Author: Team Kundapura Mirror

  • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ದೃಷ್ಟಿ ಪ್ರದಾನ ಯೋಜನೆ 2026-27 ರ ಅಂಗವಾಗಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ ಕುಂದಾಪುರ, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು, ರೋಟರಿ ಕ್ಲಬ್ ಕುಂದಾಪುರ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರಿನಲ್ಲಿ ಮೇ.19ರಂದು ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ರೋಟೇರಿಯನ್ ನಾಗರಾಜ್ ಶೆಟ್ಟಿ ವಹಿಸಿದ್ದರು. ಸಮಾಜದ ಆರೋಗ್ಯವೇ ನಿಜವಾದ ಸಂಪತ್ತು ಎಂಬ ಸಂದೇಶದೊಂದಿಗೆ ಡಾ. ಮನೋಜ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಮುಖ್ಯ ಅತಿಥಿಗಳಾಗಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ನವೀನ್ ಶೆಟ್ಟಿ, ಖಜಾಂಚಿ ಮತ್ತು ಶಾಲೆಯ ಶೈಕ್ಷಣಿಕ ಸಂಚಾಲಕರಾದ ಸುಭಾಷ್ಚಂದ್ರ ಶೆಟ್ಟಿ ಕೊಡ್ಲಾಡಿ, ಶಿರೂರು ಮುದ್ದುಮನೆ ನೇತ್ರ ಚಿಕಿತ್ಸೆ ಆಸ್ಪತ್ರೆಯ ಆಡಳಿತಾಧಿಕಾರಿ ಶಂಕರ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸರ್ವೋದಯ ಪೂಜಾರಿ, ನಿಯೋಜಿತ ಅಧ್ಯಕ್ಷರಾದ ಸತೀಶ್ ಹೆಗ್ಡೆ, ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಯ ನ್ಸಡ್ ಕೌನ್ಸಿಲರ್ ವೀಣಾ ಉಪಸ್ಥಿತರಿದ್ದರು.

    ಉದ್ಘಾಟನಾ ಭಾಷಣದಲ್ಲಿ ಡಾ. ಮನೋಜ್ ಭಟ್ ಅವರು “ಕಣ್ಣುಗಳು ದೇವರ ಅಮೂಲ್ಯ ಕೊಡುಗೆ. ಅವುಗಳ ಆರೈಕೆ ಪ್ರತಿಯೊಬ್ಬರ ಜವಾಬ್ದಾರಿ” ಎಂದು ಹೇಳಿ, ಇಂದಿನ ಜೀವನಶೈಲಿಯಿಂದ ಉಂಟಾಗುತ್ತಿರುವ ಕಣ್ಣಿನ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ನಿಯಮಿತ ನೇತ್ರ ತಪಾಸಣೆ, ಸಮತೋಲನ ಆಹಾರ ಮತ್ತು ಸರಿಯಾದ ಆರೋಗ್ಯಕರ ಅಭ್ಯಾಸಗಳ ಅಗತ್ಯವನ್ನು ಮನಮುಟ್ಟುವಂತೆ ವಿವರಿಸಿದರು.
    ಶಂಕರ ಶೆಟ್ಟಿ ಅವರು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಸೇವಾ ಧ್ಯೇಯಗಳನ್ನು ವಿವರಿಸಿದರು. ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶದಿಂದ ಟ್ರಸ್ಟ್ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರ ಸೇವಾ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂದು ತಿಳಿಸಿದರು.

    ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ಉದ್ದೇಶಗಳು, ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳ ಕುರಿತು ಮಾತನಾಡಿದರು. “ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರಕಬೇಕು ಎಂಬುದು ನಮ್ಮ ಕನಸು” ಎಂದು ಹೇಳಿ, ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದತ್ತ ಟ್ರಸ್ಟ್ ಕೈಗೊಂಡಿರುವ ವಿವಿಧ ಯೋಜನೆಗಳನ್ನು ಪರಿಚಯಿಸಿದರು.
    ಆರೋಗ್ಯ ಇಲಾಖೆಯ ಕೌನ್ಸಿಲರ್ ವೀಣಾ ಅವರು ಆರೋಗ್ಯಕರ ಜೀವನಶೈಲಿಯ ಅಗತ್ಯತೆಯನ್ನು ಒತ್ತಿಹೇಳಿದರು. ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯ ಮಹತ್ವವನ್ನು ತಿಳಿಸಿ, ಸಾರ್ವಜನಿಕರು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
    ಅಧ್ಯಕ್ಷೀಯ ಭಾಷಣದಲ್ಲಿ ರೋಟೇರಿಯನ್ ನಾಗರಾಜ್ ಶೆಟ್ಟಿ ಅವರು ರೋಟರಿ ಕ್ಲಬ್‌ನ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿ, “ಮಾನವ ಸೇವೆಯೇ ಮಹಾಸೇವೆ” ಎಂಬ ಸಂದೇಶವನ್ನು ನೀಡಿದರು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾದ 11ನೇ ನೇತ್ರ ಶಿಬಿರ ಇದಾಗಿದ್ದು, ಸಮಾಜದ ಹಿತಕ್ಕಾಗಿ ರೋಟರಿ ಕ್ಲಬ್ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.
    ಸುಭಾಷ್ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಚೈತ್ರ ಯಡಿಯಾಳ ಇವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಿರ್ವಹಿಸಿದರು.
    ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.

  • ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ತರಬೇತಿ ಉದ್ಘಾಟನೆ

    ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ತರಬೇತಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಒಳನೋಟದ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಅತ್ಯಂತ ವಿಶಿಷ್ಟ ಹಾಗೂ ಅವಶ್ಯಕತೆಯ ಶಿಕ್ಷಣ ಪದ್ಧತಿಯಾದ “ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ” ತರಬೇತಿ ಕಾರ್ಯಾಗಾರವನ್ನು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ). ಅಂಪಾರು ವತಿಯಿಂದ ಚಿಗುರು ಮಿಡ್ ಬ್ರೈನ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಯಿತು.

    ರೋಟರಿ ಕ್ಲಬ್ ಕುಂದಾಪುರದ ಸಹಕಾರದೊಂದಿಗೆ ಒಂದು ವಾರಗಳ ಅವಧಿಯ ಈ ವಿಶೇಷ ತರಬೇತಿ ಶಿಬಿರವು ಇಂದು ಬೆಳಿಗ್ಗೆ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಗೊಂಡಿತು. ಕಾರ್ಯಕ್ರಮದ ಅಂಗವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ). ಅಂಪಾರು ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮವನ್ನು ನಿರ್ದೇಶಕರಾದ ಅಂಪಾರು ಅರುಣ್ ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, “ಇಂದಿನ ಮಕ್ಕಳಲ್ಲಿ ಅಡಗಿರುವ ಅಸಾಮಾನ್ಯ ಪ್ರತಿಭೆಯನ್ನು ಹೊರತೆಗೆದು, ಅವರ ಚಿಂತನಾ ಶಕ್ತಿಯನ್ನು ವೃದ್ಧಿಸುವಲ್ಲಿ ಇಂತಹ ತರಬೇತಿಗಳು ಮಹತ್ವದ ಪಾತ್ರವಹಿಸುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂತಹ ಅಪೂರ್ವ ಅವಕಾಶ ದೊರಕುತ್ತಿರುವುದು ಶ್ಲಾಘನೀಯ,” ಎಂದು ಹೇಳಿದರು.

    ಅಧ್ಯಕ್ಷೀಯ ಭಾಷಣದಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು, “ ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಲ್ಲ; ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಕಲ್ಪಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಶಿಕ್ಷಣ ಹಾಗೂ ನೂತನ ಕಲಿಕಾ ವಿಧಾನಗಳನ್ನು ತಲುಪಿಸುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ,” ಎಂದು ತಿಳಿಸಿದರು.

    ಆಡಳಿತಾಧಿಕಾರಿಯಾದ ಚೈತ್ರ ಯಡಿಯಾಳ ಅವರು ಸ್ವಾಗತಿಸಿ, ಗಾಂಧಾರಿ ವಿದ್ಯೆ ತರಬೇತಿಯ ಮಹತ್ವ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಇಂತಹ ವಿಶಿಷ್ಟ ಕಾರ್ಯಾಗಾರವನ್ನು ತಲುಪಿಸುವ ಉದ್ದೇಶದ ಕುರಿತು ವಿವರ ನೀಡಿದರು.

    ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಖಜಾಂಚಿ ಹಾಗೂ ಶಾಲೆಯ ಶೈಕ್ಷಣಿಕ ಸಂಚಾಲಕರಾದ ಸುಭಾಷ್‌ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಮಾತನಾಡಿ, “ ಸಂಸ್ಥೆಯು ಶಾಲಾ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ. ಮಿಡ್ ಬ್ರೈನ್ ಆ್ಯಕ್ಟಿವೇಷನ್‌ನ ಪ್ರಯೋಜನಗಳನ್ನು ತಿಳಿದು ಗ್ರಾಮೀಣ ವಿದ್ಯಾರ್ಥಿಗಳಿಗೂ ಇದರ ಸದುಪಯೋಗ ದೊರಕಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,” ಎಂದರು.

    ಚಿಗುರು ಮಿಡ್ ಬ್ರೈನ್ ಆ್ಯಕ್ಟಿವೇಷನ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ತರಬೇತುದಾರಾದ ಮಹೇಶ್ ಕಾರ್ಯಾಗಾರದ ಉದ್ದೇಶ, ಅದರ ಪ್ರಯೋಜನಗಳು ಹಾಗೂ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಇದು ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

    ಶಿಕ್ಷಕಿ ಸರೋಜಾ ಅವರು ಕಾರ್ಯಕ್ರಮ ನಿರೂಪಣೆ ನಡೆಸಿದರು. ಧನ್ವಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ದೊರೆಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಕಾರ್ಯಾಗಾರವು ಯಶಸ್ವಿಯಾಗಿ ಆರಂಭಗೊಂಡಿತು.

  • “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ.

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ.

    ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು “ರಕ್ಕಿ” ಚಿತ್ರದ ಮೊದಲ ಗೀತೆಯಾಗಿದೆ.

    ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ ಸಂಯೋಜನೆ ಹಾಗೂ ಕಲರ್‌ಫುಲ್ ದೃಶ್ಯಗಳೊಂದಿಗೆ ಈ ಹಾಡು ರಕ್ಕಿ ಸುರೇಶ್ ಅವರನ್ನು ಹೊಸ ತಲೆಮಾರಿನ ಮಾಸ್ ಹೀರೋ ಆಗಿ ಪರಿಚಯಿಸುತ್ತದೆ. ಇಂದಿನ Gen Z ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್, ಯೂತ್‌ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್‌ನಿಂದ ವಿಶೇಷ ಆಕರ್ಷಣೆಯಾಗಿದೆ.

    “ಹಚ್ಚಿಟ್ಟಿರೋ ಪಟಾಕಿ” ಎಂಬ ಸಾಹಿತ್ಯದ ಮೂಲಕ ನಾಯಕನ ಭರ್ಜರಿ ಎಂಟ್ರಿಯನ್ನು ಹಾಡಿನಲ್ಲಿ ಬಿಂಬಿಸಲಾಗಿದ್ದು, ಸಿಡಿಯಲು ಸಿದ್ಧವಾಗಿರುವ ಪಟಾಕಿಯಂತೆ ರಕ್ಕಿ ಅವರ ಎನರ್ಜಿ ಈ ಹಾಡಿನಲ್ಲಿ ಕಾಣುತ್ತದೆ. ವೇಗದ ನೃತ್ಯ, ಸ್ಟೈಲಿಶ್ ದೃಶ್ಯ ವಿನ್ಯಾಸ ಮತ್ತು ಮಾಸ್ ಫೀಲಿಂಗ್‌ನಿಂದ ಈ ಹಾಡು ಥಿಯೇಟರ್ ಪ್ರೇಕ್ಷಕರಿಗೆ ಹಬ್ಬದ ಅನುಭವ ನೀಡುವಂತಿದೆ.

    ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯವನ್ನು ಲೋಕಿ ತವಸ್ಯ ನೀಡಿದ್ದಾರೆ. ಯುವಜನತೆಯನ್ನು ಸೆಳೆಯುವ ರೀತಿಯ ಸಂಗೀತ ಮತ್ತು ಸಾಹಿತ್ಯ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಕಂಬಿರಾಜು ಅವರ ನೃತ್ಯ ಸಂಯೋಜನೆ ಹಾಡಿಗೆ ಮತ್ತಷ್ಟು ಭರ್ಜರಿತನ ನೀಡಿದ್ದು, ಪ್ರತಿಯೊಂದು ಸ್ಟೆಪ್ ಕೂಡ ಪ್ರೇಕ್ಷಕರನ್ನು ಕುಣಿಯಿಸುವಂತಿದೆ. ಛಾಯಾಗ್ರಾಹಕ ಐ ಸಾಕ್ ಪ್ರಭಾಕರ್ ಅವರು ಕಲರ್‌ಫುಲ್ ಫ್ರೇಮ್ಸ್, ಸ್ಟೈಲಿಶ್ ಲೈಟಿಂಗ್ ಮತ್ತು ಅದ್ದೂರಿ ದೃಶ್ಯ ವಿನ್ಯಾಸದ ಮೂಲಕ ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.

    ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ರಕ್ಕಿ” ಚಿತ್ರ, ಸದ್ಯ ಸೆನ್ಸಾರ್ ಹಂತದಲ್ಲಿದ್ದು ಶೀಘ್ರದಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದ ಮತ್ತು ಬೆಂಬಲ ದೊರೆತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.

    SNR Productions ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ “ರಕ್ಕಿ” ಚಿತ್ರವು ಸಾಹಸ , ಭಾವನೆ, ಸಂಗೀತ, ಪ್ರೇಮ ಮತ್ತು ಮಾಸ್ ಅಂಶಗಳಿಂದ ಕೂಡಿದ ಯುವಜನರ ಮನಗೆಲ್ಲುವ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ ಆಗಲಿದೆ. ಈಗಾಗಲೇ ಬಿಡುಗಡೆಯಾದ “ರಗಡೋ ರಕ್ಕಿ” ಹಾಡು ಕನ್ನಡ ಸಿನಿ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು, ಚಿತ್ರದ ಭರ್ಜರಿ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದೆ. ‌ . ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಜಿ ಜಿ, ಹರಿಣಿ ಶ್ರೀಕಾಂತ್ ಮುಂತಾದವರ ಭರ್ಜರಿ ತಾರಾಬಳಗ ಈ ಚಿತ್ರದಲ್ಲಿದೆ.

  • ಮೇ 21ರಂದು ಸುಲೋಚನಾ ಸರ್ವೋತ್ತಮ ಶೆಟ್ಟಿ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಚಿರಂತನ ವಿದ್ಯಾಸಂಸ್ಥೆಗಳ ಉದ್ಘಾಟನೆ -ಚಿರಂತನ ವಿದ್ಯಾ ಸಂಸ್ಥೆಗಳ ಸ್ಥಾಪಕಿ, ನಿರ್ದೇಶಕಿ ಡಾ.ಚಿಂತನಾ ರಾಜೇಶ್

    ಮೇ 21ರಂದು ಸುಲೋಚನಾ ಸರ್ವೋತ್ತಮ ಶೆಟ್ಟಿ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಚಿರಂತನ ವಿದ್ಯಾಸಂಸ್ಥೆಗಳ ಉದ್ಘಾಟನೆ -ಚಿರಂತನ ವಿದ್ಯಾ ಸಂಸ್ಥೆಗಳ ಸ್ಥಾಪಕಿ, ನಿರ್ದೇಶಕಿ ಡಾ.ಚಿಂತನಾ ರಾಜೇಶ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಯುವ ಮೆರಿಡಿಯನ್ ಸಮೀಪದ ಲೋಟಸ್ ಎಡ್ಜ್‍ನಲ್ಲಿ ಸುಲೋಚನಾ ಸರ್ವೋತ್ತಮ ಶೆಟ್ಟಿ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಚಿರಂತನ ವಿದ್ಯಾಸಂಸ್ಥೆಗಳ ಉದ್ಘಾಟನೆ ಮೇ 21ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಚಿರಂತನ ವಿದ್ಯಾ ಸಂಸ್ಥೆಗಳ ಸ್ಥಾಪಕಿ, ನಿರ್ದೇಶಕಿ ಡಾ.ಚಿಂತನಾ ರಾಜೇಶ್ ಹೇಳಿದರು.
    ಶಾಲೆಯ ವಠಾರದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನೂತನ ವಿದ್ಯಾಸಂಸ್ಥೆಗಳನ್ನು ಉದ್ಘಾಟಿಸಲಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಮಾನಸಿಕ ರೋಗ ತಜ್ಞ ಡಾ.ಪ್ರಕಾಶ ಸಿ.ತೋಳಾರ್, ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
    ಉತ್ತಮ ಶಿಕ್ಷಕರು ಸಮಾಜದ ಬಹುದೊಡ್ಡ ಅವಶ್ಯಕತೆ. ಒಳ್ಳೆಯ ಶಿಕ್ಷಕರ ತರಬೇತಿಯ ಅವಶ್ಯಕತೆ ದಿನೇ ದಿನೇ ಹೆಚ್ಚುತ್ತಿದೆ. ಈ ದಿಸೆಯಲ್ಲಿ ಟೀಚರ್ ಟ್ರೈನಿಂಗ್ ಸ್ಕೂಲ್ ಆರಂಭಿಸಲಾಗುತ್ತಿದೆ. ಆಧುನಿಕ ಬದುಕಿಗೆ ಬೇಕಾಗಿರುವ ಸಮಗ್ರ ಶಿಕ್ಷಣದ ಅಗತ್ಯತೆ ಕೂಡ ಹೆಚ್ಚುತ್ತಿದೆ. ಜೊತೆಗೆ ಎಲ್ಲಾ ಶಿಕ್ಷಣದ ಮೂಲ ಒಂದು ಉತ್ತಮ ಫೌಂಡೇಷನ್ ಸ್ಕೂಲ್. ಮಗುವಿನ ಶೈಕ್ಷಣಿಕ ಬದುಕಿಗೆ/ಜೀವನಕ್ಕೆ ಒಂದು ತಳಪಾಯ ಆಗುವಂತಹ ವೈಜ್ಞಾನಿಕ ಅಳವಡಿಸಿಕೊಂಡು ಪ್ರೈಮ್‍ರೋಸ್ ಫೌಂಡೇಶನ್ ಸ್ಕೂಲ್ ಪ್ರಾರಂಭಿಸಲಾಗುತ್ತಿದೆ. ಮಕ್ಕಳ ಹಾಗೂ ಹದಿಹರೆಯರವರ ಮಾನಸಿಕ ಆರೋಗ್ಯ ಸಮಸ್ಯೆಗಳು ದಿನ ಹೆಚ್ಚುತ್ತಿದೆ ಅದಕ್ಕೆ ಬೇಕಾದ ಚಿಕಿತ್ಸೆಯ ಅಗತ್ಯತೆ ಕೂಡ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಮತ್ತು ಹದಿಹರೆಯದವರಿಗೆ ಮಾರ್ಗದರ್ಶನ ಕೇಂದ್ರವನ್ನು ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.
    ಫೌಂಡೇಶನ್ ಶಾಲೆ (ಪ್ರೀ ಸ್ಕೂಲ್)ಯಲ್ಲಿ ಮಗುವಿನ ಬೌದ್ಧಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕವಾಗಿ, ವೈಜ್ಞಾನಿಕವಾಗಿ ಸಿದ್ದಗೊಂಡ ಕಲಿಕಾ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುವುದು. ಫೌಂಡೇಶನ್ ಲೆವೆಲ್ ನಲ್ಲಿ ಬೋಧಿಸುವ ಶಿಕ್ಷಕರನ್ನು ರೂಪುಗೊಳಿಸುವ ಪ್ರೀಸ್ಕೂಲ್ ಟೀಚರ್ಸ್ ಟ್ರೇನಿಂಗ್ ಕೋರ್ಸ್‍ಗಳನ್ನು ಇಲ್ಲಿ ನೀಡಲಾಗುತ್ತಿದೆ. ಇಲ್ಲಿ ಶೇ.100 ಉದ್ಯೋಗಾವಕಾಶದ ಸಾಧ್ಯತೆಗಳಿದ್ದು, ಈಗಾಗಲೇ ಮೂರನೇ ವರ್ಷದ ದಾಖಲಾತಿ ಪ್ರಕ್ರಿಯೆ ನಡಿತಾ ಇದೆ. ಎರಡು ಬ್ಯಾಚ್‍ಗಳು ತರಬೇತಿ ಪೂರ್ಣಗೊಳಿಸಿ ಉದ್ಯೋಗವನ್ನು ಪಡೆದಿದ್ದಾರೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಹಾಗೂ ಇನ್ನೂ ಉದ್ಯೋಗ ಪಡೆಯ ಬೇಕಾದವರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಇರುತ್ತದೆ ಎಂದು ಅವರು ಹೇಳಿದರು.
    ಚಿರಂತನ ಸಂಸ್ಥೆ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕೇಂದ್ರ ಕೂಡ ಆಗಿ ಕೆಲಸ ನಿರ್ವಹಿಸಲಿದೆ. ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆಯಿಂದ ಶಿಕ್ಷಕರರಿಗೆ ಪುನಶ್ವೇತನ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಮಕ್ಕಳ ಹಾಗೂ ಹದಿಹರೆಯದವರ ವಿಶೇಷ ಆಪ್ತ ಸಮಾಲೋಚನೆ ಹಾಗೂ ವೃತ್ತಿಪರ ಮಾರ್ಗದರ್ಶನ ಕೇಂದ್ರವಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ ವೃತ್ತಿಪರ ಆಪ್ತ ಸಮಾಲೋಚನೆ ಕೋರ್ಸ್‍ಗಳು ಕೂಡ ಇಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ NATIONAL INSTITUTE OF OPEN SCHOOLING 3 ವಿಭಾಗಗಳು ಸೇರಿಸುವ ಆಶಯ ಇದೆ ಎಂದು ಅವರು ಹೇಳಿದರು.
    ಅಕಾಡೆಮಿಕ್ ಲೀಡ್ ವಿಲ್ಮಾ ಡಿಸೋಜ, ಸಂಸ್ಥೆಯ ಪ್ರಾಂಶುಪಾಲೆ ವಿನೂತಾ ಬಿ.ಶೆಟ್ಟಿ ಉಪಸ್ಥಿತರಿದ್ದರು.

  • ವೃದ್ಧ ಮಹಿಳೆಗೆ ನಿವೇಶನ ;ಮಾನವೀಯತೆ ಆಧಾರದಲ್ಲಿ ಸ್ಪಂದಿಸಲು ಜಿಲ್ಲಾಧಿಕಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ

    ವೃದ್ಧ ಮಹಿಳೆಗೆ ನಿವೇಶನ ;ಮಾನವೀಯತೆ ಆಧಾರದಲ್ಲಿ ಸ್ಪಂದಿಸಲು ಜಿಲ್ಲಾಧಿಕಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಮನೆ ನಿವೇಶನಕ್ಕಾಗಿ ಅರ್ಜಿ ಹಿಡಿದು ಬಂದಿದ್ದ ವೃದ್ಧ ಮಹಿಳೆ ಗಿರಿಜಾ ಶೆಟ್ಟಿಗಾರ್ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುರ್ತಾಗಿ ಸ್ಪಂದಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದಾರೆ.

    80 ಬಡಗಬೆಟ್ಟು ಗ್ರಾಮದ ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ಮಹಿಳೆ ತನ್ನ ನೆರೆಮನೆಯ ಮುಸ್ಲಿಂ ಮಹಿಳೆಯರ ನೆರವಿನೊಂದಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಸಹಾಯ ಕೇಳಿದ್ದರು. 1990ರಲ್ಲಿ ವಸತಿ ಯೋಜನೆಯಡಿ ಮಂಜೂರಾಗಿದ್ದ 5 ಸೆಂಟ್ಸ್ ಜಾಗದ ಹಕ್ಕುಪತ್ರವಿದ್ದರೂ ಪ್ರಸ್ತುತ ಅರಣ್ಯ ಇಲಾಖೆಯು ಡೀಮ್ಡ್ ಫಾರೆಸ್ಟ್ ಎಂದು ಜಾಗದ ಸ್ವಾಧೀನಕ್ಕೆ ಆಕ್ಷೇಪಿಸುತ್ತಿರುವುದು ಮತ್ತು ಗ್ರಾಮ ಪಂಚಾಯಿತಿಯು ಮನೆ ಕಟ್ಟಲು ಪರವಾನಗಿ ನೀಡದಿರುವ ವಿಚಾರದ ಬಗ್ಗೆ ಮಹಿಳೆ ಕಷ್ಟಪಡುತ್ತಿರುವುದನ್ನು ಸಚಿವರು ಆಕೆಯ ಅರ್ಜಿಯನ್ನು ಲಗತ್ತಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ತಕ್ಷಣವೇ ಈ ವಿಷಯದಲ್ಲಿ ಸ್ಪಂದಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ ಮಾನವೀಯತೆ ಆಧಾರದಲ್ಲಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸಬೇಕೆಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಹಿಂದು ವೃದ್ಧ ಮಹಿಳೆಯ ಪರವಾಗಿ ಮಿಡಿದ ಮುಸ್ಲಿಂ ಮಹಿಳೆಯರು ಎನ್ನುವ ನೆಲೆಯಲ್ಲಿ ಅರ್ಜಿ ಹಿಡಿದು ಸಚಿವರಲ್ಲಿಗೆ ಬಂದಿದ್ದ ವಿಚಾರ ರಾಜ್ಯದಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಹಿಂದು- ಮುಸ್ಲಿಮರು ಒಟ್ಟಿಗೆ ಬಂದಿದ್ದನ್ನು ಸಚಿವರು ಪ್ರಶಂಸಿಸಿ, ಇದು ನಮ್ಮ ಭಾರತ ಎಂದು ಹೇಳಿದ್ದರು.

  • ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

    ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ : ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವು ಜೂನ್ 28 ರಂದು ನಡೆಯಲಿದ್ದು, 0-5 ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
    ಜಿಲ್ಲೆಯಾದ್ಯಂತ ಜೂನ್ 28 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿಯೊಬ್ಬ ಪೋಷಕರು ತಪ್ಪದೇ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದರೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
    ದೇಶದಲ್ಲಿ 2011 ರ ಜನವರಿ 13 ರಲ್ಲಿ ಕೊನೆಯದಾಗಿ ಪೋಲಿಯೋ ಪ್ರಕರಣ ವರದಿಯಾಗಿದ್ದು ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದ ಅವರು, ಪೋಲಿಯೋ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
    ಜಿಲ್ಲೆಯಲ್ಲಿ ಪೋಲಿಯೊ ಮತ್ತು ದಡಾರ ನಿರ್ಮೂಲನೆ ಮಾಡುವಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರಬಾರದು. ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಿ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
    ಕಳೆದ ಸಾಲಿನ ಡಿಸೆಂಬರ್ ನಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 65,401 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.103 ರಷ್ಟು ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದ ಅವರು, ಜೂನ್‌ನಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅಂದಾಜು 63,524 ಮಕ್ಕಳನ್ನು ಗುರುತಿಸಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 668 ಲಸಿಕಾ ಕೇಂದ್ರಗಳ ಜೊತೆಯಲ್ಲಿ ಟ್ರಾನ್ಸಿಟ್ 18 ಬೂತುಗಳು, 5 ಮೊಬೈಲ್ ಟೀಮ್‌ಗಳಿದ್ದು, 1363 ತಂಡಗಳು ಹಾಗೂ 155 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
    ಲಸಿಕಾ ದಿನದಂದು ಲಸಿಕೆ ನೀಡಲು ಗುರುತಿಸಲಾದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ಕಾರ್ಯಕ್ರಮವು ರವಿವಾರ ವಾಗಿರುವ ಹಿನ್ನೆಲೆ, ರೈಲ್ವೆ ನಿಲ್ದಾಣ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಟೋಲ್ ಗೇಟ್‌ಗಳಲ್ಲಿ ಬೂತ್‌ಗಳನ್ನು ತೆರೆಯಲು ಅನುವು ಮಾಡಿಕೊಡಬೇಕು ಎಂದ ಅವರು, ಲಸಿಕೆಯ ಸುರಕ್ಷಿತ ದಾಸ್ತಾನಿನ ಬಗ್ಗೆ ಗಮನ ಹರಿಸುವುದರೊಂದಿಗೆ ಲಸಿಕೆ ಹಾಳಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕಾ ಪಡೆಯುವಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೆಸ್ಕಾಂ, ಸಾರಿಗೆ, ರೈಲ್ವೆ, ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದರು.
    ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಲು ಜಿಲ್ಲೆಯ ಎಲ್ಲಾ 14 ವರ್ಷ ಮೇಲ್ಪಟ್ಟ 15 ವರ್ಷದೊಳಗಿನ ಹೆಣ್ಣು ಮಕ್ಕಳು ಹೆಚ್.ಪಿ.ವಿ ಲಸಿಕೆಯನ್ನು ಪಡೆಯುವಂತೆ ಪೋಸ್ಟರ್‌ಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಪೋಷಕರಿಗೆ ಲಸಿಕೆಯು ಸುರಕ್ಷಿತವಾಗಿರುವ ಕುರಿತು ಮನದಟ್ಟು ಮಾಡಿಸಬೇಕು ಎಂದರು.
    ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಬಸ್ರೂರು ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ ಜೂನ್ 14ರಂದು ಅಷ್ಟಮಂಗಲ ಪ್ರಶ್ನೆ ಮುಂದುವರಿಕೆ

    ಬಸ್ರೂರು ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ ಜೂನ್ 14ರಂದು ಅಷ್ಟಮಂಗಲ ಪ್ರಶ್ನೆ ಮುಂದುವರಿಕೆ

    ಕುಂದಾಪುರ ಮಿರರ್ ಸುದ್ದಿ…

    ಬಸ್ರೂರು: ಶ್ರೀ ತುಳುವೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಮುಂದುವರಿದ ಭಾಗವಾಗಿ, ಬಸ್ರೂರಿನ ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ 2026ರ ಜೂನ್ 14ರಂದು (ಆದಿತ್ಯವಾರ) ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ ಎಂದು ದೇವಸ್ಥಾನ ಸಮಿತಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ತಿಳಿಸಿವೆ.

    ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ನಡೆದ ಪ್ರಶ್ನೆ ಚಿಂತನೆಯ ವೇಳೆ ದೊರೆತ ದೈವ ಸಂದೇಶದ ಪ್ರಕಾರ, ಶ್ರೀಚಕ್ರ ಸಾನಿಧ್ಯ ಹೊಂದಿರುವ ಮೂಲಳ ದೇವಿ–ತುಳುವೇಶ್ವರಿ ಸಾನಿಧ್ಯದ ಜೀವನೋದ್ಧಾರ ಮತ್ತು ಅಭಿವೃದ್ಧಿ ನಡೆದ ನಂತರವೇ ತುಳುವೇಶ್ವರ ದೇವರ ಪುನರ್ವೈಭವೀಕರಣ ಕಾರ್ಯಗಳು ಪೂರ್ಣ ಫಲಪ್ರದವಾಗಲಿವೆ ಎಂಬ ಸೂಚನೆ ದೊರೆತ ಹಿನ್ನೆಲೆಯಲ್ಲಿ ಈ ಮಹತ್ವದ ತಿರುವು ಉಂಟಾಗಿದೆ.

    ಈ ಹಿನ್ನೆಲೆಯಲ್ಲಿ, ತುಳುವೇಶ್ವರಿ (ಮುಳಲ) ಸಾನಿಧ್ಯದ ಪ್ರಸ್ತುತ ವಾರಿಸುದಾರರಾದ ಪ್ರಶಾಂತ ಪ್ರಭು ಹಾಗೂ ಸುಭಾಷ್ ಚಂದ್ರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ 2026ರ ಜೂನ್ 14 ಆದಿತ್ಯವಾರದಂದು ಅಷ್ಟಮಂಗಲ ಪ್ರಶ್ನೆ ಚಿಂತನೆಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.

    ಪ್ರಾಚೀನ ತುಳುನಾಡಿನ ಶಕ್ತಿಸ್ವರೂಪಿಣಿಯಾದ ತುಳುವೇಶ್ವರಿ ದೇವಿಯ ಮೂಲ ಸಾನಿಧ್ಯ, ಶ್ರೀಚಕ್ರ ಆರಾಧನೆ, ಶ್ರೀಚಕ್ರ ನೇಪಾಳಕ್ಕೆ ಸ್ಥಳಾಂತರ ವಾದ ಬಗ್ಗೆ, ತೀರ್ಥಭಾವಿ ಹಾಗೂ ಸಂಬಂಧಿತ ಪುರಾತನ ಕುರುಹುಗಳ ಕುರಿತು ಹೆಚ್ಚಿನ ದೈವಿಕ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಈ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.

    ಈ ವಿಷಯದ ಕುರಿತು ತುಳುವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್. ಕೆ. ದೇವಾನಂದ ಶೆಟ್ಟಿ, ಸಂಚಾಲಕರಾದ ಬೇಲೂರು ದಿನಕರ ಶೆಟ್ಟಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಬದಿಯಡ್ಕ ಮಾಹಿತಿ ನೀಡಿದರು.

    ತುಳುನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪುನರುಜ್ಜೀವನದ ದಿಕ್ಕಿನಲ್ಲಿ ಈ ಅಷ್ಟಮಂಗಲ ಪ್ರಶ್ನೆ ಚಿಂತನೆ ಮಹತ್ವದ ಘಟ್ಟವಾಗಲಿದೆ.

  • ಕುಂದಾಪುರ :ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವ್ಯವಸ್ಥಾಪಕರಾದ ಕೃಷ್ಣ ಅವರಿಗೆ ಪೊಲೀಸ್ ಇಲಾಖೆಯ ಪ್ರಶಂಸನಾ ಪತ್ರ

    ಕುಂದಾಪುರ :ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವ್ಯವಸ್ಥಾಪಕರಾದ ಕೃಷ್ಣ ಅವರಿಗೆ ಪೊಲೀಸ್ ಇಲಾಖೆಯ ಪ್ರಶಂಸನಾ ಪತ್ರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಕೋಟೇಶ್ವರ ಅಂಕದಕಟ್ಟೆ ಸಮೀಪದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಮಾಜಮುಖಿ ಕಾರ್ಯವೈಖರಿಯನ್ನು ಗಮನಿಸಿ ಪೊಲೀಸ್ ಇಲಾಖೆಯು ಸಂಸ್ಥೆಯ ವ್ಯವಸ್ಥಾಪಕ ಕೃಷ್ಣ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

    2026ರ ಏ.20 ಪೊಲೀಸ್ ಠಾಣೆ ಸರಹದ್ದಿನ ಆಜ್ರಿ ಗ್ರಾಮದ ತಗ್ಗುಂಜೆ ಉಮಾಮಹೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಘಟನೆಗೆ ಸಂಬಂಧಪಟ್ಟಂತೆ ಈ ದೇವಳದಲ್ಲಿ ಈಗಾಗಲೇ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅಳವಡಿಸಲಾಗಿದ್ದ ಲೈವ್ ರೆಕಾರ್ಡಿಂಗ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳ ಚಹರೆಯನ್ನು ಆಧರಿಸಿ ಪ್ರಕರಣದ ಆರೋಪಿತರನ್ನು ಪತ್ತೆ ಹಚ್ಚಿ ಆರೋಪಿತರಿಂದ ಕಾಣಿಕೆ ಹುಂಡಿ ಹಾಗೂ ಅದರಲ್ಲಿದ್ದ ಹಣವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದರು.

    ಅವರು ನೀಡಿದ ಉಪಯುಕ್ತ ಮಾಹಿತಿಯಿಂದ ಈ ಪ್ರಕರಣವನ್ನು ಭೇದಿಸಲು ಸಹಕಾರಿಯಾಗಿತ್ತು. ಈ ಕುರಿತಂತೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಮಯ ಪ್ರಜ್ಞೆಯಿಂದ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವ್ಯವಸ್ಥಾಪಕರಾದ ಕೃಷ್ಣ ಅವರಿಗೆ ಕುಂದಾಪುರದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

  • ಕುಂದಾಪುರ : ಶ್ರಮ ಸಂಹಿತೆ ಅಧಿಸೂಚನೆ ಪ್ರತಿ ದಹಿಸಿ ಕಾರ್ಮಿಕರಿಂದ ಪ್ರತಿಭಟನೆ

    ಕುಂದಾಪುರ : ಶ್ರಮ ಸಂಹಿತೆ ಅಧಿಸೂಚನೆ ಪ್ರತಿ ದಹಿಸಿ ಕಾರ್ಮಿಕರಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೇಂದ್ರ ಸರ್ಕಾರ 4 ಶ್ರಮ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಿ ರಾಜ್ಯ ಸರಕಾರಗಳು ಜಾರಿಗೆ ತರುವಂತೆ ಒತ್ತಾಯಿಸುವುದನ್ನು ಸಿಐಟಿಯು ಕುಂದಾಪುರ ಸಂಚಾಲನ ಸಮಿತಿ ವಿರೋಧಿಸಿದೆ.

    ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಶ್ರಮ ಸಂಹಿತೆಯ ಅಧಿಸೂಚನೆಯ ಕರಡು ಪ್ರತಿ ದಹಿಸುವುದರ ಮುಖಾಂತರ ಪ್ರತಿಭಟಿಸಿದರು.

    ಪ್ರತಿಭಟನೆ ನಿರತರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಇಡೀ ದೇಶದಾದ್ಯಂತ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿದ್ದರು ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಹೊಸ ಶ್ರಮ ಸಂಹಿತೆಯನ್ನು ಜಾರಿಗೆ ತರುತ್ತಿದೆ. ಈ ನಿಲುವನ್ನು ಸಿಐಟಿಯು(CITU) ಖಂಡಿಸುವುದಾಗಿ ಹೇಳಿದರು.

    ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಹೆಚ್. ನರಸಿಂಹ, ಮಹಾಬಲ ವಡೇರ ಹೋಬಳಿ, ಕಟ್ಟಡ ಸಂಘದ ಮುಖಂಡರಾದ ಶಶಿಕಾಂತ್, ಸುಧೀರ್, ರಾಜ btr, ರೆಹಮಾನ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ವಹಿಸಿದ್ದರು.

  • ಬೈಂದೂರು: ನಾಲ್ಕು ಲೇಬರ್ ಅನುಷ್ಠಾನ ವಿರುದ್ಧ ಪ್ರತಿ ದಹಿಸಿ ಪ್ರತಿಭಟನೆ

    ಬೈಂದೂರು: ನಾಲ್ಕು ಲೇಬರ್ ಅನುಷ್ಠಾನ ವಿರುದ್ಧ ಪ್ರತಿ ದಹಿಸಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ ಜಾರಿ ಮಾಡಲು ಆದೇಶ ಹೊರಡಿಸಿರುವುದನ್ನು ಖಂಡಿಸಿ ದೇಶವ್ಯಾಪಿ ಸಿಐಟಿಯು ಕರೆಯನ್ನು ಇಂದು ಬೈಂದೂರು ಪೇಟೆಯಲ್ಲಿ ಆದೇಶ ಪ್ರತಿ ದಹಿಸಿ ಪ್ರತಿಭಟಿಸಲಾಯಿತು.

    ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್ ಜಾರಿ ಮಾಡುವುದರ ಮೂಲಕ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುತ್ತಿದೆ. 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್ ಗಳನ್ನು ಮಾಡಿ ದುರ್ಬಲಗೊಳಿಸಲಾಗಿದೆ ಇದು ಎಲ್ಲಾ ಕ್ಷೇತ್ರಗಳ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.

    ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ತೊಂಡೆ ಮಕ್ಕಿ ಮಾತನಾಡಿ ನೂತನ ಲೇಬರ್ ಕೋಡ್ ನಿಂದ ಕಟ್ಟಡ ಕಾರ್ಮಿಕರ ಸೆಸ್ ಹಾಗೂ ಕಲ್ಯಾಣ ಮಂಡಳಿ ರದ್ದಾಗುತ್ತದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಜಾರಿ ಮಾಡಬಾರದು ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಶೀಲಾವತಿ, ಗೋಪಾಲಕೃಷ್ಣ ದೇವಾಡಿಗ, ಮರಲ, ಅಣ್ಣಪ್ಪ, ನಾಗರತ್ನ ಪಡುವರಿ, ಮಂಜು ಪೂಜಾರಿ ಪಡುವರಿ, ಶೋಭಾ ಕೆರೆಮನೆ,ಮೊದಲಾದವರಿದ್ದರು.
    ಕೇಂದ್ರ ಸರ್ಕಾರದ ಆದೇಶ ಪ್ರತಿಯನ್ನು ದಹಿಸಲಾಯಿತು.