Category: ಸುದ್ದಿ

  • ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಇಂಟ್ರೇಕ್ಟ ಕ್ಲಬ್ ಪದಗ್ರಹಣ ಸಮಾರಂಭ

    ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಇಂಟ್ರೇಕ್ಟ ಕ್ಲಬ್ ಪದಗ್ರಹಣ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರೋಟರಿ ಕ್ಲಬ್ ಮಿಡ್ ಟೌನ್ ಕುಂದಾಪುರದ ಆಶ್ರಯದಲ್ಲಿ ನಡೆಯುತ್ತಿರುವ ಇಂಟ್ರೇಕ್ಟ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ ಆ.5ರಂದು ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಮಿಡ್ ಟೌನ್ ನ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಕಾವ್ರಾಡಿ ವಹಿಸಿದರು. ಇಂಟ್ರೇಕ್ಟ ಚೇರ್ಮನ್ ಚಂದ್ರಶೇಖರ ಹೆಗ್ಡೆಯವರು ಮಾತನಾಡುತ್ತಾ ಶಾಲೆಯಲ್ಲಿ ಇಂಟ್ರೇಕ್ಟ ಕ್ಲಬ್ ವತಿಯಿಂದ ಏನೆಲ್ಲಾ ಹೊಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದೆಂದು ರೂಪುರೇಷೆಗಳ ಬಗ್ಗೆ ತಿಳಿಸಿದರು. ರೋಟೇರಿಯನ್ ರಂಜಿತ್ ಕುಮಾರ್ ಶೆಟ್ಟಿಯವರು ಶಾಲಾ ವಿದ್ಯಾರ್ಥಿಗಳು ಇಂಟ್ರೇಕ್ಟ ಕ್ಲಬ್ ಮೂಲಕ ನಾಯಕತ್ವ ಗುಣಗಳನ್ನು ಈಗಿಂದಲೇ ಬೆಳೆಸಿಕೊಳ್ಳಲು ಸಾಧ್ಯ ಎಂದರು.

    ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರು ಮಾತನಾಡುತ್ತಾ ರೋಟರಿ ಮಿಡ್ ಟೌನ್ ಕುಂದಾಪುರ ಈಗಾಗಲೇ ಶಾಲೆಗೆ ನೀಡಿದ ಕೊಡುಗೆಯನ್ನು ನೆನಪಿಸಿ ಅಭಿನಂದಿಸಿದರು. ಈ ಸಾಲಿನ ವಿದ್ಯಾರ್ಥಿಗಳಿಗೆ ಗುರುತು ಚೀಟಿ ಮಾಡಿಸಿ ಕೊಡುವುದು ಹಾಗೂ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಆರ್ಥಿಕ ನೆರವುಗಳ ಬೇಡಿಕೆ ಇಟ್ಟರು. 2023-24ನೆಯ ಸಾಲಿನ ಇಂಟ್ರೇಕ್ಟ ಕ್ಲಬ್ ನ ಅಧ್ಯಕ್ಷನಾಗಿ ರಶ್ವಿನ್ 9ನೆಯ ತರಗತಿ ಹಾಗೂ ಶಾಂತಕುಮಾರಿ 9ನೆಯ ತರಗತಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿನ ಸಾಲಿನ ಕಾರ್ಯದರ್ಶಿ ದೀಕ್ಷಾ 10ನೆಯ ತರಗತಿ ಹಿಂದಿನ ಸಾಲಿನ ಇಂಟ್ರೇಕ್ಟ ಕ್ಲಬ್ ನ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದಳು. ನಿರ್ಗಮನ ಅಧ್ಯಕ್ಷ ಪ್ರವೀಣ್ 10ನೆಯ ತರಗತಿ ನಿರ್ಗಮನ ಭಾಷಣ ಮಾಡಿ , ಅಧಿಕಾರ ಹಸ್ತಾಂತರಿಸಿ ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಶುಭ ಹಾರೈಸಿದನು. ಅಧ್ಯಕ್ಷ ರಶ್ವಿನ್ ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಸಭೆಗೆ ಪರಿಚಯಿಸಿದನು.

    ರೊ.ಸಂಪತ್ ಕುಮಾರ್ ಶೆಟ್ಟಿಯವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿ ಎಂದರು. ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯವರು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಕಾರ್ಯದರ್ಶಿ ರೊ.ಸಚಿನ್ ಕುಮಾರ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದರು. ಇಂಟ್ರೇಕ್ಟ ಕೋರ್ಡಿನೇಟರ್ ದಿನೇಶ್ ಪ್ರಭು ಸರ್ವರನ್ನು ಸ್ವಾಗತಿಸಿದ್ದರು.

  • ಕುಂದಾಪುರ :ಸರಕಾರಿ ಬಸ್ಸಿಗಾಗಿ ಆಲೂರು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕುಂದಾಪುರ :ಸರಕಾರಿ ಬಸ್ಸಿಗಾಗಿ ಆಲೂರು ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಆಲೂರು ಗ್ರಾಮದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸುಮಾರು 22 ಕಿಮೀ ದೂರದಲ್ಲಿರುವ ಕುಂದಾಪುರಕ್ಕೆ ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ಕೆಲವೇ ಕೆಲವು ಖಾಸಗೀ ಬಸ್ಸುಗಳಿದ್ದರೂ ಕಾಲೇಜು ಬಿಡುವ ಸಮಯದಲ್ಲಿ ರಷ್ ನಿಂದ ಸಂಜೆ ಬಸ್ ತಪ್ಪಿದ್ದಲ್ಲಿ ವಿದ್ಯಾರ್ಥಿಗಳು ಮನೆಗೆ ಬರುವಾಗ ರಾತ್ರಿ ಆಗುತ್ತಿರುವುದು ಮನೆಯ ಪೋಷಕರಿಗೆ ಭಯದಿಂದ ಬದುಕುವಂತಾಗಿದೆ. ಆದುದರಿಂದ ಸರಕಾರಿ ಬಸ್ಸಿಗೆ ಕೊಲ್ಲೂರು-ಆಲೂರು-ಕುಂದಾಪುರ ಸಂಪರ್ಕಿಸುವ ರೂಟ್ ಪರವಾನಿಗೆ ನೀಡಿ ಬಸ್ ಓಡಿಸಲು ಜಿಲ್ಲಾ ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದು ವಿದ್ಯಾರ್ಥಿ ಗಳು ಆಗ್ರಹಿಸಿದರು.

    ಅಲ್ಲದೇ ಆಲೂರಿನಲ್ಲಿ ಸರಕಾರಿ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

    ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಆದರ್ಶ, ಪೂರ್ಣೇಶ, ಸುರಕ್ಷಾ,ಸಾನ್ವಿ, ಸಾಕ್ಷಿ, ಶ್ರಾವ್ಯ,ದೀಕ್ಷಾ ಇದ್ದರು.

    ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಚಂದ್ರಶೇಖರ ವಿ,ರವಿ ವಿಎಂ,ಆಲೂರು ಘಟಕದ ಅಧ್ಯಕ್ಷ ರಘುರಾಮ ಆಚಾರ್ ಮೊದಲಾದವರಿದ್ದರು

  • ಗಿರಿ ಫ್ರೆಂಡ್ಸ್ ಚಿತ್ರಪಾಡಿ ನೇತೃತ್ವದಲ್ಲಿ ವನಮಹೋತ್ಸವ

    ಗಿರಿ ಫ್ರೆಂಡ್ಸ್ ಚಿತ್ರಪಾಡಿ ನೇತೃತ್ವದಲ್ಲಿ ವನಮಹೋತ್ಸವ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಗಿರಿ ಫ್ರೆಂಡ್ಸ್ ಚಿತ್ರಪಾಡಿ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿಯಲ್ಲಿ ನೆಡೆಯಿತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶಚಂದ್ರ ಶೆಟ್ಟಿ ಗಿಡಗಳನ್ನು ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಆಚಾರ್, ಗೌರವಾಧ್ಯಕ್ಷ ದಿನೇಶ್ ಆಚಾರ್, ಸಂಚಾಲಕರಾದ ನಾಗೇಂದ್ರ ಆಚಾರ್, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸತ್ಯ ನಾರಾಯಣ ನಾಯರಿ, ಮಾಧವ ಪೈ, ರವಿ ಪೂಜಾರಿ, ರಾಜೇಶ, ರಾಘವೇಂದ್ರ ಆಚಾರ್ ಜಡ್ಡಿನ ಮನೆ, ರಘುರಾಮ್ ಆಚಾರ್, ಸುಧಾಕರ್, ವಿಜಯ ಆಚಾರ್,ಗಿಳಿಯಾರ್ ರಾಘವೇಂದ್ರ ಆಚಾರ್ ,ಸೀತಾರಾಮ್ ಆಚಾರ್, ಹರೀಶ್ ಆಚಾರ್, ಪ್ರಕಾಶ್ ಆಚಾರ್,ರಾಮ, ಜಾನ್ಸನ್,ಶರತ್ ಉಪಸ್ಥಿತರಿದ್ದರು, ಈ ಕಾರ್ಯಕ್ರಮವನ್ನು ಸಂಸ್ಥೆ ಗಜೇಂದ್ರ ಆಚಾರ್ ನಿರೂಪಿಸಿ, ಸತೀಶ್ ಆಚಾರ್ ವಂದಿಸಿದರು.

  • ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು – ಐರೋಡಿ – ಧ್ವನಿ ವರ್ಧಕ ಹಸ್ತಾಂತರ ಮತ್ತು ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮ

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು – ಐರೋಡಿ – ಧ್ವನಿ ವರ್ಧಕ ಹಸ್ತಾಂತರ ಮತ್ತು ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಸಾಸ್ತಾನ ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಗೆ ಸ್ಥಳೀಯರಾದ ವೆರೋನಿಕಾ ರೊಡ್ರಿಗಸ್ ಕೊಡಮಾಡಿದ ಉತ್ತಮ ಗುಣಮಟ್ಟದ ಧ್ವನಿ ವರ್ಧಕಗಳನ್ನು ಐರೋಡಿ ಗ್ರಾಮಪಂಚಾಯತ್ ಸದಸ್ಯರಾದ ಸುಧಾಕರ ಪೂಜಾರಿ ಮತ್ತು ನವೀನ್ ಕಾರಂತ್ ಶಾಲೆಯವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

    ಅಲ್ಲದೆ ಉದ್ಯಮಿಗಳಾದ ಸುಂದರ್ ಹಂದಾಡಿ, ಕವಿತಾ ಆದರ್ಶ್ ಮತ್ತು ದೀಕ್ಷಾ ದೇವಾಡಿಗರವರ ಪ್ರಾಯೋಜಿಕತ್ವದಡಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಟ್ರ್ಯಾಕ್ ಸೂಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕೊಡುಗೆ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಸತೀಶ್ ವಹಿಸಿದ್ದರೆ, ಎಸ್‍ಡಿಎಂಸಿ ಉಪಾಧ್ಯಕ್ಷರಾದ ವಿಜಯ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಪೋಷಕರು ಮತ್ತು ಮಕ್ಕಳು ಇದ್ದರು. ಸಹ ಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು.

  • ಕೊಮೆ – ಸ್ತನಪಾನ ಸಪ್ತಾಹ ಮಾಹಿತಿ ಕಾರ್ಯಕ್ರಮ

    ಕೊಮೆ – ಸ್ತನಪಾನ ಸಪ್ತಾಹ ಮಾಹಿತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಮೆ ಅಂಗನವಾಡಿ ಕೇಂದ್ರದಲ್ಲಿ ಸ್ತನಪಾನ ಸಪ್ತಾಹ ಕಾರ್ಯಕ್ರಮ ಮತ್ತು ದಾನಿಗಳು ಕೊಡ ಮಾಡಿದ ಸಮವಸ್ತ್ರ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.

    ಆರೋಗ್ಯ ಕಾರ್ಯಕರ್ತೆ ಪೂಜಾ ಅವರು ಸ್ತನ್ಯಪಾನದ ಮಹತ್ವ ಮತ್ತು ಪೌಷ್ಟಿಕಾಂಶದ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
    ಸ್ಥಳೀಯರಾದ ಸೋಮ ಕಾಂಚನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಸಹಿಪ್ರಾ ಶಾಲೆ ಕೊಮೆ ಇದರ ಅಧ್ಯಕ್ಷ ರಾಜು ಪೂಜಾರಿ, ಶಾಲೆಯ ಶಿಕ್ಷಕರಾದ ಸುಷ್ಮಾ ಶೆಟ್ಟಿ , ಯುವಕ ಮಂಡಲದ ಸದಸ್ಯರಾದ ವೈಕುಂಠ ,ಆಶಾ ಕಾರ್ಯಕರ್ತೆ ರತ್ನ ಅಂಗನವಾಡಿ ಸಹಾಯಕಿ ಶ್ವೇತ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಭಾರತ್ ಮಿನರಲ್ಸ್ ತೋಟದಬೆಟ್ಟು ಕೋಮೆ ಇವರು ಅಂಗನವಾಡಿ ವಿದ್ಯಾರ್ಥಿಗಳಿಗೆ ನೀಡಿದ ಸಮವಸ್ತ್ರವನ್ನು ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

  • ಗ್ರಾಮೀಣ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಶೀಲ ಹಂದಟ್ಟು ಪ್ರಥಮ ಸ್ಥಾನ

    ಗ್ರಾಮೀಣ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಶೀಲ ಹಂದಟ್ಟು ಪ್ರಥಮ ಸ್ಥಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಭಾನವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ನಡೆದ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಕಾರ್ಯಕ್ರಮದಲಿ ಗ್ರಾಮೀಣ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ತಿನಿಸುಗಳು ಗಮನ ಸೆಳೆದವು ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಸಿಲಾಯಿತು. ಪ್ರಥಮ ಬಹುಮಾನವನ್ನು ಸುಶೀಲ, ದ್ವಿತೀಯ ಗೀತಾ ಸುಬ್ಬಯ್ಯ, ತೃತೀಯವಾಗಿ ಪ್ರೇಮ ಸುರೇಶ್, ಗ್ರಾಮೀಣ ಪರಿಕರದಲ್ಲಿ ರತ್ನಾ ಚಂದು, ಗಿರೀಜಾ ಅಲ್ಸೆಬೆಟ್ಟು ಬಹಮಾನ ಪಡೆದುಕೊಂಡರು.

    ಬಹುಮಾನ ವಿತರಣಾ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಪಡಿಯಾರ್ ಮರವಂತೆ, ತೀರ್ಪುಗಾರರಾಗಿ ಗೋಪಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್, ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಭಾಸ್ಕರ್,ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ ಶ್ರೀನಿಧಿ ಉಪಾಧ್ಯಾಯ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ,ಗ್ರಾಮೀಣ ಭಾಷಾ ಸೋಗಡುಗಾರ ಜಯರಾಮ್ ಶೆಟ್ಟಿ ,ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು ಅಧ್ಯಕ್ಷೆ ಜಾನಕಿ ಹಂದೆ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಸುಜಾತ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.

     

  • ಹಿರಿಯರ ಅನುಭವ, ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಅಗತ್ಯ – ವೈಷ್ಣವಿ ರಕ್ಷಿತ್ ಕುಂದರ್

    ಹಿರಿಯರ ಅನುಭವ, ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಅಗತ್ಯ – ವೈಷ್ಣವಿ ರಕ್ಷಿತ್ ಕುಂದರ್

    ಕೋಟ ಪಂಚವರ್ಣ ಸಂಸ್ಥೆಯಿಂದ ಆಸಾಡಿ ಒಡ್ರ್ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಹಿಂದೆ ಆಷಾಢ ಮಾಸ ಅನ್ನುವುದು ಬಹಳ ಕಷ್ಟಕರವಾದ ದಿನಗಳಾಗಿದ್ದವು. ಯಾವುದೇ ಸಂಭ್ರಮಾಚರಣೆಗಳು ನಡೆಯುತ್ತಿದ್ದಿರಿರಲಿಲ್ಲ. ಇಂದು ಅದನ್ನು ನೆನಪಿಸುವ ಅನೇಕ ಕಾರ್ಯಕ್ರಮಗಳು ಹಿರಿಯರಿಂದ ಆಗುತ್ತಿದ್ದು, ಇದು ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ಕೋಟದ ಗೀತಾನಂದ ಟ್ರಸ್ಟ್‍ನ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್ ಹೇಳಿದರು.

    ಕೋಟ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಭಾನವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ನಡೆದ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಗ್ರಾಮೀಣ ಭಾಗದಲ್ಲಿ ಸಿಗುವ ಅದೆಷ್ಟೋ ಔಷಧೀಯ ಗಿಡ, ಎಲೆಗಳ ಪರಿಚಯ ಆಷಾಢ ಮಾಸದಲ್ಲಿ ಆಗುತ್ತಿದೆ. ಹಿರಿಯರ ಮರ್ಗದರ್ಶನದಿಂದ ನಾವು ಇಂದಿನ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.

    ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು.

    ಇದೇ ಸಂದರ್ಭ ಕೋಟದ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಅವಿಭಜಿತ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕಿ ಕುಸುಮಾ ದೇವಾಡಿಗ ಅವರಿಗೆ ಆಸಾಡಿ ಒಡ್ರ್ ಗೌರವ ನೀಡಿ ಗೌರವಿಸಲಾಯಿತು. ಕುಂದಕನ್ನಡದ ರಾಯಭಾರಿ ಮನು ಹಂದಾಡಿ ಅವರಿಗೆ ಪಂಚವರ್ಣ ರಜತ ಗೌರವ ನೀಡಿ ಸನ್ಮಾನಿಸಲಾಯಿತು. ಕಾರ್ಕಳದ ರಂಗನಪಲ್ಕೆ ಹೊಸಬೆಳಕು ಆಶ್ರಮ ಮತ್ತು ಮಟಪಾಡಿಯ ವಿಜಯ ಬಾಲನಿಕೇತನ ಆಶ್ರಮಕ್ಕೆ ದಿನನಿತ್ಯದ ಸಾಮಗ್ರಿಗಳನ್ನು ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ನೀಡಲಾಯಿತು.

    ಗ್ರಾಮೀಣ ಪರಿಕರದ ಪ್ರದರ್ಶನವನ್ನು ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಅನಾವರಣಗೊಳಿಸಿದರು.
    ಗ್ರಾಮ್ಯ ಭಾಷೆಯ ಸೊಗಡುಗಾರ ಕೋಟದ ಜಯರಾಮ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಕಾಧ್ಯಕ್ಷ ಸುರೇಶ ಗಾಣಿಗ, ಗೌರವಾಧ್ಯಕ್ಷ ಸತೀಶ ಎಚ್ ಕುಂದರ್, ವಸಂತಿ ಹಂದಟ್ಟು, ಲಲಿತಾ ಪೂಜಾರಿ, ಪ್ರೇಮಾ ಪ್ರಭಾಕರ ಇದ್ದರು.

    ಪಂಚವರ್ಣದ ಸುಜಾತ ಯು.ತಿಂಗಳಾಯ ಸ್ವಾಗತಿಸಿದರು. ಶಕೀಲಾ ನಾಗರಾಜ್ ವರದಿ ವಾಚಿಸಿದರು. ಸಂಚಾಲಕಿ ಪುಷ್ಪಾ ಕೆ ಹಂದಟ್ಟು ವಂದಿಸಿದರು. ಸುಜಾತ ಬಾಯರಿ ಮತ್ತು ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

    ಗಮನ ಸೆಳೆದ ವಿಶೇಷತೆ..
    ಸಮಾರು ಬೈಂದೂರಿನಿಂದ ಹಿಡಿದು ಬ್ರಹ್ಮಾವರದ ತನಕ ಗ್ರಾಮೀಣ ಭಾಷೆ ಕುಂದಗನ್ನಡ ಹಾಗೂ ಅಲ್ಲಿನ ಬದುಕು,ಪರಿಕರಗಳ ಅನಾವರ ವಿಶೇಷವಾಗಿ ಗಮನ ಸೆಳೆಯಿತು.
    ಅದಲ್ಲೂ ಬಹುಮುಖ್ಯವಾಗಿ ಸ್ನೇಹಕೂಟ ಮಣೂರು ಈ ತಂಡದಿಂದ ಗ್ರಾಮೀಣ ಬದುಕಿನ ಪರಿಭಾಷೆಯನ್ನು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನಾವರಣಗೊಳಿಸಿದರು.
    ಪರಿಕರಗಳ ಭಾಗವಾಗಿ ಕೃಷಿಯಲ್ಲಿ ಬಳಕೆ ಮಾಡುವ ನೋಗ ,ನೇಗಿಲು,ಗೋರೆ,ಕೈಗೋರಿ,ಸಾಂಬಾರ್ ಬಟ್ಲ,ಗಳಿನ್ ಸಿದ್ಧಿ,ನೀರಾ ಇಳಿಸುವ ಸಾಧನ,ಅಡಿ ಮಂಚ,ತೋಟಿಲು,ಹರಿ,ಕಮ್ ಗೂಡ್ ಇತರ
    ಗ್ರಾಮೀಣ ತಿಂಡಿ ತಿನಿಸು
    ಪತ್ರೋಡಿ,ದಾನಿ ಮುಳಕ,ಎಳ್ಳುಂಡಿ,ಶಕಿಹಿಟ್,ಕಾಯಿ ಹೊಡಿ,ದಾಸನ ಕಡುಬು,ಒಡ್ ದೊಸೆ ಅನೇಕ ಗ್ರಾಮೀಣ ತಿನಿಸುಗಳು ಗಮನ ಸೆಳೆದವು

    ಬಹುಮಾನ ವಿತರಣೆ
    ಇದೇ ಸಂದರ್ಭದಲ್ಲಿ ಗ್ರಾಮೀಣ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ತಿನಿಸುಗಳು ಗಮನ ಸೆಳೆದವು ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಸಿಲಾಯಿತು.ಪ್ರಥಮ ಬಹುಮಾನವನ್ನು ಸುಶೀಲ,ದ್ವಿತೀಯ ಗೀತಾ ಸುಬ್ಬಯ್ಯ,ತೃತೀಯವಾಗಿ ಪ್ರೇಮ ಸುರೇಶ್,ಗ್ರಾಮೀಣ ಪರಿಕರದಲ್ಲಿ ರತ್ನಾ ಚಂದು, ಗಿರೀಜಾ ಅಲ್ಸೆಬೆಟ್ಟು ಬಹಮಾನ ಪಡೆದುಕೊಂಡರು
    ಬಹುಮಾನ ವಿತರಣಾ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಪಡಿಯಾರ್ ಮರವಂತೆ,ತೀರ್ಪುಗಾರರಾಗಿ ಗೋಪಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್,ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಭಾಸ್ಕರ್,ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ ಶ್ರೀನಿಧಿ ಉಪಾಧ್ಯಾಯ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ,ಗ್ರಾಮೀಣ ಭಾಷಾ ಸೋಗಡುಗಾರ ಜಯರಾಮ್ ಶೆಟ್ಟಿ ,ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು ಅಧ್ಯಕ್ಷೆ ಜಾನಕಿ ಹಂದೆ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಸುಜಾತ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.

  • ಕರಾವಳಿ ವಿದ್ಯಾರ್ಥಿಗಳು ಐ.ಎ.ಎಸ್, ಯು.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುವಂತಾಗಲಿ – ಶಾಸಕ ಕಿರಣ್ ಕೊಡ್ಗಿ

    ಕರಾವಳಿ ವಿದ್ಯಾರ್ಥಿಗಳು ಐ.ಎ.ಎಸ್, ಯು.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುವಂತಾಗಲಿ – ಶಾಸಕ ಕಿರಣ್ ಕೊಡ್ಗಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಕರಾವಳಿ ಭಾಗದ ವಿದ್ಯಾರ್ಥಿಗಳು ಬ್ಯಾಂಕ್ ಮತ್ತು ಇಂಜಿನಿಯರ್, ಡಾಕ್ಟರ್ ಆಗುವ ಕನಸುಗಳನ್ನು ಹೊತ್ತು ಮುಂದೆ ಸಾಗುವುದರ ಬದಲು ಐಎಎಸ್, ಯು.ಪಿ.ಎಸ್.ಸಿ, ಕೆ.ಎ.ಎಸ್, ಪಿಡಿಓ ನಂತಹ ಹುದ್ದೆಗಳನ್ನು ಗಳಿಸುವತ್ತ ಗಮನ ಹರಿಸಲಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಕೋಟ ವಿವೇಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಕೋಟದ ವಿ ಶೈನ್ ಕೋಚಿಂಗ್ ಸೆಂಟರ್ ಮತ್ತು ಸಾಯಿಬ್ರಕಟ್ಟೆ ರೋಟರಿ ಕ್ಲಬ್ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಲೆಕ್ಕ ಸಹಾಯಕ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಈ ಪರೀಕ್ಷೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ನಮ್ಮ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದು, ಇಂತಹ ಕೋಚಿಂಗ್ ಸೆಂಟರ್‍ಗಳು ವಿದ್ಯಾರ್ಥಿಗಳಿಗೆ ಅತೀ ಅವಶ್ಯಕವಾಗಿದೆ ಎಂದು ಅವರು ಹೇಳಿದರು.

    ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕನಸು ಕಾಣಬೇಕು. ಕನಸಿನೊಂದಿಗೆ ಸ್ವ ಪ್ರಯತ್ನ ಅತೀ ಅಗತ್ಯ. ನಮ್ಮ ಜೀವನದ ಗುರಿಗಳಿಗೆ ನಿರ್ಧಾರಗಳು ಬಹುಮುಖ್ಯ. ನಮ್ಮಲ್ಲಿರುವ ಶಕ್ತಿ ಬಗ್ಗೆ ನಮಗೆ ಅರಿವು ನಮಗಿರಬೇಕು. ಆ ಶಕ್ರಿಯೇ ನಮ್ಮನ್ನು ಮುನ್ನಡೆಸುತ್ತದೆ ಎಂದು ಕಿವಿ ಮಾತು ಹೇಳಿದರು.

    ಇದೇ ಸಂದರ್ಭ ಜನಾಧಿಕಾರ ಪುಸ್ತಕದ ಲೇಖಕ, ಪಂಚಾಯತ್ ರಾಜ್ ತಜ್ಞ ಜನಾರ್ಧನ ಮರವಂತೆ ಅವರನ್ನು ಸನ್ಮಾನಿಸಲಾಯಿತು.

    ಮಣೂರು ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ ಸಿ ಕುಂದರ್, ಕುಂದಾಪುರದ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್, ಕೋಟ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಶಂಭು ಲಿಂಗಯ್ಯ, ಬೆಂಗಳೂರಿನ ಚಾರ್ಟೆಡ್ ಅಕೌಟೆಂಟ್ ರಾಘವೇಂದ್ರ ಕಟ್ಕೆರೆ, ಸಾಯಿಬ್ರಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಯಶಸ್ವಿನಿ ಹೆಗ್ಡೆ, ರೋಟರಿಯ ಜಿಲ್ಲಾ ಸಹಾಯಕ ಗವರ್ನರ್ ಅಲ್ವಿನ್ ಕ್ವಾಡ್ರಸ್, ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ, ಪ್ರಿಯ ಅಸೋಸಿಯೇಟ್ಸ್‍ನ ಮುಖ್ಯಸ್ಥ ಅಕ್ಷತ್ ರಾಜ್, ಕೊಲ್ಲೂರು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಜಯಶ್ರೀ, ಗಿರೀಶ್ ಕುಮಾರ್ ಶೆಟ್ಟಿ, ವಿವೇಕ್ ಅಮೀನ್ ಇದ್ದರು.

    ಸಾಯಿಬ್ರಕಟ್ಟೆ ರೋಟರಿ ಕಾರ್ಯದರ್ಶಿ ಅಲ್ತಾರು ಗೌತಮ ಹೆಗ್ಡೆ ಸ್ವಾಗತಿಸಿದರು. ವಿ ಶೈನ್ ಕೋಚಿಂಗ್ ಸೆಂಟರ್‍ನ ಮುಖ್ಯಸ್ಥ ಹರೀಶ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

  • ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷರಾಗಿ ಪತ್ರಕರ್ತ ಬಿ.ರಾಘವೇಂದ್ರ ಪೈ ಆಯ್ಕೆ

    ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷರಾಗಿ ಪತ್ರಕರ್ತ ಬಿ.ರಾಘವೇಂದ್ರ ಪೈ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ : ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷರಾಗಿ ಪತ್ರಕರ್ತ ಬಿ.ರಾಘವೇಂದ್ರ ಪೈ ಆಯ್ಕೆಯಾಗಿದ್ದಾರೆ.

    ಕಾರ್ಯದರ್ಶಿಯಾಗಿ ಅಶ್ವಿತಾ ಜಿ.ಪೈ, ಜತೆ ಕಾರ್ಯದರ್ಶಿಯಾಗಿ ವಸಂತಿ ಎನ್.ಖಾರ್ವಿ, ಸಂಚಾಲಕ/ಖಜಾಂಚಿಯಾಗಿ ಡಾ.ಕಾಶೀನಾಥ ಪಿ.ಪೈ ಆಯ್ಕೆಯಾಗಿದ್ದಾರೆ. ಶಿಶು ಮಂದಿರದಲ್ಲಿ ಗುರುವಾರ ಶಿಶು ಮಂದಿರದ ಅಧ್ಯಕ್ಷೆ ಸವಿತಾ ಯು.ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೇವಾ ಸಂಗಮ ಟ್ರಸ್ಟ್‍ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಟ್ರಸ್ಟಿ ಚಂದ್ರಿಕಾ ಧನ್ಯ, ಶಿಶು ಮಂದಿರದ ಸದಸ್ಯರು ಉಪಸ್ಥಿತರಿದ್ದರು.

  • ಗೃಹಜ್ಯೋತಿ ಯೋಜನೆಯಿಂದ ಜಿಲ್ಲೆಯ 3.15 ಲಕ್ಷ ಜನರಿಗೆ ಪ್ರಯೋಜನ: ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಜ್ಯೋತಿ ಯೋಜನೆಯಿಂದ ಜಿಲ್ಲೆಯ 3.15 ಲಕ್ಷ ಜನರಿಗೆ ಪ್ರಯೋಜನ: ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ ಉಡುಪಿ ಜಿಲ್ಲೆಯ 3,15,692 ಜನರಿಗೆ ಪ್ರಯೋಜನ ದೊರೆಯಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.

    ಅವರು ಇಂದು ಕುಂಜಿಬೆಟ್ಟು ಕ.ವಿ.ಪ್ರ.ನಿ.ನಿ ನೌಕರರ ಸಂಘದ ಸಭಾಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

    ರಾಜ್ಯದಲ್ಲಿನ ಎಲ್ಲಾ ಭಾಷೆ, ಜಾತಿ, ಧರ್ಮದವರ ಶ್ರೇಯೋಭಿವೃದ್ಧಿಗಾಗಿ ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ ಐದು ಯೋಜನೆಗಳಲ್ಲಿ, ಗೃಹಜ್ಯೋತಿ ಯೋಜನೆ ಆರಂಭದ ನಂತರ, ಮೂರು ಯೋಜನೆಗಳು ಕೇವಲ ಮೂರು ತಿಂಗಳಲ್ಲಿ ಜಾರಿಯಾದಂತಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಸರ್ವರಿಗೂ ಸಮ ಪಾಲು ಸಮ ಬಾಳು ಎಂಬ ತತ್ವದಡಿಯಲ್ಲಿ ರಾಜ್ಯವನ್ನು ಪ್ರಗತಿಯುತ್ತ ಮುನ್ನೆಡೆಸುತ್ತಿದೆ ಎಂದರು.

    ರಾಜ್ಯದಲ್ಲಿ ಈಗಾಗಲೇ ಶಕ್ತಿ, ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಈಗ ಗೃಹಜ್ಯೋತಿ ಆರಂಭವಾಗಿದೆ. ಇದೇ ಆಗಸ್ಟ್ 18 ಅಥವಾ 20 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶದ ಮೂಲಕ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಘೋಷಣೆ ಮಾಡಿತು ಎಂದರು.

    ರಾಜ್ಯದ 1.42 ಕೋಟಿ ಗ್ರಾಹಕರು ಗೃಹಜ್ಯೋತಿ, 1.28 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದು, ಶಕ್ತಿಯೋಜನೆಯಡಿ ಇದುವರೆಗೆ 30 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 1.28 ಕೋಟಿ ಕುಟುಂಬಗಳಿಗೆ ಡಿಬಿಟಿ ಮೂಲಕ ಪ್ರತೀ ತಿಂಗಳು ರೂ.2000 ನೀಡಲಿದ್ದು, ಇದಕ್ಕಾಗಿ ಇದುವರೆಗೆ 1 ಕೋಟಿ ಕುಟುಂಬಗಳ ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 3,15,692 ಗ್ರಾಹಕರಿದ್ದು, ಈ ಪೈಕಿ ಶೇ.80 ರಷ್ಟು ಅಂದರೆ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನಮ್ಮ ಸರ್ಕಾರದಿಂದ ರಾಜ್ಯ ಸುಭದ್ರ ಮತ್ತು ಪ್ರಗತಿಪಥ ದತ್ತ ಮುನ್ನಡೆಯಲಿದೆ ಎಂದರು.

    ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಇದೇ ವೇಳೆ ಸಚಿವರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಬಿಲ್‌ನ ದೃಢೀಕರಣ ಪತ್ರ ವಿತರಿಸಿದರು.

    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಮೆಸ್ಕಾಂ ನಿರ್ದೇಶಕ ಹೆಚ್.ಜಿ. ರಮೇಶ್, ಮುಖ್ಯ ಇಂಜಿನಿಯರ್ ಪುಷ್ಪಾ, ಪ್ರಧಾನ ವ್ಯವಸ್ಥಾಪಕ ಅಭಿಷೇಕ್, ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.

    ಮೆಸ್ಕಾಂ ಉಡುಪಿ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಸ್ವಾಗತಿಸಿದರು, ಲೆಕ್ಕಾಧಿಕಾರಿ ಗಿರೀಶ್ ನಿರೂಪಿಸಿದರು. ವಿನಾಯಕ್ ಕಾಮತ್ ವಂದಿಸಿದರು.