Category: ಸುದ್ದಿ

  • ಬೈಂದೂರು :ಸಂಪಾದನೆಯ ಒಂದಂಶ ದಾನ ಮಾಡಿದರೆ ಸಾರ್ಥಕತೆ – ರೇಣುಕಾನಂದ  ಸ್ವಾಮೀಜಿ

    ಬೈಂದೂರು :ಸಂಪಾದನೆಯ ಒಂದಂಶ ದಾನ ಮಾಡಿದರೆ ಸಾರ್ಥಕತೆ – ರೇಣುಕಾನಂದ  ಸ್ವಾಮೀಜಿ

    ಬೈಂದೂರಿನ ಖಾರ್ವಿ ಕುಟುಂಬಕ್ಕೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ವತಿಯಿಂದ 15ನೇ ಮನೆ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ ಎಂದು ನಿಟ್ಟೂರಿನ ಶ್ರೀನಾರಾಯಣ ಗುರು ಮಹಾ ಸಂಸ್ಥಾನದ ಶ್ರೀ  ರೇಣುಕಾನಂದ  ಸ್ವಾಮೀಜಿ ಹೇಳಿದರು. ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಇದರ ವತಿಯಿಂದ ಸೂರ್ಕುಂದದಲ್ಲಿ ನಿರ್ಮಾಣಗೊಂಡ 15ನೇ ಮನೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮಗೆ ಸಾಮರ್ಥ್ಯ ಇರುವಾಗ ಒಂದಿಷ್ಟು ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಸಂತೃಪ್ತಿ ಮೂಡುತ್ತದೆ. ಈಗಾಗಲೇ 380 ಕುಟುಂಬಗಳಿಂದ‌ ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ಆ ಪೈಕಿ ಸುಮಾರು 150 ಕುಟುಂಬಗಳು ವಾಸಿಸುತ್ತಿರುವ ಮನೆಗಳು ತುಂಬಾ ಕ್ರಿಟಿಕಲ್ ಸ್ಥಿತಿಯಲ್ಲಿವೆ. ಆದರೆ ವರ್ಷಕ್ಕೆ ಮೂರರಿಂದ ನಾಲ್ಕು ಮನೆಗಳ ನಿರ್ಮಾಣದ ಮಿತಿಯಿಟ್ಟುಕೊಂಡಿದ್ದು 15ನೇ ಮನೆ ಇದಾಗಿದೆ. ಇನ್ನೂ ಮೂರು ಮನೆಗಳು ಪೂರ್ಣಗೊಂಡಿದ್ದು, ಭಾಗಶಃ ಕೆಲಸ ಬಾಕಿ ಇದೆ. ತಿಂಗಳೊಳಗಾಗಿ ಆ ಮನೆಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದರು.

    ನಾರಾಯಣಗುರು ವಿಚಾರ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸುಬ್ರಾಯ ನಂದೋಡಿ, ವೆಂಕಟರಮಣ ಶೇರುಗಾರ್ ಬಿಜೂರು, ಮನೆಯವರಾದ ಪರಶುರಾಮ್ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಮನೆಯ ಯಜಮಾನಿಗೆ ಮನೆಯ ಕೀಲಿಕೈಯನ್ನು ಹಸ್ತಾಂತರಿಸಲಾಯಿತು.

    ರತ್ತುಬಾಯಿ ಜನತಾ ಫ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ಶ್ರೀ ವರಲಕ್ಷ್ಮೀ  ಸೊಸೈಟಿ ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ ಪಿ.ಯಡ್ತರೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಕುಂದಾಪುರ :ಕೊಡ್ಲಾಡಿ ಶಂಕರ ನಾಯ್ಕ ಇವರಿಗೆ ಪಿಹೆಚ್.ಡಿ(PHD) ಪದವಿ

    ಕುಂದಾಪುರ :ಕೊಡ್ಲಾಡಿ ಶಂಕರ ನಾಯ್ಕ ಇವರಿಗೆ ಪಿಹೆಚ್.ಡಿ(PHD) ಪದವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೊಡ್ಲಾಡಿ ಗ್ರಾಮದ ಶಂಕರ ನಾಯ್ಕ ಬಿ. ಇವರು ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾನಿಲಯದ ಸಹಪ್ರಾ ಧ್ಯಾಪಕರಾದ ಡಾ. ಬಾಲಾಜಿ ಭೋವಿ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ”lmpact of International Financial Reporting Standards on Manufacturing Companies in India” ಮಹಾಪ್ರಬಂಧಕ್ಕೆ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾನಿಲಯ ಪಿಹೆಚ್.ಡಿ(PHD) ಪದವಿಯನ್ನು ನೀಡಿ ಗೌರವಿಸಿದೆ.

    ಪ್ರಸ್ತುತ ಇವರು ಕೋಟ-ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೊಡ್ಲಾಡಿ ಗ್ರಾಮದ ಸೂರ ನಾಯ್ಕ ಮತ್ತು ಮುಕಾಂಬಿಕಾ ದಂಪತಿಗಳ ಪುತ್ರರಾಗಿರುತ್ತಾರೆ.

  • ಕುಂದಾಪುರ : ಬಿ. ಬಿ. ಹೆಗ್ಡೆ ಕಾಲೇಜು: ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು

    ಕುಂದಾಪುರ : ಬಿ. ಬಿ. ಹೆಗ್ಡೆ ಕಾಲೇಜು: ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2ರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

    ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಮನಿಷ್ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ| ಪ್ರಮೀಳಾ ನಾಯಕ್‌ರವರು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಕಾಡುವ ಸಮಸ್ಯೆಗಳ ಬಗ್ಗೆ ಮಾತನಾಡಿ ಆರೋಗ್ಯ ಮತ್ತು ನೈರ್ಮಲ್ಯ ಉತ್ತಮ ಆರೋಗ್ಯದ ತಳಹದಿ. ಆಧುನಿಕತೆಯ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವoತ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಪ್ರಾಮುಖ್ಯತೆಯನ್ನು ನೀಡುವುದು ಅತ್ಯಂತ ಮುಖ್ಯವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಹಿತಮಿತವಾದ ಉತ್ತಮ ಆಹಾರ, ಶುದ್ಧ ನೀರು, ನಿಯಮಿತವಾದ ವ್ಯಾಯಾಮ, ಯೋಗ ಅವಶ್ಯಕ ಎಂದರು.

    ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ವೀಣಾ ವಾಸುದೇವ್ ಭಟ್‌ರವರು ಪ್ರಾಸ್ತಾವಿಸಿ, ಡಾ| ದೀಪಾ ವಂದಿಸಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.

  • ಕುಂದಾಪುರ :ಮೇ.1 ಮತ್ತು 2: ಮೂಡ್ಲಕಟ್ಟೆ ಎಂ.ಐ.ಟಿಯಲ್ಲಿ ರಾಜ್ಯಮಟ್ಟದ ಸಾವಿಷ್ಕಾರ್

    ಕುಂದಾಪುರ :ಮೇ.1 ಮತ್ತು 2: ಮೂಡ್ಲಕಟ್ಟೆ ಎಂ.ಐ.ಟಿಯಲ್ಲಿ ರಾಜ್ಯಮಟ್ಟದ ಸಾವಿಷ್ಕಾರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್‍ಮೆಂಟ್ ಸ್ಪರ್ಧಾಕೂಟ ‘ಸಾವಿಷ್ಕಾರ್’ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಎಂ.ಐ.ಟಿ ಕುಂದಾಪುರದ ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿ’ಸೋಜಾ ಹೇಳಿದರು.

    ಅವರು ಎ.29ರಂದು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ ಆಕರ್ಷಣೆಯಾಗಿ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಲಿವೆ. ಮೇ.1ರ ಸಂಜೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ರಾಪ್ ಮಾದರಿಯ ಗೀತೆಗಳನ್ನು ಪರಿಚಯಿಸಿದ ಹೆಸರಾಂತ ರಾಪರ್ ಮತ್ತು ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಹಾಗೆಯೇ ರಿಯಾಲಿಟಿ ಶೋ ನಲ್ಲಿ ಹೆಸರು ಗಳಿಸಿದ ಗಾಯಕಿ ಶಶಿಕಲಾ ಸುನಿಲ್ ಮತ್ತು ಗಾಯಕ ಧನುಷ್ ಅವರ ಸಂಗೀತಾ ಕಾರ್ಯಕ್ರಮವೂ ನಡೆಯಲಿದೆ.

    ಮೇ.1ರಂದು ಬೆಳೀಗ್ಗೆ 10 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿದೆ. ಮಧ್ಯಾಹ್ನ 3.30ಕ್ಕೆ ಬೈಕ್ ಸ್ಟಂಟ್ ನಡೆಯಲಿದೆ. ಅನುಭವಿ ಮತ್ತು ತರಬೇತಿ ಪಡೆದಿರುವ ಸ್ಪಂಟ್ ಮಾಸ್ಟರಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

    ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿ, ಸ್ಯಾಂಡಲ್ ವುಡ್ ನ ಪ್ರಸಿದ್ಧ ಗಾಯಕ, ತನ್ನ ಜಾನಪದ ಶೈಲಿಯಲ್ಲಿ ಹಾಡಿ ಪ್ರಸಿದ್ದಿ ಪಡೆದಿರುವ, ನವೀನ್ ಸಜ್ಜು ಅವರು ತಮ್ಮ ಬ್ಯಾಂಡ್ ನೊಂದಿಗೆ ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಅವರ ಕಾರ್ಯಕ್ರಮ ಉಡುಪಿಯಲ್ಲೇ ಮೊದಲ ಬಾರಿ ನಡೆಯಲಿದ್ದು, ಬಹು ದೊಡ್ಡ ಅಕರ್ಷಣೆಯಾಗಲಿದೆ. ಆ ದಿನ ಮಧ್ಯಾಹ್ನ 3.30ಕ್ಕೆ ಆರ್.ಸಿ ಏರ್ ಶೋ ನಡೆಯಲಿದೆ ಎಂದರು.

    ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದಂತ ಕೌಶಿಕ್ ಸುವರ್ಣ ಅವರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಧ್ವನಿವರ್ಧಕಗಳ ವ್ಯವಸ್ಥೆ ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದರು.

    ಸಾವಿಷ್ಕಾರ್‍ನಲ್ಲಿ ಯಾವುದೇ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸುಮಾರು 1ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಕಾರ್ಯಕ್ರಮದ ಆಯೋಜಕ ಪ್ರೋ. ವರುಣ್ ಕುಮಾರ್ ಉಪಸ್ಥಿತರಿದ್ದರು.

     

  • ಕುಂದಾಪುರ :ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ

    ಕುಂದಾಪುರ :ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಹಾಯಧನ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನಮ್ಮ ನಾಡ ಒಕ್ಕೂಟ (ರಿ )ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ , ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ತರಬೇತಿ ಕಾರ್ಯಕ್ರಮ ಕುಂದಾಪುರದ ಕಮ್ಯುನಿಟಿ ಸೆಂಟರ್ ನ ಮಿನಿ ಹಾಲ್ ನಲ್ಲಿ ಜರುಗಿತು.

    ಈ ಸಂದರ್ಭದಲ್ಲಿ ಕಮ್ಯುನಿಟಿ ಸೆಂಟರ್ ಕುಂದಾಪುರ ಇದರ ಅಧ್ಯಕ್ಷರು ಸಮಾಜ ಸೇವಕರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಇವರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮ ದಲ್ಲಿ ಎನ್ ಎನ್ ಒ ಕೇಂದ್ರ ಸಮಿತಿಯ ಅಧ್ಯಕ್ಷ ರಾದ ಮೊಹಮ್ಮದ್ ಸಲೀಮ್ ಮೂಡಬಿದ್ರೆ, ಟ್ರಸ್ಟ್ ನ ಸದಸ್ಯರಾದ ಪಿರ್ ಸಾಹೇಬ್ ಉಡುಪಿ, ಮೌ ಝಮಿರ್ ಅಹ್ಮದ್ ರಷಾದಿ, ಎನ್. ಎನ್.ಒ. ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಸಂಯೋಜಕರಾದ ಶೈಖ್ ವಾಹಿದ್ ಉಡುಪಿ, ಜಿಲ್ಲಾ ಉಪಾಧ್ಯಕ್ಷ ರಾದ ಅಬು ಮೊಹಮ್ಮದ್ ಕುಂದಾಪುರ, ಅಬ್ದುಲ್ ರಶೀದ್ ಕಾಪು, ಸಯ್ಯದ್ ಅಜ್ಮಿಲ್ ಶಿರೂರ್,ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯ ರಾದ ಹಾರುನ್ ರಶೀದ್ ಸಾಸ್ತಾನ್, ಉಡುಪಿ ತಾಲೂಕು ಅಧ್ಯಕ್ಷರಾದ ನಝಿರ್ ನೆಜಾರ್ ಸದ್ಯಸ್ಯರಾದ ರಿಯಾಜ್ ಉಡುಪಿ, ಅಕ್ರಮ್ ಉಡುಪಿ ಇನ್ನಿತರರು ಉಪಸ್ಥಿತರಿದ್ದರು.

    ಟ್ರಸ್ಟ್ ನ ಸದಸ್ಯ,ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಎನ್ ಎನ್ ಒ ಹೆಬ್ರಿ ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು, ಕಮ್ಯುನಿಟಿ ಸೆಂಟರ್ ನ ಖಜಾಂಚಿ ಎಸ್ ಅನ್ವರ್ ಕಂಡ್ಲೂರ್ ವಂದಿಸಿದರು.

  • ಬೈಂದೂರು :ನಮ್ಮ ಹಣ ಕಿತ್ತುಕೊಂಡು ನಮ್ಮನ್ನೇ ಡೋಂಗಿ ಮಾಡುತ್ತಿರುವ ಕಾಂಗ್ರೆಸ್: ಶಾಸಕಿ ಭಾಗೀರಥಿ ಮುರುಳ್ಯ ಆರೋಪ

    ಬೈಂದೂರು :ನಮ್ಮ ಹಣ ಕಿತ್ತುಕೊಂಡು ನಮ್ಮನ್ನೇ ಡೋಂಗಿ ಮಾಡುತ್ತಿರುವ ಕಾಂಗ್ರೆಸ್: ಶಾಸಕಿ ಭಾಗೀರಥಿ ಮುರುಳ್ಯ ಆರೋಪ

    ಕೊರೊನಾ ಸಂದರ್ಭದಲ್ಲಿ ನಮ್ಮೆಲ್ಲ ಜೀವ ಉಳಿಸಿದ್ದೆ ಪ್ರಧಾನಿ ನರೇಂದ್ರ ಮೋದಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮನೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಕಾಲೋನಿಗಳ ರಸ್ತೆ, ಚರಂಡಿ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಬಳಸಿ ನಮಗೆ ವಾಪಾಸ್ ನೀಡುವ ಮೂಲಕ ಡೋಂಗಿ ಮಾಡುತ್ತಿದ್ದಾರೆ ಎಂದು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದರು.

    ಕಿರಿಮಂಜೇಶ್ವರದಲ್ಲಿ ಭಾನುವಾರ ನಡೆದ ಬೈಂದೂರು ಮಂಡಲ ಬಿಜೆಪಿ ಎಸ್ಸಿ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕರ ಉಚಿತ ಬಸ್, ಉಚಿತ ಕರೆಂಟ್, 2000 ನೀಡಿರಬಹುದು. ಅದು ನಮ್ಮದೇ ದುಡ್ಡು. ಎಸ್ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಿಟ್ಟಿರುವ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ನೀಡಿರುವ ಉಚಿತ ಪಡೆಯಲು ಯಾವುದೇ ಅಂಜಿಕೆ ಬೇಡ. ಮತದಾ‌ನ ಮಾತ್ರ ಯೋಚಿಸಿ ದೇಶದ ಅಭಿವೃದ್ಧಿ, ಸಮರ್ಥ ನಾಯಕತ್ವಕ್ಕೆ ನೀಡಬೇಕು. ಕೊರೋನಾ ಸಂದರ್ಭದಲ್ಲಿ ಇಡೀ ದೇಶದ ಜನತೆಗೆ ಉಚಿತ ವ್ಯಾಕ್ಸಿನ್ ನೀಡಿ ಜೀವ ಉಳಿಸಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಹೀಗಾಗಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸೋಣ ಎಂದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರು ಉದ್ದಾರವಾಗುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಇರಬೇಕು ಎಂದುಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ದುಡ್ಡಿ ಯಾಕೆ ಬೇಕಿತ್ತು? ತಮ್ಮದೇ ಸಮುದಾಯವಾದ ಕುರುಬರ ಅಭಿವೃದ್ಧಿ, ಒಕ್ಕಲಿಗರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಯಾಕೆ ಗ್ಯಾರಂಟಿ ಬಳಸಿಲ್ಲ.‌ಕೇವಲ ಎಸ್ಸಿ, ಎಸ್ಟಿ ಹಣ ಮಾತ್ರ ಬಳಸಿದ್ದೇಕೆ ಎಂದು ಪ್ರಶ್ನಿಸಿದರು.

    ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪವನ್ನು ಶಾಸಕರಾದ ಗುರುರಾಜ ಗಂಟಿಹೊಳೆಯವರು ಈಗಾಗಲೇ ಮಾಡಿದ್ದಾರೆ. ಇದರ ಸಾಧನೆಗಾಗಿ ಬೂತ್ ಕಡೆಗೆ ಸಮೃದ್ಧ ನಡಿಗೆ ಆಯೋಜಿಸಿ ಎಲ್ಲಾ ಬೂತ್ ಗಳಿಗೂ ಸಂಚರಿಸಿ ಕಾರ್ಯಕರ್ತರನ್ನು ಮುಖಂಡರನ್ನು ಸಂಘಟಿಸಿರುವ ಮಹತ್ತರ ಕಾರ್ಯ ಮಾಡಿದ್ದಾರೆ. ಶಾಸಕರಾದ ಗುರುರಾಜ ಗಂಟಿಹೊಳೆಯವರು ಎಲ್ಲರಿಗೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ಒಟ್ಟಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮತಗಳು ಸಂಪೂರ್ಣವಾಗಿ ಬಿಜೆಪಿ ಅಭ್ಯರ್ಥಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರೂ ಆದ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಲು ಶಾಸಕರಾದ ಗುರುರಾಜ ಗಂಟಿಹೊಳೆಯವರು ವಿನೂತನ ಪ್ರಯೋಗಗಳನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲದಕ್ಕೂ ಮತದಾರರು ಖಂಡಿತವಾಗಿಯೂ ಯಶಸ್ಸು ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷದ ಆಡಳಿತದ ಬಲ, ಸಮರ್ಥ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿರಲಿದೆ ಎಂದು ಹೇಳಿದರು.

    ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿತ್ತು. ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಿನಯೋಗಿಸಿ ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಬೈಂದೂರು ಕ್ಷೇತ್ರದಿಂದಲೇ ಬಿ. ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಲೀಡ್ ನೀಡಲು ಈಗಾಗಲೇ ಪ್ರತಿ ಬೂತ್ ಗಳಲ್ಲೂ ಸಂಚಾರ ನಡೆಸಿದ್ದೇವೆ. ಇದರ ಜೊತೆಗೆ ಹಲವು ವಿನೂತನ ಮಾದರಿಯ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬೂತ್ ಪ್ರಮುಖರ ಸಂಘಟನೆ, ಪೇಜ್ ಪ್ರಮುಖರಿಗೆ ಕಾರ್ಯಾಗಾರ ನಡೆಸಿದ್ದೇವೆ. ಮೂಕಾಂಬಿಕಾ ಕಾರೀಡಾರ್ ಮೂಲಕ ಸಮೃದ್ಧ ಬೈಂದೂರು ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸಲಾಗುವುದು ಎಂದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸೇರಿದಂತೆ ಜಿಲ್ಲಾ ಹಾಗೂ ಮಂಡಲ ಮಟ್ಟದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

  • ಸಾಲಿಗ್ರಾಮ ವಿಪ್ರ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

    ಸಾಲಿಗ್ರಾಮ ವಿಪ್ರ ಮಹಿಳಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ವಡ್ಡರ್ಸೆ ಗ್ರಾ.ಪಂ ವ್ಯಾಪ್ತಿಯ ಕಾವಡಿ ಶ್ರೀ ಮಹಾಗಣಪತಿ ದೇವಸ್ಥಾನ ಇದರ ಪ್ರತಿಷ್ಠಾ ಮಹೋತ್ಸವ,ಬ್ರಹ್ಮ ಕುಂಭಾಭಿಷೇಕ ನಿಮಿತ್ತ ಸಾಲಿಗ್ರಾಮದ ವಿಪ್ರ ಮಹಿಳಾ ಬಳಗ ಇದರ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ವಿಪ್ರಮಹಿಳಾ ಭಜನಾ ತಂಡದ ಪದಾಧಿಕಾರಿಗಳು ಭಾಗವಹಿಸಿದರು.

  • ಕೋಟ :ಪಾಂಡೇಶ್ವರ ರಕ್ತೇಶ್ವರಿ ದೇಗುಲದಿಂದ ಅಪ್ಪ ಅಮ್ಮ ಅನಾಥಾಶ್ರಮಕ್ಕೆ ಕೊಡುಗೆ

    ಕೋಟ :ಪಾಂಡೇಶ್ವರ ರಕ್ತೇಶ್ವರಿ ದೇಗುಲದಿಂದ ಅಪ್ಪ ಅಮ್ಮ ಅನಾಥಾಶ್ರಮಕ್ಕೆ ಕೊಡುಗೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ವತಿಯಿಂದ ಬ್ರಹ್ಮಾವರ ಅಪ್ಪ ಅಮ್ಮ ಅನಾಥಾಶ್ರಮಕ್ಕೆ 40ಸೀರೆ ಸಹಿತ ಆಹಾರ ಸಾಮಾಗ್ರಿಗಳನ್ನು ಹಸ್ತಾಂತರ ಭಾನುವಾರ ಶ್ರೀ ದೇಗುಲದಲ್ಲಿ ನಡೆಯಿತು.

    ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಬಟ್ಟೆ, ಆಹಾರ ಸಾಮಾಗ್ರಿಗಳನ್ನು ಅಪ್ಪ ಅಮ್ಮ ಅನಾಥಾಶ್ರಮದ ಮುಖ್ಯಸ್ಥ ಕೂರಾಡಿ ಪ್ರಶಾಂತ್ ಪೂಜಾರಿ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಕ್ತೇಶ್ವರಿ ಬಳಗದ ಅಧ್ಯಕ್ಷ ನಾರಾಯಣ ವಿ. ಆಚಾರ್, ಬಳಗದ ಪ್ರಮುಖರಾದ ವೆಂಕಟೇಶ ಪೂಜಾರಿ, ಗಣೇಶ್ ಪೂಜಾರಿ ಬೆಣ್ಣೆಕುದ್ರು, ಸಂಜೀವ ಮರಕಾಲ, ಮಹಾಬಲ ಮರಕಾಲ, ವಿಘ್ನೇಶ್ ಆಚಾರ್ ಮತ್ತಿತರರು ಇದ್ದರು.

  • ಕೋಟ :ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು- ರಾಘವೇಂದ್ರ ಮಯ್ಯ

    ಕೋಟ :ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು- ರಾಘವೇಂದ್ರ ಮಯ್ಯ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು ಅವರ ಅಗಲುವಿಕೆ ಯಕ್ಷಲೋಕ ಶೋಕಸಾಗರದಲ್ಲಿ ಮುಳುಗುವಂತ್ತಾಗಿದೆ ಎಂದು ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಹೇಳಿದರು.

    ಅವರು ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ ,ಮಹಿಳಾ ಮಂಡಲದ ಆಶ್ರಯದಲ್ಲಿ ಇತ್ತೀಚಿಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಬಡಗುತಿಟ್ಟಿನ ಹೆಚ್ಚಿನ ಯಕ್ಷ ಕಲಾವಿದರಿಗೆ ಈ ಕೋಟ ತವರು ಮನೆಯ ರೀತಿಯಲ್ಲಿ ಸೃಷ್ಠಿಸಿಕೊಂಡಿದ್ದಾರೆ.ಅದರಲ್ಲಿ ಚಿಟ್ಟಾಣಿ, ಧಾರೇಶ್ವರರು ಮೊದಲಿಗರಾಗಿದ್ದಾರೆ. ಯಕ್ಷಲೋಕದಲ್ಲಿ ಸಣ್ಣ ರೀತಿಯ ಕಾರ್ಯನಿರ್ವಹಿಸಿ ಬಹು ಎತ್ತರಕ್ಕೆ ಬೆಳದ ಕಲಾವಿದರಿದ್ದರೆ ಅದು ಧಾರೇಶ್ವರಿಗೆ ಸಲ್ಲಬೇಕಾಗಿದೆ ನನ್ನ ಹಾಗೂ ಅವರ ನಡುವಿನ ಸಂಬಂಧಗಳನ್ನು ನುಡಿನಮನದಲ್ಲಿ ತೆರೆದಿಟ್ಟರು.

    ಇದೇ ವೇಳೆ ಸುಬ್ರಹ್ಮಣ್ಯ ಧಾರೇಶ್ವರ ಭಾವಚಿತ್ರಕ್ಕೆ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ ಪುಷ್ಭಾರ್ಚನೆಗೈದು ನಮ್ಮಿ ಪರಿಸರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ ಅಮೃತೇಶ್ವರಿ ಮೇಳದಿಂದ ಕಲಾಕ್ಷೇತ್ರ ಆರಂಭಿಸಿಕೊಂಡವರಲ್ಲಿ ಧಾರೇಶ್ವರರು ಒಬ್ಬರು, ಅಂತಹ ಮಹಾನ್ ಕಲಾವಿದನನ್ನು ಕಳೆದುಕೊಂಡಿದ್ದು ಕಲಾಕ್ಷೇತ್ರ ಬಡವಾಗಿದೆ. ಯಕ್ಷಕಲಾಕ್ಷೇತ್ರಕ್ಕೆ ಧಾರೇಶ್ವರರ ಕೊಡುಗೆ ಅನನ್ಯವಾದದ್ದು ಎಂದರು.

    ಸಭೆಯಲ್ಲಿ ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ಸಂಯೋಜಕ ಸಂತೋಷ್ ಕುಮಾರ್ ಕೋಟ, ಕೋಟ ಅಮೃತೇಶ್ವರಿಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ನ್ಯಾಯವಾದಿ ಟಿ ಮಂಜುನಾಥ ಗಿಳಿಯಾರು, ಪಂಚವರ್ಣದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಕೋಟ ಚಂದ್ರ ಆಚಾರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

  • ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : 2024-25 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.

    ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ರಾಧಾಕೃಷ್ಣ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು.

    ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಅವರು ಶೈಕ್ಷಣಿಕ ಕಾರ್ಯ ಯೋಜನೆಗಳ ಕುರಿತು ಮಾಹಿತಿ ನೀಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪ್ರಯತ್ನದ ಜೊತೆಗೆ ಹೆತ್ತವರ ಪ್ರಯತ್ನ ಅತ್ಯಗತ್ಯ ಎಂದರು.

    ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಹಿರಿಯ ರಸಾಯನ ಶಾಸ್ತ್ರ ಉಪನ್ಯಾಸಕ ರಮಾಕಾಂತ್ ರೇವಣಕರ್ ಉಪಸ್ಥಿತರಿದ್ದರು.