ ರಮೇಶ್ ರಾವ್, ಸಂಘದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್, ಹೋಟೆಲ್ ಉದ್ಯಮಿ ವೆಂಕಟೇಶ್ ಪ್ರಭು,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಗೌರವಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮೊದಲಾದವರಿದ್ದರು.

    ಈ ಮೊದಲು ಪಂಚವರ್ಣದ ಕಛೇರಿಯಿಂದ ಎಸ್ ದೊಡ್ಡಣ್ಣ ಹಾಗೂ ಅಭಿನಂದಿತರನ್ನು ಚಂಡೆಯ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆತರಲಾಯಿತು.ಈ ಕಾರ್ಯಕ್ರಮದಲ್ಲಿ ಒರ್ವ ಬಡ ವಿದ್ಯಾರ್ಥಿಯನ್ನು ಸಂಸ್ಥೆ ದತ್ತು ಸ್ವೀಕರಿಸಿತು.

    ಸಂಘದ ಕಾರ್ಯಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ಶಿಕ್ಷಕ ಸತೀಶ್ ಶೆಟ್ಟಿ, ಸಂತೋಷ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ, ಸುಜಾತ ಬಾಯರಿ ವಂದಿಸಿದರು.ಉಪನ್ಯಾಸಕ ರಾಘವೇಂದ್ರ ತುಂಗ ಸಹಕರಿಸಿದರು.ಕಾರ್ಯಕ್ರಮದ ನಂತರ ಸ್ಥಳೀಯ ಅಂಗನವಾಡಿ ಪುಟಾಣಿ,ಮಯೂರಿ ನೃತ್ಯ ತಂಡ ಕುಂಭಾಶಿ,ಮಂಗಳೂರಿನ ಪ್ರಸಿದ್ಧ ನಾಟಕ ತಂಡದಿಂದ ನಾಟಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

  • ಹೆಮ್ಮಾಡಿ :ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜನತಾ ಸಂಭ್ರಮ- 2ಕೆ23

    ಹೆಮ್ಮಾಡಿ :ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜನತಾ ಸಂಭ್ರಮ- 2ಕೆ23

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಳೆದ ವರ್ಷವಷ್ಟೇ ಹೊಸ ಆಡಳಿತದೊಂದಿಗೆ ಪುನಾರಂಭಗೊಂಡ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಆರಂಭದ ದಿನಗಳಲ್ಲಿ ಹಲವು ತೊಡಕುಗಳು ಎದುರಾಗಿತ್ತು. ಆದರೆ ಈ ಎಲ್ಲಾ ತೊಡಕುಗಳನ್ನು‌ ಮೆಟ್ಟಿ ನಿಂತು ಇಂದು ಜನತಾ ಸಾಧನೆಯ ಶಿಖರವೇರಿದೆ ಎಂದು ವಿ.ವಿ.ವಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

    ವಿ.ವಿ.ವಿ ಮಂಡಳಿ ಹಾಗೂ ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಆಡಳಿತದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜನತಾ ಸಂಭ್ರಮ- 2ಕೆ23 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾಲೇಜಿನ ಉಪನ್ಯಾಸಕರ ಹೋರಾಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಅವರೆಲ್ಲರ ಅವಿರತ ಶ್ರಮ ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರದ ಆಸ್ತಿ ಚಿತ್ರಾ ಕಾರಂತ್ ಅವರ ಮಾರ್ಗದರ್ಶನದಲ್ಲಿ, ಗಣೇಶ್ ಮೊಗವೀರ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಆರಂಭಗೊಂಡ ಎರಡೇ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂತಸದ ವಿಚಾರ ಎಂದರು.

    ಜನತಾ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಶುಭಕರ ಆಚಾರ್, ಸಾಕಷ್ಟು ಸವಾಲುಗಳನ್ನು ಎದುರಿಸಿ ಎಲ್ಲರನ್ನು ನಿಬ್ಬೆರಗುಗೊಳಿಸುವಂತೆ ಕಾಲೇಜು ಉನ್ನತ‌ ಮಟ್ಟಕ್ಕೆ ಏರಿದೆ. ಸತತ ಪ್ರಯತ್ನಗಳಿದ್ದರೆ ಖಂಡಿತ ಗೆಲುವು ಸಾಧ್ಯ. ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ. ಜಗತ್ತು ವಿಶಾಲವಾಗಿದೆ. ಬೇಕಾದಂತೆ ಈಜಿ ದಡ ಸೇರಬಹುದು. ಇಡೀ ಜಗತ್ತನ್ನು ಬದಲಾಯಿಸುವ ತಾಕತ್ತು ಇದ್ದರೆ ಅದು ಶಿಕ್ಷಣಕ್ಕೆ‌ ಮಾತ್ರ. ಆ ಶಿಕ್ಷಣವನ್ನು ನೀವೆಲ್ಲರೂ ಆಸಕ್ತಿಯಿಂದ ಪಡೆಯಿರಿ ಎಂದರು.

    ಮುಖ್ಯತಿಥಿಗಳಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್, ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಡ್ರಾಮಾ ಜ್ಯೂನಿಯರ್ ಪ್ರತಿಭೆ ಸಮೃದ್ದಿ ಎಸ್ ಮೊಗವೀರ, ಕಾಲೇಜು ವಿದ್ಯಾರ್ಥಿ ನಾಯಕ ಗಣೇಶ್ ಇದ್ದರು.

    ಶೈಕ್ಷಣಿಕ ವಿಭಾಗ ಕ್ರೀಡಾ ವಿಭಾಗ, ಸಾಂಸ್ಕೃತಿಕ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಪ್ರಸಕ್ತ ಸಾಲಿನ ಕ್ರೀಡಾ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 27 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಪ್ರಾಂಶುಪಾಲ ಹಾಗೂ ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಮೊಗವೀರ ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.

  • ಕುಂದಾಪುರ :ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅದ್ಭುತ

    ಕುಂದಾಪುರ :ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅದ್ಭುತ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅದ್ಭುತವಾಗಿದೆ. ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಂಪಾ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಚ್. ವರ್ಷಾ ರವಿಶಂಕರ್ ದ್ವಿತೀಯ ಸ್ಥಾನ, ಆಶು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ಶೆಟ್ಟಿ ತ್ರತೀಯ ಸ್ಥಾನ, ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೆರ್ಲಿಯಾ ತ್ರತೀಯ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿಘ್ನೇಶ್ ತ್ರತೀಯ ಸ್ಥಾನವನ್ನು ಪಡೆದಿರುತ್ತಾರೆ.

    ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕಂಡ್ಲೂರು :ಲಂಚ ಪಡೆಯುತ್ತಿದ್ದ ಕಂಡ್ಲೂರು ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

    ಕಂಡ್ಲೂರು :ಲಂಚ ಪಡೆಯುತ್ತಿದ್ದ ಕಂಡ್ಲೂರು ಪಂ. ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಬಸವ ವಸತಿ ಯೋಜನೆಯ ಕೆಲಸಕ್ಕೆ ಕಂತು ಬಿಡುಗಡೆ ಮಾಡಲು ಹಣದ ಬೇಡಿಕೆ ಇರಿಸಿದ ಆರೋಪದಡಿ ತಾಲೂಕಿನ ಕಾವ್ರಾಡಿ ಪಂಚಾಯತಿಯ ಕಾರ್ಯದರ್ಶಿ ಗೋಪಾಲ ದೇವಾಡಿಗ ಎಂಬುವವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಸವ ವಸತಿ ಯೋಜನೆಯ ಕಂತು ಬಿಡುಗಡೆಗೊಳಿಸಲು ಜಾವೇದ್ ಕಾರ್ವಾಡಿ ಎಂಬುವವರಿಂದ, ಪಂಚಾಯತ್ ಕಾರ್ಯದರ್ಶಿ ಗೋಪಾಲ ದೇವಾಡಿಗ 15,000 ರೂ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅದರಂತೆ ಆರೋಪಿಯನ್ನು ಟ್ರಾಪ್ ಮಾಡಿ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ.

    ಲೋಕಾಯುಕ್ತ ಎಸ್.ಪಿ ಸೈಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ಮಲ್ಲಿಕಾ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್, ಸತೀಶ್ ಆಚಾರ್ಯ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನ – ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೌಶಲ್ ಆರ್ ಆಚಾರ್ಯ ಆಯ್ಕೆ

    ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನ – ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೌಶಲ್ ಆರ್ ಆಚಾರ್ಯ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ನವ ದೆಹಲಿಯಲ್ಲಿ ನವೆಂಬರ್ 15ರಂದು ಆಯೋಜನೆ ಮಾಡಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ, ಆಯೋಜಕರ ಆಯ್ಕೆ ಪ್ರಕಿಯೆಯ ಮೂಲಕ ಕವಿಗೋಷ್ಠಿ ವಿಭಾಗಕ್ಕೆ,ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೌಶಲ್ ಆರ್ ಆಚಾರ್ಯ ಆಯ್ಕೆಯಾಗಿದ್ದು, ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿಯಾಗಿರುತ್ತಾನೆ.

    ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೊಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೆಮ್ಮಾಡಿ :ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

    ಹೆಮ್ಮಾಡಿ :ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶಿವಾಜಿ ಸರ್ಕಾರಿ ಪದವಿಪೂರ್ವ ಕಾಲೇಜು ಹಳಿಯಾಳ ಕಾರವಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ
    ಶ್ರೀಶ್ ಶೆಟ್ಟಿ ಬೆಳ್ಳಿಯ ಪದಕ, (125K.g ವಿಭಾಗ)ರೋಹಿತ್ ದೇವಾಡಿಗ(92 k.g ವಿಭಾಗ)ಕಂಚಿನ ಪದಕ,ಚೇತನ್ ಖಾರ್ವಿ(97 k.g ವಿಭಾಗ) ಕಂಚಿನ ಪದಕ, ಸಂಪತ್ ಕುಮಾರ್ ಶೆಟ್ಟಿ(87 k.g ವಿಭಾಗ) ಕಂಚಿನ ಪದಕ,ಅದ್ವಿತ್ ಆರ್.ಕೆ.ಕಂಚಿನ ಪದಕ(74K.g ವಿಭಾಗ) ಪಡೆದು ಸಾಧನೆ ಮೆರದಿದ್ದಾರೆ.

    ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೊಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಗಂಗೊಳ್ಳಿ: 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಬಿದ್ದ ಮೀನುಗಾರನ ರಕ್ಷಣೆ

    ಗಂಗೊಳ್ಳಿ: 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಬಿದ್ದ ಮೀನುಗಾರನ ರಕ್ಷಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅರಬ್ಬಿ ಸಮುದ್ರದ 16 ನಾಟಿಕಲ್ ಮೈಲ್ ದೂರದಲ್ಲಿ ಬಿದ್ದ ಮೀನುಗಾರನೊಬ್ಬನನ್ನು ಮತ್ತೊಂದು ಮೀನುಗಾರಿಕಾ ಬೋಟಿನ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮಂಗಳವಾರ ಮುಂಜಾನೆ ಸುಮಾರು 7.30ಕ್ಕೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಕೋಡಿ ಎಲ್.ಪಿ ಯ ನೇರ ಸುಮಾರು 16 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವಿ. ಕೆ. ಅಬ್ಬುಲ್ಲಾ ರವರ ಮಾಲೀಕತ್ವದ INTD-KA-03-MM-3008  “ಸಾಗರ್” ಹೆಸರಿನ ಜೋಟಿನಲ್ಲಿದ್ದ ಮೀನುಗಾರರಿಗೆ ಸಮುದ್ರದಲ್ಲಿ ಬಿದ್ದು ಈಜಾಡುತ್ತಿರುವ ವ್ಯಕ್ತಿಯೊಬ್ಬ ಕಾಣಿಸಿದ್ದಾನೆ. ತಕ್ಷಣ ಆ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ ವಿಚಾರಿಸಿದಾಗ “ಮುಂಜಾನೆಯ ಸಮಯ ತಾನು ಇತರ ಮೀನುಗಾರರೊಂದಿಗೆ ಮೀನುಗಾರಿಕೆ ಮಾಡುತ್ತಿರುವಾಗ ರಭಸವಾದ ಗಾಳಿ ಮಳೆಗೆ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯಿಂದ ಆಕಸ್ಮಿಕವಾಗಿ ಬಿದ್ದಿರುವುದಾಗಿ” ತಿಳಿಸಿದ್ದಾನೆ. “ನಂತರ ಗಾಳಿ ಮಳೆಗೆ ದೋಣಿಯಿಂದ ದೂರ ಸಾಗಿದ್ದು ದೋಣಿಯ ಸಂಪರ್ಕಕ್ಕೆ ಸಿಕ್ಕದೇ ಈಜಾಡುತ್ತಿದ್ದೆ” ಎಂದು ಹೇಳಿದ್ದಾನೆ ಎಂದು ಸಾಗರ್ ಬೋಟಿನಲ್ಲಿದ್ದ ಮೀನುಗಾರರು ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಯುವಕನ ರಕ್ಷಣೆಯ ಬಳಿಕ ಯುವಕ ಬಿದ್ದ ದೋಣಿಯವರು ಹುಡುಕಿಕೊಂಡು ವಾಪಾಸು ಬಂದಿದ್ದು, ಅವರ ದೋಣಿ ಹತ್ತಿಸಿ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ 16 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಯುವಕನ ರಕ್ಷಣೆ ಮಾಡಿದ ಸಾಗರ್ ಬೋಟಿನ ಮೀನುಗಾರರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.