Category: ಸುದ್ದಿ

  • ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೀತಾ ಅವಿನಾಶ್, ಉಪಾಧ್ಯಕ್ಷರಾಗಿ ಗೋವರ್ಧನ್ ಜೋಗಿ ಆಯ್ಕೆ

    ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗೀತಾ ಅವಿನಾಶ್, ಉಪಾಧ್ಯಕ್ಷರಾಗಿ ಗೋವರ್ಧನ್ ಜೋಗಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ವಂಡ್ಸೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಗೀತಾ ಅವಿನಾಶ್, ಉಪಾಧ್ಯಕ್ಷರಾಗಿ ಗೋವರ್ಧನ್ ಜೋಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ವಂಡ್ಸೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು.

    ಚುನಾವಣಾಧಿಕಾರಿಯಾಗಿ ವಾರಾಹಿ ಜಲಾಶಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿರಣ್ ಪಡ್ತಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರೇಣುಕಾ ಹೆಗ್ಡೆ ಸಹಕರಿಸಿದರು.

    ಇಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿತ್ತು. ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 7 ಸದಸ್ಯ ಸ್ಥಾನವಿದ್ದು ಕಾಂಗ್ರೆಸ್ ಬೆಂಬಲಿತ 5, ಬಿಜೆಪಿ ಬೆಂಬಲಿತ 2 ಸದಸ್ಯರಿದ್ದಾರೆ.

  • ಅಣ್ಣಪ್ಪನ ದ್ವನಿಯಾಗಿ ನಾನು ಹೋರಾಡುತ್ತಿದ್ದೇನೆ – ಕುಂದಾಪುರದಲ್ಲಿ ಸೌಜನ್ಯ ಪರ ತಿಮರೋಡಿ

    ಅಣ್ಣಪ್ಪನ ದ್ವನಿಯಾಗಿ ನಾನು ಹೋರಾಡುತ್ತಿದ್ದೇನೆ – ಕುಂದಾಪುರದಲ್ಲಿ ಸೌಜನ್ಯ ಪರ ತಿಮರೋಡಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅಧರ್ಮ ಆಚರಣೆಯ ಯಾವೊಬ್ಬನೂ ಈ ಭೂಮಿ ಮೇಲೆ ಬದುಕುವ ಹಕ್ಕನ್ನು ಹೊಂದಿಲ್ಲ ಎಂದು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

    ಸೌಜನ್ಯ ಪರ ನ್ಯಾಯಕ್ಕಾಗಿನ ಹೋರಾಟ ಸಮಿತಿ ಕುಂದಾಪುರ – ಬೈಂದೂರು ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

    ಧರ್ಮಸ್ಥಳವೆನ್ನುವುದು ನ್ಯಾಯ ಸ್ಥಾನ ಮಂಜುನಾಥ, ಅಣ್ಣಪ್ಪ ಸ್ವಾಮಿ ಸೌಜನ್ಯಳಿಗೆ ಇವತ್ತಲ್ಲದಿದ್ದರೇ, ನಾಳೆಯಾದರೂ ನ್ಯಾಯ ಒದಗಿಸಿ ಕೊಡುತ್ತಾರೆ. ಮಂಜುನಾಥ, ಅಣ್ಣಪ್ಪ ಸ್ವಾಮಿ ಈ ನ್ಯಾಯದ ಹೋರಾಟವನ್ನು ನನ್ನ ತಲೆ ಮೇಲೆ ಹಾಕಿದ್ದಾರೆ. ಅದಕ್ಕಾಗಿ ನಾನು 11 ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ . ಮುಂದೆ ಎಷ್ಟು ಹೋರಾಟ ಮಾಡುವುದಕ್ಕೂ ನಾನು ಸಿದ್ದ. ನನಗೆ ವೇದಿಕೆಯಲ್ಲಿ ಮಾತನಾಡುವ ತೀಟೆಯಲ್ಲ, ಹೆಣ್ಣು ಮಗುವಿಗೆ ನ್ಯಾಯ ಕೊಡುವುದಷ್ಟೇ ನನ್ನ ಗುರಿ-ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ಹೊರ ಹಾಕಿದರು.

    ಮಂಜುನಾಥ, ಅಣ್ಣಪ್ಪ ಸ್ವಾಮಿಯ ಮುಖಕ್ಕೆ ಅತ್ಯಾಚಾರದ ರಕ್ತದ ಕಲೆ ಹಚ್ಚಿದವರನ್ನು ಶಿಕ್ಷಿಸುವುದಕ್ಕಾಗಿಯೇ ನಮ್ಮ ಹೋರಾಟ. ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಹೋರಾಟ ಮಾಡಲಿದ್ದೇವೆ. ಇದಕ್ಕೆ ಯಾರಿಂದಲೂ ಅಡ್ಡಿಯಾಗಲು ಸಾಧ್ಯವಿಲ್ಲ. ಹಿಂದೂ ಧರ್ಮದ ತಳಪಾಯ ಅಲುಗಾಡಲು ನಾವು ಬಿಡುವುದಿಲ್ಲ. ಧರ್ಮಸ್ಥಳದಲ್ಲಿ ಧಾರ್ಮಿಕತೆ ಅಲುಗಾಡಲು ಆರಂಭಿಸಿದೆ. ಅದನ್ನು ಸರಿಪಡಿಸುವುದು ನಮ್ಮ ಗುರಿ. ನಾವು ಸನಾತನ ಹಿಂದೂ ಧರ್ಮದ ಪ್ರತಿಪಾದಕರು. ಜನರು, ಧರ್ಮದ ಮುಂದೆ ಯಾವುದು ಇರುವುದಿಲ್ಲ ಎಂದರು.

    ಸತ್ಯ ನ್ಯಾಯ ನೀತಿ ಎಲ್ಲಿದೆ. ಧರ್ಮಸ್ಥಳದಲ್ಲಿಯೇ ನ್ಯಾಯವಿಲ್ಲ ಎಂದಾದರೆ ಹೇಗೆ? ಯಾರು ಈ ಅತ್ಯಾಚಾರ ಕೊಲೆ ಮಾಡಿದವರು. ಸಾಮೂಹಿಕವಾಗಿ ಅತ್ಯಚಾರ ಮಾಡಿದ ಪಾಪಿಗಳನ್ನು ವ್ಯವಸ್ಥಿತವಾಗಿ ರಕ್ಷಣೆ ಮಾಡಲಾಗಿದೆ. ಅತ್ಯಂತ ಘೋರವಾಗಿ, ಮೃಗೀಯವಾಗಿ ಅತ್ಯಾಚಾರ ಮಾಡಲಾಗಿದೆ. ಇದು ಮನುಷ್ಯತ್ವವೇ ತಲೆ ತಗ್ಗಿಸುವ ಘಟನೆ ಎಂದರು.
    ಧರ್ಮ ಇರುವುದು ಒಂದೇ ಅದೇ ಹಿಂದು ಧರ್ಮ. ಇದರೊಳಗೆ ಬೇರೆ ಬೇರೆ ಪಂಗಡಗಳು ಇದೆ. ಈಗ ನಾವು ಅಲ್ಪಸಂಖ್ಯಾತರು ಎನ್ನುವುದಕ್ಕೆ ಅರ್ಥವಿಲ್ಲ. ದಿನಕ್ಕೊಂದು ಕಾನೂನು ಮಾಡಿ ದೊಡ್ಡವರಿಗೊಂದು ಕಾನೂನು, ಬಡವರಿಗೊಂದು ಕಾನೂನು ರೂಪಿಸುವುದು ಕಾಣುತ್ತೇವೆ. ಆದರೆ ಈ ವಿಷಯದಲ್ಲಿ ಜನಳಗೇ ತೀರ್ಮಾನ ತಗೆದುಕೊಳ್ಳಬೇಕು ಎಂದರು.

    ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿ ರಾಜ್ಯ ಸರ್ಕಾರ ಈ ಪ್ರಕರಣದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ರಾಜ್ಯ ಸರ್ಕಾರದ ಮೈಂಡ್ ಗೇಮ್, ಸೇಫ್ ಗೇಮ್. ಯಾವ ಸರ್ಕಾರ ಏನೇ ಈ ಪ್ರಕರಣದಲ್ಲಿ ಆಟ ಆಡಿದರೂ ನ್ಯಾಯ ಸಿಗುವ ತನಕ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

    ಸೆ.3ರಂದು ಬೆಳ್ತಂಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಲಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳನ್ನು ರಕ್ಷಣೆ ಮಾಡಿದವರಿಗೂ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
    ಸೌಜನ್ಯ ತಾಯಿ ಕುಸುಮವತಿ ಮಾತನಾಡಿ, ನನ್ನ ಮಗಳಿಗಾಗಿ ನ್ಯಾಯ ಕೊಡಿಸಿ ಎಂದು ಕೇಳುತ್ತಲೇ ಬಂದಿದ್ದೇನೆ. ಅತ್ಯಂತ ಘೋರವಾಗಿ ಅತ್ಯಾಚಾರವೆಸಗಿ ನನ್ನ ಮಗಳನ್ನು ಸಾಯಿಸಿದ ಪಾಪಿಗಳಿಗೆ ಶಿಕ್ಷೆಯಾಗಬೇಕು. ನಾವು ಆರೋಪ ಮಾಡುವವರನ್ನು ತನಿಖೆ ಮಾಡಲಿ, ಈ ಪ್ರಕರಣದ ಮರು ತನಿಖೆಯಾಗಲಿ. ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಬೆದರಿಕೆಗಳನ್ನು ಎದುರಿಸಿ ಸಾಕಾಯ್ತು. ಇನ್ನಾದರೂ ಸರ್ಕಾರ ನ್ಯಾಯ ಒದಗಿಸಿ ಕೊಡುವ ಮನಸ್ಸು ಮಾಡಲಿ ಎಂದರು.

    ಕಾರ್ಯಕ್ರಮ ಸಂಘಟಕ ಸುಧೀರ್ ಮಲ್ಯಾಡಿ ಸ್ವಾಗತಿಸಿ, ವಂದಿಸಿದರು.

    ಕಾರ್ಯಕ್ರಮಕ್ಕೂ ಮೊದಲು ನೆಹರು ಮೈದಾನದಿಂದ ಬೃಹತ್ ಮೆರವಣಿಗೆ ನಡೆಯಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

  • ಗಂಗೊಳ್ಳಿ :ವರ್ಗಾವಣೆಗೊಂಡ ಶಿಕ್ಷಕಿ ಸರಿತಾ ಕೆ.ಎಸ್. ಇವರಿಗೆ ಬೀಳ್ಕೋಡುಗೆ

    ಗಂಗೊಳ್ಳಿ :ವರ್ಗಾವಣೆಗೊಂಡ ಶಿಕ್ಷಕಿ ಸರಿತಾ ಕೆ.ಎಸ್. ಇವರಿಗೆ ಬೀಳ್ಕೋಡುಗೆ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ :ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ವರ್ಷ ಸೇವೆಯನ್ನು ಸಲ್ಲಿಸಿ ಕುಂಭಾಶಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಸರಿತಾ ಕೆ.ಎಸ್. ಇವರಿಗೆ ಬೀಳ್ಕೋಡುಗೆ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆಯಿತು.

    ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರವಿಶಂಕರ್ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್ ಖಾರ್ವಿ, ಶಿಕ್ಷಣ ಸಂಯೋಜಕ ಶೇಖರ್ ಯು., ಗಂಗೊಳ್ಳಿ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಇದೇ ಸಂದರ್ಭ ವರ್ಗಾವಣೆಗೊಂಡ ಶಿಕ್ಷಕಿ ಸರಿತಾ ಕೆ.ಎಸ್. ಅವರನ್ನು ಶಾಲೆಯ ಶಿಕ್ಷಕರು ಮತ್ತು ಎಸ್‍ಡಿಎಂಸಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಡಿಎಂಸಿ ಉಪಾಧ್ಯಕ್ಷೆ ರೇಣುಕಾ ಮೊಗವೀರ, ಸದಸ್ಯರಾದ ಅಶೋಕ್ ಪೂಜಾರಿ, ಶೋಭಾ ಪೂಜಾರಿ, ಶೋಭಾ ಖಾರ್ವಿ, ಶೋಭಾ ಪೂಜಾರಿ, ರೇಷ್ಮಾ ಖಾರ್ವಿ, ದಾನಿಗಳಾದ ರಾಘವೇಂದ್ರ ಕೋಟಾನ್, ಪ್ರಭಾರ ಮುಖ್ಯ ಶಿಕ್ಷಕ ಉಮೇಶ್ ಕುಂದರ್ ಉಪಸ್ಥಿತರಿದ್ದರು.

    ಸಹ ಶಿಕ್ಷಕಿಯರಾದ ಯಶೋದ ಸ್ವಾಗತಿಸಿದರು. ಅನುಷಾ ಸಿ. ಬಂಗೇರ ಸನ್ಮಾನ ಪತ್ರ ವಾಚಿಸಿದರು. ಆಶಾ, ಶಾಂತಿ, ದೀಪಾ, ಸುಪ್ರೀತಾ ಮತ್ತು ಪಲ್ಲವಿ ಸಹಕರಿಸಿದರು. ಉಷಾ ಕುಮಾರಿ ವಂದಿಸಿದರು. ಶಶಿಶಂಕರ್ ಎಚ್.ಎಂ. ಕಾರ್ಯಕ್ರಮ ನಿರ್ವಹಿಸಿದರು.

  • ಶ್ರೀ ವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಕೊಡುಗೆ ಹಸ್ತಾಂತರ

    ಶ್ರೀ ವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಕೊಡುಗೆ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ವಿಶ್ವಕರ್ಮ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಚೇಂಪಿ ಸಾಲಿಗ್ರಾಮ ಇವರ ವಾರ್ಷಿಕ ಸಭೆ ಹಾಗೂ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘದಲ್ಲಿ ಗುರುಸ್ವಾಮಿ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿ ಜರುಗಿತು.

    ಮುಖ್ಯ ಅತಿಥಿಗಳಾಗಿ ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ,ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ಯ ಸಾಲಿಗ್ರಾಮ, ವಿಶ್ವ ಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ ಅಯ್ಯಪ್ಪ ಭಕ್ತವೃಂದದ ಪ್ರಮುಖರಾದ ರಾಜೇಶ್ ಆಚಾರ್ಯ ಚೇಂಪಿ , ಕಿರಣ ಆಚಾರ್ಯ ರಿಪ್ಪನ್ ಪೇಟೆ, ದಿನೇಶ್ ಆಚಾರ್ಯ ಚೇಂಪಿ, ಮತ್ತಿತರರು ಉಪಸ್ಥಿತರಿದ್ದರು. ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋಧ್ಧಾರಕ ಸಂಘಕ್ಕೆ ಎರಡು ಅನ್ನ ಬಡಿಸುವ ಟ್ರಾಲಿಯನ್ನು ಕೊಡುಗೆಯಾಗಿ ನೀಡಲಾಯಿತು.
    ದಿನೇಶ್ ಆಚಾರ್ಯ ಚೇಂಪಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಕೋಟ :ಕೊಂಡದಕುಳಿ ರಾಮಚಂದ್ರ ಹೆಗಡೆ ಸನ್ಮಾನ

    ಕೋಟ :ಕೊಂಡದಕುಳಿ ರಾಮಚಂದ್ರ ಹೆಗಡೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ಘಟಕದ ವತಿಯಿಂದ ತಿಂಗಳ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ವಿದುರನ ಪಾತ್ರವನ್ನು ಹವ್ಯಕ ಭಾಷೆಯಲ್ಲಿ ಪ್ರಸ್ತುತಪಡಿಸಿದರು. ಮರು ಓದು ಮತ್ತು ವಿಮರ್ಶೆಯಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಧರ್ಮರಾಯನ ಸಂಸಾರ ಇದನ್ನು ಶಿವಾನಂದ ಮೈಯ್ಯ ಪ್ರಸ್ತುತಪಡಿಸಿದರು.

    ಕ.ಸಾ.ಪ ಬ್ರಹ್ಮಾವರ ಘಟಕದ ಅಧ್ಯಕ್ಷ ಜಿ. ರಾಮಚಂದ್ರ ಐತಾಳ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಪ್ರಾಸ್ತಾವನೆಗೈದರು.

    ಅತಿಥಿಗಳಾಗಿ ಸಂಘಟಕರಾದ ಸೀತಾರಾಮ್ ಸೋಮಯಾಜಿ, ಉಪೇಂದ್ರ ಸೋಮಯಾ ಜಿ, ರಾಜಶೇಖರ್ ಹೆಬ್ಬಾರ್, ಅಚ್ಯುತ ಪೂಜಾರಿ ಉಪಸ್ಥಿತರಿದ್ದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಗೌರವ ಕಾರ್ಯದರ್ಶಿ ಜ್ಯೋತಿ ಕೃಷ್ಣ ಪೂಜಾರಿ ಧನ್ಯವಾದಗೈದರು. ಸುಮನ ಹೇರಳೆ ಕಾರ್ಯಕ್ರಮವನ್ನು ನಿರೂಪಿಸಿದರು.

  • ಸಾಲಿಗ್ರಾಮ – ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    ಸಾಲಿಗ್ರಾಮ – ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ ವಾರ್ಷಿಕ ಮಹಾಸಭೆಯು ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ಆ.19 ರಂದು ನಡೆಯಿತು.

    ಸಭೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಆತ್ಮೀಕಾ ಅವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.

    ಜಿಲ್ಲಾ ಸೌಹಾರ್ದ ಸಹಕಾರಿ ಯೂನಿಯನಿನ ಅಧ್ಯಕ್ಷ ಅಂಪಾರು ಜಗನ್ನಾಥ್ ಶೆಟ್ಟಿ, ಸಹಕಾರಿ ಕಾನೂನು ಸಲಹೆಗಾರರಾದ ಮಂಜುನಾಥ್ ಎಸ್ ಕೆ, ಸೌಹಾರ್ದ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್, ಉಪಾಧ್ಯಕ್ಷರಾದ ನರಸಿಂಹ ನಾಯ್ಕ್, ಸಹಕಾರಿ ಸಂಘದ ಎಲ್ಲಾ ನಿರ್ದೇಶಕರುಗಳು ಸಿಬ್ಬಂದಿ ನಿತಿನ್ ಉಪಸ್ಥಿತರಿದ್ದರು.

    ಸಹಕಾರಿ ಅಧ್ಯಕ್ಷ ಸತೀಶ್ ಕೆ ನಾಯ್ಕ್ ವರದಿ ವಾಚಿಸಿ, ಸಿಬ್ಬಂದಿ ಅಕ್ಷಯ್ ಲೆಕ್ಕಪತ್ರ ಮಂಡಿಸಿ, ಮಂಜುನಾಥ್ ಆಚಾರ್ಯ ನಿರೂಪಿಸಿ, ಸಹಕಾರಿ ನಿರ್ದೇಶಕ ಪ್ರಶಾಂತ್ ಶಿರೂರು ವಂದಿಸಿದರು.

  • ಕಾರ್ಕಡ – ಐಡಿ ಕಾರ್ಡ ವಿತರಣೆ

    ಕಾರ್ಕಡ – ಐಡಿ ಕಾರ್ಡ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಜರಗಿತು.

    ಮೂಡುಗಿಳಿಯಾರು ಎಸ್.ಹೆಚ್.ಆರ್.ಎಫ್ ಯೋಗಬನ ಇವರ ವತಿಯಿಂದ ಕೊಡಮಾಡಲಾದ ಐಡಿ ಕಾರ್ಡನ್ನು ಯೋಗಬನದ ನಿರ್ದೇಶಕ ಡಾ.ವಿವೇಕ ಉಡುಪ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

    ಕಾರ್ಯಕ್ರಮದಲ್ಲಿ ಶಾಲಾಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್ , ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಧ್ಯಾಪವೃಂದ ಉಪಸ್ಥಿತರಿದ್ದರು.

  • ಕಾರ್ಕಡ ಗೆಳೆಯರ ಬಳಗಕ್ಕೆ ಅಧ್ಯಕ್ಷರಾಗಿ ಕೆ.ತಾರಾನಾಥ್ ಹೊಳ್ಳ ಪುನರಾಯ್ಕೆ

    ಕಾರ್ಕಡ ಗೆಳೆಯರ ಬಳಗಕ್ಕೆ ಅಧ್ಯಕ್ಷರಾಗಿ ಕೆ.ತಾರಾನಾಥ್ ಹೊಳ್ಳ ಪುನರಾಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾಗಿ ಕೆ. ತಾರಾನಾಥ್ ಹೊಳ್ಳ ಪುನರಾಯ್ಕೆಗೊಂಡರು.

    ಸಾಲಿಗ್ರಾಮದ ಪರಿಸರದಲ್ಲಿ ನಿರಂತರ 36ವರ್ಷಗಳ ಸಾಮಾಜಿಕ ಚಟುವಟಿಕೆ ನೀಡುತ್ತಿರುವ ಗೆಳೆಯರ ಬಳಗ ಸಂಸ್ಥೆ ಇತ್ತೀಚಿಗೆ ಕಾರ್ಕಡದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳೀಸಿತು. ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ನಾಗರಾಜ್ ಉಪಾಧ್ಯ, ಕೋಶಾಧಿಕಾರಿಯಾಗಿ ಕೆ.ಶೀನ, ಉಪಾಧ್ಯಕ್ಷರಾಗಿ ಶಶಿಧರ ಮಯ್ಯ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಚಂದ್ರಕಾಂತ್ ನಾಯರಿ, ಕೆ.ರಘು ಭಂಡಾರಿ, ಕೆ ಉದಯ್ ಐತಾಳ್, ಕೆ.ತಮ್ಮಯ್ಯ, ಶ್ರೀಕಾಂತ್ ಐತಾಳ್, ಜಗದೀಶ್ ಆಚಾರ್, ಶ್ರೀಪತಿ ಆಚಾರ್, ರಾಘವೇಂದ್ರ ದೇವಾಡಿಗ ಆಯ್ಕೆಯಾದರು.

  • ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ವೈಶಾಲಿ, ಉಪಾಧ್ಯಕ್ಷರಾಗಿ ರಾಮ ಶೆಟ್ಟಿ ಆಯ್ಕೆ

    ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ವೈಶಾಲಿ, ಉಪಾಧ್ಯಕ್ಷರಾಗಿ ರಾಮ ಶೆಟ್ಟಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ : ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೈಶಾಲಿ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.

    ೧೩ ಸದಸ್ಯ ಬಲದ ಪಂಚಾಯತ್‌ನಲ್ಲಿ ೮ ಮಂದಿ ಬಿಜೆಪಿ ಬೆಂಬಲಿತ ಹಾಗೂ ಐವರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು.

    ಉಪಾಧ್ಯಕ್ಷ ಸ್ಥಾನ ಪೈಪೋಟಿ
    ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಪೈಪೋಟಿ ಏರ್ಪಟಿದ್ದು, ಬಿಜೆಪಿ ಬೆಂಬಲಿತ ರಾಮ ಶೆಟ್ಟಿ ಹಾಗೂ ಕಾಂಗ್ರೆಸ್ ಬೆಂಬಲಿತ ಶರತ್ ಕುಮಾರ್ ಶೆಟ್ಟಿ ಸ್ಪರ್ಧಿಸಿದ್ದರು. ಈ ಪೈಕಿ ರಾಮ ಶೆಟ್ಟರಿಗೆ ೭ ಮತ ಹಾಗೂ ಶರತ್ ಶೆಟ್ಟರಿಗೆ ೬ ಮತಗಳು ಬಿದ್ದವು. ಅಂತಿಮವಾಗಿ ರಾಮ ಶೆಟ್ಟರು ವಿಜಯಿಯಾದರು. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೂ ಮೊದಲು ಇಬ್ಬರು ಬಿಜೆಪಿ ಬೆಂಬಲಿತರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮತದಾನದ ವೇಳೆ ಇದೇ ಉಲ್ಟಾ ಹೊಡೆದಿದ್ದು, ತನ್ನವರೊಬ್ಬರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಅಡ್ಡ ಮತದಾನ ಮಾಡಿದ್ದು, ಇದು ಕೊನೆಗೆ ಆಣೆ ಪ್ರಮಾಣಕ್ಕೂ ಕಾರಣವಾಯಿತು ಎನ್ನಲಾಗಿದೆ.

    ಚುನಾವಣಾಧಿಕಾರಿಯಾಗಿ ವಾರಾಹಿ ಎಂಜಿನಿಯರ್ ಎಂ.ಜಿ. ಭಟ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ. ಪಿಡಿಒ ರಿಯಾಜ್ ಅಹಮದ್ ಸಹಕರಿಸಿದರು.

  • ಸಿದ್ದಾಪುರ: ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕಾರ್ಮಿಕರ ಮೆರವಣಿಗೆ ಧರಣಿ

    ಸಿದ್ದಾಪುರ: ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕಾರ್ಮಿಕರ ಮೆರವಣಿಗೆ ಧರಣಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರ ಮೇಲ್ದರ್ಜೆಗೆ ಏರಿಸಲು ಆಗ್ರಹಿಸಿ ಸಿದ್ದಾಪುರ ಪೇಟೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವರೆಗೆ ಕಟ್ಟಡ ಹಾಗೂ ಗೇರು ಬೀಜ ಕಾರ್ಖಾನೆ ಕಾರ್ಮಿಕರು ಹಾಗೂ ಗ್ರಾಮಸ್ಥರು ಮೆರವಣಿಗೆ ನಡೆಸಿ ಆರೋಗ್ಯ ಕೇಂದ್ರದ ಎದುರುಗಡೆ ಬೆಳಿಗ್ಗೆ ಪ್ರತಿಭಟನಾ ಧರಣಿ ನಡೆಸಿದರು.

    ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಸಿದ್ದಾಪುರ ಜನತೆಗೆ ಮೂಲಭೂತ ಸೌಕರ್ಯವಾಗಿರುವ ಆರೋಗ್ಯ ಸೇವೆಯನ್ನು ಸರಕಾರ ನಿರಂತರವಾಗಿ ಕಡೆಗಣಿಸಿದೆ. ದಿನ ನಿತ್ಯ ಸುತ್ತಲ ಹಳ್ಳಿಗಳಿಂದ ನೂರಾರು ರೋಗಿಗಳು ಕೇಂದ್ರಕ್ಕೆ ಬರುತ್ತಿದ್ದರೂ ವೈದ್ಯರು ವಾರದ ಕೆಲವೇ ದಿನಗಳು ಮಾತ್ರ ಲಭ್ಯ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಜೆ 4.30 ಗಂಟೆ ಆಗುತ್ತಿದ್ದಂತೆ ಕೇಂದ್ರ ಮುಚ್ಚುತ್ತಿರುವುದು ರಾತ್ರಿ ಹೊತ್ತು ತುರ್ತು ಚಿಕಿತ್ಸೆ ಸಿಗದಿರುವುದು ದೂರದ 30 ಕಿಮೀ ಕುಂದಾಪುರಕ್ಕೆ ಹೋಗುವ ಸ್ಥಿತಿ ಜನರ ಪ್ರಾಣಕ್ಕೆ ಸಂಚಕಾರ ಬಂದಿದೆ ಎಂದು ಅವರು ಹೇಳಿದರು.

    ಆರೋಗ್ಯ ಕೇಂದ್ರದಲ್ಲಿ ಸುಮಾರು 4 ಎಕರೆಗೂ ಮಿಕ್ಕಿ ವಿಸ್ತಾರ ಜಾಗದಲ್ಲಿ ಲ್ಯಾಬ್, ಶವಗಾರ, ಬೆಡ್, ಶೌಚಾಲಯ ವ್ಯವಸ್ಥೆ ಕಟ್ಟಡ ಇದ್ದರೂ ಸಿಬ್ಬಂದಿ ನೇಮಕ ಮಾಡದೇ ಗ್ರಾಮಸ್ಥರಿಗೆ ಸಿಗಬೇಕಾದ ಸೌಲಭ್ಯದಿಂದ ವಂಚಿಸಿದೆ ಮಾತ್ರವಲ್ಲದೇ ಶವ ಇಡಲು ಫ್ರೀಜರ್ ವ್ಯವಸ್ಥೆ ಇಲ್ಲದ ದಾರುಣ ಪರಿಸ್ಥಿತಿ ಇದೆ ಎಂದ ಅವರು ಸರಕಾರ ಕೂಡಲೇ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸಿ ಸಿದ್ದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.

    ಸಿಐಟಿಯು ತಾಲೂಕು ಸಂಚಾಲಕರಾದ ಚಂದ್ರಶೇಖರ ವಿ, ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿದರು.

    ಸಿಐಟಿಯು ಜಿಲ್ಲಾ ಮುಖಂಡರಾದ ಮಹಾಬಲ ವಡೇರಹೋಬಳಿ, ಕೆಲಸಗಾರರ ಸಂಘದ ಗಿರಿಜ ಆಚಾರ್,ಗಿರೀಜ ಶೆಡ್ತಿ,ಶಾರದ, ವೆಂಕಟೇಶ್ ಹೊಸಂಗಡಿ, ರತ್ನಾಕರ ಸಿದ್ದಾಪುರ, ವಿಠಲ,ಕ್ರಷ್ಣ ಪೂಜಾರಿ, ಜ್ಯೋತಿ,ಚಂದ್ರ ಕುಲಾಲ್ ಮೂಡುಬಗೆ ಮೊದಲಾದವರು ಇದ್ದರು.

    ಕಟ್ಟಡ ಕಾರ್ಮಿಕರ ಸಂಘದ ಸಿದ್ದಾಪುರ ಘಟಕದ ಕಾರ್ಯದರ್ಶಿ ಪಿ ಟಿ ಅಲೆಕ್ಸಾಂಡರ್ ಸ್ವಾಗತಿಸಿದರು.

    ಕಟ್ಟಡ ಕಾರ್ಮಿಕರ ಸಿದ್ದಾಪುರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ವಂದಿಸಿದರು.

    ಬೇಡಿಕೆಗಳು
    1.ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು.ಹಗಲು ರಾತ್ರಿ ಸೇವೆ ನೀಡಬೇಕು.
    2.ವಾರದ ಎಲ್ಲಾ ದಿನಗಳೂ ವೈದ್ಯರು ಜನರಿಗೆ ಲಭ್ಯ ಇರಬೇಕು, ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕು.
    3.ಕೇಂದ್ರಕ್ಕೆ ಶವ ಇರಿಸಲು ಫ್ರೀಜರ್ ವ್ಯವಸ್ಥೆ ಮಾಡಬೇಕು.
    4.ಶವಗಾರ, ಬೆಡ್, ಲ್ಯಾಬ್ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕು.

    ಮನವಿಯನ್ನು ಆರೋಗ್ಯ ಕೇಂದ್ರದ ಶಾಂತಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಯಿತು.

    ಶಂಕರನಾರಾಯಣ ಸಹಾಯಕ ಉಪ ನಿರೀಕ್ಷಕ ಮಹಾಬಲ ಹಾಗೂ ಸಿಬ್ಬಂದಿ ಚಂದ್ರಶೇಖರ ಬಂದೋಬಸ್ತ್ ಏರ್ಪಡಿಸಿದರು.