Category: ಸುದ್ದಿ

  • ರಜತ ಪರ್ವಕ್ಕೆ ಸಾಕ್ಷಿಯಾದ ಪಡುಕರೆ ಐಸ್‍ಪ್ಲ್ಯಾಂಟ್ ಸಾರ್ವಜನಿಕ ಶ್ರೀ ಗಣೇಶೋತ್ಸವ

    ರಜತ ಪರ್ವಕ್ಕೆ ಸಾಕ್ಷಿಯಾದ ಪಡುಕರೆ ಐಸ್‍ಪ್ಲ್ಯಾಂಟ್ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಇಲ್ಲಿನ ಕೋಟ ಪಡುಕರೆ ಐಸ್ ಪ್ಯ್ಲಾಂಟ್ ಸಮೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವರಿಂದ ನಡೆಸಲ್ಪಡುವ ಶ್ರೀ ಗಣಪನಿಗೆ 25ನೇ ಬೆಳ್ಳಿ ಹಬ್ಬದ ಸಂಭ್ರಮ ಆ ಪ್ರಯುಕ್ತ ರಜತ ಪರ್ವ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ವಿಜೃಂಭಣೆ ಗಣೇಶೋತ್ಸವ ಕಾರ್ಯಕ್ರಮ ಆಯೋಜಿಸಿದೆ.

    ಅಲ್ಲದೆ 20ರ ಬುಧವಾರ ಸಂಜೆ ಸ್ಥಳೀಯ ದಾನಿಗಳಾದ ಆನಂದ್ ಸಿ ಕುಂದರ್ ದಂಪತಿಗಳಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

    ಮಂಗಳವಾರ ಕೋಟ ಗಾಯಿತ್ರಿ ಆಟ್ರ್ಸ್‍ನಿಂದ ಮೆರೆವಣಿಗೆಯ ಮೂಲಕ ಶ್ರೀ ಗಣಪನನ್ನು ಪಡುಕರೆ ಫೀಶರೀಶ್ ರಸ್ತೆಯ ಮೂಲಕ ಕೊಂಡ್ಯೊಯ್ಯಲಾಯಿತು. ತಟ್ಟಿರಾಯ,ಚಂಡೆಯ ಕರತಾಳನದ ನಡುವೆ ಸ್ಥಳೀಯ ಮಹಿಳೆಯರು ಕರದಲ್ಲಿ ಕಳಶ ಹಿಡಿದು ಭವ್ಯ ಮೆರವಣಿಗೆ ಪಾಲ್ಗೊಂಡರು

  • ಕುಂದಾಪುರ :ಶ್ರೀ ರಾಮ ಕ್ರಡಿಟ್ ಸೊಸೈಟಿ ಮಹಾಸಭೆ :167.96 ಲಕ್ಷ ರೂ. ನಿವ್ಹಳ ಲಾಭ, ಸದಸ್ಯರಿಗೆ ಶೇ.17 ಡಿವಿಡೆಂಡ್

    ಕುಂದಾಪುರ :ಶ್ರೀ ರಾಮ ಕ್ರಡಿಟ್ ಸೊಸೈಟಿ ಮಹಾಸಭೆ :167.96 ಲಕ್ಷ ರೂ. ನಿವ್ಹಳ ಲಾಭ, ಸದಸ್ಯರಿಗೆ ಶೇ.17 ಡಿವಿಡೆಂಡ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶ್ರೀ ರಾಮ ಕ್ರಡಿಟ್ ಸೊಸೈಟಿ ವರದಿ ಸಾಲಿನಲ್ಲಿ 219 ಕೋಟಿ ರೂ. ಗಳಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿ, 167.96 ಲಕ್ಷ ರೂ. ನಿವ್ಹಳ ಲಾಭ ಗಳಿಸಿದೆ. ಈ ಬಾರಿ ಸೊಸೈಟಿಯ ಸದಸ್ಯರಿಗೆ ಶೇ.17 ಡಿವೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ನಾಗರಾಜ್ ಕಾಮಧೇನು ತಿಳಿಸಿದರು.

    ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ರಜತ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವರದಿ ವರ್ಷದಲ್ಲಿ 6308.38 ಲಕ್ಷ ರೂ. ಠೇವಣಿ ಹೊಂದಿದ್ದು, 4833.99 ಲಕ್ಷ ರೂ. ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. 985.55 ಲಕ್ಷ ರೂಪಾಯಿಗಳನ್ನು ವಿವಿಧ ನಿಧಿಗಳಲ್ಲಿ ಸಂಚಯಿಸಲಾಗಿದೆ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ತ್ವರಿತ ಸ್ಪಂದನೆ, ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನ ಬಳಕೆ, ತಜ್ಞರ ಸಲಹೆಗಳೊಂದಿಗೆ ಸೊಸೈಟಿಯನ್ನು ಗ್ರಾಹಕ ಸ್ನೇಹಿ ಸಂಸ್ಥೆಯನ್ನಾಗಿಸಲು ಆಡಳಿತ ಮಂಡಳಿ ಬದ್ಧತೆಯನ್ನು ಹೊಂದಿದೆ ಎಂದು ನುಡಿದರು.

    ಸಭೆಯಲ್ಲಿ ಭಾಗವಹಿಸಿದ ವಿಶ್ವ ರಾಮಕ್ಷತ್ರೀಯ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶಶಿಧರ ನಾಯಕ್ ಅವರು, 28 ವರ್ಷಗಳ ಹಿಂದೆ ಸಮಾಜದ ಭವಿಷ್ಯದ ಅವಶ್ಯಕತೆ ಹಾಗೂ ಬೆಳವಣಿಗೆಯ ಕರಣದಿಂದ ರಾಮಕ್ಷತ್ರೀಯ ಸಮಾಜದ ಹಿರಿಯರು ಸ್ಥಾಪಿಸಿರುವ ಈ ಸಂಸ್ಥೆ ಇಂದು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿರುವುದು ಸಾರ್ಥಕತೆಯನ್ನು ತೋರುತ್ತಿದೆ. ಗ್ರಾಹರ ವಿಶ್ವಾಸ ಹಾಗೂ ಭರವಸೆಯನ್ನು ಉಳಿಸಿಕೊಂಡಿರುವ ಶ್ರೀರಾಮ ಕ್ರಡಿಟ್ ಸೊಸೈಟಿ ತನ್ನ ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವುದು ಅಭಿನಂದನೀಯ. ನಿಸ್ವಾರ್ಥ ಚಿಂತನೆಯ ಆಡಳಿತ ಮಂಡಳಿ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದು, ಇನ್ನಷ್ಟು ಶಾಖೆಗಳನ್ನು ಮಾಡಿ, ಹೆಚ್ಚಿನ ಗ್ರಾಹಕರೊಂದಿಗೆ ಸಂಸ್ಥೆ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸಿದರು.

    ರಾಮಕ್ಷತ್ರೀಯ ಸಮಾಜದ ಪ್ರತಿಭಾನ್ವಿತ 17 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸೊಸೈಟಿಯ ಸದಸ್ಯರಾಗಿರುವ ತಲ್ಲೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಗಿರೀಶ್ ಎಸ್‌.ನಾಯಕ್, ಉಪ್ಪೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಗಾಯತ್ರಿ ಉಪ್ಪೂರು, ಹಂಗಳೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾದ ಸತೀಶ್ ನೇರಂಬಳ್ಳಿ, ಕೋಟೇಶ್ವರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷೆಯಾದ ಆಶಾ ರಾಮಚಂದ್ರ, 5ನೇ ಬಾರಿ ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಧರ ಪಿ.ಎಸ್ ಹಾಗೂ ಕುಂದಾಪುರ ರಾಮಕ್ಷತ್ರೀಯ ಸಮಾಜದ ನೂತನ ಅಧ್ಯಕ್ಷರಾದ ಡಿ.ಕೆ.ಪ್ರಭಾಕರ ಅವರನ್ನು ಗೌರವಿಸಲಾಯಿತು.

    ಉಪಾಧ್ಯಕ್ಷ ರಾಧಾಕೃಷ್ಣ ಬಿ ನಾಯಕ್, ನಿರ್ದೇಶಕರಾದ ಅಶೋಕ್ ಬೆಟ್ಟಿನ್, ಶ್ರೀಧರ ಪಿ.ಎಸ್, ದೇವಕಿ ಪಿ ಸಣ್ಣಯ್ಯ, ಎಂ.ಜಿ.ರಾಜೇಶ್, ಜಿ.ಆರ್.ಪ್ರಕಾಶ್, ಕೆ.ರಾಮನಾಥ ನಾಯಕ್, ಎನ್‌.ವಿ.ದಿನೇಶ್, ಗೋಪಾಲಕೃಷ್ಣ, ಲಕ್ಷ್ಮೀ ಡಿ.ಕೆ.ಪ್ರಭಾಕರ, ಮಂಜುನಾಥ್ ಮದ್ದೋಡಿ, ರವೀಂದ್ರ ಕಾವೇರಿ, ಅಜೇಯ್ ಹವಾಲ್ದಾರ್, ಡಿ.ಸದಾಶಿವ, ಕರುಣಾಕರ ರಾವ್ ಇದ್ದರು.

    ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಘವೇಂದ್ರ ನಿರೂಪಿಸಿದರು, ನಾಗರಾಜ್ ಕಾಮಧೇನು ಸ್ವಾಗತಿಸಿದರು, ಆಶೋಕ್ ಬೆಟ್ಟಿನ್ ವಂದಿಸಿದರು.

  • ಕುಂದಾಪುರ :ಸೆ.22ರಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರಿಗೆ ಹುಟ್ಟೂರ ಸನ್ಮಾನ

    ಕುಂದಾಪುರ :ಸೆ.22ರಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರಿಗೆ ಹುಟ್ಟೂರ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮೈಸೂರು ಮರ್ಕಂಟೈಲ್ ಕಂಪನಿ ಅಧ್ಯಕ್ಷರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ (ಎಚ್.ಎಸ್.ಶೆಟ್ಟಿ) ಇವರಿಗೆ ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು 23ನೇ ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರ್ ಆಫ್ ಸೈನ್ಸ್ ಗೌರವವನ್ನು ನೀಡಿ ಗೌರವಿಸಿದೆ. ಆ ಹಿನ್ನೆಲೆಯಲ್ಲಿ ಹುಟ್ಟೂರಿನಲ್ಲಿ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸೆ.22 ಶುಕ್ರವಾರ, ಪೂರ್ವಾಹ್ನ 11 ಗಂಟೆಗೆ ಹಾಲಾಡಿಯ ಶ್ರೀಮತಿ ಶಾಲಿನಿ ಜಿ.ಶಂಕರ್ ಕನ್ವೆಶನ್ ಸೆಂಟರ್‍ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹುಟ್ಟೂರ ಸನ್ಮಾನ ಸಮಿತಿ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಹೇಳಿದರು.

    ಅವರು ಕುಂದಾಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ. ವೇ.ಮೂ.ತಟ್ಟುವಟ್ಟು ವಾಸುದೇವ ಜೋಯಿಸ ಹಾಲಾಡಿ ಆಶೀರ್ವಚನ ನೀಡಲಿದ್ದಾರೆ. ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಉದ್ಯಮಿ ಎಂ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಚೋರಾಡಿ, ಭಾಗವಹಿಸಲಿದ್ದಾರೆ ಎಂದರು.

    ಹಾಲಾಡಿಯ ಶಿಕ್ಷಕರಾದ ಹೆಗ್ಗುಂಜೆ ರಾಜೀವ ಶೆಟ್ಟಿ ಮತ್ತು ಹಾಲಾಡಿ ಕುದ್ರುಮನೆ ಸರೋಜಿನಿ ಶೆಟ್ಟಿಯವರ ಪುತ್ರರಾದ ಶ್ರೀನಿವಾಸ ಶೆಟ್ಟಿ ಹಾಲಾಡಿ ಯವರು ರಫ್ತು ಉದ್ಯಮ ಕ್ಷೇತ್ರದಲ್ಲಿ ಹೆಚ್.ಎಸ್ .ಶೆಟ್ಟಿ ಎಂದೇ ಪ್ರಸಿದ್ಧರಾಗಿದ್ದಾರೆ. ಭಾರತದ ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ಕಾರವಾರ ಬಂದರು ಸಮೀಪ ದೇಶದಲ್ಲಿ ಪ್ರಥಮವಾಗಿ 2001 ರಲ್ಲಿ ಯಶಸ್ವಿಯಾಗಿ ಬಿಸಿ ಶಿಲಾಜಿತು (ಬಿಟುಮೆನ್) ಸರಕನ್ನು ಬಂದರುವಿನಲ್ಲಿ ಲಂಗರು ಹಾಕಿದ ಹಡಗಿನಿಂದ ದ್ರವ ರೂಪದಲ್ಲಿ ಸಂಗ್ರಾಹರಕ್ಕೆ ಸಾಗಣಿಕೆ ಮಾಡಿ, ಸಂಗ್ರಹಿಸಿ ನಿರ್ವಹಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಪುನರ್ ನವೀಕರಿಸಬಹುದಾದ ಜಲ ವಿದ್ಯುತ್, ಸೌರ ವಿದ್ಯುತ್, ಪವನ ವಿದ್ಯುತ್, ಜೈವಿಕ ವಿದ್ಯುತ್ ಸ್ಥಾವರಗಳ ಸ್ಥಾಪನೆ ಹಾಗೂ ಹಲವಾರು ವಿದ್ಯಾರ್ಥಿ ಅಭಿವೃದ್ಧಿಯ ಮತ್ತು ಸಮಾಜ ಸೇವೆಯನ್ನು ಮಾಡಿರುವುದನ್ನು ಪರಿಗಣಿಸಿ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಇವರು ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ನೀಡಿ ಗೌರವಿಸಿದ್ದಾರೆ.

    ಶ್ರೀನಿವಾಸ್ ಶೆಟ್ಟಿ ಹಾಲಾಡಿ ಅವರು 2008 ಕ್ಕಿಂತ ಮೊದಲು ತಮ್ಮ ಮೈಸೂರ್ ಮರ್ಕಂಟೈಲ್ ಕಂಪನಿಯ ಮೂಲಕ ತನ್ನ ಹುಟ್ಟೂರಾದ ಹಾಲಾಡಿಗೆ ಶೈಕ್ಷಣಿಕವಾಗಿ ಸಹಕಾರವನ್ನು ನೀಡುತ್ತಿದ್ದರು. 2008ರಲ್ಲಿ ಇವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ (ರಿ) ಬೆಂಗಳೂರು ಇದರ ಮೂಲಕ ಹಾಲಾಡಿಯ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಉಡುಪಿ ಹಾಗೂ ಇತರ ಜಿಲ್ಲೆಯ ವಿದ್ಯಾರ್ಥಿಗಳಿಗೂ ಸಮವಸ್ತ್ರ ಹಾಗೂ ಇನ್ನಿತರ ಅವಶ್ಯಕತೆಗಳನ್ನು ನೀಡುತ್ತಾ ಬಂದಿದ್ದಾರೆ. ಇವರು 2016 ರಲ್ಲಿ ಹಾಲಾಡಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಸುಸಜ್ಜಿತವಾದ ಕಟ್ಟಡ, ಪ್ರಯೋಗಾಲಯ ಕಂಪ್ಯೂಟರ್ ಲ್ಯಾಬ್ ಒದಗಿಸಿಕೊಟ್ಟು ಸುವ್ಯವಸ್ಥಿತ ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿ ಪೂರ್ವ ಕಾಲೇಜಾಗಿ ಪುನರ್ ನಾಮಕರಣಗೊಂಡಿತು ಎಂದು ಹೇಳಿದರು.

    ಸುದ್ಧಿಗೋಷ್ಠಿಯಲ್ಲಿ ನ್ಯಾಯವಾದಿ ರವಿರಾಜ್ ಶೆಟ್ಟಿ ಟ್ರಸ್ಟ್‍ನ ಕೋಶಾಧಿಕಾರಿ ರಾಜೀವ ಶೆಟ್ಟಿ, ಸಮಿತಿಯ ಉದಯಕುಮಾರ್ ಶೆಟ್ಟಿ, ಕೃಷ್ಣ ಪೂಜಾರಿ ಅಮಾಸೆಬೈಲು, ಸೂರ್ಯಪ್ರಕಾಶ್, ಸೀತಾರಾಮ ಗಾಣಿಗ ಹಾಲಾಡಿ, ಜ್ಞಾನೇಶ್ ಶೆಟ್ಟಿ, ಆಶೀಷ್ ಶೆಟ್ಟಿ ಉಪಸ್ಥಿತರಿದ್ದರು.

  • ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ

    ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ

    ಶೆಫಿನ್ಸ್ ನಿಂದ ಕುಂದಾಪುರದಲ್ಲಿ ಅತಿಥಿ ಶಿಕ್ಷಕರ ತರಬೇತಿ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ : ರಾಜ್ಯ ಮಟ್ಟದ ಅಮೃತ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಮನೋಜ್ ಕಡಬ ನೇತೃತ್ವದಲ್ಲಿ ಉಡುಪಿಯ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ನಡೆಸುತ್ತಿರುವ ‘ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನ’ ದ ಮೊದಲ ಹೆಜ್ಜೆಯಾದ ಅತಿಥಿ ಹಾಗೂ ಗೌರವ ಶಿಕ್ಷಕರ 4 ದಿನಗಳ ನೇರ ತರಬೇತಿಯ ಮೂರನೇ ಬ್ಯಾಚ್ ನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್ ಇವರುಗಳ ವಿಶೇಷ ಕಾಳಜಿಯಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೆಡಾಡಿ-ಮತ್ಯಾಡಿಯ ಆಶ್ರಯದಲ್ಲಿ ಸೆಪ್ಟಂಬರ್ 14ರಿಂದ 17ರ ವರೆಗೆ ಹಮ್ಮಿಕೊಳ್ಳಲಾಯಿತು.

    ಈ ತರಬೇತಿಯಲ್ಲಿ ಹುಣ್ಸೆಮಕ್ಕಿ, ಕೆದೂರು ಮತ್ತು ಬಿದ್ಕಲ್ ಕಟ್ಟೆ ಕ್ಲಸ್ಟರ್ ಗಳ ಒಟ್ಟು 8 ಶಾಲೆಗಳ 20 ಜನ ಅತಿಥಿ ಹಾಗೂ ಗೌರವ ಶಿಕ್ಷಕರು ಯಶಸ್ವಿಯಾಗಿ ಭಾಗವಹಿಸಿದರು.

    ತರಬೇತಿಯಲ್ಲಿ ಆಂಗ್ಲ ವ್ಯಾಕರಣ, ಆಂಗ್ಲ ಭಾಷಾ ಸಂವಹನ, ಪರಿಣಾಮಕಾರಿ ಸಂವಹನ, ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಸುವ ವಿಧಾನ, ಟಂಗ್ ಟ್ವಿಸ್ಟರ್ ಗಳ ರಚನೆ, ಕಥಾ ರಚನೆ, ಆಂಗ್ಲ ಭಾಷೆ ಓದುವ ವಿಧಾನ, ಬರವಣಿಗೆಯ ವಿಧಾನ, ಆಲಿಸುವ ವಿಧಾನ, ಆತ್ಮ ವಿಶ್ವಾಸ ಹೆಚ್ಚಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಚಟುವಟಿಕೆ ಆಧಾರಿತ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಜಪ್ತಿ ಅನುದಾನಿತ ಶಾಲೆಯ ಅತಿಥಿ ಶಿಕ್ಷಕ ಉದಯ ಕೊಠಾರಿ ಇವರಿಗೆ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಉದ್ಘಾಟನಾ ಸಮಾರಂಭದಲ್ಲಿ ಸಿ.ಆರ್.ಪಿ ವಸಂತ ಶೆಟ್ಟಿ, ಅತಿಥೇಯ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಣಿ, ಹಾಗೂ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಮೊಗವೀರ ಅತಿಥಿಗಳಾಗಿ ಭಾಗವಹಿಸಿದ್ದರು.

    ಸಾಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ. ಆರ್. ಪಿ. ಸುಕನ್ಯಾ ವಹಿಸಿದ್ದು, ಅತಿಥಿಗಳಾಗಿ ಅತಿಥೇಯ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಣಿ, ಹಾಗೂ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಮೊಗವೀರ ಭಾಗವಹಿಸಿದ್ದರು.

    ಶೆಫಿನ್ಸ್ ಸಂಸ್ಥೆಯ ನಿರ್ದೇಶಕ ಮನೋಜ್ ಕಡಬ, ತರಬೇತುದಾರೆ ಸ್ಮಿತಾ ಕೆ.ಸಿ, ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಮತ್ತು ಇಜಾಜ್ ಮನ್ನ ಉಪಸ್ಥಿತರಿದ್ದರು.

    ಶಿಬಿರಾರ್ಥಿಗಳಾದ ಮಹಾಲಕ್ಷ್ಮಿ ಐತಾಳ್ ಕಾರ್ಯಕ್ರಮ ನಿರೂಪಿಸಿ, ನಾಗರತ್ನ ಸ್ವಾಗತಿಸಿ, ಶೋಭಿತಾ ವಂದಿಸಿದರು.

  • ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

    ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬನ್ನಾಡಿ ಗ್ರಾಮದ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಿ, ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯ ಪುರಮೆರವಣಿಗೆಯನ್ನು ನಡೆಸಲಾಯಿತು.

    ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಭಕ್ತಾಧಿಗಳಿಗೆ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು, ಮೊಸರು ಕುಡಿಕೆ, ಹಗ್ಗಜಗ್ಗಾಟ ಸ್ಪರ್ಧೆ, ಸಂಗೀತ ಕುರ್ಚಿ, ಲಿಂಬು ಚಮಚ ಮತ್ತು ಮುದ್ದುಕೃಷ್ಣ ಸ್ಪರ್ಧೆಯನ್ನು ನಡೆಸಲಾಯಿತು.

    ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.

    ಕ್ರೀಡಾ ಕಾರ್ಯಕ್ರಮದ ಅಂಗವಾಗಿ ನಡೆದ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಉಪ್ಲಾಡಿ ತೆಂಕಬೆಟ್ಟು ದಿಲೀಪ್ ಇವರು ಪುರುಷರ ವಿಭಾಗದಲ್ಲಿ ಹಾಗೂ ಉಪ್ಲಾಡಿ ತೆಂಕಬೆಟ್ಟು ಶಾಂತ ಇವರು ಮಹಿಳೆಯರ ವಿಭಾಗದಲ್ಲಿ ವಿಜೇತರಾದರು. ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಉಪ್ಲಾಡಿ ರಾಘವೇಂದ್ರ ಆಚಾರ್ ಇವರ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಉಪ್ಲಾಡಿ ಚೈತ್ರಾ ಇವರ ತಂಡ ಪ್ರಶಸ್ತಿಯನ್ನು ಪಡೆದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಇಂದಿರಾ ದಯಾಕರ ಪೂಜಾರಿ ಮಹಿಳಾ ವಿಭಾಗದಲ್ಲಿ ಹಾಗೂ ಉಪ್ಲಾಡಿ ಬಡಾಬೆಟ್ಟು ಗಣೇಶ್ ಪೂಜಾರಿ ಇವರ ಮಗಳು ಕುಮಾರಿ ಆರಾಧ್ಯ ಮಕ್ಕಳ ವಿಭಾಗದಲ್ಲಿ ವಿಜೇತರಾದರು. ಲಿಂಬು ಚಮಚ ಸ್ಪರ್ಧೆಯಲ್ಲಿ ಉಪ್ಲಾಡಿ ಬಡಾಬೆಟ್ಟು ಸರಿತಾ ಇವರ ಮಗ ರಿತ್ವಿಕ್ ಆರ್ ವಿಜೇತರಾದರು.

    ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಲಾಡಿ ಇದರ ಆಶ್ರಯದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯ 0-2 ವರ್ಷದ ವಿಭಾಗದಲ್ಲಿ ಕೋಟ ಲತಾ ಜಯಕುಮಾರ್ ದಂಪತಿಗಳ ಪುತ್ರಿ ಕುಮಾರಿ ಲಕ್ಷಾ ಜಿ.ಕೆ ಪ್ರಥಮ ಬಹುಮಾನವನ್ನು, ವಡ್ಡರ್ಸೆ ಕೊತ್ತಾಡಿ ಮೂಡಬೆಟ್ಟು ದೀಪಿಕ ಶಿವಾನಂದ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಇಷ್ಟಾ ಶೆಟ್ಟಿ ವಡ್ಡರ್ಸೆ ದ್ವಿತೀಯ ಬಹುಮಾನವನ್ನು ಹಾಗೂ ಉಪ್ಲಾಡಿ ಪೂರ್ಣಿಮಾ ಸತೀಶ್ ಮೊಗವೀರ ದಂಪತಿಗಳ ಪುತ್ರಿ ಕುಮಾರಿ ಇಷಾನಿ ಎಸ್ ಉಪ್ಲಾಡಿ ತೃತೀಯಾ ಬಹುಮಾನವನ್ನು ಪಡೆದರು.

    2-4 ವರ್ಷದ ವಿಭಾಗದಲ್ಲಿ ಬ್ರಹ್ಮಾವರ ಕೊಳಂಬೆಯ ದೀಕ್ಷಾ ಸಂತೋಷ್ ದಂಪತಿಗಳ ಪುತ್ರಿ ಕುಮಾರಿ ಸ್ನಿಗ್ಧಾ ಎಸ್ ಆಚಾರ್ ಪ್ರಥಮ ಬಹುಮಾನವನ್ನು, ಕೋಟ ಹಂದಟ್ಟುವಿನ ಅಂಜಲಿ ನವೀನ್ ಕುಮಾರ್ ದಂಪತಿಗಳ ಪುತ್ರ ಆರ್ಯನ್ ಎನ್ ಪೂಜಾರಿ ದ್ವೀತಿಯ ಬಹುಮಾನವನ್ನು ಹಾಗೂ ಉಪ್ಲಾಡಿ ಸೀಮಾ ಕಿರಣ್ ಕುಂದರ್ ದಂಪತಿಗಳ ಪುತ್ರಿ ಕುಮಾರಿ ಸಿಯಾ ತೃತೀಯಾ ಬಹುಮಾನವನ್ನು ಪಡೆದರು.

    4-6 ವರ್ಷದ ವಿಭಾಗದಲ್ಲಿ ವಡ್ಡರ್ಸೆಯ ನಾಗರತ್ನ ಉಡುಪ ರಾಘವೇಂದ್ರ ಉಡುಪ ದಂಪತಿಗಳ ಪುತ್ರಿ ಕುಮಾರಿ ಸೌಂದರ್ಯ ಉಡುಪ ಪ್ರಥಮ ಬಹುಮಾನವನ್ನು, ಕೋಟ ಗೊಬ್ಬರಬೆಟ್ಟುವಿನ ಪ್ರತಿಮಾ ನಿತಿನ್ ಕುಮಾರ್ ದಂಪತಿಗಳ ಪುತ್ರಿ ಕುಮಾರಿ ಧನ್ವಿ ದ್ವೀತಿಯ ಬಹುಮಾನವನ್ನು ಹಾಗೂ ಮಧುವನ ಎಮ್.ಜಿ ಕಾಲೋನಿಯ ರೂಪ ರಾಘವೇಂದ್ರ ದಂಪತಿಗಳ ಪುತ್ರ ಅಮೃತ್ ಆರ್ ತೃತೀಯಾ ಬಹುಮಾನವನ್ನು ಪಡೆದರು.

    ಗಿಳಿಯಾರು ಸುಬ್ರಾಯ ಮಯ್ಯ, ಯಾಳಕ್ಲು ಚಂದ್ರಶೇಖರ್ ಶೆಟ್ಟಿ ಮತ್ತು ವಡ್ಡರ್ಸೆ ಹಾಡಿಮನೆ ಬಾಲಕೃಷ್ಣ ಶೆಟ್ಟಿ ಇವರು ಮುದ್ದು ಕೃಷ್ಣ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

    ಉಪ್ಲಾಡಿ ಗೋಪಾಲಕೃಷ್ಣ ಭಟ್, ಉಪ್ಲಾಡಿ ಶ್ರೀಧರ್ ಭಟ್, ಉಪ್ಲಾಡಿ ಸುಬ್ರಹ್ಮಣ್ಯ ಭಟ್, ಬನ್ನಾಡಿ ಲೋಕೇಶ್ ಭಟ್ ಮತ್ತು ದಿನೇಶ್ ಐತಾಳ್ ಗುಂಡ್ಮಿ ಇವರು ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದರು.

    ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಕೋಶಾಧಿಕಾರಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ ಹಾಗೂ ಸದಸ್ಯರುಗಳಾದ ಉಪ್ಲಾಡಿ ವೆಂಕಟರಮಣ ಭಟ್, ದಿನೇಶ್ ತೆಂಕಬೆಟ್ಟು ಉಪ್ಲಾಡಿ, ಉಪ್ಲಾಡಿ ಶಿವಾನಂದ ನಾೈರಿ, ಪಲ್ಲವಿ ಪೂಜಾರಿ ಬಡಾಬೆಟ್ಟು ಹಾಗೂ ಚೈತ್ರಾ ಇವರು ಕಾರ್ಯಕ್ರಮದ ನೇತೃತ್ವ ವಹಿಸಿದರು.

  • ಕೋಟೇಶ್ವರ :ಸಾಧನೆಗೆ ಪರಿಶ್ರಮವೆ ಮೂಲ ಮಂತ್ರ – ರಾಜೇಂದ್ರ ನಾಯಕ್

    ಕೋಟೇಶ್ವರ :ಸಾಧನೆಗೆ ಪರಿಶ್ರಮವೆ ಮೂಲ ಮಂತ್ರ – ರಾಜೇಂದ್ರ ನಾಯಕ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸಾಧನೆ ಎನ್ನುವುದು ಕನ್ನಡಿಯ ಗಂಟಲ್ಲ. ಕೈಗೆ ನಿಲುಕದ ಗಗನ ಕುಸುಮವೂ ಆಲ್ಲ ಬದಲಾಗಿ ಅದು ಸತತ ಪ್ರಯತ್ನ ಧೃಢ ಸಂಕಲ್ಪಕ್ಕೆ ತಲೆಬಾಗುವ ಸಿದ್ದಿ. ಎನ್. ಎಸ್. ಎಸ್ ವಿದ್ಯಾರ್ಥಿ ಜೀವನದ ಸರ್ವಾಂಗೀಣ ವ್ಯಕ್ತಿತ್ವವನ್ನು ಕಟ್ಟಿ ಬೆಳೆಸುತ್ತದೆ ಎಂದು ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ರಾಜೇಂದ್ರ ನಾಯಕ ಅಭಿಮತಿಸಿದರು.

    ಅವರು ಸರಕಾರಿ ಪ್ರೌಢ ಶಾಲೆ ಕೆ.ಪಿ. ಎಸ್. ಕೋಟೇಶ್ವರದಲ್ಲಿ ಎನ್. ಎಸ್. ಎಸ್. ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು.

    ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಅವರು ವಿದ್ಯಾರ್ಥಿಗಳಿಗೆ ಸೇವೆಗಾಗಿ ಬಾಳು ಎಂಬ ಎನ್. ಎಸ್. ಎಸ್. ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಡೈರಿಯನ್ನು ವಿತರಿಸಲಾಯಿತು.

    ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಉಪಪ್ರಾಂಶುಪಾಲ ಚಂದ್ರ ಶೇಖರ್ ಶೆಟ್ಟಿಯವರು ಎನ್. ಎಸ್. ಎಸ್. ವಿದ್ಯಾರ್ಥಿಗಳು ಸಂಪಾದಿಸಿದ ಪತ್ರಿಕಾ ಅಂಕಣ ಲೇಖನಗಳ ಸಂಗ್ರಹ ಮನೋಲ್ಲಾಸ ಕಥಾಕಾಲ ವಚನ ಜ್ಯೋತಿ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಎನ್ ಎಸ್ ಎಸ್ ವ್ಯಕ್ತಿತ್ವಕ್ಕಾಗಿ ಮತ್ತು ಸೇವೆಗಾಗಿ ನಾಡಿನ ಸೇವೆಯಿಂದ ವ್ಯಕ್ತಿಯ ಬಾಳು ಹಸನಾಗುತ್ತದೆ ಎಂದು ಪ್ರತಿಪಾದಿಸಿದರು.

    ಎನ್. ಎಸ್. ಎಸ್. ಅಧಿಕಾರಿ ರಮಾನಂದ ನಾಯಕ್ ಅವರು ಕಾರ್ಯಕ್ರಮ ಸಂಘಟಿಸಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ನಾನೇಕೆ ಎನ್. ಎಸ್. ಎಸ್. ಸೇರಿದೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಾದ ಸ್ಪೂರ್ತಿ ಸಮೃದ್ಧಿ ಮತ್ತು ಪ್ರಣತಿ ತಮ್ಮ ಅನಿಸಿಕೆ ವ್ಯಕ್ತಡಿಸಿ ಸ್ವಯಂ ಸೇವಕರಾಗಿದ್ದಕ್ಕೆ ಹೆಮ್ಮೆ ಪಟ್ಟರು.

    ಧರಣಿ ಸರ್ವರಿಗೂ ಧನ್ಯವಾದ ಅರ್ಪಿಸಿದರು. ಸುಚಿತ್ರ ಸಂಗಡಿಗರು ಪ್ರಾರ್ಥಿಸಿದರು. ವೇದಿಕೆಯಲ್ಲಿ ಎನ್. ಎಸ್. ಎಸ್. ಕಾರ್ಯದರ್ಶಿ ಸ್ಪೂರ್ತಿ ಉಪಸ್ಥಿತರಿದ್ದರು.

    ದೈಹಿಕ ಶಿಕ್ಷಕ ಉದಯ ಮಡಿವಾಳ ಎಂ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.

  • ಕುಂದಾಪುರ- ಗುಡ್ಡಟ್ಟು ಸರ್ಕಾರಿ ಬಸ್ ಉದ್ಘಾಟನೆ

    ಕುಂದಾಪುರ- ಗುಡ್ಡಟ್ಟು ಸರ್ಕಾರಿ ಬಸ್ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಾಲೂಕಿನ ಗ್ರಾಮೀಣ ಭಾಗವಾದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟು ಪ್ರದೇಶಕ್ಕೆ ನೂತನ ಸರ್ಕಾರಿ ಸಂಪರ್ಕಕ್ಕೆ ಭಾನುವಾರ ಚಾಲನೆ ನೀಡಲಾಯಿತು.

    ಗುಡ್ಡಟ್ಟು ವಿನಾಯಕ ದೇವಸ್ಥಾನದಲ್ಲಿ ಕುಂದಾಪುರ ಘಟಕದ ವ್ಯವಸ್ಥಾಪಕ ಬಸವ ತಿಮಪ್ಪ ನಾಯ್ಕ ಉದ್ಘಾಟಿಸಿ, ಸರ್ಕಾರೀಬಸ್ ಸೌಲಭ್ಯವನ್ನು ಗ್ರಾಮಸ್ಥರು ಬಳಸುವಂತೆ ಕರೆ ನೀಡಿದರು.

    ಈ ಸಂದರ್ಭ ವಿಭಾಗಿಯ ಯಾಂತ್ರಿಕ ಅಭಿಯಂತರ ಜಯ ಕುಮಾರ್, ಘಟಕ ಸಿಬ್ಬಂದಿ ಉದಯ ಶೆಟ್ಟಿ, ಸಂಚಾರಿ ನಿಯಂತ್ರಕರಾದ ಚಂದ್ರಶೇಖರ್, ರಮೇಶ ಪೂಜಾರಿ, ಮಾಜಿ ಸಂಚಾರಿ ಅಧೀಕ್ಷಕ ಸತ್ಯನಾರಾಯಣ ಕೆದ್ಲಾಯ, ಚಾಲಕ ಸಂದೇಶ, ನಿರ್ವಾಹಕ ರಾಜು ಜಾದವ್, ಗ್ರಾಮ ಪಂಚಾಯತಿ ಸದಸ್ಯ ಉದಯ ಯಡಾಡಿ, ಸಾಮಾಜಿಕ ಕಾರ್ಯಕರ್ತ ದಿನೇಶ ಪುತ್ರನ್ ವಿಠಲವಾಡಿ, ದೇವಾಸ್ಥಾನದ ಧರ್ಮದರ್ಶಿ ಅನಂತ ಪದ್ಮನಾಭ ಅಡಿಗ, ಪುರೋಹಿತ ಶಂಕರ ಅಡಿಗ ಗುಡ್ಡಟ್ಟು, ಗಂಗಾಧರ ಅಡಿಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ನೂತನ ಬಸ್ಸು ಬೆಳಿಗ್ಗೆ 11:10 ಕ್ಕೆ ಕುಂದಾಪುರದಿಂದ ಹೊರಟು ಮಧ್ಯಾಹ್ನ 12.40 ಕ್ಕೆ ಗುಡ್ಡಟ್ಟು ತಲುಪಲಿದೆ. ಮಧ್ಯಾಹ್ನ 2.30ಕ್ಕೆ ಗುಡ್ಡಟ್ಟುವಿನಿಂದ ಹೊರಡಲಿದೆ. ಆದರೆ ಈ ಸಮಯ ಗ್ರಾಮಸ್ಥರಿಗೆ ಅನುಕೂಲವಾಗಿಲ್ಲ ಎಂದು ಗ್ರಾ.ಪಂ.ಸದಸ್ಯ ಉದಯಕುಮಾರ್ ಆರೊಪಿಸಿದ್ದು, ಸಮಯ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಕೋಟೇಶ್ವರ :ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಸಂಸ್ಕಾರದ ಜತೆಗೆ ಬದುಕುವ ಶಿಕ್ಷಣ ನೀಡಬೇಕಾಗಿದೆ – ಪಡುವರಿ ನಾಗೇಶ್ ಆಚಾರ್ಯ

    ಕೋಟೇಶ್ವರ :ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಸಂಸ್ಕಾರದ ಜತೆಗೆ ಬದುಕುವ ಶಿಕ್ಷಣ ನೀಡಬೇಕಾಗಿದೆ – ಪಡುವರಿ ನಾಗೇಶ್ ಆಚಾರ್ಯ

    ವಿಶ್ವಕರ್ಮ ಯಜ್ಞ ಮಹೋತ್ಸವ ; ಧಾರ್ಮಿಕ ಸಭಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

     

    ಕುಂದಾಪುರ : ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.), ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರ ಆಶ್ರಯದಲ್ಲಿ ನಡೆದ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವವು ಪುರೋಹಿತ್ ರೋಹಿತಾಕ್ಷ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸೆ.17 ರಂದು ನಡೆಯಿತು.

    ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಅಧ್ಯಾಪಕ ಪಡುವರಿ ನಾಗೇಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯವರು ಸಾಮಾಜಿಕವಾಗಿ ಎಲ್ಲಾ ವರ್ಗದ ಜನರಲ್ಲಿ ಗುರುತಿಸಿಕೊಳ್ಳಲು ನಾವು ಮಾಡುವ ಪಂಚ ಕಸುಬುಗಳೇ ಕಾರಣ. ಆದರೆ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಬುದ್ಧತೆಗೆ ಬರುವಲ್ಲಿ ಹಿಂದೆ ಉಳಿಯಲು ನಮ್ಮಲ್ಲಿನ ಶಿಕ್ಷಣ ಹಾಗೂ ಸಂಘಟನೆಯ ಕೊರತೆಯೇ ಮೂಲ ಕಾರಣವಾಗಿದೆ. ಸಂಪತ್ತನ್ನು ಸಂಪಾದಿಸಿದವರಿಗೆ ನೆಮ್ಮದಿ ಇಲ್ಲ , ಶಿಕ್ಷಣ ಎನ್ನುವುದು ಅತ್ಯಮೂಲ್ಯ ಸಂಪತ್ತು, ಇದು ಜೀವನದಲ್ಲಿ ನೆಮ್ಮದಿ, ಶಾಂತಿ ನೀಡುತ್ತದೆ. ಮಾನವತೆಯ ವಿಕಾಸ ಹಾಗೂ ಆತ್ಮ ವಿಶ್ವಾಸವೇ ಶಿಕ್ಷಣ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಸಂಸ್ಕಾರದ ಜತೆಗೆ ಬದುಕುವ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು.

    ಪುರೋಹಿತ್ ರೋಹಿತಾಕ್ಷ ಆಚಾರ್ಯ ಶುಭಾಶಂಸನೆಗೈದು ಮಾತನಾಡಿ, ಭಗವಂತನ ಆರಾಧನೆ ಅಷ್ಟು ಸುಲಭವಲ್ಲ, ಅದಕ್ಕೂ ಯೋಗ ಹಾಗೂ ಋಣಾನುಬಂಧ ಸಂಬಂಧಗಳು ಬೇಕು. ಭಗವಂತ ಸರ್ವ ವ್ಯಾಪಿ, ಪ್ರತ್ಯಕ್ಷವಾಗಿ ಕಾಣುವ ದೇವರಲ್ಲ. ಈ ಜಗತ್ತಿನ ಸೃಷ್ಟಿ ,ಸ್ಥಿತಿ, ಲಯಗಳನ್ನು ಮಾಡಿದಂತಹ ಭಗವಂತನ ದಿನವೇ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ರಜತ ಶಿಲ್ಪಿ ಸಾಂತಾವರ ಕೇಶವ ಆಚಾರ್ಯ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಯುವ ಪ್ರತಿಭೆ ಪ್ರೀತಮ್ ಆಚಾರ್ಯ ಹೊದ್ರಾಳಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಅಧ್ಯಕ್ಷ ಸುರೇಶ್ ಆಚಾರ್ಯ ಸಾಂತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲೆಟ್ ಉಮೇಶ್ ಆಚಾರ್ಯ ಸಾಂತಾವರ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.) ಇದರ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಅರಸರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ಕುಂಚದಲ್ಲಿ ಮೂಡಿಬಂದ ಆಕರ್ಷಕ ಶ್ರೀ ವಿಶ್ವಕರ್ಮ !
    ಮಂಗಳೂರು ಮಹಾಲಸಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಚಿತ್ರಕಲಾ ವಿದ್ಯಾರ್ಥಿ ಪ್ರೀತಮ್ ಆಚಾರ್ಯ ಹೊದ್ರಾಳಿ ಅವರ ಕುಂಚದಲ್ಲಿ ಮೂಡಿಬಂದ ಆಕರ್ಷಕ ಶ್ರೀ ವಿಶ್ವಕರ್ಮ ದೇವರ ಚಿತ್ತಾರದ ಕ್ಯಾನ್‍ವಾಸ್‍ನ್ನು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ (ರಿ.) ಇದರ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಅವರಿಗೆ ಹಸ್ತಾಂತರಿಸಿದರು.

    ಕೋಶಾಧಿಕಾರಿ ಗಣೇಶ್ ಆಚಾರ್ಯ ಕುಂಬ್ರಿ ಸ್ವಾಗತಿಸಿ, ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ ಪ್ರಸ್ತಾವನೆಗೈದು, ಸತೀಶ್ ಆಚಾರ್ಯ, ಮಂಜುನಾಥ ಆಚಾರ್ಯ ಅರಸರಬೆಟ್ಟು, ದಿನೇಶ್ ಆಚಾರ್ಯ ಸಾಂತಾವರ ಸಹಕರಿಸಿ, ಕಲಾವಿದ ಜೀವಿ ವೆಂಕಟೇಶ್ ಆಚಾರ್ಯ ನಿರೂಪಿಸಿ, ವಂದಿಸಿದರು.

     

  • ಕುಂದಾಪುರ :ಬೆಂಗಳೂರು – ಮುರುಡೇಶ್ವರ ಪ್ರತ್ಯೇಕ ರೈಲಿಗೆ ಕಾಂಗ್ರೆಸ್ ಆಗ್ರಹ

    ಕುಂದಾಪುರ :ಬೆಂಗಳೂರು – ಮುರುಡೇಶ್ವರ ಪ್ರತ್ಯೇಕ ರೈಲಿಗೆ ಕಾಂಗ್ರೆಸ್ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಯುಪಿಎ ಸರಕಾರದ ಅವಧಿಯಲ್ಲಿ ಪ್ರಾರಂಭವಾಗಿದ್ದ ಬೆಂಗಳೂರು – ಮೈಸೂರು – ಕಾರಾವರ ರೈಲು , ಬೆಂಗಳೂರು – ಕಾರಾವರ ನೇರ ರೈಲು ಪಾರಂಭವಾದ ನಂತರ ಕರಾವಳಿಗೆ ರದ್ದಾಗಿ ಮಂಗಳೂರು ತನಕ ಸಂಚರಿಸುತಿತ್ತು .

    ಈಗ ಅದೇ ರೈಲು ಮುರುಡೇಶ್ವರದ ತನಕ ವಿಸ್ತರಣೆಗೊಂಡಿದೆ. ಈ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮಾತ್ರ ಕರಾವಳಿ ಜನತೆಗೆ ಅನೂಕೂಲವಾಗಲಿದೆ .ರಾತ್ರಿ 8-15 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮದ್ಯಾಹ್ನ 11 -54 ಕ್ಕೆ ಕುಂದಾಪುರಕ್ಕೆ ಬರಲಿದೆ. ಕುಂದಾಪುರದಿಂದ ಮದ್ಯಾಹ್ನ 3 – 10 ಕ್ಕೆ ಹೊರಟು ಬೆಳಿಗ್ಗೆ 7-15 ಕ್ಕೆ ಬೆಂಗಳೂರು ತಲುಪಲಿದೆ.

    ಈ ವೇಳಾಪಟ್ಟಿ ಬೆಂಗಳೂರಿಗೆ ತೆರಳುವ ಕುಂದಾಪುರ ಮತ್ತು ಕರಾವಳಿಗರಿಗೆ ಅನೂಕೂಲವಾಗಿಲ್ಲ .ರಾತ್ರಿ ಹೊರಟು ಬೆಳಿಗ್ಗೆ ಕುಂದಾಪುರ – ಬೆಂಗಳೂರು ತಲುಪುವುದಿದ್ದರೆ ಮಾತ್ರ ಕರಾವಳಿಗರಿಗೆ ಅನೂಕೂಲ . ಪಂಚಗಂಗಾ ಎಕ್ಸಪ್ರೆಕ್ಸ ರೈಲಿನ ಟಿಕೆಟ್ 15 ದಿನಗಳ ಮೊದಲೇ ಬುಕ್ ಆಗುತ್ತಿದೆ.

    ಪ್ರಸ್ತುತ ಸಂಚರಿಸುತ್ತಿರುವ ರೈಲನ್ನೇ ಹಿಂದೆ ಇರುವಂತೆ ಮುಂದುವರಿಸಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಹೊಸ ರೈಲು ಪ್ರಾರಂಭವೆಂದು ಜನರ ದಿಕ್ಕು ತಪ್ಪಿಸಿ ಸಂಭ್ರಮಿಸುವುದು ಬೇಡಾ.

    ಜಿಲ್ಲೆಯ ಬಿಜೆಪಿ ಶಾಸಕರಿಗೆ ಮತ್ತು ಜಿಲ್ಲೆಯ ಸಂಸದರಾಗಿ ಕೇಂದ್ರ ಸಚಿವರಾದವರಿಗೆ ಕರ್ತವ್ಯದ ಮೇಲೆ ಬದ್ಧತೆ ಇದ್ದರೇ ವಂದೇ ಮಾತರಂ ಅಥವಾ ಯಾವುದೇ ಒಂದು ಹೊಸ ರೈಲನ್ನು ಕರಾವಳಿಯಿಂದ ಬೆಂಗಳೂರಿಗೆ ಜನರಿಗೆ ಅನುಕೂಲವಾಗುವ ವೇಳಾಪಟ್ಟಿಯಂತೆ ಪ್ರಾರಂಭಿಸಲಿ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.

  • ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ರಕ್ತದಾನ ಶಿಬಿರ

    ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ರಕ್ತದಾನ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

    ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟೆಹೊಳೆ ,ಮಂಡಲ ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ,ರಾಜ್ಯ ಯುವ ಮೋರ್ಚ ಕಾರ್ಯಕಾರಣಿ ಸದ್ಯಸ್ಯರು ಪ್ರಜ್ವಲ್ ಶೆಟ್ಟಿ, ಜಿಲ್ಲಾ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅನುರ್ ಮೆಂಡನ್, ಆಕಾಶ್ ಪೂಜಾರಿ, ಉಪಾಧ್ಯಕ್ಷ ಲೋಹಿತ್ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ಶೇಖರ್ ಖಾರ್ವಿ, ಪುಷ್ಪರಾಜ್ ಶೆಟ್ಟಿ, ಮಾಲಿನಿ ಕೆ ಹಾಗೂ ಮಂಡಲ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.