Category: ಸುದ್ದಿ

  • ಪಾರಂಪಳ್ಳಿ- ವಿನ್‍ಲೈಟ್ ಸ್ಪೋರ್ಟ್ಸ್ ಕ್ಲಬ್ ಪುರಸ್ಕಾರಕ್ಕೆ ಆಯ್ಕೆ

    ಪಾರಂಪಳ್ಳಿ- ವಿನ್‍ಲೈಟ್ ಸ್ಪೋರ್ಟ್ಸ್ ಕ್ಲಬ್ ಪುರಸ್ಕಾರಕ್ಕೆ ಆಯ್ಕೆ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಇಲ್ಲಿನ ಸಾಲಿಗ್ರಾಮ ಪಾರಂಪಳ್ಳಿಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರತಿವರ್ಷ ಅಶಕ್ತರ ನೆರವಿಗಾಗಿ ಏರ್ಪಡಿಸುವ ಯಕ್ಷಗಾನ ಕಾರ್ಯಕ್ರಮದ ವೇದಿಕೆಯಲ್ಲಿ ವಿನ್‍ಲೈಟ್ ಸ್ಪೋರ್ಟ್ಸ್ ಕ್ಲಬ್ ಪುರಸ್ಕಾರ ನೀಡುತ್ತಾ ಬಂದಿದ್ದು ಈ ಬಾರಿ ವೈದ್ಯಕೀಯ ಕ್ಷೇತ್ರ ಸಾಧಕ ಶಕ್ತಿಗಳಾದ ಬೆಂಗಳೂರಿನ ಶೇಖರ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಷ್ಣುಮೂರ್ತಿ ಐತಾಳ್, ಹಾಗೂ ಕೆ.ಎಂ.ಸಿ ಮಂಗಳೂರು ಇಲ್ಲಿನ ಮುಖ್ಯ ವೈದ್ಯ ಡಾ.ಮಧುಸೂದನ್ ಉಪಾಧ್ಯಾ, ಲಿಮ್ಕಾ ದಾಖಲೆಯ ಸರದಾರ ಈಜುಪಟು ಗೋಪಾಲ್ ಖಾರ್ವಿ ಇವರುಗಳಿಗೆ ಪಾರಂಪಳ್ಳಿ ಗುಡ್ಡಿ ಶಾಲೆ ಸನಿಹದಲ್ಲಿ ಡಿ.23ರಂದು ನಡೆಯುವ ವೇದಿಕೆಯಲ್ಲಿ ಈ ಪುರಸ್ಕಾರ ನೀಡಿಗೌರವಿಸಲಿದೆ. ಅಲ್ಲದೆ ಅದೇ ವೇದಿಕೆಯಲ್ಲಿ ಕೆಲವು ಅಶಕ್ತ,ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆ

    ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಇದರ ದಶಮಾನೋತ್ಸವದ ಅಂಗವಾಗಿ ಇದೇ ಬರುವ 28ರಿಂದ 30ರ ವರೆಗೆ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆಯನ್ನು ಕೋಟ ಮಾಂಗಲ್ಯ ಮಂದಿರದಲ್ಲಿ ಇತ್ತೀಚಿಗೆ ನಡೆಸಲಾಯಿತು.

    ಕೋಟಿ ಗಾಯತ್ರೀ ಮಹಾಯಾಗದ ಅಧ್ಯಕ್ಷ ವಿದ್ವಾನ್ ಡಾ| ವಿಜಯ ಮಂಜರ್ ರವರು ಮಹಾಯಾಗದ ಸಂಪೂರ್ಣ ಮಾಹಿತಿಯನ್ನು ನೀಡಿದರು.

    ಕಾರ್ಯದರ್ಶಿ ಪ್ರಸನ್ನ ಭಟ್ ಮಹಾಯಾಗದ ಬೇರೆ ಬೇರೆ ಸಮಿತಿಗಳ ಜವಾಬ್ದಾರಿಯನ್ನು ತಿಳಿಸಿದರು. ವೇದಿಕೆಯಲ್ಲಿ ಜ್ಯೋತಿಷಿ ಸಾಲಿಗ್ರಾಮ ಶ್ರೀನಿವಾಸ ಅಡಿಗ , ಕೋಟ ಗಣೇಶ ಭಟ್ , ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ಉಪಸ್ಥಿತರಿದ್ದರು. ರಾಮಚಂದ್ರ ಉಡುಪ ಸ್ವಾಗತಿಸಿದರು. ಯಾಗ ಸಮಿತಿಯ ಗೌರವ ಸಲಹೆಗಾರರು ಹಾಗೂ ನಿಯೋಜಿತ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಯನ್ನು ನೀಡಿದರು.

  • ಬ್ರಹ್ಮಾವರ :ಜೇಸಿಐ ಕಲ್ಯಾಣಪುರ ಪದ ಪ್ರಧಾನ

    ಬ್ರಹ್ಮಾವರ :ಜೇಸಿಐ ಕಲ್ಯಾಣಪುರ ಪದ ಪ್ರಧಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಜೇಸಿಐ ಕಲ್ಯಾಣಪುರದ 22ನೇ ವರ್ಷದ ಪದಪ್ರದಾನ ಸಮಾರಂಭ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು. 2023ನೇ ಸಾಲಿನ ಅಧ್ಯಕ್ಷರಾದ ಅನಿತಾ ನರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಗತವರ್ಷದ ವರದಿ ಮಂಡಿಸಿ ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸದಸ್ಯರನ್ನು ಅಭಿನಂದಿಸಿದರು.

    2024ನೇ ಸಾಲಿನ ಅಧ್ಯಕ್ಷ ವಿವೇಕ್‍ರವರಿಗೆ ವಲಯ ಉಪಾಧ್ಯಕ್ಷರಾದ ದೀಪಕ್‍ರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ಅಲನ್ ರೋಹನ್ ವಾಜ್ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು. ಘಟಕದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ನೀಡಲಾಯಿತು. ನಿರ್ಗಮನ ಅಧ್ಯಕ್ಷೆ ಅನಿತಾ ನರೇಂದ್ರಕುಮಾರ್‍ರವರನ್ನು ಅವರ ಸಾಧನೆಗಾಗಿ ಸನ್ಮಾನಿಸಲಾಯಿತು

    ಕಾರ್ಯಕ್ರಮದ ವೇದಿಕೆಗೆ ಚಿತ್ರಕುಮಾರ್ ಆಹ್ವಾನಿಸಿದರು. ರಶ್ಮಿ ಸುರೇಶ್ ಜೇಸಿ ವಾಣಿ ಉದ್ಘೋಷಿಸಿದರು. ಆಶಾ ಅಲನ್, ಪೂಜಾ ಶೆಟ್ಟಿ ಹಾಗೂ ನಿತ್ಯಾನಂದ ನೇಜಾರು ಪರಿಚಯಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಜಯಶ್ರೀ ಮಿತ್ರಕುಮಾರ್, ಕಾರ್ಯದರ್ಶಿ ಲವೀನಾ ಲೂವಿಸ್, ಲೇಡಿ ಜೇಸಿ ಸಂಯೋಜಕಿ ಶಾಲಿನಿ ಸುರೇಶ್, ಜೂ. ಜೇಸಿ ಅಧ್ಯಕ್ಷ ನಿರಂತರ ಎನ್., ಪದಾಧಿಕಾರಿಗಳಾದ ಅನುಸೂಯ ಅನಿಲ್, ವೇದಾಂತ್ ಜೆ, ಕಾರ್ಯಕ್ರಮ ನಿರ್ದೇಶಕ ಗುಣವರ್ಮ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಶಶಾಂಕ್ ವಂದಿಸಿದರು.

  • ಕುಂದಾಪುರ: ಬೈಂದೂರು ರೈಲ್ವೇ ಅಭಿವೃದ್ಧಿಗೆ ಅನುದಾನ ಕೋರಿಕೆ – ಸಂಸದ ರಾಘವೇಂದ್ರರಿಂದ ಸಚಿವ ಕಿಶನ್ ರೆಡ್ಡಿ ಭೇಟಿ

    ಕುಂದಾಪುರ: ಬೈಂದೂರು ರೈಲ್ವೇ ಅಭಿವೃದ್ಧಿಗೆ ಅನುದಾನ ಕೋರಿಕೆ – ಸಂಸದ ರಾಘವೇಂದ್ರರಿಂದ ಸಚಿವ ಕಿಶನ್ ರೆಡ್ಡಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಇಲಾಖೆಯಿಂದ ಆಗಬೇಕಾಗಿರುವ ಬೈಂದೂರು ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಈ ಸಂದರ್ಭ, ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರವು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೊಡಚಾದ್ರಿ, ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಗಳಂತಹ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿಂದ ಸುತ್ತುವರಿದಿದೆ ಎನ್ನುವುದನ್ನು ಮನವರಿಕೆ ಮಾಡಿದರು.

    ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ “ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಏಜೆನ್ಸಿಗಳಿಗೆ ನೆರವು” ಅಡಿಯಲ್ಲಿ ಮೂಕಾಂಬಿಕಾ ರೈಲ್ವೇ ನಿಲ್ದಾಣ ಬೈಂದೂರು ಇದರ ಅಭಿವೃದ್ಧಿಗೆ ರೂ 14.00 ಕೋಟಿ ಅನುದಾನ ಮಂಜೂರು ಮಾಡಲು ಕೋರಿದರು. ಸಂಸದ ರಾಘವೇಂದ್ರ ಕೋರಿಕೆಗೆ ಸ್ಪಂದಿಸಿದ ಸಚಿವ ಕಿಶನ್ ರೆಡ್ಡಿ, ಶೀಘ್ರವೇ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  • ಕುಂದಾಪುರ: ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    ಕುಂದಾಪುರ: ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಭಗವದ್ಗೀತಾ ಅಭಿಯಾನ ಅಂಗವಾಗಿ ಕುಂದಾಪುರದಲ್ಲಿ ಜರುಗಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಮ್ಸನ್ ಸರಕಾರಿ ಪ್ರೌಢಶಾಲೆ, ಕಂಡ್ಲೂರು ಇಲ್ಲಿನ 9ನೇ ತರಗತಿಯ ಸ್ವಸ್ತಿಕ್ ಮತ್ತು ಸಾತ್ವಿಕ್ ಸಹೋದರರು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೇ ಡಿಸೆಂಬರ್ 23ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸರ್ಕಾರೀ ಶಾಲೆಯ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.

  • ಕೋಟ :ಸ್ವಾಭಿಮಾನ ಸಮೃದ್ಧ ಭಾರತ ಪರಿಕಲ್ಪನೆ ಪ್ರಧಾನಿ ಸಂಕಲ್ಪ – ಮಾಜಿ ಸಚಿವ ಕೋಟ ಹೇಳಿಕೆ

    ಕೋಟ :ಸ್ವಾಭಿಮಾನ ಸಮೃದ್ಧ ಭಾರತ ಪರಿಕಲ್ಪನೆ ಪ್ರಧಾನಿ ಸಂಕಲ್ಪ – ಮಾಜಿ ಸಚಿವ ಕೋಟ ಹೇಳಿಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸ್ವಾಭಿಮಾನ ಸಮೃದ್ಧ ಭಾರತದ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿಯರ ಕನಸಿನ ಯೋಚನೆ ಯೋಜನೆಯಾಗಿತ್ತು ಅದರಂತೆ ಇಂದು ಬಲಿಷ್ಠ ಆರ್ಥಿಕ ಸಂಪದ್ಭರಿತ ರಾಷ್ಠವಾಗಿ ಮೂಡಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಕೋಟ ಗ್ರಾಮಪಂಚಾಯತ್, ಲೀಡ್ ಬ್ಯಾಂಕ್, ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ಸರಕಾರಗಳಿರಲಿ ಜನೋಪಯೋಗಿ ಯೋಜನೆಗಳನ್ನು ಜಾತಿಮತಬೇದಗಳಿಲ್ಲದೆ ತಲುಪಿಸಲು ಕಾರ್ಯನ್ಮುಖರಾಗಬೇಕು. ಕೇಂದ್ರ ಸರಕಾರ ರೂಪಿಸಿದ ವಿಶ್ವಕರ್ಮ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ತನ್ನ ಕಾಲ ಮೇಲೆ ನಿಲುವಂತ್ತಾಗುತ್ತದೆ. ಆ ಮೂಲಕ ಸಮರ್ಥ ಭಾರತಕ್ಕೆ ಅಡಿಪಾಯ ರೂಪಿಸಲು ಸಾಧ್ಯ ಎಂದರಲ್ಲದೆ, ಈ ಯೋಜನೆಯನ್ನು ಗ್ರಾಮಪಂಚಾಯತ್ ಸಮರ್ಪಕವಾಗಿ ಪ್ರತಿಯೊರ್ವ ಅರ್ಜಿದಾರನಿಗೆ ಸಮಸ್ಯೆಯಾಗದಂತೆ ನಿರ್ವಹಿಸಿ ಎಂದು ಸೂಚಿಸಿ ಇದಕ್ಕಾಗಿ ಕೇಂದ್ರ 13ಸಾವಿರ ಕೋಟಿ ರೂ ಬಿಡುಗಡೆಗೊಳಿಸಿದೆ ಆ ಮೂಲಕ ಒರ್ವ ಅರ್ಜಿದಾರನಿಗೆ 1ಲಕ್ಷದಂತೆ ಸಾಲಯೋಜನೆ ಸಿಗುವಂತ್ತಾಗಲಿ ಎಂದು ಆಶಿಸಿದರು.

    ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

    ಇದೇ ವೇಳೆ ಯಾತ್ರಾ ವಾಹನದ ಡಿಜಿಟಲ್ ಪರದೆಯ ಮೇಲೆ ಸರಕಾರದ ಜನಪಯೋಗಿ ಯೋಜನೆಗಳನ್ನು ಜನಸಾಮಾನ್ಯರಿಗೆ ವೀಕ್ಷಿಸಲು ಅವಕಾಶ ನೀಡಲಾಯಿತು.

    ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ನ ಇಲಾಖಾ ಮಾಹಿತಿ ನೀಡಿದರು.

    ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ವಹಿಸಿದ್ದರು.

    ಮುಖ್ಯ ಅತಿಥಿಯಾಗಿ ಕೆ.ವಿಕೆ ಬ್ರಹ್ಮಾವರ ಇದರ ವಿಜ್ಞಾನಿ ರವಿ ಕುಮಾರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಣೂರು ಶಾಖಾ ಪ್ರಬಂಧಕ ಚಿರಂಜಿತ್‍ದಾಸ, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಾಧವ್ ಪೈ,ರೂಡ್ಸೆಟ್ ಸಂಸ್ಥೆಯ ಸಂತೋಷ್ ಕುಮಾರ್, ಆರೋಗ್ಯ ಮಿತ್ರ ಸಂಯೋಜಕಿ ರಜನಿ ಭಾಸ್ಕರ್,ಕುಂದಾಪುರ ದಕ್ಷಿಣ ಅಂಚೆ ವಿಭಾಗದ ಅಧಿಕಾರಿ ರಾಮಚಂದ್ರ ಡಿ.ಎನ್,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ನಿರ್ವಹಿಸಿದರು.

  • ಕೋಟ ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ – 31ನೇ ಸಾಧಕ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ ಆಯ್ಕೆ

    ಕೋಟ ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ – 31ನೇ ಸಾಧಕ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಕೋಟ ಹೋಬಳಿಯ ವಿವಿಧ ಭಾಗಗಳ ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 31ರ ಸಂಭ್ರಮ ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಬರುವ ಡಿ.25ರ ಸಂಜೆ.4.30ಗ ನಡೆಯಲಿದ್ದು ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಸಾಲಿಗ್ರಾಮದ ಪಾರಂಪಳ್ಳಿ ರಘು ಮಧ್ಯಸ್ಥ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

  • ಕುಂದಾಪುರ :ವಂಡ್ಸೆ ಶಾಲೆಯಲ್ಲಿ ಪ್ರತಿಭೋತ್ಸವ

    ಕುಂದಾಪುರ :ವಂಡ್ಸೆ ಶಾಲೆಯಲ್ಲಿ ಪ್ರತಿಭೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶಾಲಾ ವಾರ್ಷಿಕೋತ್ಸವಕ್ಕೆ ಪೂರ್ವಭಾವಿಯಾಗಿ ವಿವಿಧ ಸ್ಪರ್ಧೆಗಳನ್ನು ನಡೆಸುವುದು, ಆ ಸ್ಪರ್ಧೆಗಳ ಬಹುಮಾನ ವಿತರಣೆಗಾಗಿ ಸಭಾ ಕಾರ್ಯಕ್ರಮ ತೀರಾ ದೀರ್ಘವಾಗಿ ಮಕ್ಕಳ ಸಹನೆ ಕೆಡುವುದೂ, ಬಹುಮಾನ ವಿತರಣೆಯನ್ನು ಬೇಗ ಮುಗಿಸಲು ಮಕ್ಕಳನ್ನು ಅವಸರದಲ್ಲಿ ಕಳಿಸಬೇಕಾಗುವುದೂ, ಕೆಲವೊಮ್ಮೆ ದೀರ್ಘವಾದೀತು ಎಂಬ ಕಾರಣಕ್ಕೆ ಸ್ಪರ್ಧೆಗಳ ಸಂಖ್ಯೆಯನ್ನೇ ಕಡಿತಗೊಳಿಸುವುದೂ ತೀರಾ ಸಾಮಾನ್ಯ ಎನಿಸಿಬಿಟ್ಟಿದೆ. ಇದಕ್ಕೆ ಪರ್ಯಾಯವಾಗಿ ವಂಡ್ಸೆ ಶಾಲೆಯಲ್ಲಿ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ “ಪ್ರತಿಭೋತ್ಸವ” ಎಂಬ ವಿನೂತನ ಕಾರ್ಯಕ್ರಮವು ಡಿಸೆಂಬರ್ 18ರಂದು ಸಂಭ್ರಮದಿಂದ ಸಂಪನ್ನಗೊಂಡಿತು.

    ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮಾದರಿಯಲ್ಲಿ “ಪ್ರತಿಭೋತ್ಸವ” ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿತ್ತು. ಬೆಳಿಗ್ಗೆ ಎಲ್ಲಾ ಮಕ್ಕಳ ಸಮ್ಮುಖದಲ್ಲಿ ಛದ್ಮವೇಷ ಸ್ಪರ್ಧೆಗಳಿಂದ ಆರಂಭಗೊಂಡ ಕಾರ್ಯಕ್ರಮ ನಂತರ ವಿವಿಧ ಕೊಠಡಿಗಳಲ್ಲಿ ತರಗತಿವಾರು ಚಿತ್ರಕಲೆ, ಭಾಷಣ, ಗಾಯನ, ಕತೆ ಹೇಳುವುದು ಇತ್ಯಾದಿ ಸ್ಪರ್ಧೆಗಳೊಂದಿಗೆ ಮುಂದುವರೆಯಿತು. ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

    ವಿಭಿನ್ನ ರೀತಿಯ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಈ ಕಾರ್ಯಕ್ರಮದ ವಿಶೇಷ. ವೇದಿಕೆಯ ಮಧ್ಯಭಾಗದಲ್ಲಿ ವಿಜಯವೇದಿಕೆಯನ್ನಿಟ್ಟು ಇಕ್ಕೆಲಗಳಲ್ಲಿ ಅತಿಥಿಗಳನ್ನು ಕುಳ್ಳಿರಿಸಲಾಗಿತ್ತು. ವಿಜಯವೇದಿಕೆಯಲ್ಲಿ ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಬಣ್ಣದ ಕಿರೀಟಗಳನ್ನು ತೊಡಿಸಿ, ಪ್ರಶಸ್ತಿಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು.

    ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ನಾಗರಾಜ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಟ್ರಸ್ಟಿ ಜಿ.ಶ್ರೀಧರ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಶಾಂತ ಪೂಜಾರಿ, ಶಶಿಕಲಾ ವಂಡ್ಸೆ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸದಾಶಿವ, ಎಸ್.ಡಿ.ಎಂಸಿ ಉಪಾಧ್ಯಕ್ಷ ರಾಜು, ಶಿಕ್ಷಕವೃಂದದವರು, ಎಸ್.ಡಿ.ಎಂಸಿ ಸದಸ್ಯರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಇನ್ನೊಂದು ವಿಶೇಷತೆಯೆಂದರೆ ಮಕ್ಕಳನ್ನು ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಮತ್ತು ಹೊಯ್ಸಳ ಎಂಬ ನಾಲ್ಕು ತಂಡಗಳನ್ನಾಗಿ ವಿಭಾಗಿಸಿದ್ದು. ಕಾರ್ಯಕ್ರಮದ ಮೊದಲೇ ತಂಡಗಳನ್ನು ರಚಿಸಿದ್ದು ಗರಿಷ್ಠ ಬಹುಮಾನಗಳನ್ನು ಗಳಿಸಿದ ತಂಡಕ್ಕೆ ಸಮಗ್ರ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇದು ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸಿದ್ದು ತಂಡಗಳಲ್ಲಿ ಪರಸ್ಪರ ಸಹಕಾರದಿಂದ ಭಾಗವಹಿಸಲು ಪ್ರೇರೇಪಿಸಿತು. ಹಿರಿಯ ತರಗತಿಗಳ ಮಕ್ಕಳು ತಮ್ಮ ತಂಡದ ಕಿರಿಯರಿಗೆ ಮಾರ್ಗದರ್ಶನ, ಉತ್ತೇಜನ ನೀಡುತ್ತಿದ್ದುದು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. ಕೊನೆಯಲ್ಲಿ ಸಮಗ್ರ ಬಹುಮಾನ ಗಳಿಸಿದ ಕದಂಬ ತಂಡದ ಸದಸ್ಯರೆಲ್ಲರೂ ಒಟ್ಟಿಗೆ ವೇದಿಕೆಯನ್ನೇರಿ ಟ್ರೋಫಿ ಹಿಡಿದು ಸಂಭ್ರಮಿಸಿದರು.

    ಮಕ್ಕಳಿಗೆ ಒಂದು ವಿಶೇಷ ಅನುಭವ ನೀಡುವಲ್ಲಿ ಯಶಸ್ವಿಯಾದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

  • ಕುಂದಾಪುರ :ಡಿಸೆಂಬರ್ 24ರಂದು ಬಿ. ಅಪ್ಪಣ್ಣ ಹೆಗ್ಡೆಯವರ 89ನೇ ಹುಟ್ಟುಹಬ್ಬ – ಆಸ್ಮಾ ಬಾನುಗೆ ಸನ್ಮಾನ

    ಕುಂದಾಪುರ :ಡಿಸೆಂಬರ್ 24ರಂದು ಬಿ. ಅಪ್ಪಣ್ಣ ಹೆಗ್ಡೆಯವರ 89ನೇ ಹುಟ್ಟುಹಬ್ಬ – ಆಸ್ಮಾ ಬಾನುಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಡಿಸೆಂಬರ್ 24ರಂದು ಧಾರ್ಮಿಕ ಮುಂದಾಳು, ಮಾಜೀ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರ 89ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಭತ್ತದ ತಳಿ ಸಂಗ್ರಾಹಕಿಯಾಗಿ ಸಾಮಾಜಿಕ ಮತ್ತು ಕೃಷಿ ಆಧಾರಿತ ಸೇವೆ ಸಲ್ಲಿಸುತ್ತಿರುವ ಮೂಡಬಿದಿರೆಯ ಆಸ್ಮಾ ಬಾನು ಅವರಿಗೆ ರನ್ನು ಸನ್ಮಾನಿಸಲಾಗುವುದು ಎಂದು ಈ ಬಾರಿಯ ಬಿ. ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷ ಬಿ. ರಾಮ ಕಿಶನ್ ಹೆಗ್ಡೆ ತಿಳಿಸಿದ್ದಾರೆ.

    ಕಾಯಕವೇ ಕೈಲಾಸ ಎಂದು ದುಡಿಯುತ್ತಿರುವ ಆಸ್ಮ ಬಾನು ದೇಶದ ಬೇರೆ ಬೇರೆ ರಾಜ್ಯಗಳಿಂದ ಅಳಿವಿನಂಚಿನಲ್ಲಿರುವ ಭತ್ತದ ಬೀಜಗಳನ್ನು ಸಂಗ್ರಹಿಸುವ ವಿಶೇಷ ಕೆಲಸವನ್ನು ಮಾಡುತ್ತಿದ್ದಾರೆ. ಈ ವರ್ಷ 840ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿ ಬೆಳೆಸಿದ್ದಾರೆ. ಈ ಬೀಜಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿ ಅವುಗಳಲ್ಲಿರುವ ಆರೋಗ್ಯಕಾರಿ ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಈ ಅಪರೂಪದ ಸಾಧನೆಗಳನ್ನು ಗಮನಿಸಿ ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಶ್ರೀ ಶಾರದಾ ಕಾಲೇಜು ಬಸ್ರೂರಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ದತ್ತಿ ನಿಧಿ ವಿತರಿಸಲಾಗುವುದು. ಉಡುಪಿ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವದಿಸಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

  • ಮ್ಯಾನ್ಯುಯಲ್ ಸ್ಕ್ಯಾಂವೆಂಜಿಂಗ್ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜಾರಿ :ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಮ್ಯಾನ್ಯುಯಲ್ ಸ್ಕ್ಯಾಂವೆಂಜಿಂಗ್ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜಾರಿ :ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ, ಡಿಸೆಂಬರ್ 19: ಮ್ಯಾನ್ಯುಯಲ್ ಸ್ಕ್ಯಾಂವೆಂಜಿಂಗ್‍ಗೆ ಯಾವುದೇ ವ್ಯಕ್ತಿಯನ್ನು ತೊಡಗಿಸಿಕೊಳ್ಳುವುದು ನಿರ್ಬಂಧವಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮ್ಯಾನ್ಯುಯಲ್ ಸ್ಕ್ಯಾಂವೆಂಜಿಂಗ್ ದೇಶದಲ್ಲಿಯೇ ನಿಷೇಧಿತ ಚಟುವಟಿಕೆಯಾಗಿದ್ದು, ಈ ಕೆಲಸಕ್ಕೆ ಯಾವುದೇ ವ್ಯಕ್ತಿಯನ್ನು ಬಳಸಿಕೊಂಡರೆ ಅವರ ಮೇಲೆ ಮ್ಯಾನ್ಯುಯಲ್ ಸ್ಕ್ಯಾಂವೆಂಜರ್‍ಗಳಾಗಿ ಉದ್ಯೋಗದ ನಿಷೇಧ ಹಾಗೂ ಅವರ ಪುನರ್ವಸತಿ ಕಾಯಿದೆ 2013 ರ ಸೆಕ್ಷನ್ 8 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಅಪರಾಧ ಸಾಬೀತಾದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ಇದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದಿರಬೇಕು ಎಂದರು.

    ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಸಕ್ಕಿಂಗ್ ಯಂತ್ರಗಳ ಮೂಲಕವೇ ಶೌಚಗುಂಡಿಗಳನ್ನು ಸ್ವಚ್ಛಗೊಳಿಸಿ, ಅದನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದ ಅವರು, ಇತರೆ ಸ್ವಚ್ಛತಾ ಕಾರ್ಯಗಳನ್ನು ಸಾಧ್ಯವಾದಷ್ಟು ಯಂತ್ರಗಳ ಸಹಾಯದಿಂದ ಮಾಡಲು ಮುಂದಾಗಬೇಕು ಎಂದರು.

    ಸ್ವಚ್ಛತಾ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಸುವುದರೊಂದಿಗೆ ಸ್ವಚ್ಛತೆ ಕೈಗೊಳ್ಳಬೇಕು. ಒಂದಿಮ್ಮೆ ಬರಿಗೈಲಿನಿಂದ ಸ್ವಚ್ಛತೆ ಮಾಡಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪೌರ ಕಾರ್ಮಿಕರಿಗೆ ಅತ್ಯುತ್ತಮ ಗುಣಮಟ್ಟದ ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಕಾಲಕಾಲಕ್ಕೆ ಅವರುಗಳ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಮಾಸ್ಟರ್ ಹೆಲ್ತ್ ಚೆಕ್‍ಅಪ್‍ಗಳನ್ನು ಮಾಡಿಸಬೇಕು ಹಾಗೂ ಅವರುಗಳಿಗೆ ಉತ್ತಮ ಗುಣಮಟ್ಟದ ಉಪಾಹಾರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈಗಾಗಲೇ ಜಿಲ್ಲೆಯಲ್ಲಿ 154 ಜನ ಪೌರಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. 10 ಜನ ಕಾರ್ಮಿಕರ ನೇಮಕಕ್ಕೆ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಪರಿಶೀಲನೆಯನ್ನು ಶೀಘ್ರವಾಗಿ ಕೈಗೊಳ್ಳುವುದರೊಂದಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.

    ಸರಕಾರ ಮ್ಯಾನ್ಯುಯಲ್ ಸ್ಕ್ಯಾಂವೆಂಜರರ ಪುನರ್ವಸತಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವರುಗಳನ್ನು ಅರ್ಹ ಫಲನಾಭವಿಗಳನ್ನಾಗಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಪೌರಾಯುಕ್ತ ರಾಯಪ್ಪ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.