Category: ಸುದ್ದಿ

  • ಅಮಾಸೆಬೈಲು: ಹೊಸ ಬಿ.ಎಸ್.ಎನ್.ಎಲ್. ಟವರ್ ಗೆ ಶಾಸಕರರಿಂದ ಗುದ್ದಲಿ ಪೂಜೆ

    ಅಮಾಸೆಬೈಲು: ಹೊಸ ಬಿ.ಎಸ್.ಎನ್.ಎಲ್. ಟವರ್ ಗೆ ಶಾಸಕರರಿಂದ ಗುದ್ದಲಿ ಪೂಜೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮಚ್ಚಟ್ಟು ಗ್ರಾಮದ ಹಂಚಿಕಟ್ಟೆಯ ಸಾರ್ವಜನಿಕರ ಹಲವು ದಿನಗಳ ಬೇಡಿಕೆಯಾಗಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಪಂದಿಸಿದ್ದಾರೆ. ಗುರುವಾರ ಶಾಸಕದ್ವಯರು ಅಮಾಸೆಬೈಲು ಮಚ್ಚಟ್ಟು ಗ್ರಾಮದ ಹಂಚಿಕಟ್ಟೆಯಲ್ಲಿ ಬಿಎಸ್ಎನ್ ಟವರ್ ಗುದ್ದಲಿ ಪೂಜೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಅಮಾಸೆಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಂಚಾಯಿತಿ ಸದಸ್ಯ ಗಣೇಶ್ ಶೆಟ್ಟಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಕ್ಷೇತ್ರಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಟವರ್ ಗುತ್ತಿಗೆದಾರ ಅಶೋಕ್ ಕುಂದರ್ ಚಂದ್ರ ನಾಯ್ಕ್ ತೊಂಬಟ್ಟು, ಇಲಾಖೆಯ ಅಧಿಕಾರಿಗಳು ಮತ್ತು ಅಧಿಕಾರಿಗಳು ಹಾಗೂ ಮತ್ತು ನಾಗರಿಕರು ಉಪಸ್ಥಿತರಿದ್ದರು.

  • ಕುಂದಾಪುರ: ಭಾರಿ ಬಿರುಗಾಳಿ ಹಿನ್ನೆಲೆ – ಉಳ್ಳೂರು 74ರಲ್ಲಿ ಏಳು ಮನೆ, ಅಪಾರ ಕೃಷಿ ಹಾನಿ

    ಕುಂದಾಪುರ: ಭಾರಿ ಬಿರುಗಾಳಿ ಹಿನ್ನೆಲೆ – ಉಳ್ಳೂರು 74ರಲ್ಲಿ ಏಳು ಮನೆ, ಅಪಾರ ಕೃಷಿ ಹಾನಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮಂಗಳವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಕುಂದಾಪುರ ತಾಲೂಕಿನ ಉಳ್ಳೂರು 74ರಲ್ಲಿ ಏಳು ಮನೆಗಳಿಗೆ ಹಾನಿಯಾಗಿ ಒಂದೂವರೆ ಸಾವಿರಕ್ಕೂ ಅಧಿಕ ಅಡಿಕೆ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿವೆ.

    ಜಯಕರ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ವಾಗಿದೆ. ಪಾರ್ವತಿ ಶೆಡ್ತಿಯವರ ಮನೆಗೆ ಸುಮಾರು 25 ಸಾವಿರ ರೂಪಾಯಿಯಷ್ಟು ಹಾನಿಯಾಗಿದೆ. ಸುಮತಿ ಶೆಡ್ತಿಯವರ ಮನಗೆ ಹಾನಿಯಾಗಿದ್ದು, 50 ಸಾವಿರ ರೂಪಾಯಿ ನಷ್ಟವಾಗಿದೆ. ರತ್ನಾಕರ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 20 ಸಾವಿರ ನಷ್ಟ ಅಂದಾಜಿಸಲಾಗಿದೆ. ನೀಲು ಪೂಜಾರ್ತಿಯವರ ಮನೆಗೆ 25 ಸಾವಿರ ನಷ್ಟ, ಗಿರಿಜಾ ಪೂಜಾರ್ತಿಯವರ ಮನೆಗೆ 20 ಸಾವಿರ ನಷ್ಟ ಅಂದಾಜಿಸಲಾಗಿದೆ, ಅಣ್ಣಪ್ಪ ಪೂಜಾರಿಯವರ ಮನೆಗೆ ಸುಮಾರು 25 ಸಾವಿರದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

    ಹಲವರ ತೋಟಕ್ಕೆ ನುಗ್ಗಿದ ಗಾಳಿ ಸುಮಾರು 1600ಕ್ಕೂ ಅಧಿಕ ಅಡಿಕೆ ಮರ ಹಾಗೂ ನಾಲ್ಕು ತೆಂಗಿನ ಮರಗಳು ಧರೆಗುರುಳಿವೆ. ಸುಧಾಕರ ಶೆಟ್ಟಿಯವರ 225 ಅಡಿಕೆ ಮರ, ಶಂಕರ ಶೆಟ್ಟಿಯವರ 150, ಮಹಾಬಲ ನಾಯ್ಕರ 40, ಉದಯ ಪೂಜಾರಿಯವರ ತೋಟದ 15 ಮರ, ವನಜ ಆಚಾರ್ತಿಯವರ 35 ಮರಗಳು, ರತ್ನ ಆಚಾರಿಯವರ 75, ಲಕ್ಷ್ಮೀನಾರಾಯಣ ಆಚಾರಿಯವರ 25, ಕೃಷ್ಣ ಆಚಾರಿಯವರ 20, ಪಾರ್ವತಿ ಶೆಟ್ಟಿಯವರ 25, ಸಂಪಿಗೇಡಿ ನಾರಾಯಣ ಶೆಟ್ಟಿಯವರ 125 ಅಡಿಕೆ ಹಾಗೂ 4 ತೆಂಗಿನ ಮರ, ಸುಮತಿ ಶೆಡ್ತಿಯವರ 200 ಅಡಿಕೆ ಮರ, ರತ್ನಾಕರ ಶೆಟ್ಟಿಯವರ 200 ಅಡಿಕೆ, ದಿವಾಕರ ಶೆಟ್ಟಿಯವರ 220 ಮರ ಹಾಗೂ ಕಲಾವತಿ ಶೆಟ್ಟಿಯವರ 250 ಅಡಿಕೆ ಮರಗಳು ಮುರಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಥಳಕ್ಕೆ ಕುಂದಾಪುರ ತಹಸೀಲ್ದಾರ್ ಶೋಭಾ ಲಕ್ಷ್ಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಉಳ್ಳೂರು ಗ್ರಾಮ ಕರಣಿಕ ಕಿರಣ್. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಹೆಬ್ಬಾರ್. ಪಿಡಿಒ ಶ್ರೀಧರ್ ಕಾಮತ್. ಪಂಚಾಯತ್ ಸದಸ್ಯರುಗಳು. ಮುಖಂಡರಾದ ಸಂಜೀವ ಶೆಟ್ಟಿ ಸಂಪಿಗೇಡಿ, ರೋಹಿತ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಿಗೋಳಗಾದ ಮನೆ ಹಾಗೂ ಅಡಿಕೆ ತೋಟಕ್ಕೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಯಕ್ಷಗಾನ ತರಗತಿಯ ಉದ್ಘಾಟನೆ

    ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಯಕ್ಷಗಾನ ತರಗತಿಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕೊಡ್ಗಿಯವರ ಆಶಯದಂತೆ ಯಕ್ಷಗಾನ ಕಲಾರಂಗ ಉಡುಪಿ ಇವರ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

    ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

    ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಸದಸ್ಯೆ ಸುಲತಾ ಹೆಗ್ಡೆಯವರು ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಮುರಳಿ ಕಡೇಕಾರರು, ಗುಂಡ್ಮಿಯ ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿಗಳಾದ ವೈಕುಂಠ ಹೇರ್ಳೆ , ಶಾಲಾಭಿವೃದ್ದಿ ಸಮಿತಿಯ ಗೌರವ ಸದಸ್ಯರಾದ ಗಣೇಶ್ ಚಲ್ಲಮಕ್ಕಿ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಶೇರ್ವೆಗಾರ್,ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಹಾಗೂ ಯಕ್ಷಗಾನ ತರಬೇತಿ ಶಿಕ್ಷಕರಾದ ಮಂಜುನಾಥ ಕುಲಾಲ ಉಪಸ್ಥಿತರಿದ್ದರು.

    ಶಾಲಾ ಮುಖ್ಯ ಶಿಕ್ಷಕ ಕೆ.ಸತೀಶ ಐತಾಳರು ಸ್ವಾಗತಿಸಿ, ಸಹಶಿಕ್ಷಕಿ ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕರಾದ ಪ್ರತಾಪಚಂದ್ರ ಕಿಣಿಯವರು ವಂದನಾರ್ಪಣೆಗೈದರು.

  • ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಪ್ರಶಸ್ತಿ

    ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು ಪ್ರಾರಂಭಗೊಂಡು 65 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ, 66ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನೆಡೆಯುತ್ತಿರುವ ಸಂದರ್ಭ ಸಂಘವು 206 ಕೋಟಿಗೂ ಮಿಕ್ಕಿ ಠೇವಣಾತಿ ಹೊಂದಿ, 162 ಕೋಟಿಗೂ ಮಿಕ್ಕಿ ಸಾಲ ನೀಡಿದ್ದು, 223 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳದೊಂದಿಗೆ ಸತತ 13 ವರ್ಷಗಳಿಂದ ‘ಅ’ ತರಗತಿ ಆಡಿಟ್ ವರ್ಗೀಕರಣ, 2022-23ನೇ ಸಾಲಿನಲ್ಲಿ ಶೇ.98.08ರಷ್ಟು ಸಾಲ ವಸೂಲಾತಿಯೊಂದಿಗೆ 5.17 ಕೋಟಿ ಲಾಭವನ್ನು ಗಳಿಸಿ ಇನ್ನಿತರ ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿs ಸಂಘವು ಮುಂಚೂಣಿಯಲ್ಲಿದೆ. 2022-23ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಲಿ. ಮಂಗಳೂರು (ಸ್ಕ್ಯಾಡ್ಸ್) ಇವರಿಂದ ಸಂಘವು ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿ ತನ್ನ ಸದಸ್ಯರಿಗೆ ವಿತರಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿರುತ್ತದೆ. ಈ ಹಿನ್ನಲ್ಲೆಯನ್ನು ಗಮನಿಸಿಕೊಂಡು ಜು.31ರಂದು ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಮಂಗಳೂರು (ಸ್ಕ್ಯಾಡ್ಸ್) ಇದರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ರವೀಂದ್ರ ಕಂಬಳಿ ಇವರು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶರತ ಕುಮಾರ್ ಶೆಟ್ಟಿ ಇವರಿಗೆ ಅಭಿನಂದನಾ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸಂಘದ ನಿರ್ದೇಶಕರಾದ ಭಾಸ್ಕರ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.

     

  • ಕುಂದಾಪುರ: ಮಣಿಪುರ ಪ್ರಕರಣದಲ್ಲಿ ಕೇಂದ್ರದ ಮೌನ ನಡೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

    ಕುಂದಾಪುರ: ಮಣಿಪುರ ಪ್ರಕರಣದಲ್ಲಿ ಕೇಂದ್ರದ ಮೌನ ನಡೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: 93 ದಿನಗಳ ಹಿಂದೆ ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಅತ್ಯಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಮೌನವಾಗುವ ಮೂಲಕ ಇಡೀ ದೇಶವೇ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಮಣಿಪುರದ ಜನಾಂಗೀಯ ಕಲಹವನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದ ಅವರು, ಸಂಸತ್ ಕಲಾಪದಲ್ಲಿ ಮೋದಿ ಮೌನವಾಗಿದ್ದಾರೆ ಎಂದು ಆರೋಪಿಸಿದರು.

    ಇದೇ ಸಂದರ್ಭ ಮಾತನಾಡಿದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೇಮದ್ರದ ಬಿಜೆಪಿ ಸರ್ಕಾರ ಬುಡಮೇಲು ಮಾಡಲು ಹೊರಟಿರುವುದು ಆಘಾತಕಾರಿ ವಿಷಯ. ಮಣಿಪುರದ ಬುಕಟ್ಟು ಜನಾಂಗಕ್ಕೆ ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಹೋರಾಟ ಮುಮದುವರೆಯುತ್ತದೆ ಎಂದರು. ವಿಕಾಸ್ ಹೆಗ್ಡೆ ಮಾತನಾಡಿ, ಮಣಿಪುರದಲ್ಲಿ ಬಿಜೆಪಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಭೃಟಿ ಬಚಾವೋ ಭೇಟಿ ಪಡಾವೋ ಕೇವಲ ಮೋದಿಯವರ ಭಾಷಣಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

    ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ದೇಶದಲ್ಲಿ ಸಾಮಾಜಿಕ ಸ್ವಾತಂತ್ರ್ಯವಿಲ್ಲವಾಗಿದೆ. ಸೈನಿಕನೊಬ್ಬನ ಪತ್ನಿಗೇ ಈ ರೀತಿಯ ಸಾಮೂಹಿಕ ಅತ್ಯಾಚಾರ, ಬೆತ್ತಲೆಯಾಗುವ ಪರಿಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು ಎನ್ನುವುದನ್ನು ಯೋಚಿಸಬೇಕಾಗಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಭಾರತ ಅಶಾಂತಿಯಿಂದ ಬಳಲುತ್ತಿದೆ ಎಂದು ಆರೋಪಿಸಿದರು. ಮಣಿಪುರದ ಮಹಿಳೆಯರೇ ನಮ್ಮೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಪ್ರತಿಭಟನೆಯುದ್ದಕ್ಕೂ ಮೊಳಗಿತು.

    ಮುಖಂಡ ಶಂಕರ್ ಕುಂದರ್ ಮಾತನಾಡಿದರು. ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಪಂಚಾಯತ್ ಸದಸ್ಯರಾದ ವಿದ್ಯಾಧರ್, ಸೌಮ್ಯ ಮೊಗವೀರ, ಗಣಪತಿ ಶೇಟ್, ರೋಶನ್ ಬರೆಟ್ಟೊ, ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಕ್ರಷ್ಣದೇವ್ ಕಾರಂತ,ಗಣೇಶ್ ಶೇರೆಗಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ, ಚಂದ್ರ ಅಮೀನ್, ಚಂದ್ರ ಶೇಖರ ಶೆಟ್ಟಿ, ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಗಂಗಾಧರ್ ಶೆಟ್ಟಿ, ನಾರಾಯಣ ಆಚಾರ್, ಕೇಶವ್ ಭಟ್, ಅಭಿಜಿತ್ ಪೂಜಾರಿ, ಧರ್ಮಪ್ರಕಾಶ್, ಕುಮಾರ್ ಖಾರ್ವಿ, ಮುನಾಫ್, ಸುನಿಲ್ ಪೂಜಾರಿ, ಸಚ್ಚಿದಾನಂದ , ರೇವತಿ ಶೆಟ್ಟಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಸುವರ್ಣ ಅಲ್ಮೇಡಾ, ಪ್ರಭಾವತಿ,ಸುಮನಾ ಪೂಜಾರಿ, ಸವಿತಾ ಸಿಕ್ವೇರಾ, ಜ್ಯೋತಿ ಮೋಗವಿರ, ಪ್ರೇಮಾ, ವೇಲಾ ಬ್ರಗಾಂಜ, ವಿಠಲ ಕಾಂಚನ್, ಹಾರೋನ್ ಸಾಹೇಬ್, ಮೌರಿಸ್ ಕರ್ವಾಲ್ಲೊ, ಅಬ್ದುಲ್ಲಾ ಕೋಡಿ, ಪ್ರೀತಮ್ ಕರ್ವಾಲ್ಲೊ, ಅಶೋಕ್ ಸುವರ್ಣ, ಡೋಲ್ಫಿ ಡಿಕೋಸ್ತಾ, ಜೋಸೆಫ್ ರೆಬೆಲ್ಲೊ, ಕ್ಲಿಫರ್ಡ್ ಡಿಸಿಲ್ವಾ, ಗಣೇಶ್ ನೆಲ್ಲಿ ಬೆಟ್ಟು, ರಾಕೇಶ್ ಶೆಟ್ಟಿ, ಸುರೇಶ್ ಕೆ, ಅರುಣ್ ಪಟೇಲ್, ನಾಗರಾಜ್ ನಾಯ್ಕ್, ವೇಣುಗೋಪಾಲ್, ಶ್ರೀನಿವಾಸ ಶೆಟ್ಟಿ, ಕಿರಣ್ ಕಲ್ಲಾಗಾರ, ಶಶಿ ನಂದಿಬೆಟ್ಟ ಮೊದಲಾದವರಿದ್ದರು. ವಿನೋದ್ ಕ್ರಾಸ್ತಾ ಪ್ರಾಸ್ತಾವಿಸಿ ನಿರೂಪಿಸಿದರು.

  • ಉಪ್ಪುಂದ ಕರ್ಕಿಕಳಿ ದೋಣಿ ಮುಳುಗಡೆ : ನಾಪತ್ತೆಯಾಗಿದ್ದ ಸತೀಶ್ ಖಾರ್ವಿ ಶವ ಪತ್ತೆ

    ಉಪ್ಪುಂದ ಕರ್ಕಿಕಳಿ ದೋಣಿ ಮುಳುಗಡೆ : ನಾಪತ್ತೆಯಾಗಿದ್ದ ಸತೀಶ್ ಖಾರ್ವಿ ಶವ ಪತ್ತೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೈಂದೂರು ತಾಲೂಕಿನ ಉಪ್ಪುಂದದ ಕರ್ಕಿಕಳಿಯಲ್ಲಿ ನಡೆದ ನಾಡದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಮೀನುಗಾರ ಸತೀಶ್ ಖಾರ್ವಿ ಶವ ಮಂಗಳವಾರ ರಾತ್ರಿ ಪತ್ತೆಯಾಗಿದೆ.

    ಉಪ್ಪುಂದ ಸಮೀಪದ ಕೊಡೇರಿ ಬಂದರು ಸಿ ವಾಕ್ ಬಲಬದಿಯಲ್ಲಿ ಸತೀಶ್ ಖಾರ್ವಿ ಶವ ತೇಲಿ ಬಂದಿದ್ದು ಸ್ಥಳೀಯರು ಗುರುತಿಸಿ ಮಾಹಿತಿ ನೀಡಿದ್ದಾರೆ.

    ನಿನ್ಬೆಯಿಂದಲೂ ಸ್ಥಳೀಯರು ಹಾಗೂ ಪೊಲೀಸರು ಸತೀಶ್ ಖಾರ್ವಿಗಾಗಿ ಶೋಧ ಕಾರ್ಯ ನಡೆಸಿದ್ದರು.

  • ಉಪ್ಪುಂದ ದೋಣಿ ದುರಂತ: ಸಚಿವ ಮಾಂಕಾಳ್ ವೈದ್ಯ ರಿಂದ ತಲಾ 6ಲಕ್ಷ ಪರಿಹಾರದ ಚೆಕ್ ವಿತರಣೆ

    ಉಪ್ಪುಂದ ದೋಣಿ ದುರಂತ: ಸಚಿವ ಮಾಂಕಾಳ್ ವೈದ್ಯ ರಿಂದ ತಲಾ 6ಲಕ್ಷ ಪರಿಹಾರದ ಚೆಕ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತ ಪ್ರದೇಶ ಹಾಗೂ ಮೃತ ಮೀನುಗಾರರ ಮನೆಗಳಿಗೆ ಸಚಿವ ಮಾಂಕಾಳ ವೈದ್ಯ ಮಂಗಳವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

    ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ದೋಣಿ ದುರಂತದ ಬಗ್ಗೆ ನೋವಿದೆ. ಮೀನುಗಾರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನಿಧಿ ದೊರಕಿಸಿಕೊಡಬೇಕೆಂಬುದು ಶ್ರಮವಹಿಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ಚೆಕ್ ಹಸ್ತಾಂತರಿಸಲಾಗುತ್ತಿದೆ. ಕೊಡೇರಿ ಬಂದರಿನ ಎರಡು ಬದಿಯಲ್ಲಿ 250 ಮೀಟರ್ ಬ್ರೇಕ್ ವಾಟರ್ ವಿಸ್ತರಿಸುವ ಬಗ್ಗೆ ಶಾಸಕರು ಹಾಗೂ ಮಾಜಿ ಶಾಸಕರು ಬೇಡಿಕೆ ಇರಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಅನುಷ್ಠಾನಗೊಳಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದರು.
    ಸಿಆರ್ಝಡ್ ಸಮಸ್ಯೆ ನಿವಾರಿಸಲು ಒಂದು ತಂಡ ರಚಿಸಲಾಗಿದ್ದು, ಮರವಂತೆ ಬಂದರು ಕಾಮಗಾರಿಯೂ ಶೀಘ್ರ ಆರಂಭವಾಗಲಿದೆ. ಎಂದರು.

    ಈ ವೇಳೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮೀನುಗಾರ ಮುಖಂಡರಾದ ಮದನ್ ಕುಮಾರ್ ಉಪ್ಪುಂದ, ವೆಂಕಟರಮಣ ಖಾರ್ವಿ, ಆನಂದ ಖಾರ್ವಿ, ಜಗನ್ನಾಥ ಮೊಗವೀರ, ಪ್ರಮುಖರಾದ ಎಸ್. ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ , ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬಿ.ಎಸ್. ಸುರೇಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಉಡುಪಿ :ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಹಾಗೂ ಸರಕಾರಿ ಸೇವಕರ ಆದ್ಯ ಕರ್ತವ್ಯ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಉಡುಪಿ :ಜನರ ಆಶೋತ್ತರಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಹಾಗೂ ಸರಕಾರಿ ಸೇವಕರ ಆದ್ಯ ಕರ್ತವ್ಯ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಕುಂದಾಪುರ ಮಿರರ್ ‌ಸುದ್ದಿ…

    ಉಡುಪಿ,(ಆಗಸ್ಟ್ 1): ಜನ ಸಾಮಾನ್ಯರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾಗ ಮಾತ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯ. ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವುದರ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸುವುದರೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಾರ್ವಜನಿಕರ ತೆರಿಗೆ ಹಣದಿಂದ ಸರಕಾರವನ್ನು ನಡೆಸಲಾಗುತ್ತದೆ. ಅವರ ಆಶಯಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುವುದು ಜನ ಪ್ರತಿನಿಧಿಗಳಾದ ನಾವು ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯ. ಅದರಲ್ಲೂ ಜನರಲ್ಲಿ ನೇರ ಸಂಪರ್ಕವನ್ನು ಹೊಂದಿ ಸರಕಾರ ಮತ್ತು ಜನರ ಮಧ್ಯೆ ಸೇತುವೆಯಾಗಿ ಸರಕಾರಿ ನೌಕರರು ಕಾರ್ಯನಿರ್ವಹಿಸಬೇಕು. ಇದನ್ನು ಮರೆತರೆ ಜನ ವಿರೋಧಿಯಾಗುತ್ತಾರೆ ಎಂದರು. ಅಧಿಕಾರಿಗಳು ನಾವು ಉನ್ನತ ಮಟ್ಟದ ಅಧಿಕಾರಿಗಳು ಎಂಬ ಭ್ರಮೆಯನ್ನು ಬಿಟ್ಟು ಹಾಗೂ ಜನಪ್ರತಿನಿಧಿಗಳು ಕೂಡಾ ತಮ್ಮ ಅಧಿಕಾರದ ಅಹಂ ಅನ್ನು ಬಿಟ್ಟು ಜನರನ್ನು ಗೌರವದಿಂದ ಕಾಣಬೇಕು. ಜನರು ಸಮಸ್ಯೆಗಳನ್ನು ತಂದು ಕಚೇರಿಗೆ ಬಂದಾಗ ಅವರುಗಳಿಗೆ ಅಲೆದಾಡಿಸದೇ ಸರಕಾರದ ನಿಯಮಾನುಸಾರ ಕೆಲಸವನ್ನು ಮಾಡಿಕೊಡಬೇಕೆಂದು ತಿಳಿಸಿದರು.
    ನೆರೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ಒದಗಿಸುವುದರ ಜೊತೆಗೆ ಅವರ ಮನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳೇ ಮೇಲುಸ್ತುವಾರಿಯನ್ನು ವಹಿಸಬೇಕು. ಮಳೆ ನೀರಿನಿಂದ ಹಾನಿಗೊಳಗಾದಾಗ ಬೆಳೆಹಾನಿಯನ್ನು ಶೀಘ್ರದಲ್ಲಿಯೇ ಸರ್ವೇ ಮಾಡಿಸಿ, ಪರಿಹಾರ ನೀಡುವುದರ ಜೊತೆಗೆ ಎರಡನೇ ಬಾರಿ ಬಿತ್ತನೆಗೆ ಭತ್ತದ ಬೀಜದ ವ್ಯವಸ್ಥೆಯನ್ನು ಸಹ ಮಾಡಬೇಕು. ಜಿಲ್ಲೆಯಲ್ಲಿ ಈ ಬಾರಿಯ ಮಳೆಯಿಂದ 6296.25 ಲಕ್ಷ ರೂ. ದಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸುವ ರಸ್ತೆ, ವಿದ್ಯುತ್, ಸಂಪರ್ಕ ಸಾಧನಗಳು, ಸರಕಾರಿ ಕಟ್ಟಡಗಳು ಹಾನಿಯಾಗಿವೆ. ಇವುಗಳನ್ನು ಸರ್ವೇ ಮಾಡಿಸಿ ಸರಕಾರಕ್ಕೆ ಕೂಡಲೇ ವರದಿ ಮಾಡಿ, ಪುನರ್ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

    ಮಳೆಗಾಲದಲ್ಲಿ ಅಪಾಯಕಾರಿಯಾಗುವ ಕಾಲುಸಂಕಗಳ ಮೇಲೆ ಸಂಚರಿಸುವುದು ಅಪಘಾತಗಳಿಗೆ ಅನುವು ಮಾಡಿಕೊಟ್ಟ ಹಾಗೆ ಆಗಿರುತ್ತದೆ. ಈ ಕೂಡಲೇ ಆರ್.ಡಿ.ಪಿ.ಆರ್ ಹಾಗೂ ಪಿಡ್ಬ್ಯೂಡಿ ರವರು ಅಂತಹ ಕಾಲು ಸಂಕಗಳ ಸರ್ವೆ ಮಾಡಿಸಿ 2 ವರ್ಷದೊಳಗೆ ನರೇಗಾ ಹಾಗೂ ಇತರೇ ಅನುದಾನದೊಂದಿಗೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದರು.

    ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಔಷಧಿಗಳ ವಿತರಣೆಯಲ್ಲಿ ಯವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಡಿಕೆಗೆ ಚುಕ್ಕೆ ರೋಗ ಕಂಡು ಬಂದಿದೆ. ಇದಕ್ಕೆ ಕಾರಣವೇನು? ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಏನು ಕ್ರಮ ಅನುಸರಿಸಬೇಕು, ಎಂಬುದರ ಬಗ್ಗೆ ವಿಜ್ಞಾನಿಗಳ ಸ್ಥಳ ಭೇಟಿಗಳೊಂದಿಗೆ ವರದಿಯನ್ನು ಸರಕಾರಕ್ಕೆ ನೀಡಬೇಕೆಂದು ಸೂಚನೆ ನೀಡಿದರು.

    ಪ್ರಸ್ತುತ ಜಿಲ್ಲೆಯು ಆರೋಗ್ಯ ಸೇವೆ ಸೂಚ್ಯಂಕದಲ್ಲಿ 18 ನೇ ಸ್ಥಾನದಲ್ಲಿದೆ. ಆದರೆ ಹಿಂದೆ ನಮ್ಮ ಸರ್ಕಾರದ ಅವಧಿಯ 2015 ನೇ ಸಾಲಿನಲ್ಲಿ ಜಿಲ್ಲೆಯು ಮೊದಲನೇ ಸ್ಥಾನದಲ್ಲಿತ್ತು. ಇದು ನಿಮ್ಮ ಉದಾಸೀನತೆಯನ್ನು ತೋರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮತ್ತೆ ಜಿಲ್ಲೆಯನ್ನು 1 ನೇ ಸ್ಥಾನಕ್ಕೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಶ್ರಮವಹಿಸಿ, ಕೆಲಸ ಮಾಡಬೇಕು ಎಂದರು.

    ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ಆರೋಗ್ಯ ಇಲಾಖೆಯ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆರೋಗ್ಯ ಸಿಬ್ಬಂದಿಗಳು ಜನರಿಗೆ ಉತ್ತಮ ಸೇವೆಗಳನ್ನು ಒದಗಿಸದಿದ್ದಲ್ಲಿ ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತದೆ. ಜಿಲ್ಲೆಯಲ್ಲಿ ಇತ್ತೀಚೆಗೆ ತಾಯಿ ಮಕ್ಕಳ ಮರಣ ಸಂಖ್ಯೆಯೂ ಸಹ ಹೆಚ್ಚಾಗಿದೆ. ಇದೇ ರೀತಿ ಮುಂದುವರೆದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನೇ ನೇರ ಹೊಣೆಯನ್ನಾಗಿಸಿ ಶಿಸ್ತು ಕ್ರಮ ಅಥವಾ ಸೇವೆಯಿಂದ ವಜಾಗೊಳಿಸುವುದಾಗಿ ಎಚ್ಚರ ನೀಡಿದರು.

    ಶೈಕ್ಷಣಿಕ ಸೂಚ್ಯಂಕದಲ್ಲಿ 2017 ರಿಂದ 2019 ರ ವರೆಗೆ ಮೊದಲ ಹಾಗೂ ಎರಡನೇ ಸ್ಥಾನ ಹೊಂದಿದ ಜಿಲ್ಲೆಯು 13 ನೇ ಸ್ಥಾನಕ್ಕೆ ಕುಸಿತಗೊಂಡಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ, ಮುಂದಿನ ಅವಧಿಯೊಳಗೆ ಜಿಲ್ಲೆಯ ಸೂಚ್ಯಂಕದಲ್ಲಿ ಪ್ರಗತಿ ಕಾಣದೇ ಇದ್ದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. 10 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯನ್ನು ಸಮೀಪದ ಶಾಲೆಗಳಿಗೆ ಒಂದುಗೂಡಿಸಿ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದAತೆ ನೋಡಿಕೊಳ್ಳುವುದರೊಂದಿಗೆ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಮಾಡಬೇಕು ಎಂದರು.

    ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ 2808 ರಸ್ತೆ ಅಪಘಾತವಾಗಿ, 543 ಜನ ಮರಣ ಹೊಂದಿರುತ್ತಾರೆ. ಇದಕ್ಕೆಲ್ಲ ಏನು ಕಾರಣ ಎಂದು ಪ್ರಶ್ನಿಸಿದ ಅವರು, ಲೊಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ಕ್ರೈಮ್ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಸರಿಯಿಲ್ಲದಂತಾಗಿದೆ. ಪೊಲೀಸ್ ಇಲಾಖೆಯು ದಿನದ 24 ಗಂಟೆಯೂ ಕೆಲಸ ನಿರ್ವಹಿಸಿ, ಈ ರೀತಿ ಆಗುವುದು ಸರಿಯಲ್ಲ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಗಳನ್ನು ಕೈಗೊಳ್ಳುವ ಜೊತೆಗೆ ಹಾಸ್ಟೆಲ್, ಆಸ್ಪತ್ರೆ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

    ಉಡುಪಿ, ಮಂಗಳೂರು ಜಿಲ್ಲೆಗಳು ಅಕ್ಷರಸ್ಥ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಂಡುಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತ್ರೈ ಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನೆ ತೆಗೆದುಕೊಳ್ಳವ ಜೊತೆಗೆ ಅಯ್ದ ಇಲಾಖೆಗಳ ಪರಿಶೀಲನೆಯನ್ನು ತಿಂಗಳಿಗೊಮ್ಮೆ ಕೈಗೊಳ್ಳಬೇಕು ಎಂದರು.

    ಸಾರ್ವಜನಿಕ ಕುಂದು ಕೊರತೆಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.

    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ, ಶಾಸಕ ವಿ.ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ.ರೇಜು ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

  • ಬೈಂದೂರಿಗೆ ಮೊಬೈಲ್ ಟವರ್ : ಸಂಸದರಿಂದ ಕೇಂದ್ರ ಸಚಿವರ ಭೇಟಿ

    ಬೈಂದೂರಿಗೆ ಮೊಬೈಲ್ ಟವರ್ : ಸಂಸದರಿಂದ ಕೇಂದ್ರ ಸಚಿವರ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೇಂದ್ರ ದೂರಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರನ್ನು ಆಗಸ್ಟ್ 1ರಂದು ಸಂಸದ ಬಿ.ವೈ. ರಾಘವೇಂದ್ರ ಭೇಟಿ ಮಾಡಿದರು. ಈ ಸಂದರ್ಭ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಅಗತ್ಯವಿರುವ ಬಿ.ಎಸ್.ಎನ್.ಎಲ್ ಮೊಬೈಲ್ ಟವರ್ ಮಂಜೂರಾತಿಗೆ ಮನವಿ ಮಾಡಿದರು ಹಾಗೂ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿರುವ ಬೈಂದೂರು, ಶಿರೂರು, ಬಿಜೂರು ಹಾಗೂ ಸೇನಾಪುರ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಸಂಸದರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ: ಸೌಜನ್ಯ ಪ್ರಕರಣದ ಪರಿಶೀಲನೆ ಬಳಿಕ ಕ್ರಮ ಪಡುಬಿದ್ರಿ ಬೀಚ್ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ

    ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಯೋಜನೆ: ಸೌಜನ್ಯ ಪ್ರಕರಣದ ಪರಿಶೀಲನೆ ಬಳಿಕ ಕ್ರಮ ಪಡುಬಿದ್ರಿ ಬೀಚ್ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಾಲೇಜಿನ ವಿದ್ಯಾರ್ಥಿನಿಯರ ಟಾಯ್ಲೆಟ್ ಮೊಬೈಲ್ ಶೂಟಿಂಗ್ ಪ್ರಕರಣವನ್ನು ಎಸ್.ಐ.ಟಿ.ಗೆ ವಹಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪಡುಬಿದ್ರೆ ಬೀಚ್ ವೀಕ್ಷಣೆಯ ಬಳಿಕ ಮಾತನಾಡಿದರು.

    ಮೊಬೈಲ್ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸ್ವಯಂ ಪ್ರೇರಿತ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ಡಿ ವೈಎಸ್ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದಾರೆ, ಕೇಂದ್ರ ಮಹಿಳಾ ಆಯೋಗದ ಸದಸ್ಯರು ಆಗಮಿಸಿ ತನಿಖೆ ಕೈಗೊಂಡು ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಕರಣವನ್ನು ಎಸ್.ಐ.ಟಿಗೆ ವಹಿಸುವ ಪ್ರಶ್ನೆ ಉದ್ಬವಿಸುವುದಿಲ್ಲ. ತನಿಖಾ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಅವಕಾಶವಿದೆ. ಆದರೆ ಸುಳ್ಳುಸುದ್ಧಿಗಳನ್ನು ಸರ್ಕಾರದ ವಿರುದ್ಧ ಅಥವಾ ವ್ಯಕ್ತಿಯ ವಿರುದ್ಧ ಹಬ್ಬಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಂದರು.

    ಕಸ್ತೂರಿ ರಂಗನ್ ವರದಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ ಎಂದರು. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿ ಎಸ್.ಐ.ಟಿ ಕ್ರಮವಹಿಸುತ್ತದೆ. ಕಡಲ್ಕೊರೆತ ತಡೆ ಕುರಿತಂತೆ ಶಾಶ್ವತ ಪರಿಹಾರ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು , ಇದಕ್ಕೆ ಎಷ್ಟು ಹಣ ಬೇಕು ಎಂಬ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ಹೊಂದಾಣಿಕೆ ಮಾಡಲಾಗುತ್ತದೆ. ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಯ ವೇತನ ಬಿಡುಗಡೆಗೆ ತಕ್ಷಣ ಸೂಚಿಸಲಾಗುವುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಳು ವೈದ್ಯ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮತ್ತಿತರರು ಇದ್ದರು.