ಸುಜ್ಞಾನ ಪಿಯು ಕಾಲೇಜಿನಲ್ಲಿ ‘ವಾಲ್ಬೆಲ್ಲ’ ಕಾರ್ಯಕ್ರಮ ಅದ್ದೂರಿ ಸಮಾರೋಪ

0
26

Click Here

Click Here

ಕುಂದಾಪುರದ ಜನರ ಹೃದಯ ಶ್ರೀಮಂತಿಕೆ, ಆತಿಥ್ಯ ಅಪೂರ್ವ – ಎಸ್‌ಪಿ ಹರಿರಾಮ್ ಶಂಕರ್

ಕುಂದಾಪುರ ಮಿರರ್ ಸುದ್ದಿ..
ಕುಂದಾಪುರ: ಕುಂದಾಪುರದ ಜನರ ಹೃದಯ ಶ್ರೀಮಂತಿಕೆ, ಆತಿಥ್ಯ, ಸರಳತೆ, ಪ್ರೀತಿ, ವಿಶ್ವಾಸ ಹಾಗೂ ಎಲ್ಲರನ್ನೂ ಆತ್ಮೀಯವಾಗಿ ಸ್ವೀಕರಿಸುವ ಗುಣ ಅಪೂರ್ವವಾದದ್ದು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ವಿಶಾಲ ಮನೋಭಾವದಲ್ಲಿ ಕುಂದಾಪುರದ ಜನರು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್, ಐಪಿಎಸ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಂದಾಪುರ ಕನ್ನಡ ಅಧ್ಯಯನ ಪೀಠ ಹಾಗೂ ಯಡಾಡಿ–ಮತ್ಯಾಡಿ ಸುಜ್ಞಾನ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕುಂದಾಪುರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ನಡೆದ ಸಾಂಸ್ಕೃತಿಕ ಮತ್ತು ಚಿತ್ರಕಲಾ ಸ್ಪರ್ಧೆಗಳ ‘ವಾಲ್ಬೆಲ್ಲ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಅವರು, ಐಪಿಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ತಾಯಿಯ ಸನ್ನಿಧಿಗೆ ಬಂದು ಪ್ರಾರ್ಥಿಸಿದ್ದನ್ನು ಸ್ಮರಿಸಿದರು. ಬಳಿಕ ತಮ್ಮ ಮೊದಲ ಸೇವೆಯನ್ನು ಕುಂದಾಪುರ ಉಪವಿಭಾಗದ ಡಿವೈಎಸ್ಪಿಯಾಗಿ ಆರಂಭಿಸಿದ್ದು, ಇಂದು ಉಡುಪಿ ಜಿಲ್ಲೆಯ ಎಸ್‌ಪಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. “ಎಲ್ಲಿ ಹೋದರೂ ಕುಂದಾಪುರದೊಂದಿಗಿನ ನಂಟು ನನ್ನ ಜೀವನದಿಂದ ಬೇರ್ಪಡಿಸಲಾಗದು. ನನ್ನ ಹುಟ್ಟೂರು ತ್ರಿಶೂರ್ ಆಗಿದ್ದರೂ, ಕುಂದಾಪುರವೇ ನನ್ನ ಮತ್ತೊಂದು ಹುಟ್ಟೂರು ಎನ್ನುವಷ್ಟು ಈ ನೆಲ ನನ್ನ ಜೀವನದ ಮೇಲೆ ಪ್ರಭಾವ ಬೀರಿದೆ. ನಾನು ಕನ್ನಡವನ್ನು ಕಲಿತದ್ದೂ ಕುಂದಾಪುರದಲ್ಲೇ,” ಎಂದು ಹೇಳಿದರು.
ಯುವಜನತೆ ತಮ್ಮ ತಾಯ್ನಾಡು, ಮೂಲ ಪರಂಪರೆ ಮತ್ತು ಭಾಷೆಯನ್ನು ಎಂದಿಗೂ ಮರೆಯಬಾರದು. ಅವುಗಳನ್ನು ಗೌರವಿಸಿ, ಪ್ರೀತಿಸಿ ಹಾಗೂ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಶ್ರೀಮತಿ ರಶ್ಮಿ ಎಸ್ ಆರ್. ಅವರು ಮಾತನಾಡಿ, ಕರ್ನಾಟಕದ ವಿವಿಧ ಭಾಗಗಳಲ್ಲಿ ಕನ್ನಡ ಭಾಷೆಯ ಹಲವು ಪ್ರಾದೇಶಿಕ ರೂಪಗಳು ಬಳಕೆಯಲ್ಲಿದ್ದರೂ, ಕನ್ನಡಿಗರು ಎಲ್ಲರೂ ಏಕತೆ ಮತ್ತು ಸಾಮರಸ್ಯದಿಂದ ಬದುಕುತ್ತಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಪ್ರತಿದಿನ ಚಟುವಟಿಕೆಯಿಂದ, ಉತ್ಸಾಹದಿಂದ, ಶ್ರದ್ಧೆಯಿಂದ ಹಾಗೂ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಯಾವುದೇ ವೃತ್ತಿ ಅಥವಾ ಶಿಕ್ಷಣ ಕ್ಷೇತ್ರವನ್ನು ಇತರರ ಒತ್ತಾಯದಿಂದ ಅಲ್ಲ, ತಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಆ ಕ್ಷೇತ್ರದಲ್ಲಿ ಯಶಸ್ಸು ಮತ್ತು ತೃಪ್ತಿ ಎರಡನ್ನೂ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಕನಸುಗಳನ್ನು ಕಂಡು, ಅವುಗಳನ್ನು ನನಸಾಗಿಸಲು ಪ್ರತಿದಿನ ನಿರಂತರವಾಗಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಪ್ರೇರಣೆ ನೀಡಿದರು.
ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಪೋಷಕರು ಪ್ರೋತ್ಸಾಹ ನೀಡಿದಾಗ ಮಾತ್ರ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

Click Here

ನಾವು ಮಾತನಾಡುವ ಭಾಷೆ ಹಾಗೂ ಬಳಸುವ ಪ್ರತಿಯೊಂದು ಶಬ್ದವೂ ಉತ್ತಮ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು. ಅದು ನಮ್ಮ ಸಂಸ್ಕೃತಿ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕುಂದಾಪುರದ ಕಲೆ, ಇತಿಹಾಸ ಹಾಗೂ ಸಂಸ್ಕೃತಿಯನ್ನು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿರುವುದನ್ನು ಶ್ಲಾಘಿಸಿದ ಅವರು, ಕುಂದಾಪುರ ಕನ್ನಡ ಭಾಷೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆ ಹಾಗೂ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕುಂದಾಪುರ ಕನ್ನಡ ಅಧ್ಯಯನ ಪೀಠದ ಮೂಲಕ ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ಭಾಷೆಯನ್ನು ಇತರರಿಗೆ ಕಲಿಸುವ ಮೂಲಕ ಅದನ್ನು ಇನ್ನಷ್ಟು ಬೆಳೆಸಬೇಕು. ಹೊಸ ಪದಗಳನ್ನು ಸಂಗ್ರಹಿಸಿ ಅಧ್ಯಯನ ಪೀಠಕ್ಕೆ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ಶಬ್ದಕೋಶಕ್ಕೆ ಸೇರ್ಪಡೆಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಮ್ಮ ಜೀವನದುದ್ದಕ್ಕೂ ಸಮಾಜಸೇವೆಯನ್ನು ಧ್ಯೇಯವಾಗಿಸಿಕೊಂಡು, ಬಡವರು–ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ನೆರವಾಗುತ್ತಾ ಬಂದಿರುವ, ಕುಂದಗನ್ನಡ ಅಧ್ಯಯನ ಪೀಠದ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸಿ ಮಹತ್ತರ ಕೊಡುಗೆ ನೀಡಿರುವ ಶ್ರೀ ಜಯಪ್ರಕಾಶ್ ಅವರ ಸಮಾಜಮುಖಿ ಸೇವೆಯನ್ನು ಗೌರವಿಸಿ, ಅವರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯ ಸಂದರ್ಭದಲ್ಲಿ ಆಗಮಿಸಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ಕಂಡು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ತೆರಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕುಂದಾಪುರ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಮೇಲಿನ ಅಭಿಮಾನದಿಂದಲೇ ಸಂಸ್ಥೆ ಈ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಕುಂದಾಪುರ ಕನ್ನಡ ಅಧ್ಯಯನ ಪೀಠ, ಶಿಕ್ಷಣ ಇಲಾಖೆ ಅಥವಾ ಸರ್ಕಾರ ಇಂತಹ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನೀಡಿದರೆ, ಅದನ್ನು ಯಶಸ್ವಿಯಾಗಿ ನಿರ್ವಹಿಸಲು ನಮ್ಮ ಸಂಸ್ಥೆ ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಬಹುಮಾನ ವಿಜೇತರು
ಸಾಂಸ್ಕೃತಿಕ ಸ್ಪರ್ಧೆಗಳ ಒಟ್ಟಾರೆ ಪ್ರಶಸ್ತಿಯಲ್ಲಿ ಸುಜ್ಞಾನ ಪಿಯು ಕಾಲೇಜು, ಯಡಾಡಿ–ಮತ್ಯಾಡಿ ಪ್ರಥಮ ಸ್ಥಾನ, ಮೂಕಾಂಬಿಕಾ ಪಿಯು ಕಾಲೇಜು, ಕೊಲ್ಲೂರು ದ್ವಿತೀಯ ಸ್ಥಾನ ಹಾಗೂ ಶ್ರೀ ಶಾರದಾ ಪಿಯು ಕಾಲೇಜು, ಬಸ್ರೂರು ಮತ್ತು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರು ಜಂಟಿಯಾಗಿ ತೃತೀಯ ಸ್ಥಾನ ಪಡೆದರು.
ಪ್ರೌಢಶಾಲಾ ವಿಭಾಗದ (9 ಮತ್ತು 10ನೇ ತರಗತಿ) ಚಿತ್ರಕಲಾ ಸ್ಪರ್ಧೆಯಲ್ಲಿ ಆರಾಧ್ಯ ಕಾಂಚನ್ (ಕೆಪಿಎಸ್, ಬ್ರಹ್ಮಾವರ) ಪ್ರಥಮ, ರಿತ್ ಶೆಟ್ಟಿ (ಜಿಎಚ್‌ಎಸ್, ಸಿದ್ದಾಪುರ) ದ್ವಿತೀಯ ಹಾಗೂ ವೈಭವ ಆರ್. (ಕೆಎಸ್‌ಎಸ್ ಜಿಎಚ್‌ಎಸ್, ಹಕ್ಲಾಡಿ) ತೃತೀಯ ಸ್ಥಾನ ಪಡೆದರು.
8ನೇ ತರಗತಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಜೀತ್ ಎಂ. ದೇವಾಡಿಗ (ಎಸ್‌ಪಿ ಸ್ಕೂಲ್, ಗಂಗೊಳ್ಳಿ) ಪ್ರಥಮ, ಸಾನಿಧ್ಯ (ವಿದ್ಯಾರಣ್ಯ ಶಾಲೆ) ದ್ವಿತೀಯ ಹಾಗೂ ನಿಧಿ ಕುಮಾರಿ (ವಿದ್ಯಾರಣ್ಯ ಶಾಲೆ, ಕುಂದಾಪುರ) ತೃತೀಯ ಸ್ಥಾನ ಪಡೆದು ಪ್ರಶಸ್ತಿಗೆ ಭಾಜನರಾದರು.
ವಿದ್ಯಾರಣ್ಯ ಪ್ರಶಸ್ತಿ ಪ್ರದಾನ
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ವಾಲ್ಬೆಲ್ಲ – ಕುಂದಗನ್ನಡ’ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ವಿದ್ಯಾರಣ್ಯ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು.
ಈ ವರ್ಷದ ವಿದ್ಯಾರಣ್ಯ ಪ್ರಶಸ್ತಿಗೆ ಕುಂದಾಪುರ ಕನ್ನಡ ಪ್ರತಿಷ್ಠಾನ, ಬೆಂಗಳೂರು ಆಯ್ಕೆಯಾಯಿತು. ದೂರದ ಬೆಂಗಳೂರಿನಲ್ಲಿ ಕುಂದಾಪುರ ಕನ್ನಡದ ಸೊಗಡನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ಪರಿಚಯಿಸಿ, ಕುಂದಾಪುರ ಕನ್ನಡದ ಸಂರಕ್ಷಣೆ, ಪ್ರಚಾರ ಹಾಗೂ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಯಿತು. ಅಲ್ಲದೆ, ಸರ್ಕಾರದ ಗಮನವನ್ನು ಕುಂದಾಪುರ ಕನ್ನಡದತ್ತ ಸೆಳೆಯುವಲ್ಲಿ ಪ್ರತಿಷ್ಠಾನವು ಮಹತ್ವದ ಪಾತ್ರ ವಹಿಸಿರುವುದನ್ನೂ ಈ ಸಂದರ್ಭದಲ್ಲಿ ಪ್ರಶಂಸಿಸಲಾಯಿತು.
ಕುಂದಾಪುರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಉದಯ ಹೆಗ್ಡೆ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಐಪಿಎಸ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್., ಕುಂದಗನ್ನಡ ಅಧ್ಯಯನ ಪೀಠದ ಸದಸ್ಯರಾದ ಜಯಪ್ರಕಾಶ್‌ ಹೆಗ್ಡೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಸಂಸ್ಥೆಯನ್ನು ಅಭಿನಂದಿಸಿದರು.
ಹಬ್ಬದಂತೆ ಕಂಗೊಳಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಕ್ಯಾಂಪಸ್
ಯಡಾಡಿ–ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ‘ವಾಲ್ಬೆಲ್ಲ – ಕುಂದಗನ್ನಡ’ ಕಾರ್ಯಕ್ರಮದ ಅಂಗವಾಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆಕರ್ಷಕವಾಗಿ ಅಲಂಕರಿಸಲಾದ ವೇದಿಕೆ, ಕುಂದಾಪುರದ ಸೊಗಡನ್ನು ಬಿಂಬಿಸುವ ವಿನ್ಯಾಸ ಹಾಗೂ ಕಲಾತ್ಮಕ ಅಲಂಕಾರಗಳು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಪೋಷಕರು ಹಾಗೂ ಅತಿಥಿಗಳಿಗೆ ರುಚಿಕರ ಉಪಹಾರದೊಂದಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಎಲ್ಲರಿಗೂ ಕುಂದಾಪುರದ ವಿಶೇಷ ʼವಾಲ್ಬೆಲ್ಲʼ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಲಾಯಿತು.
ಸಭಾಂಗಣದಲ್ಲಿ ಕುಂದಾಪುರ ಭಾಗದ ಕೃಷಿ ಪರಿಕರಗಳು, ಪ್ರಾಚೀನ ಉಪಯೋಗಿ ವಸ್ತುಗಳು, ಸಾಂಪ್ರದಾಯಿಕ ಪರಿಕರಗಳು ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪರೂಪದ ಪ್ರದರ್ಶನಗಳು ನೆರೆದವರನ್ನು ಆಕರ್ಷಿಸಿದವು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಹುಲಿವೇಷ ಕಲಾವಿದರು, ಭರತನಾಟ್ಯ ಹಾಗೂ ಯಕ್ಷಗಾನ ವೇಷಧಾರಿಗಳು, ಕುಂದಾಪುರದ ಸಾಂಪ್ರದಾಯಿಕ ಉಡುಪು ತೊಟ್ಟ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಅನಾವರಣಗೊಳಿಸಿದ ವಿವಿಧ ಕಲಾಪ್ರದರ್ಶನಗಳು ನೋಡುಗರ ಮನಸೂರೆಗೊಂಡವು.
ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬ ಅತಿಥಿಯನ್ನು ಕುಂದಾಪುರ ಕನ್ನಡದಲ್ಲೇ ಆತ್ಮೀಯವಾಗಿ ಸ್ವಾಗತಿಸಿದುದು ವಿಶೇಷವಾಗಿತ್ತು. ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯರು ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಆತ್ಮೀಯ ಆತಿಥ್ಯ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು.
ಒಟ್ಟಾರೆಯಾಗಿ ವಿದ್ಯಾರಣ್ಯ ಕ್ಯಾಂಪಸ್ ಕುಂದಾಪುರದ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನಾವರಣಗೊಳಿಸಿದ ಸಾಂಸ್ಕೃತಿಕ ಹಬ್ಬದ ತಾಣವಾಗಿ ಕಂಗೊಳಿಸಿತು.

Click Here

LEAVE A REPLY

Please enter your comment!
Please enter your name here