Category: ಸುದ್ದಿ

  • ಕುಂದಾಪುರ :ದಿ. ಕಂಚಾರು ಮಂಜುನಾಥ ಪ್ರಭು ಕುಟುಂಬದಿಂದ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರಿಗೆ ಅಭಿನಂದನೆ

    ಕುಂದಾಪುರ :ದಿ. ಕಂಚಾರು ಮಂಜುನಾಥ ಪ್ರಭು ಕುಟುಂಬದಿಂದ ನೂತನ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರಿಗೆ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅಮಾಸೆಬೈಲು ಕಿರಣ್ ಕುಮಾರ್ ಕೊಡ್ಗಿಯವರನ್ನು ಅಭಿನಂದಿಸಲಾಯಿತು.

    ಹೋಟೆಲ್ ಶೆರೋನಿನ ಮಿನಿ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಶಾಸಕರನ್ನು ಪ್ರಭಾಕರ ಟೈಲ್ಸ್ ನ ಪಾಲುದಾರರು, ಉದ್ಯಮಿ ಪ್ರಶಾಂತ ತೋಳಾರ್ ಸನ್ಮಾನಿಸಿದರು.

    ಅಭಿನಂದನಾ ಭಾಷಣದಲ್ಲಿ ಶ್ರೀಯುತರು ಕೊಡ್ಗಿ ಕುಟುಂಬದ ಮೂರು ತಲೆಮಾರುಗಳು ಮಾಡಿದ ರಾಜಕೀಯ ಮತ್ತು ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಅಭಿನಂದನೆಗೆ ಉತ್ತರಿಸಿದ ಮಾನ್ಯ ಶಾಸಕರು ಉತ್ತಮ ಅಭಿವೃದ್ಧಿಯನ್ನು ಮಾಡುವಾಗ ಯಾವುದೇ ರಾಜಿ ಇಲ್ಲ ಎಂದರು. ಹಾಗೆಯೇ ಅಭಿನಂದಿಸಿದ ಪ್ರಭು ಕುಟುಂಬಕ್ಕೆ ವಂದನೆ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಕುಂದಾಪುರ ವಾಕಿಂಗ್ ಕ್ಲಬ್ ನ ಸರ್ವ ಸದಸ್ಯರು, ದಿ. ಮಂಜುನಾಥ ಪ್ರಭು ಕುಟುಂಬದ ಹಿತೈಷಿಗಳು ಭಾಗಿಯಾಗಿದ್ದರು.

  • ಕುಂದಾಪುರ :ಕೋಡಿ ಬ್ಯಾರೀಸ್ ನಿಂದ ವಿಶ್ವ ಪರಿಸರ ದಿನ ಜಾಥಾ

    ಕುಂದಾಪುರ :ಕೋಡಿ ಬ್ಯಾರೀಸ್ ನಿಂದ ವಿಶ್ವ ಪರಿಸರ ದಿನ ಜಾಥಾ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಮತ್ತು ಕುಂದಾಪುರ ಪುರಸಭೆಯ ಜಂಟಿ ಆಶ್ರಯದಲ್ಲಿ ಕುಂದಾಪುರ ಪುರಸಭೆಯ ಮುಂಭಾಗದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಹಾಗೂ ಪುರಸಭಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ವಿಶ್ವ ಪರಿಸರ ದಿನದ ಜಾಥಾಕ್ಕೆ ಚಾಲನೆ ನೀಡಿ “ಜೀವ ಜಗತ್ತಿನಲ್ಲಿ ಯಾವುದೇ ಜೀವಿಗಳಿಂದಲೂ ಪರಿಸರ ನಾಶವಾಗುತ್ತಿಲ್ಲ; ಬುದ್ದಿಜೀವಿ ಮಾನವ ಸ್ವಾರ್ಥ ಪರನಾಗಿ ಸುಂದರ ಪರಿಸರವನ್ನು ನಾಶಗೊಳಿಸುವುದರೊಂದಿಗೆ ಜೀವ ಜಗತ್ತಿಗೆ ಆಪತ್ತಾಗಿದ್ದಾನೆ ” ಎಂದು ಪ್ರಸ್ತುತ ಪರಿಸ್ಥಿತಿಯ ಕುರಿತು ನುಡಿದರು.

    ಕುಂದಾಪುರದ ಕೇಂದ್ರಭಾಗ ಪಾರಿಜಾತ ಸರ್ಕಲ್ ನಿಂದ ಜಾಥಾ ಆರಂಭವಾಗಿ ಶಿಸ್ತಿನೊಂದಿಗೆ ಪರಿಸರ ಜಾಗೃತಿಯ ಘೋಷಣೆಗಳೊಂದಿಗೆ ಶಾಸ್ತ್ರೀಸರ್ಕಲ್ ವರೆಗೆ ಸಾಗಿ ಅಲ್ಲಿ ಭವಿಷ್ಯದ ಸುಂದರ ಪ್ರಕೃತಿಗೆ ಕೊಡುಗೆ ಎಂಬಂತೆ ಗಿಡ ನೆಡುವುದರೊಂದಿಗೆ ಸಂಪನ್ನಗೊಂಡಿತು.

    ಜಾಥಾದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಪ್ರೊ. ಆಕಾಶ್, ಕುಂದಾಪುರ ಪುರಸಭಾ ಪರಿಸರ ಅಭಿಯಂತರ ಗುರುಪ್ರಸಾದ್, ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಫಿರ್ದೋಸ್, ಡಾ. ಶಮೀರ್, ಡಾ. ಸುರೇಶ್ ಶೆಟ್ಟಿ. ಜಯಶೀಲ ಶೆಟ್ಟಿ, ಬೋಧಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಮೂಹದ ಪರಿಸರ ಪ್ರೇಮ ಹಾಗೂ ಶಿಸ್ತಿಗೆ ಕುಂದಾಪುರ ಪುರಸಭೆ ಹಾಗೂ ಸಮಗ್ರ ಜನತೆ ಪ್ರಶಂಸೆ ವ್ಯಕ್ತಪಡಿಸಿದೆ.

  • ಕೋಟದ ಪಂಚವರ್ಣ ಸಂಸ್ಥೆಗೆ ಪರಿಸರಸ್ನೇಹಿ ಪ್ರಶಸ್ತಿ

    ಕೋಟದ ಪಂಚವರ್ಣ ಸಂಸ್ಥೆಗೆ ಪರಿಸರಸ್ನೇಹಿ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ..

    ಕೋಟ: ನಿರಂತರ ಪರಿಸರ ಜಾಗೃತಿ ,ಅದರ ಅನುಷ್ಠಾನದ ಮೂಲಕ ಕೋಟ ಹೋಬಳಿ ಭಾಗದಲ್ಲಿ ಜನಜನಿತವಾದ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಈ ಸಂಸ್ಥೆಗೆ ವಿಶ್ವಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪರಿಸರಸ್ನೇಹಿ ಸಂಘಟನೆ ಪ್ರಶಸ್ತಿ ನೀಡಿ ಗೌರವಿಸಿದೆ ಉಡುಪಿಯ ಮಣಿಪಾಲದ ರಜತಾದ್ರಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೂರ್ಮ ಎಂ ರಾವ್ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.

    ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ,ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಜಿಲ್ಲಾ ಅಧಿಕಾರಿ ಡಾ.ಕೆ.ಎಂ ರಾಜು,ಪಂಚವರ್ಣ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

  • ಪರಿಸರ ಉಳಿದರೆ ಮಾತ್ರ ಮನುಕುಲದ ಶ್ರೀರಕ್ಷೆ ಸಾಧ್ಯ- ಅಜಿತ್ ದೇವಾಡಿಗ

    ಪರಿಸರ ಉಳಿದರೆ ಮಾತ್ರ ಮನುಕುಲದ ಶ್ರೀರಕ್ಷೆ ಸಾಧ್ಯ- ಅಜಿತ್ ದೇವಾಡಿಗ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪ್ರಕೃತಿ ಉಳಿದರೆ ಮಾತ್ರ ಮನುಕುಲ ಉಳಿಯಬಹುದು ಆದರೆ ಅದೇ ಪ್ರಕೃತಿಯ ಮೇಲೆ ನಿರಂತ ಅತ್ಯಾಚಾರ ಎಸೆದರೆ ಮನುಕುಲದ ಶ್ರೀರಕ್ಷೆ ಹೇಗೆ ಸಾಧ್ಯ ಎಂದು ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ ಪ್ರಶ್ನಿಸಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ 166ನೇ ವಾರದ ಪರಿಸರಸ್ನೇಹಿ ಅಭಿಯಾನದ ಹಿನ್ನಲ್ಲೆಯಲ್ಲಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್, ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ಸಮುದ್ಯತಾ ಗ್ರೂಪ್ಸ್ ಕೋಟ, ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿ, ಎಜ್ಯೂಕೇರ್ ಕೋಟ, ಯಕ್ಷ ಸೌರಭ ಕಲಾರಂಗ ಕೋಟ ಇವರುಗಳ ಸಹಯೋಗದೊಂದಿಗೆ ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ನಡೆದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಟ್ಟು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಕೃತಿಯನ್ನು ಎಷ್ಟು ಪ್ರೀತಿಸುತ್ತೇವೊ ಅಷ್ಟು ಅವುಗಳು ನಮ್ಮನ್ನು ಕಾಯುತ್ತವೆ ಆದರೆ ಅವಗಳ ಅವನತಿಗೊಳಿಸುವುದರಿಂದ ಕಾಲಕಾಲಕ್ಕೆ ಮಳೆ, ಬೆಳೆಯಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ. ನೀರಿಗೆ ಆಹಕಾರ ಪಡುತ್ತಿದ್ದೇವೆ ಬಿಸಿಲ ತಾಪ ನಮ್ಮನ್ನು ಸುಡುತ್ತಿದೆ ಹೀಗಾದರೆ ನಮ್ಮ ಅವನತಿ ಶತ ಸಿದ್ಧ ಅದಕ್ಕಾ ನಾವುಗಳು ಗಿಡಮರಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಬೇಕಿದೆ ಅದರಲ್ಲೂ ಪಂಚವರ್ಣ ಅಥವಾ ಇನ್ನುಳಿದ ಸಂಘಸಂಸ್ಥೆಗಳ ಪರಿಸರ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು.

    ಈ ಸಂದರ್ಭದಲ್ಲಿ ಹಂದಟ್ಟು ಪರಿಸರದ ಸಾರ್ವಜನಿಕರಿಗೆ ಗಿಡ ವಿತರಿಸಿ ನೆಟ್ಟು ಅದರ ಸೆಲ್ಫಿ ತೆಗೆದು ಕಳುಹಿಸಿ ಬಹುಮಾನ ಗೆಲ್ಲಿ ಎಂಬ ಕಾರ್ಯಕ್ರಮಕ್ಕೆ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಚಾಲನೆ ನೀಡಿದರು.

    ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕೋಟದ ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ ಕುಂದರ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಾನಕಿ ಹಂದೆ, ಜೀವನ್ ಮಿತ್ರ ಸೇವಾ ಟ್ರಸ್ಟ್ ಮುಖ್ಯಸ್ಥ ನಾಗರಾಜ್ ಪುತ್ರನ್, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಜಯಂಟ್ಸ್ ಗ್ರೂಪ್ಸ್ ನ ಶ್ರೀನಾಥ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಮಹಿಳಾ ಮಂಡಲದ ಶಕೀಲ ಪೂಜಾರಿ,ವಸಂತಿ ಹಂದಟ್ಟು, ಹಂದಟ್ಟು ಮಹಿಳಾ ಮಂಡಲದ ಯಶೋಧ ಮತ್ತಿತರರು ಉಪಸ್ಥಿತರಿದ್ದರು.

    ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಜಾತ ಬಾಯರಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ನಿರ್ವಹಿಸಿದರು. ಜಯಂಟ್ಸ್ ಗ್ರೂಪ್ ಗಿಡದ ವ್ಯವಸ್ಥೆ ಕಲ್ಪಿಸಿತು.

  • ಕೋಟ ಪಂಚವರ್ಣ ಸಂಸ್ಥೆಯ ಸ್ಥಳಾಂತರ ಕಛೇರಿ ಉದ್ಘಾಟನೆ

    ಕೋಟ ಪಂಚವರ್ಣ ಸಂಸ್ಥೆಯ ಸ್ಥಳಾಂತರ ಕಛೇರಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಕ್ರೀಯಾಶೀಲ ಸಂಸ್ಥೆಯಾದ ಕಳೆದ 25 ವರ್ಷಗಳಿಂದ ಸಾಮಾಜಮುಖಿ ಕಾರ್ಯದಲ್ಲಿ ತೊಡಗಿ ಕೊಂಡ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಕಛೇರಿ ಕೋಟದ ವರುಣತೀರ್ಥ ಕೆರೆ ಸಮೀಪದಿಂದ ಕೋಟ ಗ್ರಾಮಪಂಚಾಯತ್ ಸನಿಹದ ಪಂಚಾಯತ್ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಗೊಂಡಿತು.

    ಕಛೇರಿಯನ್ನು ಪಾಂಡೇಶ್ಚರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

    ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಪಂಚವರ್ಣ ಸಂಸ್ಥೆ ಕ್ರೀಯಾಶೀಲತೆ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.

    ಈ ವೇಳೆ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಂಚವರ್ಣ ಸಂಸ್ಥೆಯ ಉಪಾಧ್ಯಕ್ಷ ಮನೋಹರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.

  • ಪಡುಕರೆ – ವರ್ಗಾವಣೆಗೊಂಡ ಪ್ರಾಧ್ಯಾಪಕರುಗಳಿಗೆ ಬೀಳ್ಕೊಡುಗೆ ಸಮಾರಂಭ

    ಪಡುಕರೆ – ವರ್ಗಾವಣೆಗೊಂಡ ಪ್ರಾಧ್ಯಾಪಕರುಗಳಿಗೆ ಬೀಳ್ಕೊಡುಗೆ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ – ಪಡುಕರೆ, ಇಲ್ಲಿ ಸೇವೆ ಸಲ್ಲಿಸುತ್ತಿದ್ದ ನಿತ್ಯಾನಂದ ವಿ ಗಾಂವಕರ, ಸಹ ಪ್ರಾಧ್ಯಾಪಕರು, ಆಂಗ್ಲ ಭಾಷಾ ವಿಭಾಗ ಮತ್ತು ಸಹ ಪ್ರಾಧ್ಯಾಪಕ ನಾಗರಾಜ ವೈದ್ಯ ಎಂ.ಇವರು ಇತ್ತೀಚಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ (ಕೋಟೇಶ್ವರ) ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ. ಶ್ರೀಯುತರು ಸಂಸ್ಥೆಗೆ ನೀಡಿದ ಅಮೂಲ್ಯ ಸೇವೆಯನ್ನು ಗುರುತಿಸಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂಧಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇತ್ತೀಚಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದೆ. ಸನ್ಮಾನ ಸ್ವೀಕರಿಸಿದ ನಿತ್ಯಾನಂದ ವಿ ಗಾಂವಕರ ಹಾಗೂ ನಾಗರಾಜ ವೈದ್ಯ ಎಂ ತಮ್ಮ ಸಂತೋಷವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಪ್ರೊ. ಸುನೀತ ವಿ ಅಧ್ಯಕ್ಷತೆ ವಹಿಸಿದ್ದರು.

    ಉಪನ್ಯಾಸಕ ಬಿ, ಡಾ. ಸುಬ್ರಮಣ್ಯ. ಎ, ಶ್ರೀ ಮುರಳಿ ಎಂ.ಜಿ, ರಾಜಣ್ಣ ಎಂ, ಪುರುಷೋತ್ತಮ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಲೀಲಾವತಿ .ಎನ್ ನಿರೂಪಣೆಗೈದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶಂಕರ ನಾಯ್ಕ ಬಿ ಸ್ವಾಗತಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥ ರಾಜಣ್ಣ ಎಂ ವಂದಿಸಿದರು.

  • ಕುಂದಾಪುರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗೊಂದಲ: ಜಲಸಿರಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ – ಕರಾರಿನಂತೆ ಕಾರ್ಯನಿರ್ವಹಿಸಲು ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚನೆ

    ಕುಂದಾಪುರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಗೊಂದಲ: ಜಲಸಿರಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ – ಕರಾರಿನಂತೆ ಕಾರ್ಯನಿರ್ವಹಿಸಲು ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚನೆ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಜವಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಉಪ್ಪು ನೀರು ಸರಬರಾಜು ಆಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ? ಈಗ ಸಮಸ್ಯೆಯನ್ನು ಯಾವ ರೀತಿ ಪರಿಹಾರ ಮಾಡಿದ್ದಿರಿ? ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನಿಸಿದರು.

    ಅವರು ಕುಂದಾಪುರ ಪುರಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

    ಶಾಸಕರ ಪ್ರಶ್ನೆಗೆ ಉತ್ತರಿಸಿದ ಜಲಸಿರಿ ಯೋಜನೆಯ ಅಧಿಕಾರಿಗಳು ಗುಲ್ವಾಡಿಯಲ್ಲಿ ಏಕಾಏಕಿ ಉಪ್ಪುನೀರು ತಡೆಗೋಡೆಯ ಗೇಟ್ ತೆರೆದಿರುವುದರಿಂದ ಈ ಸಮಸ್ಯೆಯಾಯಿತು. ಗೇಟ್ ತೆರೆಯುವ ಸಂದರ್ಭ ಇಲಾಖೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದ ಉಪ್ಪು ನೀರು ಮೇಲ್ಬಾಗಕ್ಕೆ ಹೋಗಿದ್ದರಿಂದ ಸ್ವಲ್ಪ ಸಮಸ್ಯೆಯಾಯಿತು. ಕೂಡಲೇ ಪರಿಶೀಲನೆ ಮಾಡಿ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಈಗ ಸರಿಯಾಗಿದೆ ಎಂದು ಜಲಸಿರಿ ಯೋಜನೆಯ ಅಧಿಕಾರಿ ಉತ್ತರಿಸಿದರು.

    ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಜವಬ್ದಾರಿ ಹೊತ್ತಿರುವ ಜಲಸಿರಿ ಯೋಜನೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪುರಸಭೆಯಿಂದ ಹಸ್ತಾಂತರಿಸುವಾಗ 3300 ನಳ ಸಂಪರ್ಕಗಳಿದ್ದವು. ಅದನ್ನು 6650 ನಳಸಂಪರ್ಕ ಮಾಡುವ ಬಗ್ಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ 4200 ಮಾತ್ರವಾಗಿದೆ. ಗುರಿ ತಲುಪಲು ಇನ್ನೂ ಆಗಿಲ್ಲ. ಇದರಿಂದ ಪುರಸಭೆಗೆ ನಷ್ಟವಾಗುತ್ತದೆ. ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ನಿರ್ವಹಣೆಯ ಬಗ್ಗೆಯೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.

    ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ ಗುತ್ತಿಗೆ ಪಡೆದ ಮೇಲೆ ಕರಾರುವಿನಂತೆ ನಡೆದುಕೊಳ್ಳಬೇಕು. 8 ವರ್ಷದ ಅವಧಿಯಲ್ಲಿ ಎಷ್ಟು ಸಂಪರ್ಕ ಮಾಡಬೇಕು, ನಿರ್ವಹಣೆ ಇತ್ಯಾದಿಗಳನ್ನು ಒಪ್ಪಂದ ಪತ್ರದಲ್ಲಿ ಇರುವಂತೆ ನಿರ್ವಹಣೆ ಮಾಡಬೇಕು. ಜವಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕೆಂದರೆ ಪುರಸಭೆಗೆ ಹೊಸ ಆಡಳಿತ ಮಂಡಳಿ ಬರಬೇಕು. ಸರ್ಕಾರ ಮೀಸಲಾತಿ ನಿಗಧಿಪಡಿಸಿದ ಬಳಿಕ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಯಾದ ಬಳಿಕವೇ ಅವರ ಸಮ್ಮುಖದಲ್ಲಿ ಸೂಕ್ತ ನಿರ್ಣಯ ಮಾಡಬೇಕು ಎಂದರು.

    ಪುರಸಭೆ ಆಡಳಿತಾಧಿಕಾರಿ, ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಮಾತನಾಡಿ, ಜಲಸಿರಿ ಗುತ್ತಿಗೆ ಸಂಸ್ಥೆ ಹಾಗೂ ಪುರಸಭೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದ್ದು ಪ್ರತ್ಯೇಕ ಸಭೆ ನಡೆಸಿ ಸೂಕ್ತ ತೀರ್ಮಾನ ತಗೆದುಕೊಳ್ಳಲಾಗುವುದು ಎಂದರು.
    ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಕುಂದಾಪುರ ಪುರಸಭೆಯಲ್ಲಿ 23 ವಾರ್ಡ್ ಇದ್ದು ಒಟ್ಟು 108 ಹುದ್ದೆಗಳಿದ್ದು ಈಗ 46 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 62 ಹುದ್ದೆ ಖಾಲಿ ಇದೆ. 14 ಜನ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು.

    ಕುಂದಾಪುರದಲ್ಲಿ ಒಳಚರಂಡಿ ಯೋಜನೆಗೆ ಎಸ್.ಟಿ.ಪಿ ರಚನೆಗೆ ಹುಂಚಾರಬೆಟ್ಟು ಸಮೀಪ ಸ್ಥಳ ಗುರುತಿಸಲಾಗಿದ್ದು ಸಾರ್ವಜನಿಕರ ವಿರೋಧ ಎದುರಾಗಿದೆ. 2 ಕೋಟಿ ರೂಪಾಯಿ ನೀಡಿ ಭೂಮಿ ಖರೀದಿ ಮಾಡಿಯೂ ಆಗಿದ್ದು ಈಗ ಜನ ವಿರೋಧ ಮಾಡುತ್ತಿದ್ದಾರೆ. ಬೇರೆ ಸ್ಥಳ ತೋರಿಸಲಾಗಿದ್ದರು ಆ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮೊದಲಾದ ಒಪ್ಪಿಗೆ ಸಿಗಲು ಸಾಕಷ್ಟು ಕಾಲವಕಾಶ ಬೇಕಾಗುತ್ತದೆ ಎಂದರು.

    ಕುಂದಾಪುರದಲ್ಲಿ ಅಟೋ ರಿಕ್ಷಾ ನಿಲ್ದಾಣದ ಬಗ್ಗೆ ಬೇಡಿಕೆ ವ್ಯಕ್ತವಾಗಿದ್ದು ಎನು ಕ್ರಮ ಕೈಗೊಂಡಿದ್ದಿರಿ ಎಂದು ಶಾಸಕರು ಪ್ರಶ್ನಿಸಿದರು.

    ಪುರಸಭೆ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ತೆಗೆ ಪರಿಹಾರ ಕಂಡುಕೊಳ್ಳಬೇಕು. ನೆಹರೂ ಮೈದಾನ ಪುರಸಭೆ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
    ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿ, ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕುಂದಾಪುರ: ಕುಸ್ತಿಪಟುಗಳ ಮೇಲಿನ ಅತ್ಯಾಚಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

    ಕುಂದಾಪುರ: ಕುಸ್ತಿಪಟುಗಳ ಮೇಲಿನ ಅತ್ಯಾಚಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಭಾರತವನ್ನು ಪ್ರತಿನಿಧಿಸಿ ವಿಶ್ವದಲ್ಲಿ ಭಾರತವನ್ನು ಗೆಲ್ಲಿಸಿದ ಮಹಿಳಾ ಕುಸ್ತಿಪಟುಗಳ ಮೇಲೆ ನಡೆಸಲಾದ ಅತ್ಯಾಚಾರದಿಂದ ಭಾರತವನ್ನೇ ನಾಚಿಕೆಗೇಡಿಗೆ ದೂಡಿದೆ. ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ತಕ್ಷಣ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ರೈತಸಂಘದ ಮುಖಂಡ ಚಂದ್ರಶೇಖರ್‌ ವಿ ಆಗ್ರಹಿಸಿದರು.

    ಅವರು ಶುಕ್ರವಾರ ಸಂಜೆ ವಿವಿಧ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಛಾ, ಸಿಐಟಿಯು, ಕೆಪಿಆರೆಸ್, ಜೆಎಂಎಸ್ ಎಐಎಡಬ್ಲ್ಯೂಯು, ಡಿಹೆಚ್ಎಸ್, ಡಿವೈಎಫೈ, ಮೊದಲಾದ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

    ಕೇಂದ್ರ ಸರ್ಕಾರ ಅಂದಿನಿಂದ ಇಂದಿನವರೆಗೂ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಮನ್ ಕೀ ಬಾತ್ ಎನ್ನುವ ಪ್ರಧಾನಿ ನರೇಂದ್ರ‌ ಮೋದಿ ಮಹಿಳಾ ಕುಸ್ತಿಪಟಗಳಿಗಾದ ಅನ್ಯಾಯದ ವಿರುದ್ಧ ತುಟಿ ಪಿಟಿಕ್ಕೆನ್ನುತ್ತಿಲ್ಲ. ಗೃಹ ಸಚಿವ ಅಮಿತ್ ಷಾ ಚಕಾರವೆತ್ತುತ್ತಿಲ್ಲ ಎಂದು ಹೇಳಿದ ಅವರು, ಸಂಸತ್ ಭವನದ ಉದ್ಘಾಟನೆ ಸಂದರ್ಭದಲ್ಲಿಯೂ ದೇಶದ ಪರಮೋಚ್ಚ ಮಹಿಳೆಯಾದ ರಾಷ್ಟ್ರಪತಿಯವರನ್ನು ಕಡೆಗಣಿಸಿದ್ದು ಕೇಂದ್ರದ ಮಹಿಳಾ ವಿರೋಧಿ ನೀತಿಗೆ ಹಿಡಿದ ಕನ್ನಡಿ ಎಂದರು.

    ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಪೋಕ್ಸೋ ಪ್ರಕರಣ ದಾಖಳಿಸಿದ ಪೊಲೀಸರು ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ. ಆರೋಪಿಗೆ ಶಿಕ್ಷೆಯಾಗುವವರೆಗೆ ಕುಸ್ತಿಪಟುಗಳ ಪರವಾದ ಹೋರಾಟ ದೇಶಾದ್ಯಂತ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

    ಸುರೇಶ್ ಕಲ್ಲಾಗರ, ಹೆಚ್ ನರಸಿಂಹ, ಕೆ.ಶಂಕರ್, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ನಾಡಾ, ಬಲ್ಕೀಸ್ ಬಾನು, ಡಿವೈಎಫ್ ಐ ರವಿ.ವಿ.ಎಂ, ರಾಜಾ ಬಿಟಿಆರ್, ಆಟೋ ಚಾಲಕರ ಸಂಘದ ರಮೇಶ್ ವಿ, ರಾಜು ದೇವಾಡಿಗ, ಕಾಂಗ್ರೆಸ್ ಬ್ಲಾಕ್ ಕಾರ್ಯದರ್ಶಿ ಆಶಾ ಕರ್ವಾಲೋ, ಗಣೇಶ್ ಕೆ ನೆಲ್ಲಿಬೆಟ್ಟು, ಧನು ಕುಂದಾಪುರ ಮೊದಲಾದವರು ಮತ್ತು ನೂರಾರು ಪ್ರತಿಭಟನಾಕಾರರು ಹಾಜರಿದ್ಧರು.

  • ಕೊಲ್ಲೂರು: ಕಾಶಿಹೊಳೆ ಪ್ರದೇಶದಲ್ಲಿ ಕಲುಷಿತಗೊಂಡ ನೀರು – ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ

    ಕೊಲ್ಲೂರು: ಕಾಶಿಹೊಳೆ ಪ್ರದೇಶದಲ್ಲಿ ಕಲುಷಿತಗೊಂಡ ನೀರು – ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೋಟ್ಯಂತರ ರೂಪಾಯಿ ವ್ಯಯಿಸಿದ ಕೊಲ್ಲೂರು ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಳಪೆ ಕಾಮಗಾರಿಯ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಕುಡಿಯಲು ಬಳಸುವ ನೀರು ಕಲುಷಿತಗೊಂಡು ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ.

    ಯು.ಜಿ.ಡಿ. ಕಳಪೆ ಕಾಮಗಾರಿಯಿಂದಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮೀಪದ ಅಗ್ನಿ ತೀರ್ಥವೂ ಕಲುಷಿತಗೊಂಡಿದೆ. ಪರಿಣಾಮವಾಗಿ ಸ್ಥಳೀಯ ವಾಸಿಗಳ ಕುಡಿಯುವ ನೀರಿನ ಬಾವಿಗಳಿಗೂ ಕಲುಷಿತ ನೀರು ನುಗ್ಗಿದ್ದು, ಕುಡಿಯುವುದು ಬಿಡಿ, ಇತರ ಕೆಲಸಗಳಿಗೂ ಅಯೋಗ್ಯವಾಗಿದೆ.

    ಈ ಬಗ್ಗೆ ಇಲ್ಲಿನ ನಿವಾಸಿಗಳಾದ ಕಿರಣ್ ಕುಮಾರ್, ಚಂದ್ರ, ಗಿರಿಜಾ, ಜಲಜಾ ಮೊದಲಾದವರು ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

    ಇನ್ನಾದರೂ ಸಂಬಂಧಪಟ್ಟವರು ತಕ್ಷಣ ಸ್ಪಂದಿಸಿ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕಿದೆ. ಇಲ್ಲದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಮುಂದೆ ನೀರಿಗಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರ ಪರವಾಗಿ ವಿನಾಯಕ ಆಚಾರ್ಯ ಕಾಶಿಹೊಳೆ ಎಚ್ಚರಿಸಿದ್ದಾರೆ

  • ಕುಂದಾಪುರ : ರಾಜ್ಯದಲ್ಲಿ ಗ್ಯಾರಂಟಿ ಅನುಷ್ಟಾನ ಕಾಂಗ್ರೆಸ್ ಹರ್ಷ

    ಕುಂದಾಪುರ : ರಾಜ್ಯದಲ್ಲಿ ಗ್ಯಾರಂಟಿ ಅನುಷ್ಟಾನ ಕಾಂಗ್ರೆಸ್ ಹರ್ಷ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿರುವುದಕ್ಕೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಭಾರತೀಯ ಜನತಾ ಪಕ್ಷದ ಮುಖಂಡರು ಗ್ಯಾರಂಟಿ ಬಗ್ಗೆ ಟೀಕೆ ಮತ್ತು ಲೇವಡಿ ಮಾಡಿ ಗ್ಯಾರಂಟಿಗೆ ವಾರಂಟಿ ಇಲ್ಲ ಮತ್ತು ಗ್ಯಾರಂಟಿ ಪುಸ್ತಕದೊಳಗಿನ ನವಿಲ ಗಿರಿ ಎಂದಿದ್ದರು .

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಅನುಷ್ಟಾನ ಪಕ್ಕಾ ಎಂದು ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ತಿಳಿಸಿದಂತೆ ಪ್ರಥಮ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿತ್ತು . ಇಂದು ನೆಡೆದ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳಿಗೆ ಸಂಪೂರ್ಣ ಅನುಮೋದನೆ ನೀಡಲಾಗಿದೆ. ಗ್ಯಾರಂಟಿ ಅನುಮೋದನೆ ಮಾಡಿರುವುದು ಕಾಂಗ್ರೆಸ್ ಪಕ್ಷ ಮಾತು ಮತ್ತು ಕ್ರತಿಗೆ ಹತ್ತಿರ ಇರುವುದು ಮತ್ತು ಬದ್ಧತೆಯನ್ನು ತೋರಿಸುತ್ತದೆ. ಗ್ಯಾರಂಟಿ ಬಗ್ಗೆ ಬೇಕಾಬಿಟ್ಟಿ ಮಾತನಾಡಿದವರು ಈಗ ಉತ್ತರಿಸಬೇಕಾಗಿದೆ.

    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇವೆ. ವಾರ್ಷಿಕ ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಮತ್ತು ರೈತರ ಆಧಾಯ ದ್ವಿಗುಣ ಮಾಡಲಾಗುವುದು ಎಂದು ನೀಡಿದ ಭರವಸೆ ಈಡೇರಿಸಲಿ ಎನ್ನುವುದು ಕಾಂಗ್ರೆಸ್ ಪಕ್ಷದ ಆಗ್ರಹ .