Category: ಸುದ್ದಿ

  • ಕೋಟ – ಮಾದಕ ದ್ರವ್ಯ ವಿರೋಧಿ ದಿನ ಮಾಹಿತಿ ಕಾರ್ಯಕ್ರಮ

    ಕೋಟ – ಮಾದಕ ದ್ರವ್ಯ ವಿರೋಧಿ ದಿನ ಮಾಹಿತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

    ಕಾಲೇಜಿನ ಸಮಾಜಸೇವಾ ಸಂಘದ ಆಶ್ರಯದಲ್ಲಿನಡೆದ ಮಾದಕ ದ್ರವ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೋಟ ಆರಕ್ಷಕ ಠಾಣೆಯ ಠಾಣಾಧಿಕಾರಿ ಶಂಭುಲಿಂಗಯ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಇಂದು ಯುವ ಸಮುದಾಯ ಎಳೆ ವಯಸ್ಸಿನಲ್ಲೇ ಅತ್ಯಂತ ಅಪಾಯಕಾರಿಯಾದ ಮಾದಕ ವಸ್ತುಗಳ ಸೇವನೆಗೈಯುತ್ತಿರುವುದು ದುರದೃಷ್ಟಕರ ಇದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಠಿಯಾಗುತ್ತಿವೆ, ವಿದ್ಯಾರ್ಥಿಗಳು ಈ ವ್ಯಸನದಿಂದ ಮುಕ್ತರಾಗಬೇಕು ಎಂದು ತಿಳಿಸಿ ವಿವಿಧ ಪ್ರಕಾರದ ಮಾದಕ ವಸ್ತು ಮತ್ತು ಅದರ ದುಷ್ಪರಿಣಾಮಗಳನ್ನು ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ವಿವರಿಸಿದರು.

    ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಉಪನ್ಯಾಸಕ ಅಶೋಕ ಕುಮಾರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಬೈಂದೂರು : 23 ಮೊಬೈಲ್ ಟವರ್ ಮಂಜೂರು

    ಬೈಂದೂರು : 23 ಮೊಬೈಲ್ ಟವರ್ ಮಂಜೂರು

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು :ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 23 ಮೊಬೈಲ್ ಮಂಜೂರಾಗಿದೆ. ತೀವ್ರ ನೆಟ್‍ವರ್ಕ್ ಸಮಸ್ಯೆ ಎದುರಿಸಿದ್ದ ಗ್ರಾಮಾಂತರ ಪ್ರದೇಶಗಳಿಗೆ  ಮೊಬೈಲ್ ಟವರ್ ಮಂಜೂರಾಗಿದೆ.
    ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ನಾಗರಮಕ್ಕಿ, ಬೈಂದೂರು ಗ್ರಾಮದ ಕಲ್ಮಕ್ಕಿ ಗಂಗನಾಡು, ಕಾಲ್ತೋಡು ಗ್ರಾಮದ ಬೊಳಂಬಳ್ಳಿ,  ತಗ್ಗರ್ಸೆ ಗ್ರಾಮದ ಮೂಡಣಗದ್ದೆ, ಗೋಳಿಹೊಳೆ ಗ್ರಾಮದ ಚುಚ್ಚಿ, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು, ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಕುಕ್ಕಡ, ಹೊಸೂರು ಗ್ರಾಮದ ಮರದಹಕ್ಲು, ಬೆಳ್ಳಾಲ ಗ್ರಾಮ ಉರುಬೈಲು, ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ, ಬೆಳ್ಳಾಲ ಗ್ರಾಮದ ನಂದ್ರೋಳ್ಳಿ, ಕಮಲಶಿಲೆ ಗ್ರಾಮದ ಯಳಬೇರು, ಕಮಲಶಿಲೆ ಗ್ರಾಮದ ಆರ್ಗೊಡು, ಹೊಸಂಗಡಿ ಗ್ರಾಮದ ಬೆಚ್ಚಳ್ಳಿ, ತೊಂಬಟ್ಟು ಗ್ರಾಮದ ಮಾವಿನಕೊಡ್ಲು, ಹೊಸಂಗಡಿ ಗ್ರಾಮದ ಹೆಗ್ಗೊಡ್ಲು, ಸಿದ್ಧಾಪುರ ಗ್ರಾಮದ  ಸೋಣಿ/ಮಾನಂಜೆ, ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಬಸ್ರಿಬೇರು,  ಕೊಲ್ಲೂರು ಗ್ರಾಮದ ದಳಿ, ಯಡ್ತರೆ ಗ್ರಾಮದ ಹೊಸೂರು, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು-ಇರಿಗೆ ಇಲ್ಲಿಗೆ ಮೊಬೈಲ್ ಟವರ್ ಮಂಜೂರಾತಿ ಆಗಿದೆ.
  • ಜೂ.29ಕ್ಕೆ ನಿವೃತ್ತ ಯೋಧ ಪಾರಂಪಳ್ಳಿ ಗಣೇಶ್ ಅಡಿಗರಿಗೆ ಪಂಚವರ್ಣ ರಜತ ಗೌರವ ಸಮ್ಮಾನ

    ಜೂ.29ಕ್ಕೆ ನಿವೃತ್ತ ಯೋಧ ಪಾರಂಪಳ್ಳಿ ಗಣೇಶ್ ಅಡಿಗರಿಗೆ ಪಂಚವರ್ಣ ರಜತ ಗೌರವ ಸಮ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಭಾರತೀಯ ಭೂ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಾಲಿಗ್ರಾಮದ ಪಾರಂಪಳ್ಳಿ ಗಣೇಶ್ ಅಡಿಗ ಇವರನ್ನು ಆಯ್ಕೆಗೊಳಿಸಲಾಗಿದೆ.

    ಪಂಚವರ್ಣ ಸಂಸ್ಥೆ ನೀಡುತ್ತಿರುವ ಆರನೇ ಸಾಧಕ ಶಕ್ತಿಯಾಗಿದ್ದು ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ.ತಿಮ್ಮ ಪೂಜಾರಿ, ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ, ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ.ವಿಶ್ವೇಶ್ವರ ತುಂಗ, ಸಹಕಾರಿ ಕ್ಷೇತ್ರದ ಕೊರಗ ಪೂಜಾರಿ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ. ಇದೇ ಜೂ.29ರಂದು ಪಾರಂಪಳ್ಳಿಯ ಅವರ ಸ್ವಗೃಹದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.

  • ಕುಂದಾಪುರ :ಆರ್‌ಟಿಸಿ ಮತ್ತು ಡಿನೋಟಿಸ್ ಒಟ್ಟಿಗೆ ಕೊಟ್ಟರೆ ಜನರಿಗೆ ಅನುಕೂಲ – ಕಿರಣ್ ಕೊಡ್ಗಿ

    ಕುಂದಾಪುರ :ಆರ್‌ಟಿಸಿ ಮತ್ತು ಡಿನೋಟಿಸ್ ಒಟ್ಟಿಗೆ ಕೊಟ್ಟರೆ ಜನರಿಗೆ ಅನುಕೂಲ – ಕಿರಣ್ ಕೊಡ್ಗಿ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಇಲ್ಲಿನ ತಾಲೂಕು ಕಚೇರಿಯಲ್ಲಿ 94ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಹಕ್ಕುಪತ್ರ ವಿತರಣೆಗೆ ಸಿದ್ಧವಾಗಿದ್ದು ನೀತಿ ಸಂಹಿತೆ ಇರುವುದರಿಂದ ಹಕ್ಕುಪತ್ರ ವಿತರಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಇಲಾಖೆ ಡಿನೋಟಿಸ್ ಮತ್ತು ಆರ್.ಟಿ.ಸಿಯನ್ನು ಒಟ್ಟಿಗೆ ಫಲಾನುಭವಿಗೆ ನೀಡಿದಾಗ ಅನುಕೂಲವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ, ಗ್ರೇಡ್-2 ತಹಶೀಲ್ದಾರ್ ಸಂತೋಷ್ ಭಂಡಾರಿ, ಗಿರಿಜಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
    ಉಪ ತಹಶೀಲ್ದಾರ್ ವಿನಯ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

  • ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

    ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು :ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಶುಕ್ರವಾರ ಭೇಟಿ ನೀಡಿ, ಕಡಲ್ಕೊರೆತದಿಂದ ಈಗಾಗಲೇ ಆಗಿರುವ ಹಾನಿಯ ಬಗ್ಗೆ ಮೀನುಗಾರರ ಮುಖಂಡರೊಂದಿಗೆ ಚರ್ಚಿಸಿದರು.

    ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತೀ ವರ್ಷ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವ ಸಲುವಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ಬಜೆಟ್‍ನಲ್ಲಿಯೇ 82 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಸಿಆರ್.ಜೆಡ್ ಇತ್ಯಾದಿ ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಯಿತು. ಆ ಸಮಸ್ಯೆ ಪರಿಹಾರ ಮಾಡುವಲ್ಲಿ ನಾನು ಗಮನ ನೀಡುತ್ತೇನೆ. ಈಗಾಗಲೇ ರಾಜ್ಯ ಸಚಿವರಾದ ಮಾಂಕಾಳ ವೈದ್ಯ ಅವರನ್ನು ಸಂಪರ್ಕಿಸಿ ವಿಷಯನ್ನು ಅವರ ಗಮನಕ್ಕೂ ತಂದಿದ್ದೇವೆ. ಹಾಗೆಯೇ ವಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಭೇಟಿ ಮಾಡಿದ್ದರು. ನಾನು ಕೂಡಾ ಭೇಟಿ ಮಾಡಿ ಸಮಸ್ಯೆಯನ್ನು ಅವರ ಗಮನಕ್ಕೂ ತಂದಿದ್ದೇನೆ. ಈಗ ತಾತ್ಕಾಲಿಕವಾಗಿ ಕ್ರಮ ತಗೆದುಕೊಳ್ಳಬೇಕಾಗಿದೆ. ಕಳೆದ ವರ್ಷ ಬಸವರಾಜ ಬೊಮ್ಮಾಯಿಯವರು ಇಲ್ಲಿಗೆ ಭೇಟಿಕೊಟ್ಟಂತಹ ಸಂದರ್ಭದಲ್ಲಿ ತಾತ್ಕಾಲಿಕ ಕ್ರಮಕ್ಕೆ 4-5 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ತುರ್ತು ತಾತ್ಕಾಲಿಕ ಕ್ರಮದ ಅಗತ್ಯವಿದೆ. ಸರ್ಕಾರ ಸ್ಪಂದಿಸುತ್ತದೆ ಎನ್ನುವ ವಿಶ್ವಾಸವಿದೆ. ಹಾಗೇ ಶಾಶ್ವತ ಪರಿಹಾರಕ್ಕೆ ಮುಂದಿನ ತಿಂಗಳು ನಡೆಯುವ ಕೇಂದ್ರದ ಅಧಿವೇಶನದ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ತಹಶೀಲ್ದಾರ್ ಶ್ರೀಕಾಂತ್, ಶ್ರೀನಿವಾಸ ಮೂರ್ತಿ, ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ, ಆನಂದ ಖಾರ್ವಿ, ಪ್ರಿಯದರ್ಶಿನಿ ದೇವಾಡಿಗ, ಮೀನುಗಾರರ ಮುಖಂಡರಾದ ವಾಸುದೇವ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ – ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

    ಕುಂದಾಪುರ :ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ – ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರಕಾರಿ ಪದವಿಪೂರ್ವ ಕಾಲೇಜು ಕುಂದಾಪುರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ
    ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ 2023ರ ಅಂಗವಾಗಿ ಕುಂದಾಪುರ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಪರಿಣಾಮ, ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು.

    ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ, ಸಹ ಶಿಕ್ಷಕ ಗಣೇಶ್ ಕಾಂಚನ್ ಉಪಸ್ಥಿತರಿದ್ದರು.

  • ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ವಿಶ್ವಯೋಗ ದಿನಾಚರಣೆ

    ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ವಿಶ್ವಯೋಗ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಯೋಗ ಇಂದು ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಕ್ಷಮತೆಗೆ ಯೋಗ ಅತ್ಯಂತ ಸಹಾಯಕಾರಿ. ಇಂದಿನ ಅಸಮರ್ಪಕ ಜೀವನಶೈಲಿಯಲ್ಲಿ ಯೋಗದಲ್ಲಿ ಪಾಲ್ಗೋಳ್ಳಬೇಕಾಗಿರುವುದು ಅಗತ್ಯ. ಯೋಗ ಇದೊಂದು ಬದುಕಿನ ಕಲೆ ಎಂದು ಪ್ರಾಕ್ತನ ವಿದ್ಯಾರ್ಥಿ ಸಂದೀಪ್ ಪೂಜಾರಿ ಹೇಳಿದರು.

    ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯೋಗ ಮತ್ತು ಫಿಟನೆಸ್ ಸರ್ಟಿಫಿಕೇಟ್ ಕೋರ್ಸ್ ಸಹಭಾಗಿತ್ವದಲ್ಲಿ ವಿಶ್ವಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಎನ್.ಎಸ್.ಎಸ್ ಸಹಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಯೋಗ ಮತ್ತು ಫಿಟನೆಸ್ ಸರ್ಟಿಫಿಕೇಟ್ ಕೋರ್ಸಿನ ಸಂಯೋಜಕರಾದ ರೇವತಿ ಡಿ. ವಂದಿಸಿ, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.

  • ಕುಂದಾಪುರ: ಬೋರ್ಡ್ ಹೈಸ್ಕೂಲಿನಲ್ಲಿ ಹಳೆ ವಿದ್ಯಾರ್ಥಿ ಶಾಸಕರಿಗೆ ಸನ್ಮಾನ

    ಕುಂದಾಪುರ: ಬೋರ್ಡ್ ಹೈಸ್ಕೂಲಿನಲ್ಲಿ ಹಳೆ ವಿದ್ಯಾರ್ಥಿ ಶಾಸಕರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರನ್ನು ಕುಂದಾಪುರ ಜೂನಿಯರ್ ( ಬೋರ್ಡ್ ಹೈಸ್ಕೂಲ್) ಕಾಲೇಜಿನ ಆಡಳಿತ ಸಮಿತಿ ಮತ್ತು ಉಪನ್ಯಾಸಕ ವ್ರಂದದ ವತಿಯಿಂದ ಸನ್ಮಾನಿಸಲಾಯಿತು.
    ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿಯವರು ಕುಂದಾಪುರದ ಸರ್ಕಾರೀ ಜ್ಯೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಶಾಸಕರಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಚಾರ. ಶಾಸಕರ ಅವಧಿಯಲ್ಲಿ ಕುಂದಾಪುರವು ಸರ್ವತೋಮುಖ ಅಭಿವೃದ್ಧಿ ಹೊಂದಲಿ ಎಂದು ಹಾರೈಸಲಾಯಿತು.
    ಈ ಸಂದರ್ಭ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ಹಿರಿಯ ಉಪನ್ಯಾಸಕ ಭುಜಂಗ ಶೆಟ್ಟಿ, ಪ್ರೌಢಶಾಲಾ ಹಿರಿಯ ಶಿಕ್ಷಕಿ ವಿನುತಾ ಗಾಂವ್ಕರ್, ಉದಯ್ ಕುಮಾರ್ ಶೆಟ್ಟಿ , ಕಾಲೇಜು ಅಭಿವೃದ್ಧಿ ಸಮಿತಿಯ ಅನಂತ್ ಕೃಷ್ಣ ಕೊಡ್ಗಿ, ಕೆ ನಾರಾಯಣ್, ಪ್ರೌಢಶಾಲಾ ಮತ್ತು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಕೋಡಿ ಬ್ಯಾರೀಸ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    ಕುಂದಾಪುರ :ಕೋಡಿ ಬ್ಯಾರೀಸ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ :ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಅಂಗ ಸಂಸ್ಥೆಗಳಾದ ಹಾಜಿ. ಕೆ ಮೊಹಿದ್ದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢಶಾಲೆ, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್, ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು, ಬ್ಯಾರೀಸ್ ಬಿ.ಎಡ್ ಕಾಲೇಜು ಹಾಗೂ ಬ್ಯಾರೀಸ್ ಡಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಸಕ್ರಿಯವಾಗಿ ಯೋಗ ಮಾಡುವುದರ ಮೂಲಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

    ಇದೇ ಸಂದರ್ಭದಲ್ಲಿ “ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಹಾಗೂ ದೇಹದ ಸಮತೋಲನವನ್ನು ಸದೃಢಗೊಳಿಸುತ್ತದೆ” ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ರವರು ಶುಭ ಹಾರೈಸುವ ಮೂಲಕ ಚಾಲನೆ ನೀಡಿದರು.

    ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕರಾದ ವೆಂಕಟೇಶ್ ಎಸ್, ಪದವಿ ಕಾಲೇಜಿನ ಉಪನ್ಯಾಸಕರಾದ ಅಶೋಕ್ ಜೋಗಿ ಹಾಗೂ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ವಿವಿಧ ಆಸನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅಭ್ಯಾಸ ಮಾಡಿಸಿದರು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕರಾದ ಆಕಾಶ್, ಸಲಹೆಗಾರರಾದ ಅಬುಶೆಕ್ ಸಾಹೇಬ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ. ಆಸೀಫ್, ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ದೈಹಿಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಹಕ್ಲಾಡಿ: ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಓಡಿಸುವಂತೆ ಗ್ರಾಮಪಂಚಾಯಿತಿ ಎದುರುಗಡೆ ಧರಣಿ

    ಹಕ್ಲಾಡಿ: ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಓಡಿಸುವಂತೆ ಗ್ರಾಮಪಂಚಾಯಿತಿ ಎದುರುಗಡೆ ಧರಣಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ -ಮುಳ್ಳಿಕಟ್ಟೆ-ಹೊಸಾಡು-ಬಂಟ್ವಾಡಿ-ಕಟ್ಟಿನಮಕ್ಕಿ-ಹಕ್ಲಾಡಿ-ಕುಂದಬಾರಂದಾಡಿ-ನೂಜಾಡಿ-ವಂಡ್ಸೆ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಆಗ್ರಹಿಸಿ ಗುರುವಾರ ಬೆಳಗ್ಗೆ ಹಕ್ಲಾಡಿ ಗ್ರಾಮಪಂಚಾಯಿತಿ ಎದುರುಗಡೆ ಧರಣಿ ನಡೆಸಿದರು.

    ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಹಿಳೆಯರಿಗೆ ಸೌಲಭ್ಯಗಳನ್ನು ನೀಡಿದರೆ ಸೋಮಾರಿಗಳಾಗುತ್ತಾರೆ ಎಂದು ಅವಹೇಳನ ಮಾಡಲಾಗುತ್ತಿದೆ ಸರ್ಕಾರ ಬಡವರಿಗೆ ಸಹಾಯ ಮಾಡಿದರೆ ಸಬ್ಸಿಡಿ ಎಂದು ಬಂಡವಾಳಗಾರರಿಗೆ ಸಹಾಯ ಮಾಡಿದರೆ ಪ್ರೋತ್ಸಾಹ ಧನ ಎಂದು ಕರೆಯಲಾಗುತ್ತಿದೆ. ಎಲ್ಲಿಯವರೆಗೆ ಸಾಮಾನ್ಯ ಜನರಿಗೆ ರಕ್ಷಣೆಯ ಆದಾಯ ಕೊಡುವ ಉದ್ಯೋಗ ಸಿಗುವ ವ್ಯವಸ್ಥೆ ಸರಕಾರ ಮಾಡೋದಿಲ್ಲವೋ ಅಲ್ಲಿಯವರೆಗೆ ಸೌಲಭ್ಯಗಳು ನೀಡಬೇಕು ಶಕ್ತಿ ಯೋಜನೆಯಲ್ಲಿ ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ ಓಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ರೈತ ಸಂಘದ ಮುಖಂಡ ಚಂದ್ರಶೇಖರ ಮಾತನಾಡಿ ಉಚಿತ ಶಕ್ತಿ ಯೋಜನೆಯಿಂದ ಕಡಿಮೆ ಆದಾಯವಿರುವ ಕ್ರಷಿಕೂಲಿಕಾರರಿಗೆ,ಕಾರ್ಮಿಕರಿಗೆ,ಬಡ ರೈತರಿಗೆ ಅನುಕೂಲವಾಗಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯಕವಾಗಲಿದೆ ಶೀಘ್ರ ಬಸ್ ಓಡಿಸಲು ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದರು.

    ಕ್ರಷಿಕೂಲಿಕಾರರ ಸಂಘಟನೆ ಜಿಲ್ಲಾ ಮುಖಂಡರಾದ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್, ಶೀಲಾವತಿ, ನಾಗರತ್ನ ನಾಡ,ಮನೋರಮ ಭಂಡಾರಿ,ಜಯ,ಯಮುನ ಮೊದಲಾದವರಿದ್ದರು.

    ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್ ಅವರು ಮನವಿ ಓದಿ ಹೇಳಿದರು

    ಪಂಚಾಯತ್ ಅಧ್ಯಕ್ಷರಾದ ಚೇತನ್ ಮೊಗವೀರ ಅವರ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಾರಿಗೆ ನಿಯಂತ್ರಣ ಅಧಿಕಾರಿ ಮಂಗಳೂರು ವಿಭಾಗ ಮಂಗಳೂರು ಅವರಿಗೆ ಮನವಿ ನೀಡಲಾಯಿತು.