ಕುಂದಾಪುರ : ತೆಕ್ಕಟ್ಟೆಯ ಮಾವಿನ ತೋಪಿನಲ್ಲಿ 7ನೇ ಚಿರತೆ ಸೆರೆ – ಆತಂಕದಲ್ಲಿ ಗ್ರಾಮಸ್ಥರು

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಮಾ.8 ರಂದು ರಾತ್ರಿ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಸಲಾದ ಆಪರೇಷನ್ ಚೀತಾ ಇಂದು ಮಾರ್ಚ್ 10ರಂದು ಯಶಸ್ವಿಯಾಗಿದೆ. ಆ ಮೂಲಕ ಏಳನೇ ಚಿರತೆಯ ಬಂಧನವಾಗಿದೆ.

ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಾಗೂ ಜನವಸತಿಯಿರುವ ಪ್ರದೇಶದ ಸನಿಹದಲ್ಲೇ ಇರುವ ತೋಪಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ನಿರಂತರವಾಗಿದ್ದು, ಭಾನುವಾರ ಆರನೇ ಚಿರತೆಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ
ಬೋನಿಟ್ಟ ಅರಣ್ಯ ಇಲಾಖೆ: ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದ್ದು ಸಾರ್ವಜನಿಕರು ಆತಂಕಿತ ರಾಗಿದ್ದಾರೆ. ಅರಣ್ಯ ಇಲಾಖೆ ಸೆಪ್ಟಂಬರ್ 8ರಂದು ಈ ಜಾಗದಲ್ಲಿ ಬೋನ್ ಇರಿಸಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಓ ಸುನೀಲ್ ಭೇಟಿ ನೀಡಿದರು.

4 ವರ್ಷಗಳ ಅಂತರದಲ್ಲಿ 6 ಚಿರತೆ ಸೆರೆ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಚಿರತೆ ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಅ.6, 2019, ಡಿ.12, 2019, ಡಿ.24, 2019 ರಲ್ಲಿ ಹಾಗೂ 2022 ರ ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿದ ಇಲಾಖೆ ಒಟ್ಟು 6ಚಿರತೆಗಳನ್ನು ಸೆರೆ ಹಿಡಿದಿತ್ತು. ಇದೀಗ ಏಳನೇ ಚಿರತೆ ಬಂಧಿಯಾಗಿದೆ.

ಆದರೆ ಇಷ್ಟೊಂದು ಚಿರತೆಗಳು ಇಲ್ಲಿ ಕಾಣಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಉಪಟಳವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ಅಲ್ಲದೇ ಅಪಾಯಕಾರಿಯಾಗಿರುವ ಕಪ್ಪು ಚಿರತೆಯೂ ಕಾಣಿಸಿಕೊಳ್ಳುವುದರ ಜೊತೆಗೆ ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಇದೀಗ ಮತ್ತೆ ಭಯಭೀತರಾಗಿದ್ದಾರೆ.

Comments

Leave a Reply

Your email address will not be published. Required fields are marked *

More posts